ETV Bharat / state

ಇಸ್ರೋದ ಚಂದ್ರಯಾನದ 3ರ ಯಶಸ್ಸನ್ನು ಬಿಂಬಿಸಲು ತಯಾರಾಗಿ ನಿಂತ ಗಣಪ

author img

By ETV Bharat Karnataka Team

Published : Sep 14, 2023, 12:05 PM IST

ಬೆಂಗಳೂರಿನಲ್ಲಿ ಚಂದ್ರಯಾನ ಮಣ್ಣಿನ ಗಣಪತಿಯನ್ನು ಸುಮಾರು 25 ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಎಲ್ಲೆಡೆ ಬೇಡಿಕೆ ಪಡೆಯುತ್ತಿದೆ.

ಚಂದ್ರಯಾನದ 3ರ ಯಶಸ್ಸನ್ನು ಬಿಂಬಿಸುತ್ತಿರುವ ಮಣ್ಣಿನ ಗಣಪ
ಚಂದ್ರಯಾನದ 3ರ ಯಶಸ್ಸನ್ನು ಬಿಂಬಿಸುತ್ತಿರುವ ಮಣ್ಣಿನ ಗಣಪ

ಬೆಂಗಳೂರು: ಇತ್ತೀಚೆಗಷ್ಟೇ ಇಸ್ರೋದ ಚಂದ್ರಯಾನದ 3 ಯಶಸ್ಸು ಕಂಡು ಭಾರತದ ಕೀರ್ತಿ ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದೆ. ಜನರು ನಿಬ್ಬೆರಗಾಗಿ ನೋಡಿದ ಈ ಕೌತುಕವನ್ನು ನಗರದ ಕಲಾವಿದರೊಬ್ಬರು ಮಣ್ಣಿನ ಗಣಪನ ಮೂಲಕ ಬಿಂಬಿಸಿ ಮೆಚ್ಚುಗೆ ಗಳಿಸುತ್ತಿದ್ದಾರೆ.

ಚಂದ್ರಕಾರದ ತೂಗು ಮಂಚದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಕುಳಿತಿರುವ ಗಣಪ, ಚಂದ್ರಯಾನ ಕನಸನ್ನು ಕಂಡಂತಹ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಇದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿರುವ ದೃಶ್ಯವನ್ನು ಸೃಷ್ಟಿಸಲಾಗಿದೆ. ರಾಕೆಟ್ ಚಂದ್ರನತ್ತ ಹೋಗುವ ರೋಮಾಂಚಕ ದೃಶ್ಯ ಹಾಗೂ ವಿಕ್ರಂ ಲ್ಯಾಂಡರ್ ಚಂದ್ರನಿಗೆ ಸ್ಪರ್ಶಿಸುವ ಕ್ಷಣವನ್ನು ಕೂಡ ಗಣೇಶ ಚತುರ್ಥಿಗೆ ವಿಶೇಷವಾಗಿ ರಚಿಸಲಾಗಿದೆ.

ಯಶವಂತಪುರದ ಈಶಪುತ್ರ ಎಂಟರ್​ಪ್ರೈಸಸ್​ ಸಂಸ್ಥೆಯ ನವೀನ್ ಆರ್ಟ್ಸ್​ನ ಮಾಲೀಕರಾದ ಆನಂದ್ ಖಗೋಳ ಸಾಧನೆಯನ್ನು ಮೂರ್ತ ರೂಪಕ್ಕೆ ತಂದವರಾಗಿದ್ದಾರೆ. ಆಕರ್ಷಕವಾದ ಚಂದ್ರಯಾನ ಮಣ್ಣಿನ ಗಣಪತಿಯನ್ನು ಸುಮಾರು 25 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಂದಿರನ ವಿನ್ಯಾಸ 3 ಅಡಿ ಅಗಲ ಹಾಗೂ 2 ಅಡಿ ಎತ್ತರದ್ದಾಗಿದೆ. ಗಣಪತಿ ಚಂದಿರ ಮೇಲೆ ಕುಳಿತುಕೊಳ್ಳಲು ಮರದ ಹಲಗೆ ಬಳಸಲಾಗಿದೆ. ಫೋಮ್ ಶೀಟ್​ನಿಂದ ಚಂದಿರ, ರಾಕೆಟ್ ಹಾಗೂ ಭೂಮಿಯ ಆಕಾರ ತಯಾರಿಸಲಾಗಿದೆ.

ಚಂದ್ರಯಾನದ 3ರ ಯಶಸ್ಸನ್ನು ಬಿಂಬಿಸುತ್ತಿರುವ ಮಣ್ಣಿನ ಗಣಪ
ಚಂದ್ರಯಾನದ 3ರ ಯಶಸ್ಸನ್ನು ಬಿಂಬಿಸುತ್ತಿರುವ ಮಣ್ಣಿನ ಗಣಪ

ಚಂದಿರನು ಹೊಳೆಯಲು ಯುವಿ ಲೈಟ್‌ಗಳನ್ನು ಬಳಸಲಾಗಿದೆ. ಇಸ್ರೋದ ವಿಜ್ಞಾನಿಯಾಗಿದ್ದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಚಂದ್ರಯಾನ ನೋಡುವಂತಹ ಭಾವಚಿತ್ರ ಇಲ್ಲಿ ಮಾಡಲಾಗಿದೆ. ಮೈಸೂರು, ಚನ್ನಪಟ್ಟಣ, ಕೋಲಾರ ಹಾಗೂ ತಮಿಳುನಾಡಿನಿಂದ ಕೂಡ ಈ ಮೂರ್ತಿಗೆ ಬೇಡಿಕೆಬಂದಿದೆ.

ಚಂದ್ರ ಹಾಗೂ ಗಣಪತಿ ಜೋಡಿಯ ಜೊತೆಗೆ ರೈತನ ಗಣಪತಿ, ನವೀಲಿನ ಮೇಲೆ ಕುಳಿತ ಗಣೇಶ, ಗರುಡ ಗಣೇಶ, ವೆಂಕಟೇಶ್ವರ ಗಣೇಶ ಮುಂತಾದ ಗಣಪತಿ ಮೂರ್ತಿಗಳು ಇಲ್ಲಿ ಆಕರ್ಷಣೀಯವಾಗಿ ಕಾಣಸಿಗುತ್ತಿವೆ. ಒಬ್ಬ ಭಾರತೀಯನಾಗಿ ಚಂದ್ರಯಾನ 3ರ ಯಶಸ್ಸನ್ನು ಸಂಭ್ರಮಿಸುವ ಸಲುವಾಗಿ ನಾವು ಚಂದ್ರಯಾನ ಗಣಪತಿ ಮಾದರಿ ತಯಾರಿಸಿದೆವು. ಇದರೊಂದಿಗೆ ವಿವಿಧ ವಿಷಯಗಳ ಕುರಿತಾದ ಗಣೇಶ ಮೂರ್ತಿಗಳನ್ನು ನಮ್ಮ ಸಂಸ್ಥೆಯಿಂದ ತಯಾರಿಸಿದ್ದೇವೆ ಎಂದು ಈಶಪುತ್ರ ಎಂಟರ್ ಎಂಟರ್ ಪ್ರೈಸಸ್​ನ ಮಾಲೀಕ ಗಣೇಶ ಮೂರ್ತಿ ತಯಾರಿಸುವ ಕಲಾವಿದ ಮತ್ತು ಮಾರಾಟಗಾರರಾದ ಆನಂದ್ ತಿಳಿಸಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರೀಸ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬಳಸಿ ವಿಗ್ರಹ ತಯಾರಿಸುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಸರ್ಕಾರ ಪಿಒಪಿಯಿಂದ ಗಣೇಶ ಮೂರ್ತಿ ತಯಾರಿಯನ್ನು ನಿಷೇಧಿಸಿದೆ. ಇದಕ್ಕೆ ನಗರವಾಸಿಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ, ಮಣ್ಣಿನ ಗಣಪತಿ ಮೂರ್ತಿಗಳಿಗೆ ಭಾರಿ ಬೇಡಿಕೆ ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ: ಅಂಧೇರಿ ಗಣಪನಿಗೆ 34 ಕೆಜಿ ಚಿನ್ನದಲಂಕಾರ.. 7ಕೋಟಿ ವಿಮೆ, ದರ್ಶನಕ್ಕೆ ಬರುವ ಭಕ್ತರಿಗೆ ತುಂಡುಡುಗೆ ನಿಷಿದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.