ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ: 300 ಕಡೆ ಕಾಂಗ್ರೆಸ್ ಮೌನ ಪ್ರತಿಭಟನೆ

author img

By

Published : Jan 23, 2023, 1:25 PM IST

Congress protest in Bengaluru

ಬೆಂಗಳೂರಿನ ಒಟ್ಟು 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸುದೀರ್ಘ ಪ್ರತಿಭಟನೆ ನಡೆಸಿದರು.

300 ಕಡೆ ಮೌನ ಪ್ರತಿಭಟನೆ: ನಗರದ ಒಟ್ಟು 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ 51 ಮೆಟ್ರೊ ನಿಲ್ದಾಣ, 26 ಮೇಲ್ಸೇತುವೆ, 200 ಟ್ರಾಫಿಕ್ ಸಿಗ್ನಲ್ ಸೇರಿದಂತೆ 300 ಕಡೆಗಳಲ್ಲಿ ಮೌನ ಪ್ರತಿಭಟನೆ ನಡೆದಿದೆ.

Congress protest in Bengaluru
ಕಾಂಗ್ರೆಸ್‌ ಪ್ರತಿಭಟನೆ

ತಪ್ಪುಗಳನ್ನು ಸರಿಪಡಿಸಬೇಕು: ಪ್ರತಿಭಟನೆಯಲ್ಲಿ ಭಾಗಿಯಾದ ಶಾಸಕ ಎನ್.ಎ ಹ್ಯಾರಿಸ್ ಮಾತನಾಡಿ, 'ಪ್ರತಿಪಕ್ಷವಾಗಿ ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ಕೊಡುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಮನೆಯಲ್ಲಿ ಕಷ್ಟ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆ. ಹಾಗಿದ್ದಾಗ ಪೆಟ್ರೋಲ್ ದರ ಏಕೆ ಕಡಿಮೆ ಮಾಡುತ್ತಿಲ್ಲ.‌ ಇವರಿಗೆ ಬೇಕಾದವರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ತಮ್ಮ ತಪ್ಪುಗಳನ್ನು ಸರಿಪಡಿಸಬೇಕು' ಎಂದು ಒತ್ತಾಯಿಸಿದರು.

Congress protest in Bengaluru
ಕಾಂಗ್ರೆಸ್‌ ಪ್ರತಿಭಟನೆ

ಲೂಟಿ ಮಾಡಿದವರು ಯಾರು?: ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಆಡಳಿತದ 60 ವರ್ಷ ಅವಧಿಯಲ್ಲಿ ಅಕ್ರಮ ನಡೆದಿದ್ದರೆ ತನಿಖೆ ಮಾಡಿಸಿ. ಈಗ ಮಾತಾಡಿದರೆ ಹೇಗೆ?. ಕೊರೊನಾ ಸಮಯದಲ್ಲಿ ಲೂಟಿ ಮಾಡಿದವರು ಯಾರು?. ಸುಧಾಕರ್ ಯಾರ ಪಕ್ಷದಲ್ಲಿ ಇದ್ದರು. ಈಗ ನಮ್ಮ ವಿರುದ್ಧ ಮಾತನಾಡುತ್ತಾರೆ. ಲಸಿಕೆ, ಔಷಧ, ಬೆಡ್​​ನಲ್ಲಿ ಹಣ ಮಾಡಿದ್ದು ಇವರೇ ಅಲ್ಲವೇ? ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ: ನಮ್ಮ ಮುಖಗಳು ಸರಿಯಾಗಿಯೇ ಇವೆ. ಅವರ ಮುಖ ಮೊದಲು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಈ ಸರ್ಕಾರದಲ್ಲಿ ಲಂಚ ಇಲ್ಲದೇ ಏನು ಆಗ್ತಿಲ್ಲ. ಡಿಸಿಪಿ, ಎಸ್​ಪಿ ಪೋಸ್ಟಿಂಗ್​​ಗೆ ಲಂಚ ಕೊಡಬೇಕು. ಎಲ್ಲ ಕಡೆ ಲಂಚ, ಲಂಚ ಲಂಚ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಜನ ಜಾಗೃತಿಗಾಗಿ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ನಗರದ ಜನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ಹೋಗಿದ್ದಾರೆ. ತಮಗೆ ಸೋಲುಂಟಾಗಲಿದೆ ಎಂಬ ಆತಂಕದಿಂದಲೇ ಬಿಜೆಪಿ ಬಿಬಿಎಂಪಿ ಚುನಾವಣೆ ಸಹ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

Congress protest in Bengaluru
ಕಾಂಗ್ರೆಸ್‌ ಪ್ರತಿಭಟನೆ

ಸಮಸ್ಯೆಗೆ ಸರ್ಕಾರ ಉತ್ತರ ಕೊಡಬೇಕು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಭ್ರಷ್ಟಾಚಾರ ವಿರೋಧಿಸಿ ‌300 ಕಡೆ ಪ್ರತಿಭಟನೆ ಮಾಡುತ್ತಿದ್ದೇವೆ. ರಸ್ತೆ ಗುಂಡಿ, ಕಸದ ಸಮಸ್ಯೆಗೆ ಸರ್ಕಾರ ಉತ್ತರ ಕೊಡಬೇಕು. ರಾಜ್ಯದಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಅಗತ್ಯ ವಸ್ಯಗಳ ಬೆಲೆ ಗಗನಕ್ಕೆ ಹೋಗಿದೆ. ಬೀದಿ ವ್ಯಾಪಾರಿಗಳ ಹತ್ರ ಪೊಲೀಸ್ ಸ್ಟೇಷನ್​​ನಲ್ಲಿ 1 ಕೋಟಿ ಕಲೆಕ್ಟ್ ಮಾಡುತ್ತಿದ್ದಾರೆ. ಗುತ್ತಿಗೆದಾರಿಗೆ ಹಣ ಕೊಡಲು ಆಗ್ತಿಲ್ಲ. ಇಂತಹ ಭ್ರಷ್ಟಾಚಾರದಿಂದ ಕೂಡಿದ ಸರ್ಕಾರ ತೊಲಗಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಡಿಕೆಶಿ ಜನತೆಗೆ ಕರೆ ನೀಡಿದರು.

ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ತಾ, ಶಾಸಕ ಎನ್. ಎ ಹ್ಯಾರಿಸ್, ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ: ಹಾಲು, ಮೊಸರು ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.