ETV Bharat / state

Caste census: ಜಾತಿ ಗಣತಿ ಮೂಲಕ ಕೆಲ ಸಮುದಾಯಗಳನ್ನು ಕಾಂಗ್ರೆಸ್​ ತುಳಿಯಲು ಹೊರಟಿದೆ: ಆರ್ ಅಶೋಕ್

author img

By

Published : Jun 8, 2023, 12:26 PM IST

Updated : Jun 8, 2023, 7:24 PM IST

Former Minister R Ashok
ಮಾಜಿ ಸಚಿವ ಆರ್ ಅಶೋಕ್

ಕಾಂಗ್ರೆಸ್​ ಜಾತಿ ಆಧರಿಸಿ ಗ್ಯಾರಂಟಿ ನೀಡಲು ಹೊರಟಿದೆ ಎಂದು ಮಾಜಿ ಸಚಿವ ಆರ್​ ಅಶೋಕ್​ ಆರೋಪಿಸಿದ್ದಾರೆ.

ಮಾಜಿ ಸಚಿವ ಆರ್ ಅಶೋಕ್

ಬೆಂಗಳೂರು: ಜಾತಿ ಗಣತಿ ವರದಿ ಮೂಲಕ ಕೆಲವು ಸಮುದಾಯಗಳನ್ನು ಕಾಂಗ್ರೆಸ್​ನವರು ತುಳಿಯಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ಆರೋಪಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಂದು ಜಾತಿಯನ್ನು ಮೆಚ್ಚಿಸಲು ಜಾತಿ‌ ಜನಗಣತಿ ಬಿಡುಗಡೆಗೆ ಮುಂದಾಗಿದ್ದಾರೆ. ಜಾತಿ ಜನಗಣತಿ ಬಿಡುಗಡೆ ಆಗಲಿ, ಅವರ ಬಂಡವಾಳ ಏನೆಂದು ಆಮೇಲೆ ಜನರು ತೋರಿಸ್ತಾರೆ. ಜಾತಿ ಜನಗಣತಿ ಮೂಲಕ ನಾವು ಕೊಟ್ಟ ಮೀಸಲಾತಿ ಬದಲಾವಣೆ ಮಾಡಿದರೆ, ನಾವು ಸುಮ್ಮನೆ ಇರಲ್ಲ. ನಾವಲ್ಲ, ರಾಜ್ಯದ ಜನರು ಸಹ ಅವರ ವಿರುದ್ಧ ರೊಚ್ಚಿಗೇಳ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಾತಿ ಹೆಸರಲ್ಲಿ ಗ್ಯಾರಂಟಿ ಕೊಡುತ್ತಿದ್ದಾರೆ: ಜಾತಿ ಹೆಸರಿನಲ್ಲಿ ಗ್ಯಾರಂಟಿ ಕೊಡ್ತಿದ್ದಾರೆ. ಇದನ್ನು ಕೂಡ ಬಿಜೆಪಿ ಖಂಡಿಸುತ್ತದೆ. ಗ್ಯಾರಂಟಿಗಳ ಬಗ್ಗೆ ನಮಿಗೆ ಮಾತ್ರ ಅಲ್ಲ, ಸಾಮಾನ್ಯ ಜನರಿಗೂ ಗೊಂದಲಗಳ ಮೇಲೆ ಗೊಂದಲ ಇದೆ. ಮಂತ್ರಿಗಳು ಏನೇನೋ ಹೇಳಿ ಗೊಂದಲ ಮೂಡಿಸಿದ್ದಾರೆ ಎಂದು ಅಶೋಕ್​ ಕಿಡಿಕಾರಿದರು.

ಮಹದೇವಪ್ಪ, ನಿನಗೂ ಫ್ರೀ ನನಗೂ ಫ್ರೀ ಅಂದಿದ್ದು ಸಿದ್ದರಾಮಯ್ಯ. ಆದರೆ ಈಗ ಇವರು ಇನ್​ಕಮ್ ಟ್ಯಾಕ್ಸ್ ಪೇ ಮಾಡುವವರಿಗೆ ಇಲ್ಲ ಅಂದಿದ್ದಾರೆ. 200 ಯೂನಿಟ್ ಫ್ರೀ ಅಂದಿದ್ರು. ಈವಾಗ ವಿದ್ಯುತ್ ದರ ಕೂಡ ಏರಿಕೆ ಮಾಡಿದ್ದಾರೆ. ವಿದ್ಯುತ್ ದರದಲ್ಲಿ ಹಣ ಸಂಗ್ರಹ ಮಾಡಲು ಹೊರಟಿದ್ದಾರೆ. ಜನರ ದುಡ್ಡು ತಗೊಂಡು, ಜನರಿಗೆ ಕೊಡೋದು. ಕಾಂಗ್ರೆಸ್​ನ ಬುದ್ಧಿಯನ್ನು ನಿಜವಾಗಿಯೂ ಮೆಚ್ಚಬೇಕು ಎಂದು ವಾಗ್ದಾಳಿ ನಡೆಸಿದರು.

ಇಡೀ ರಾಜ್ಯದ ಜನರು ರೊಚ್ಚಿಗೆದ್ದು ಹೋರಾಟ ಮಾಡಬೇಕಾಗುತ್ತದೆ. ಬಿಜೆಪಿ ಕೂಡ ಈ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ. ಕಾಂಗ್ರೆಸ್ ಮೋಸದ ಗ್ಯಾರಂಟಿ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಹೊಸದಾಗಿ ಗೆದ್ದ ಮೇಲೆ ಕಾಂಗ್ರೆಸ್​ನವರು ಆಕಾಶದ ಮೇಲೆಯೇ ಇದ್ದಾರೆ. ಇನ್ನೂ ಅವರು ಭೂಮಿಗೇ ಇಳಿದಿಲ್ಲ. ಅವರನ್ನು ಅರೆಸ್ಟ್ ಮಾಡ್ಬೇಕು, ಇವರನ್ನು ಅರೆಸ್ಟ್ ಮಾಡ್ಬೇಕು ಅಂತಿದ್ದಾರೆ ಎಂದು ಅಶೋಕ್​ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್​ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಕೈಗೊಂಡಿತ್ತು. ಅದರ ವರದಿಯನ್ನು ನಂತರ ಬಂದ ಸರ್ಕಾರಗಳು ಸ್ವೀಕರಿಸಲು ಹಿಂದೇಟು ಹಾಕಿದ್ದವು. ಆದರೆ ಈಗ ಮತ್ತೆ ತಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಿರುವ ಕಾರಣ ಆ ಸಮೀಕ್ಷೆಯ ವರದಿಯನ್ನು ನಾವು ಸ್ವೀಕರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಕಾಂಗ್ರೆಸ್​ ಸರ್ಕಾರ ಶತ ಶತಮಾನಗಳಿಂದ ಅವಕಾಶ ವಂಚಿತರಾಗಿರುವವರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 162 ಕೋಟಿ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕೈಗೊಂಡಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ವರದಿಯನ್ನು ಪರಿಗಣಿಸಿರಲಿಲ್ಲ. ಇದೀಗ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೆ ಬಂದಿದ್ದು, ಅದೇ ವರದಿಯನ್ನು ಸ್ವೀಕರಿಸಿ, ವಸ್ತು ಸ್ಥಿತಿಯನ್ನು ಪರಿಗಣಿಸಿ ಜನರಿಗೆ ಶಿಕ್ಷಣ ಉದ್ಯೋಗ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಕುರಿತ ಹೇಳಿಕೆ ವೈರಲ್‌: ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Last Updated :Jun 8, 2023, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.