ETV Bharat / state

ಪತ್ನಿಗೆ ಕಳ್ಳಿ, ಕಳ್ಳಿ ಎಂದು ಹೀಯಾಳಿಸುತ್ತಿದ್ದ ಪರಿಚಿತರು.. ಅವಮಾನ ಸಹಿಸಲಾಗದೇ ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

author img

By

Published : Aug 8, 2023, 3:29 PM IST

Updated : Aug 8, 2023, 5:18 PM IST

crime-husband-killed-wife-in-bengaluru
ಬೆಂಗಳೂರು : ಪರಿಚಿತರು ಕಳ್ಳಿ ಎನ್ನುವುದನ್ನು ಸಹಿಸಲಾಗದೇ ಪತ್ನಿಯನ್ನು ಹತ್ಯೆಗೈದ ಪತಿ

Husband kills wife: ಪತಿಯೋರ್ವ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಬೆಂಗಳೂರಿನ ವೈಟ್​ ಫೀಲ್ಡ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೈಟ್ ಫೀಲ್ಡ್ ವಿಭಾಗ ಡಿಸಿಪಿ ಎಸ್.ಗಿರೀಶ್ ಅವರಿಂದ ಮಾಹಿತಿ

ಬೆಂಗಳೂರು : ಪತಿಯೋರ್ವ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತಳನ್ನು ಸರಿತಾ(35) ಎಂದು ಗುರುತಿಸಲಾಗಿದೆ. ತಾರಾನಾಥ್​ ಕೊಲೆಗೈದ ಆರೋಪಿ. ಪತ್ನಿ ಸರಿತಾಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆಗೈದಿರುವ ಪತಿ ತಾರಾನಾಥ್ ವೈಟ್ ಫೀಲ್ಡ್ ಠಾಣೆಗೆ ಬಂದು ಶರಣಾಗಿದ್ದಾನೆ.

ಮೂಲತಃ ಮಂಗಳೂರಿನವರಾದ ಈ ದಂಪತಿ ಬೆಂಗಳೂರಿನಲ್ಲಿ ನೆಲೆಸಿ, ಪಾನೀಪುರಿ ಅಂಗಡಿ ನಡೆಸುತ್ತಿದ್ದರು. ಭಾನುವಾರ ಸಂಜೆ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ತಾರಾನಾಥ್ ಧೈರ್ಯ ಸಾಲದೇ ಪೊಲೀಸರಿಗೆ ಶರಣಾಗಿದ್ದಾನೆ. ಸರಿತಾ ವಿರುದ್ಧ ಈ ಹಿಂದೆ ಮಂಗಳೂರಿನ ಮೂಲ್ಕಿ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. "ಪರಿಚಿತರು ಪತ್ನಿಯನ್ನು ಕಳ್ಳಿ‌ ಕಳ್ಳಿ ಎನ್ನುತ್ತಿದ್ದರು. ಇದನ್ನು ಸಹಿಸಲಾರದೇ ಪತ್ನಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಶರಣಾಗಿರುವ ಆರೋಪಿಯನ್ನು ಬಂಧಿಸಲಾಗಿದ್ದು, ವೈಟ್ ಫೀಲ್ಡ್ ಠಾಣಾ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ವೈಟ್ ಫೀಲ್ಡ್ ವಿಭಾಗ ಡಿಸಿಪಿ ಎಸ್.ಗಿರೀಶ್, ಮಂಗಳೂರು ಮೂಲದ ತಾರಾನಾಥ್​ ಎಂಬವರು ಇಲ್ಲಿನ ವೈಟ್ ಫೀಲ್ಡ್​ ಠಾಣಾ ವ್ಯಾಪ್ತಿಯಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದರು. ಕಳೆದ 11 ವರ್ಷಗಳ ಹಿಂದೆ ತಾರಾನಾಥ್​ ಅವರಿಗೆ ಮದುವೆಯಾಗಿತ್ತು. ಭಾನುವಾರ ತಾರಾನಾಥ್​ ಏಕಾಏಕಿ ತನ್ನ ಹೆಂಡತಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತನೇ ವೈಟ್​ಫೀಲ್ಡ್​ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಈ ಬಗ್ಗೆ ವಿಚಾರಿಸಿದಾಗ ಎರಡು ವಿಷಯವನ್ನು ಹೇಳಿದ್ದಾನೆ. ಮೊದಲನೆಯದಾಗಿ ಪತ್ನಿಯು ತನ್ನೊಂದಿಗೆ ಸರಿಯಿರಲಿಲ್ಲ, ಮತ್ತೊಂದು ದಂಪತಿ ಮಂಗಳೂರಿನಲ್ಲಿ ಇರಬೇಕಾದರೆ ಹೆಂಡತಿ ಕಳ್ಳತನದಲ್ಲಿ ಭಾಗಿಯಾಗಿದ್ದಳು ಎಂಬ ಬೇಸರ ಈತನನ್ನು ಕಾಡುತ್ತಿತ್ತು. ಈ ಸಂಬಂಧ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ತಾರಾನಾಥ್​ ಹೇಳಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಪತ್ನಿ ಹತ್ಯೆ.. ಪೊಲೀಸರಿಗೆ ಶರಣಾದ ಪತಿ : ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಪತಿ ಪೊಲೀಸ್ ಠಾಣೆಗೆ ಹೋಗಿ‌ ಶರಣಾಗಿದ್ದ ಘಟನೆ ಇತ್ತೀಚೆಗೆ ಮೈಸೂರು ನಗರದ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಪಲ್ಲವಿ ಕೊಲೆಯಾದ ದುರ್ದೈವಿ. ಕೆಎಸ್‌ಆರ್‌ಟಿಸಿ ಲೇಔಟ್ ನಿವಾಸಿ ಲೋಕೇಶ್ ಆರಾಧ್ಯ ಕೊಲೆಗೈದ ಆರೋಪಿ.

ಲೋಕೇಶ್ ಹಾಗೂ ಪಲ್ಲವಿ 9 ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ 7 ವರ್ಷದ ಮಗನಿದ್ದಾನೆ. ಈ ಹಿಂದೆ ಕೆಲಕಾಲ ದಂಪತಿ ಮೈಸೂರು ತಾಲೂಕಿನ ವರುಣಾದಲ್ಲಿ ನೆಲೆಸಿದ್ದರು. ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂಬ ಕಾರಣದಿಂದ ಕಳೆದ ಎರಡು ತಿಂಗಳ ಹಿಂದೆ ಮೈಸೂರಿಗೆ ಬಂದು ಕೆಎಸ್‌ಆರ್‌ಟಿಸಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.

ಈ ನಡುವೆ ಆರೋಪಿ ಲೋಕೇಶ್ ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದನು. ಈ ಸಂಬಂಧ ಪಲ್ಲವಿ ಅವರ ತಾಯಿ ಹಾಗೂ ಸೋದರ ಮಾವ ಬಂದು ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿದ್ದರು. ಅಲ್ಲದೆ ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಆದರೂ, ಲೋಕೇಶ್ ಮತ್ತೆ ಕ್ಯಾತೆ ತೆಗೆದು, ಜಗಳ ಮಾಡಿ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ಸಂಬಂಧ ಪಲ್ಲವಿ ಅವರ ತಂದೆ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸುವಾಗಲೇ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ.

ಇದನ್ನೂ ಓದಿ : ಚಿಕ್ಕೋಡಿ: ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಪತಿ

Last Updated :Aug 8, 2023, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.