ETV Bharat / state

ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಬೆಳೆಸುವ ಜವಾಬ್ದಾರಿಯನ್ನೂ ಅವರಿಗೆ ನೀಡಿ: ಡಿ.ಕೆ.ಶಿವಕುಮಾರ್

author img

By

Published : Jun 5, 2023, 4:44 PM IST

ನಾವು ಪ್ರತಿನಿತ್ಯ ಪರಿಸರ ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಪರಿಸರಕ್ಕೆ ಶಕ್ತಿ ತುಂಬಲು ಸಾಧ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Etv Bharatd-k-shivakumar-instructed-to-officers-for-plant-trees-by-school-children
ಶಾಲಾ ಮಕ್ಕಳಿಂದ ಗಿಡಗಳನ್ನು ನೆಡಿಸಿ, ಬೆಳೆಸುವ ಜವಾಬ್ದಾರಿಯನ್ನೂ ಮಕ್ಕಳಿಗೆ ನೀಡಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ನಗರದ ಎಷ್ಟು ರಸ್ತೆಗಳಲ್ಲಿ ಮರಗಳಿಲ್ಲ ಎಂದು ಬಿಬಿಎಂಪಿ ಈ ಕೂಡಲೇ ವರದಿ ಸಿದ್ದಪಡಿಸಬೇಕು. ಅಂತಹ ರಸ್ತೆಗಳಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ಗಿಡಗಳನ್ನು ನೆಡಿಸಿ, ಆ ಗಿಡಗಳನ್ನು ಬೆಳೆಸುವ ಜವಾಬ್ದಾರಿಯನ್ನು ಆ ಮಕ್ಕಳಿಗೇ ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರದ ರಾಚೇನಹಳ್ಳಿ ಕೆರೆ ಉದ್ಯಾನವನದಲ್ಲಿ ಇಂದು (ಸೋಮವಾರ) ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಿಗೆ ಸಸಿಗಳು, ರಕ್ಷಾ ಪಂಜರಗಳನ್ನು ಬಿಬಿಎಂಪಿ ನೀಡಬೇಕು. ಆ ಗಿಡಕ್ಕೆ ಆ ಶಾಲಾ ಮಕ್ಕಳ ಹೆಸರು ಹಾಕಿಕೊಳ್ಳಲು ಅವಕಾಶ ನೀಡಬೇಕು. ಗಿಡವನ್ನು ಮಕ್ಕಳೇ ಬೆಳೆಸಬೇಕು. ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಲ್ಲಿ ಸ್ಪರ್ಧೆ ಏರ್ಪಡಿಸಬೇಕು. ಆಗ ಮಕ್ಕಳು ಸಂತೋಷದಿಂದ, ಬಹಳ ಕಾಳಜಿಯಿಂದ ಗಿಡ, ಮರ ಬೆಳೆಸಲು ಆಸಕ್ತಿ ತೋರುತ್ತಾರೆ. ನಾವು ಮಕ್ಕಳನ್ನು ಸಾಕುವಂತೆ ಮರ, ಗಿಡಗಳನ್ನು ಬೆಳೆಸಬೇಕು. ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದರು.

ಮುಂದಿನ ಒಂದು ತಿಂಗಳಲ್ಲಿ ಈ ಬಗ್ಗೆ ಒಂದು ಪರಿಪೂರ್ಣ ಯೋಜನೆ ರೂಪಿಸಿ. ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಹೊಂದಿರುವ ನಾನು ಪಾಲಿಕೆ ಅಧಿಕಾರಿಗಳಿಗೆ ನೀಡುತ್ತಿರುವ ಮೊದಲನೆಯ ಟಾಸ್ಕ್. ಮನುಷ್ಯನ ಬದುಕು ಪರಿಸರದ ಜತೆಗೆ ಬೆಸೆದುಕೊಂಡಿದೆ. ಮನುಷ್ಯ ತನ್ನ ಬದುಕಿನ ಪ್ರತಿ ಹಂತದಲ್ಲಿಯೂ ಪರಿಸರವನ್ನು ಉಳಿಸಿಕೊಂಡರೆ ಮಾತ್ರ ಆರೋಗ್ಯಕರ ಜೀವನ ನಡೆಸಬಹುದು ಎಂದು ಅಭಿಪ್ರಾಯಿಸಿದರು. ಬದಲಾದ ಜೀವನಶೈಲಿಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ಲಾಸ್ಟಿಕ್ ಹಸಿರನ್ನು ನಮ್ಮ ಮನೆಗಳಲ್ಲಿ ಹಾಕಿಕೊಂಡು ಸಂತೋಷಪಡುವಂತಾಗಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆ ವಿಚಾರದಲ್ಲಿ ಅರಣ್ಯ ಇಲಾಖೆ, ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಾಶ್ವತವಾದ ಯೋಜನೆಗಳ ಬಗ್ಗೆ ಗಮನ ಹರಿಸಬೇಕು. ಪ್ರತಿನಿತ್ಯ ಪರಿಸರ ಸಂರಕ್ಷಣೆ ಬಗ್ಗೆ ಗಮನಹರಿಸುವಂತೆ ಯೋಜನೆ ರೂಪಿಸಬೇಕು. ಇದು ಒಂದು ದಿನದ ಕೆಲಸವಲ್ಲ ಎಂದರು. ಅಧಿಕಾರಿಗಳು ಜೀವನಪೂರ್ತಿ ಪ್ರಯೋಜನವಾಗುವಂತಹ ಯೋಜನೆಗಳನ್ನು ಸಮಾಜಕ್ಕೆ ರೂಪಿಸಬೇಕು. ಪರಿಸರ ಹೇಗೆ ಬಳಸಿಕೊಳ್ಳಬೇಕು, ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತರಬೇತಿ, ಮಾರ್ಗದರ್ಶನ ನೀಡಬೇಕು. ಈ ವಿಚಾರವಾಗಿ ಅಧಿಕಾರಿಗಳು ಆಳ ಆಲೋಚನೆ ಮಾಡಬೇಕು.
ನಮ್ಮ ಬೇರು ಗಟ್ಟಿಯಾಗಿದ್ದಷ್ಟು ನಾವು ಆರೋಗ್ಯಕರವಾಗಿರುತ್ತೇವೆ ಎಂದು ಅಭಿಪ್ರಾಯಪಟ್ಟರು.

ಉದ್ಯಾನವನಗಳಲ್ಲಿ ಮರ ಬೆಳೆಸುವುದಲ್ಲಿ ಅರ್ಥವಿಲ್ಲ: ಉದ್ಯಾನವನಗಳಲ್ಲಿ ಮರಗಳನ್ನು ಬೆಳೆಸುವುದು ಬೇಡ. ಉದ್ಯಾನವನಗಳು ಉದ್ಯಾನವನಗಳ ರೀತಿಯೇ ಇರಲಿ. ಉದ್ಯಾನವನಗಳಲ್ಲಿ ಅರಣ್ಯ ನಿರ್ಮಿಸುವುದು ಬೇಡ. ಎಲ್ಲಿ ಮರಗಳು ಇಲ್ಲವೋ ಅಲ್ಲಿ ಗಿಡ ನೆಡಬೇಕು. ಪರಿಸರ ಸಂರಕ್ಷಣೆ ದೀರ್ಘಕಾಲದ ಯೋಜನೆ ಬೇಕು ಎಂದು ಸಲಹೆ ಕೊಟ್ಟರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಮಾಡಿದ್ದರು. ಅದರಲ್ಲಿ 1 ಕೋಟಿ ಮರಗಳಾದರೂ ಉಳಿದುಕೊಂಡಿವೆ. ಎಲ್ಲಿ ಹಸಿರು ಇಲ್ಲವೋ ಅಲ್ಲಿ ಗಿಡಮರಗಳನ್ನು ಬೆಳೆಸಲು ಗಮನ ಹರಿಸಬೇಕು. ಬೆಂಗಳೂರು ತನ್ನ ಹಸಿರು ಪರಿಸರದಿಂದ ಹೆಸರು ಮಾಡಿದೆ. ಹೀಗಾಗಿ ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸಬೇಕು.
ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಪರಿಸರ ಸಂರಕ್ಷಣೆ ಕೆಲಸವಾಗಬೇಕು ಎಂದು ಡಿಕೆಶಿ ಹೇಳಿದರು.

ಸಚಿವ ಕೃಷ್ಣ ಬೈರೇಗೌಡ, ಶಾಸಕ ಎ.ಸಿ.ಶ್ರೀನಿವಾಸ್, ಎಂ.ಎಲ್.ಸಿ ನಾಗರಾಜ್ ಯಾದವ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಮತ್ತಿತರರು ಇದ್ದರು.

ಇದನ್ನೂ ಓದಿ: ಪ್ರೀತಿಗೂ ರೆಡಿ, ಸಂಘರ್ಷಕ್ಕೂ ರೆಡಿ, ನನಗೆ ದ್ವೇಷದ ರಾಜಕೀಯ ಬೇಕಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.