ETV Bharat / state

ಪದೋನ್ನತಿ ಪ್ರಕ್ರಿಯೆ ಪೂರ್ಣಗೊಳಿಸಲು 3 ವರ್ಷ ವಿಳಂಬ : ಕಾಲೇಜು ಶಿಕ್ಷಣ ಇಲಾಖೆಗೆ ಹೈಕೋರ್ಟ್ ತರಾಟೆ

author img

By

Published : Jan 25, 2023, 11:05 PM IST

ಸಿಬ್ಬಂದಿಯ ಪದೋನ್ನತಿ ಪ್ರಕ್ರಿಯೆ 3 ವರ್ಷ ವಿಳಂಬ - ಹೈಕೋರ್ಟ್​ ಮೆಟ್ಟಿಲೇರಿದ್ದ ಸಿಬ್ಬಂದಿ - ವಿಳಂಬ ನೀತಿ ಹಿನ್ನಲೆ ಕಾಲೇಜು ಶಿಕ್ಷಣ ಇಲಾಖೆಗೆ ಹೈಕೋರ್ಟ್​ ತರಾಟೆ

delay-in-promotion-process-high-court-slams-college-education-department
ಪದೋನ್ನತಿ ಪ್ರಕ್ರಿಯೆ ಪೂರ್ಣಗೊಳಿಸಲು 3 ವರ್ಷ ವಿಳಂಬ : ಕಾಲೇಜು ಶಿಕ್ಷಣ ಇಲಾಖೆಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಶಿವಮೊಗ್ಗದ ಅನುದಾನಿತ ಶಿಕ್ಷಣ ಸಂಸ್ಥೆಯಾದ ನ್ಯಾಷನಲ್ ಎಜುಕೇಷನ್ ಟ್ರಸ್ಟ್‌ನಲ್ಲಿ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಪದೋನ್ನತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 3 ವರ್ಷ ವಿಳಂಬ ಮಾಡುವುದರ ಜೊತೆಗೆ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಕ್ರಮಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಕಾಲೇಜು ಶಿಕ್ಷಣ ಇಲಾಖೆ ಅನಗತ್ಯವಾಗಿ ಅರ್ಜಿ ಸಲ್ಲಿಸಿದೆ. ಇದಕ್ಕೆ ದೊಡ್ಡ ಮಟ್ಟದ ದಂಡ ವಿಧಿಸಬೇಕಾಗುತ್ತದೆ. ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರಿಗೆ ತರಾಟೆ ತೆಗೆದುಕೊಂಡಿತು.

ನ್ಯಾಷನಲ್ ಎಜುಕೇಷನ್ ಟ್ರಸ್ಟ್‌ನಲ್ಲಿ ಸೇವಕನಾಗಿದ್ದ ಬೆಂಗಳೂರಿನ ಜಿ.ಬೈರಪ್ಪ ಅವರಿಗೆ ದ್ವಿತಿಯ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿ ನೀಡಿ ಕಡತವನ್ನು ಕಾಲೇಜು ಶಿಕ್ಷಣ ಇಲಾಖೆಗೆ ರವಾನಿಸಲಾಗಿತ್ತು. ಇದಕ್ಕೆ ಅನುಮತಿ ನೀಡಲು ಕಾಲೇಜು ಶಿಕ್ಷಣ ಇಲಾಖೆ ಮೂರು ವರ್ಷ ವಿಳಂಬ ದೋರಣೆ ಅನುಸರಿಸಿತ್ತು. ಜತೆಗೆ, ಪದೋನ್ನತಿ ನೀಡಲಾಗದು ಎಂದು ದೃಢೀಕರಣ ನೀಡಿತ್ತು. ಇದನ್ನು ಪ್ರಶ್ನಿಸಿ ಬೈರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು. ಜತೆಗೆ, ದೃಢೀಕರಣ ಪತ್ರವನ್ನು ವಜಾ ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಲೇಜು ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು.ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠವು ಏಕ ಸದಸ್ಯ ಪೀಠದ ಆದೇಶವನ್ನು ಮಾನ್ಯ ಮಾಡಿದೆ.

ಅಲ್ಲದೆ, ಕಾಲೇಜು ಶಿಕ್ಷಣ ಇಲಾಖೆ ಸಕಾರಣದಿಂದ ನಿರ್ದಿಷ್ಟ ಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ಮೇಲ್ಮನವಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಬೈರಪ್ಪ ನ್ಯಾಯಾಲಯದ ಮೆಟ್ಟಿಲೇರುವ ಅವಶ್ಯತೆ ಇರುತ್ತಿರಲಿಲ್ಲ. ಸರ್ಕಾರದ ಪ್ರಾಧಿಕಾರಗಳ ಇಂತಹ ನಡೆಯಿಂದ ಪ್ರತಿವಾದಿ ಅತ್ತಿಂದಿತ್ತ ಸುತ್ತುವಂತಾಗಿದೆ. ಅಂತಿಮವಾಗಿ ತಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಂಡು, ಹಣ ಖರ್ಚು ಮಾಡಿಕೊಂಡು ನ್ಯಾಯಾಲಯದ ಮೆಟ್ಟಿಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ಜತೆಗೆ, ರಾಜ್ಯ ಸರ್ಕಾರದ ಪ್ರಾಧಿಕಾರಗಳ ನಡೆಯು ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಇದನ್ನು ಸಹಿಸಲಾಗದು ಈ ಕಾರಣಕ್ಕಾಗಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ವಜಾಕ್ಕೆ ಅರ್ಹವಾಗಿದೆ. ಭವಿಷ್ಯದಲ್ಲಿ ಸರ್ಕಾರದ ಅಧಿಕಾರಿ ಮತ್ತು ಪ್ರಾಧಿಕಾರಗಳು ಸಮರ್ಥನೀಯ ಕಾಲಮಿತಿಯಲ್ಲಿ ಕೆಲಸ ಮಾಡುವ ಮೂಲಕ ಮೇಲೆ ಹೇಳಿದ ಪರಿಸ್ಥಿತಿ ತಪ್ಪಿಸುತ್ತಾರೆ ಎಂಬ ಭರವಸೆ ಮತ್ತು ಆಶಾಭಾವನೆಯನ್ನು ಈ ನ್ಯಾಯಪೀಠ ಹೊಂದಿದೆ ಎಂದು ತಿಳಿಸಿತು.

ಪ್ರಕರಣದ ಹಿನ್ನೆಲೆ : ಬೆಂಗಳೂರಿನ ಬೈರಪ್ಪ ಅವರು ಶಿವಮೊಗ್ಗದ ಅನುದಾನಿತ ರಾಷ್ಟ್ರೀಯ ಶಿಕ್ಷಣ ಸೊಸೈಟಿಯಲ್ಲಿ ಸೇವಕನಾಗಿ ಕೆಲಸ ಮಾಡುತ್ತಿದ್ದು, 2013ರ ಮಾರ್ಚ್ 15ರಂದು ಅವರಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ (ಎಸ್ಡಿಎ) ಪದೋನ್ನತಿ ನೀಡಲಾಗಿತ್ತು. ಬೈರಪ್ಪ ಅವರು 2013ರ ಮಾರ್ಚ್ 18ರಂದು ಹುದ್ದೆಗೆ ವರದಿ ಮಾಡಿಕೊಂಡಿದ್ದರು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪದೋನ್ನತಿಗೆ ರಾಜ್ಯ ಸರ್ಕಾರವು ಅನುಮತಿಸಬೇಕು. ಹೀಗಾಗಿ, ರಾಷ್ಟ್ರೀಯ ಶಿಕ್ಷಣ ಸೊಸೈಟಿಯು ಎಲ್ಲಾ ದಾಖಲೆಗಳನ್ನು ಸೇರಿಸಿ ಪದೋನ್ನತಿ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಮಧ್ಯೆ, ಬೈರಪ್ಪ ಅವರು ವಯೋಮಿತಿ ಮೀರಿದ್ದರಿಂದ ನಿವೃತ್ತಿ ಹೊಂದಿದ್ದರು. ಹೀಗಾಗಿ, ಬೈರಪ್ಪ ಅವರಿಗೆ ದ್ವಿತಿಯ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬೈರಪ್ಪ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯಪೀಠ ಅರ್ಜಿಯನ್ನು ಮಾನ್ಯ ಮಾಡಿತ್ತು. ಏಕ ಸದಸ್ಯ ಪೀಠದ ಆದೇಶವನ್ನು ಕಾಲೇಜು ಶಿಕ್ಷಣ ಇಲಾಖೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ : ವಿಚ್ಛೇದಿತ ಸರ್ಕಾರಿ ಉದ್ಯೋಗಿ ಸೇವೆಯಲ್ಲಿರುವಾಗಲೇ ಮೃತಪಟ್ಟರೆ ಅವಲಂಬಿತರ ನೇಮಕಾತಿ : ಸರ್ಕಾರದ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.