ETV Bharat / state

ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರಿನ ಗಾಜು ಒಡೆದ ಮೂವರು ಕಿಡಿಗೇಡಿಗಳ ಬಂಧನ

author img

By

Published : Jul 14, 2023, 4:04 PM IST

Updated : Jul 14, 2023, 5:01 PM IST

Etv Bharat
Etv Bharat

ಕಾರಿಗೆ ದಾರಿ ಬಿಡದೆ ಪುಂಡಾಟ ನಡೆಸಿದ್ದಲ್ಲದೇ, ಬಳಿಕ ಗ್ಲಾಸ್​ ಒಡೆದಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಕಾರಿನ ಗಾಜು ಒಡೆದ ಕಿಡಿಗೇಡಿಗಳು -ಸಿಸಿಟಿವಿ ವಿಡಿಯೋ

ಬೆಂಗಳೂರು: ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ಅಡ್ಡಗಟ್ಟಿ ಗಾಜು ಪುಡಿಪುಡಿ ಮಾಡಿ ಪುಂಡಾಟ ಮೆರೆದಿದ್ದ ಮೂವರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ವರ್ತೂರು ಬಳಿ ಕಾರಿನಲ್ಲಿ ಹೋಗುವಾಗ ಘಟನೆ ನಡೆದಿತ್ತು.

ಕಾರಿನಲ್ಲಿ ಹೋಗುತ್ತಿದ್ದಾಗ ಮುಂದುಗಡೆ ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ‌ ಮಾಡುತ್ತಿದ್ದ ಆರೋಪಿಗಳಿಗೆ ದಾರಿ ಬಿಡುವಂತೆ ಹಾರ್ನ್ ಮಾಡಿದ್ದರು. ಇದರಿಂದ‌ ಕುಪಿತಗೊಂಡ ಆರೋಪಿಗಳು ಕೆಲ ದೂರ ಹೋದ ಬಳಿಕ ಕಾರನ್ನು ಅಡ್ಡಗಟ್ಟಿದ್ದಾರೆ.‌ ಅಪಾಯದ ಮೂನ್ಸೂಚನೆ ಅರಿತ ಕಾರು ಚಾಲಕ ತಕ್ಷಣವೇ ಕಾರನ್ನು ತಾನು ಬಂದ ದಾರಿಯಲ್ಲೇ ರಿವರ್ಸ್ ತೆಗೆದುಕೊಂಡು ತಪ್ಪಿಸಿಕೊಂಡು ಹೋಗಿದ್ದರು.

ಆದರೆ, ಇಷ್ಷಕ್ಕೆ ಸುಮ್ಮನಾಗದ ಆರೋಪಿಗಳು ಕಾರು ಫಾಲೋ ಮಾಡಿಕೊಂಡು ಬಂದು ಗುಂಜೂರು ಬಳಿ ಅಪಾರ್ಟ್‌ಮೆಂಟ್ ಸಮೀಪ ಬಂದು ಗಲಾಟೆ ಮಾಡಿದ್ದರು. ಎಂಟ್ರಿ ಗೇಟ್ ಬಳಿ ಕಾರು ಅಡ್ಡಗಟ್ಟಿ ಗಾಜುಗಳನ್ನು ಒಡೆದು ದಾಂಧಲೆ‌‌ ಮಾಡಿದ್ದರು. ಆರೋಪಿಗಳು ದುಷ್ಕೃತ್ಯ ಹಾಗೂ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

three-arrested-for-breaking-car-window
ಬಂಧಿತ ಆರೋಪಿಗಳು

ಈ ಬಗ್ಗೆ ಟ್ವಿಟರ್ ಮೂಲಕ ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ, ಕಾರಿಗೆ ದಾರಿ ಬಿಡದೆ ಸತಾಯಿಸಿದ್ದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರೊಂದಿಗೆ ಟ್ವೀಟ್​ ಮಾಡಲಾಗಿತ್ತು. ಪೂರ್ವ ಬೆಂಗಳೂರು ಹಾಗೂ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್​ ಮಾಡಿರುವ ಟ್ವೀಟ್ ​ವೈರಲ್​ ಆಗಿತ್ತು. ಈ ದೂರಿನ ಮೇರೆಗೆ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇಶವಮೂರ್ತಿ, ರವೀಂದ್ರ ಹಾಗೂ ಗಣೇಶ್ ಎಂಬುವರನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಯುವಕನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಐವರ ಬಂಧನ: ಪೊಲೀಸ್​ ಕಮಿಷನರ್ ಸಂತೋಷ ಬಾಬು

ರಸ್ತೆಯಲ್ಲೇ ದಂಪತಿ ಜಗಳವಾಡುವಾಗ ಕಾರು ಪಲ್ಟಿ: ಪ್ರತ್ಯೇಕ ಘಟನೆಯಲ್ಲಿ ರಸ್ತೆಯಲ್ಲಿ ಸಾಗುವಾಗ ಗಂಡ, ಹೆಂಡತಿಯ ಜಗಳದ ನಡುವೆ ಅಪಘಾತವಾಗಿ ಕಾರು ಪಲ್ಟಿಯಾದ ಘಟನೆ ತಡರಾತ್ರಿ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಮುಂಭಾಗದ ಬಿಬಿಎಂಪಿ ಸರ್ಕಲ್​ನಲ್ಲಿ ನಡೆದಿದೆ. ಸಿಟಿ ಮಾರ್ಕೆಟ್ ಕಡೆಯಿಂದ ಕಾರಿನಲ್ಲಿ ಬರುತ್ತಿದ್ದ ಪತಿ, ಪತ್ನಿ ಮಾತಿನ ಚಕಮಕಿ ನಡೆಸಿದ್ದಾರೆ‌. ಈ ವೇಳೆ ದಿಢೀರ್‌ ಅಂತ ಪತ್ನಿ ಕಾರಿನ ಸ್ಟೇರಿಂಗ್ ವೀಲ್ ಎಳೆದಿದ್ದಾಳೆ ಎನ್ನಲಾಗಿದ್ದು, ಸ್ಟೇರಿಂಗ್ ಎಳೆದ ರಭಸಕ್ಕೆ ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೃಷ್ಟವಶಾತ್ ದಂಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆಯಿದ್ದು, ದಂಪತಿಯನ್ನು ರಕ್ಷಣೆ ಮಾಡಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Jul 14, 2023, 5:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.