ETV Bharat / state

ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಅಂಗಡಿ ಎದುರು ಆಟವಾಡುತ್ತಿದ್ದ ಬಾಲಕ ಸಾವು

author img

By

Published : Mar 5, 2023, 4:41 PM IST

Updated : Mar 5, 2023, 5:06 PM IST

ಬೆಂಗಳೂರಿನ ಹೆಬ್ಬಾಳದ ಗುಡ್ಡದಹಳ್ಳಿಯ ಅಂಗಡಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು, 13 ವರ್ಷದ ಮಹೇಶ್ ಎಂಬ ಬಾಲಕ ಸಾವಿಗೀಡಾಗಿದ್ದಾನೆ.

cylinder explosion
ಸಿಲಿಂಡರ್ ಸ್ಫೋಟ

ಬೆಂಗಳೂರು: ಅಂಗಡಿಯೊಂದರಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಉಂಟಾದ ಸ್ಫೋಟದಿಂದ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿ ಭಾನುವಾರ ಬೆಳಗ್ಗೆ ಸಂಭವಿಸಿದೆ‌. ಹೆಬ್ಬಾಳದ ಗುಡ್ಡದಹಳ್ಳಿಯ ಸಿಲಿಂಡರ್ ಅಂಗಡಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಅಂಗಡಿ ಎದುರು ಆಡುತ್ತಿದ್ದ 13 ವರ್ಷದ ಮಹೇಶ್ ಎಂಬ ಬಾಲಕ ಬಲಿಯಾಗಿದ್ದಾನೆ.

ಯಾದಗಿರಿಯ ರಾಮಸಮುದ್ರ ಮೂಲದ ಮಲ್ಲಪ್ಪ ಸರಸ್ಪತಿ ದಂಪತಿಯ ಎರಡನೇ ಮಗ ಮಹೇಶ್, ಚೋಳನಾಯನಕ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದನು. ಮೃತನ ತಂದೆ-ತಾಯಿ ಹಲವು ವರ್ಷಗಳಿಂದ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ವೇಳೆ ದುರ್ಘಟನೆ: ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ಅಂಗಡಿಯೊಂದರಲ್ಲಿ ಲಿಯಾಕತ್ ಎಂಬಾತ ಸಿಲಿಂಡರ್ ರಿಫಿಲ್ಲಿಂಗ್ ಮಾಡುವಾಗ ಉಂಟಾದ ಅನಿಲ ಸೋರಿಕೆಯಿಂದ ಅದು ಸ್ಫೋಟಗೊಂಡಿದೆ. ಆ ಸಂದರ್ಭದಲ್ಲಿ ಅಂಗಡಿ ಬಳಿ ಆಟವಾಡುತ್ತಿದ್ದ ಮಹೇಶ್ ದೇಹ ಸ್ಫೋಟದ ರಭಸಕ್ಕೆ ಛಿದ್ರಗೊಂಡಿದೆ.

ಮುಗಿಲು ಮುಟ್ಟಿದ ಪೋಷಕರ ಅಕ್ರಂದನ: ಕೂಡಲೇ ಸ್ಥಳೀಯರ ನೆರವಿನಿಂದ‌ ಪೋಷಕರು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವಿಗೀಡಾಗಿದ್ದಾನೆ. ಮಗನ ಮೃತದೇಹದ ಮುಂದೆ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಘಟನೆ ಬಳಿಕ ರಿಯಾಕತ್ ಎಸ್ಕೇಪ್ ಆಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಸಿಲಿಂಡರ್ ಸ್ಫೋಟ: ಕುಟುಂಬದ ಹತ್ತು ಜನರಿಗೆ ತೀವ್ರ ಗಾಯ: ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟದಿಂದ ಒಂದೇ ಕುಟುಂಬದ ಹತ್ತು ಜನರು ಗಾಯಗೊಂಡಿದ್ದ ಘಟನೆ ಬೆಂಗಳೂರಿನ ರಾಜಾಜಿನಗರದ ಮರಿಯಪ್ಪನಪಾಳ್ಯದ ಮನೆಯೊಂದರಲ್ಲಿ‌ ಇತ್ತೀಚೆಗೆ ನಡೆದಿತ್ತು. ಮನೆಯಲ್ಲಿದ್ದ ಎಲ್ಲರೂ ಗಾಯಗೊಂಡಿದ್ದರು, ಈ ಪೈಕಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆಯಲ್ಲಿ ಅಜ್ಮಲ್ (46), ನಜೀಮ್ (42), ರಿಯಾನ್ (14), ಅದ್ನಾನ್ (12), ಫಯಾಜ್ (10), ಮೆಹರುನ್ನಿಸಾ (11), ಅಜಾನ್ (5) , ಜೈನಬ್ (8) ಅಮೀರ್ ಜಾನ್ (52), ಶಬನಾಜ್ (18), ನಸೀಮಾ, (40), ಸಲ್ಮಾ (33) ಹಾಗೂ ರೇಷ್ಮಾ ಬಾನು (48) ಎಂಬುವರು ಗಾಯಗೊಂಡಿದ್ದಾರೆ.

ಮನೆಯಲ್ಲಿ‌ ಕಾರ್ಯಕ್ರಮವಿದ್ದ ಕಾರಣ ರಾತ್ರಿ ತಿಂಡಿ, ತಿನಿಸುಗಳನ್ನು ಮಾಡಿಡಲಾಗಿತ್ತು. ಈ ವೇಳೆ ಸಿಲಿಂಡರ್ ಆಫ್ ಮಾಡುವುದನ್ನು ಮರೆತಿದ್ದು, ಗ್ಯಾಸ್ ಸೋರಿಕೆಯಾಗಿದೆ. ಬೆಳಗ್ಗೆ 6:45ರ ಸುಮಾರಿಗೆ ಅಡುಗೆ ಮಾಡಲು ಹೋದಾಗ ದಿಢೀರ್ ಸ್ಫೋಟ ಉಂಟಾಗಿತ್ತು.

ಕಟ್ಟಡದ ಗೋಡೆ, ಮೆಟ್ಟಿಲುಗಳು ಬಿರುಕು ಬಿಟ್ಟಿವೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಈ ಕುರಿತು ರಾಜಾಜಿನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ದಂಪತಿ ನಡುವೆ ಜಗಳ: ಪರಸ್ಪರ ಗುಂಡು ಹಾರಿಸಿಕೊಂಡ ಗಂಡ - ಹೆಂಡತಿ

ಇದನ್ನೂ ಓದಿ:ಪಬ್​ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಯತ್ನ: ಎರಡು ಗುಂಪುಗಳ ನಡುವೆ ಹೊಡೆದಾಟ

Last Updated : Mar 5, 2023, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.