'ನಾ ನಾಯಕಿ' ಸಮಾವೇಶ: ಬೆಂಗಳೂರಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ

author img

By

Published : Jan 16, 2023, 1:03 PM IST

Congress leader Priyanka Gandhi arrived  Priyanka Gandhi arrived to Karnataka  Na Nayaki conference  Congress leader Priyanka Gandhi news  ರಾಜ್ಯಕ್ಕೆ‌ಆಗಮಿಸಿದ ಪ್ರಿಯಾಂಕಾ ಗಾಂಧಿ  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ವಿಮಾನದಲ್ಲಿ ದೆಹಲಿಯಿಂದ ಬಂದ ಪ್ರಿಯಾಂಕಾ ಗಾಂಧಿ  ನಾ ನಾಯಕಿ ಕಾರ್ಯಕ್ರಮದಲ್ಲಿ ಪ್ರಿಯಾಂಕ ಗಾಂಧಿ  ಸ್ತ್ರೀ ಶಕ್ತಿ ಪ್ರದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ  ಸಮಾವೇಶದಲ್ಲಿ ಮೊಟ್ಟಮ್ಮ ಮಾತು

ನಾ ನಾಯಕಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಿಯಾಂಕ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು ಸ್ವಾಗತಿಸಲು ಏರ್​ಪೋರ್ಟ್ ಬಳಿಯ ಸಾದಹಳ್ಳಿ ಟೋಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರ ದಂಡೇ ಜಮಾಯಿಸಿತ್ತು.

ದೇವನಹಳ್ಳಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಯುಕೆ 801 ವಿಮಾನದಲ್ಲಿ ಬಂದಿಳಿದ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಸ್ವಾಗತ ಕೋರಿದರು. ಪ್ರಿಯಾಂಕ ಗಾಂಧಿ ಅವರೊಂದಿಗೆ ಕಾರ್‌ನಲ್ಲಿ ಸಿದ್ದರಾಮಯ್ಯ ಡಿಕೆಶಿ ಕುಳಿತು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ‘ನಾ ನಾಯಕಿ’ ಕಾರ್ಯಕ್ರಮಕ್ಕೆ ಪ್ರಯಾಣ ಬೆಳೆಸಿದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಪಕ್ಷ, ಇದರ ಭಾಗವಾಗಿ ಇಂದು ನಾ ನಾಯಕಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಕಾರ್ಯಕ್ರಮ ಆರಂಭವಾಗಿದ್ದು, ಮಹಿಳಾ ನಾಯಕಿಯರು ಭಾಷಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಹಿಳಾ ಶಕ್ತಿ ಪ್ರದರ್ಶನದ ವೇದಿಕೆ ಇದಾಗಿದೆ. ಸಮಾವೇಶಕ್ಕೆ ಹೊರಟಿದ್ದ ಪ್ರಿಯಾಂಕ ಗಾಂಧಿ ಬೆಳಗ್ಗೆ 11ಕ್ಕೆ ವಿಮಾನ ನಿಲ್ದಾಣ ತಲುಪಬೇಕಿದ್ದು, ಕೊಂಚ ವಿಳಂಬವಾಗಿ ಆಗಮಿಸಿದರು.

ಅರಮನೆ ಮೈದಾನದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನಕ್ಕೆ ಸಾವಿರಾರು ಮಹಿಳೆಯರು ಆಗಮಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಹಲವು ರಾಜ್ಯ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ವೇದಿಕೆ ಮೇಲೆ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪುರುಷರಿಗೆ ವೇದಿಕೆ ಮುಂಭಾಗ ಕುಳಿತುಕೊಳ್ಳಲು ಸ್ಥಳಾವಕಾಶ ನೀಡಲಾಗಿದೆ.

ರಾಜ್ಯ ಹಾಗು ರಾಷ್ಟ್ರೀಯ ಮಟ್ಟದ ಪುರುಷ ನಾಯಕರಿಗೆ ಮಾತ್ರ ಸಮಾರಂಭಕ್ಕೆ ಆಹ್ವಾನ ನೀಡಿದ್ದು, ಪುರುಷ ಕಾರ್ಯಕರ್ತರಿಗೆ ಪ್ರವೇಶವಿಲ್ಲ. ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಇಂದು ಸಲಹೆಗಳನ್ನೂ ಸ್ವೀಕರಿಸಲಿದ್ದಾರೆ. ರಾಜ್ಯದ 2.5 ಕೋಟಿ ಮಹಿಳಾ ಮತದಾರರನ್ನು ಸೆಳೆಯಲು 'ನಾ ನಾಯಕಿ' ಸಮಾವೇಶವನ್ನು ಕೈ ಪಕ್ಷ ಆಯೋಜಿಸಿದೆ.

ಹೊಸ ಘೋಷಣೆ: ವೇದಿಕೆ ಮೇಲೆಯೇ ಇಂದು ಮಹಿಳೆಯರಿಗೆ ಹೊಸ ಪ್ರಣಾಳಿಕೆ ಘೋಷಣೆ ಆಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಭರವಸೆಗಳ ಪ್ರಣಾಳಿಕೆ ಹೊರ ತರಲು ಕಾಂಗ್ರೆಸ್ ನಿರ್ಧರಿಸಿದ್ದು, ಇದರ ಘೋಷಣೆ ಆಗಲಿದೆ. ಇದರ ಜತೆ ಹೆಚ್ಚು ಮಹಿಳೆಯರಿಗೆ ಸ್ಪರ್ಧಿಸುವ ಅವಕಾಶ ನೀಡುವಂತೆಯೂ ಮಹಿಳಾ ನಾಯಕಿಯರು ಪ್ರಿಯಂಕಾ ಗಾಂಧಿಗೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರಣಾಳಿಕೆಯಲ್ಲಿ ಯಾವೆಲ್ಲ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ಪಡೆಯುತ್ತಿರುವ ಕೆಪಿಸಿಸಿ ಮಹಿಳಾ ಘಟಕ ಈ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಿದೆ. ಸಮಾವೇಶದ ಮಧ್ಯೆ, ವಿಶೇಷ ಬಾಕ್ಸ್ ಅನ್ನು ಅಲ್ಲಲ್ಲಿ ಇರಿಸಲಾಗಿದ್ದು ಸಲಹೆ, ಸೂಚನೆಗಳನ್ನು ಇದರಲ್ಲಿ ಹಾಕುವಂತೆ ಸೂಚಿಸಲಾಗಿದೆ.

ಪ್ರಿಯಾಂಕ ಜೂನಿಯರ್‌ ಇಂದಿರಾ ಗಾಂಧಿ- ಮೋಟಮ್ಮ: ನಾ ನಾಯಕಿ ಸಮಾವೇಶದಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ನಾವು ಜೂನಿಯರ್ ಇಂದಿರಾ ಗಾಂಧಿ ಅವರ ಮಾತುಗಳನ್ನು ಕೇಳಲು ಸೇರಿದ್ದೇವೆ. ನಾವು ಒಂದು ಕುಟುಂಬವನ್ನು ನಿರ್ವಹಿಸಲು ಸಮರ್ಥವಾಗಿದ್ದೇವೆ. ಅದೇ ರೀತಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಮರ್ಥರಾಗಿದ್ದೇವೆ. ಇಂದಿರಾ ಗಾಂಧಿ ಅವರ ಮೊಮ್ಕಗಳು, ಜೂನಿಯರ್ ಇಂದಿರಾ ಗಾಂಧಿ ಬಂದಾಗ ಏನು ಮಾರ್ಗದರ್ಶನ ಮಾಡ್ತಾರೆ. ಆ ರೀತಿ ಪಕ್ಷ ಕಟ್ಟಲು ಟೊಂಕ ಕಟ್ಟಿ ನಿಲ್ಲಬೇಕು ಎಂದು ತಿಳಿಸಿದರು.

ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಹೇಳಿ?. ಇಂದಿರಾ ಗಾಂಧಿ, ಮನಮೋಹನ್ ಸಿಂಗ್​ ಅನೇಕ ಯೋಜನೆಗಳನ್ನು ಕೊಟ್ಟರು. ಸಂವಿಧಾನದಿಂದ ಮತದಾನ ಹಕ್ಕು, ಆಸ್ತಿ ಹಕ್ಕು, ರಾಜಕೀಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ 50% ಮೀಸಲಾತಿ ಕೊಟ್ಟಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಇದಕ್ಕಾಗಿ ಅಂದಿನ ಸಿಎಂ ಸ್ತ್ರೀ ಸಂಘಗಳನ್ನು ಮಾಡಿದ್ದರು. 50% ಇರುವ ಮಹಿಳೆಯರು ಕಾಂಗ್ರೆಸ್ ಗೆ ಶಕ್ತಿ ತುಂಬಲು ಮುಂದಾಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಆಗ್ತಿವೆ. ಧರ್ಮಾಂಧರನ್ನಾಗಿ ಕಂದಕ ಉಂಟು ಮಾಡುತ್ತಿದ್ದಾರೆ. ಮುಂದಿನ ಎಲೆಕ್ಷನ್​ನಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕು. ಬಿಸಿಯೂಟ, ಆಶಾ ಕಾರ್ಯಕರ್ತೆರಿಗೆ ನೌಕರಿ ಭದ್ರತೆ ಒದಗಿಸಬೇಕಿದೆ ಎಂದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.