ಸಿಎಂ ಭ್ರಷ್ಟಾಚಾರದ ಪಿತಾಮಹ.. ಬಿಜೆಪಿ ವಿರುದ್ಧ ಕಾಂಗ್ರೆಸ್ ನಿಯೋಗದಿಂದ ಪೊಲೀಸರಿಗೆ ದೂರು

author img

By

Published : Jan 25, 2023, 1:58 PM IST

Representative image

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​​ ಕಟೀಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದೆ.

ಡಿ.ಕೆ ಶಿವಕುಮಾರ್​ ಪ್ರತಿಕ್ರಿಯೆ..

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಹಣ ನೀಡಲು ಬಿಜೆಪಿ ಸರ್ಕಾರ ವ್ಯಾಪಕವಾಗಿ ಭ್ರಷ್ಟಾಚಾರ ಎಸಗುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದೆ.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ಹೊರಟ ನಿಯೋಗವು ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ಭ್ರಷ್ಟಾಚಾರ ಹಾಗೂ ಅಕ್ರಮದಲ್ಲಿ ತೊಡಗಿಕೊಂಡಿರುವ ಬಿಜೆಪಿ ನಾಯಕರನ್ನು ಬಂಧಿಸಬೇಕೆಂದು ಒತ್ತಾಯಿಸಿತು. ಅಕ್ರಮವೆಸಗಿದ ನಾಯಕರು ಮಾತನಾಡಿದ ಆಡಿಯೋ ಹಾಗೂ ವಿಡಿಯೋ ಸೇರಿ ಅಗತ್ಯ ದಾಖಲಾತಿಗಳನ್ನು ಪೊಲೀಸರಿಗೆ ನೀಡಲಾಯಿತು.

ಮತದಾರರಿಗೆ ಆಮಿಷ: ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ "ಪ್ರಜಾಪ್ರಭುತ್ವದಲ್ಲಿ ಬಿಜೆಪಿ ನಡೆ ಗಮನಿಸುತ್ತಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಗೆಲ್ಲುವುದಿಲ್ಲ. ಆದರೂ ಸರ್ಕಾರ ರಚನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಇತ್ತೀಚೆಗೆ ಮೂರ್ನಾಲ್ಕು ಶಾಸಕರ ಹೇಳಿಕೆ ಗಮನಿಸಿದ್ದೇನೆ. ನಾವು ಸೋಲುತ್ತೇವೆ ಎಂದು ಮತದಾರರಿಗೆ ಆಮಿಷ ತೋರುತ್ತಿದ್ದಾರೆ. ಇದಕ್ಕಾಗಿ ಸಾವಿರಾರು ಕೋಟಿ ಸಂಗ್ರಹಿಸಿಕೊಂಡಿದ್ದಾರೆ ಎಂದು ದೂರಿದರು.

ದಾಖಲೆ ಸಮೇತ ದೂರು: ಶೇ 40ರಷ್ಟು ಕಮಿಷನ್ ಮಾಡಿ ಆರು ಸಾವಿರ ಕೊಡ್ತೀವಿ ಅಂತಾ ಹೇಳಿರುವ ಆಡಿಯೋ ಹಾಗೂ ವಿಡಿಯೋ ದಾಖಲೆಗಳಿವೆ. ಹೀಗಾಗಿ ದಾಖಲೆ ಸಮೇತ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಪೊಲೀಸರು ಎಫ್ಐಆರ್ ದಾಖಲಿಸಿ ಕೂಡಲೇ ತನಿಖೆ ಮಾಡಬೇಕು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​​ ಕಟೀಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಟ್ಟಿದ್ದೇವೆ. ಇವರೆಲ್ಲರ ಮೇಲೆ ಎಫ್​​ಐಆರ್ ಆಗಬೇಕು ಎಂದು ಒತ್ತಾಯಿಸಿದರು.

ಸಿಎಂ ಭ್ರಷ್ಟಾಚಾರದ ಪಿತಾಮಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರ ಪಿತಾಮಹ ಎಂದು ಡಿ.ಕೆ ಶಿವಕುಮಾರ್​​ ಆರೋಪಿಸಿದರು. ನಾವು ಹಿಂದೆ ಮಾಡಿದ್ವಿ ಅಂತಾ ನೀವು ಈಗ ಮಾಡ್ತಿರಾ ಎಂದು ಅವರು ಪ್ರಶ್ನಿಸಿದರು. ಇಂದು ರಾಷ್ಟ್ರೀಯ ಮತದಾರರ ದಿನ. ಹಾಗಾಗಿ ಇವತ್ತು ದೂರು ನೀಡಲಾಗಿದೆ. ಬಿಜೆಪಿ ಅಕ್ರಮ ತಡೆಗಟ್ಟಬೇಕು. ಈ ಬಗ್ಗೆ ನಾಳೆ ಸಭೆ ಇಟ್ಟುಕೊಂಡಿದ್ದೇವೆ. ಪಿಎಸ್ಐ ಹಗರಣದಲ್ಲಿ ಆರೋಪಿಯಿಂದ 76 ಲಕ್ಷ ವಸೂಲಿ ಆಗಿದೆ. ಸರ್ಕಾರವೇ ಇದರಲ್ಲಿ ಶಾಮಿಲಾಗಿದೆ.

ಮುಂದಿನ ದಿನಗಳಲ್ಲಿ ಲೋಕಾಯುಕ್ತಕ್ಕೆ ನಾವು ದೂರು ನೀಡುತ್ತೇವೆ. ಮಾಗಡಿಯಲ್ಲಿ ಮಂತ್ರಿ ಕಡೆಯಿಂದ ದುಡ್ಡು ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಅಶ್ವತ್ಥ​ ನಾರಾಯಣ ಹೆಸರು ಪ್ರಸ್ತಾಪಿಸಿದರು. ಜತೆಗೆ ಪಿಎಸ್ಐ ಹಗರಣದ ಬಗ್ಗೆ ಕೂಡ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಲಂಚ ಇಲ್ಲದೇ ಏನೂ ಆಗಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, "ಮತದಾರರನ್ನು ಸೆಳೆಯಲು ಬಿಜೆಪಿ ಸಂಚು ರೂಪಿಸಿದೆ. ಇದರಲ್ಲಿ ನಡ್ಡಾ, ಕಟೀಲ್, ಸಿಎಂ, ರಮೇಶ್ ಜಾರಕಿಹೊಳಿ ಇದ್ದಾರೆ. ಅಕ್ರಮದ ಬಗ್ಗೆ ರಮೇಶ್ ಜಾರಕಿಹೊಳಿ ಕೈಲಿ ಹೇಳಿಸಿದ್ದಾರೆ. ಇನ್ನು ಬೇರೆಯವರು ಕೂಡ ಇದ್ದಾರೆ‌. ಚುನಾವಣೆಯಲ್ಲಿ ಸೋಲ್ತೀವಿ ಅಂತಾ ಮನವರಿಕೆ ಆಗಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಅಂತಾ ಅವರಿಗೂ ಗೊತ್ತಾಗಿದೆ. ವರ್ಗಾವಣೆ, ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪೊಲೀಸ್ ಠಾಣೆಗಳಲ್ಲಿ, ತಾಲೂಕು ಕಚೇರಿಗಳಲ್ಲಿ ಲಂಚ ಇಲ್ಲದೇ ಏನೂ ಆಗಲ್ಲ ಎಂಬ ವಾತಾವರಣ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.

ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿತರನ್ನ ಬಂಧಿಸಬೇಕು. ಮುಕ್ತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಬೇಕೆಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ, ಬಿಜೆಪಿಗೆ ಇದರಲ್ಲಿ ನಂಬಿಕೆ ಇಲ್ಲ. ಪ್ರಜಾಪ್ರಭುತ್ವವನ್ನ ಬುಡಮೇಲು ಮಾಡಲು ಹೊರಟಿದ್ದಾರೆ. ಆಸೆ, ಆಮಿಷವೊಡ್ಡಿ ಮತದಾನ ಮಾಡಿಸುವುದು ಕಾನೂನು ಬಾಹಿರವಾಗಿದೆ ಎಂದರು.

ಬಿಜೆಪಿ ಬೆಳೆಯಲು ಕುಮಾರಸ್ವಾಮಿ ಕಾರಣ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ. 2006ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಯಾರು.?, ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಅವರು. ಅಂದು ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟು ಕೊಡದೇ ಮೋಸ ಮಾಡಿದ್ದು ಕುಮಾರಸ್ವಾಮಿ. ಅಂದು ಅಧಿಕಾರ ಬಿಟ್ಟು ಕೊಟ್ಟಿದ್ರೆ, ಇವತ್ತು ಬಿಜೆಪಿ ಈ ಮಟ್ಟಿಗೆ ಬೆಳೆಯುತ್ತಲೇ ಇರಲಿಲ್ಲ. ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ ಎಂದು ಗುಡುಗಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ: 300 ಕಡೆ ಕಾಂಗ್ರೆಸ್ ಮೌನ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.