ETV Bharat / state

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಂಗಿ ಕುಸ್ತಿಯಿಂದ ಒಳಗೊಳಗೆ ನಸುನಕ್ಕ ಮೂರನೇ ವ್ಯಕ್ತಿ

author img

By

Published : Aug 20, 2022, 8:32 PM IST

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ದಿನದಿಂದ ದಿನಕ್ಕೆ ಪವರ್​​ಫುಲ್ ಆಗುತ್ತಿದ್ದಾರೆ. ಹೀಗೆ ಶಕ್ತಿ ಶಾಲಿಯಾಗುತ್ತಿರುವ ಅವರಿಗೆ ಸರಿಸಾಟಿ ಆಗಬೇಕೆಂದರೆ ಭವಿಷ್ಯದ ಶಾಸಕಾಂಗ ಪಕ್ಷದಲ್ಲಿ ತಮಗೂ ಬಲ ಇರಬೇಕು. ಶಾಸಕಾಂಗ ನಾಯಕನ ಆಯ್ಕೆಯ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ 60 ಬೆಂಬಲಿಗ ಶಾಸಕರನ್ನು ತೋರಿಸಿದರೆ, ತಾವು ಕೂಡಾ ಅಂತಹದೇ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿರಬೇಕು ಅನ್ನೋದು ಡಿ ಕೆ ಶಿವಕುಮಾರ್ ತವಕ.

Cold War Between Siddaramaiah and DK Shivakumar
Cold War Between Siddaramaiah and DK Shivakumar

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರ ಜಂಗಿ ಕುಸ್ತಿ ಕಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಫುಲ್ ಖುಷಿಯಾಗಿದ್ದಾರೆ.

ಜಂಗಿ ಕುಸ್ತಿ: ಮುಂದಿನ ಚುನಾವಣೆಯ ನಂತರ ಸಿಎಂ ಆಗುವ ಹಂಬಲದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡೆಸಿರುವ ಜಂಗಿ ಕುಸ್ತಿ ಒಂದೇ ರೇಂಜಿನಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಜನ್ಮ ದಿನದ ಹೆಸರಿನಲ್ಲಿ ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆದ ದೊಡ್ಡ ಸಮಾರಂಭ ಸ್ಪಷ್ಟವಾಗಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಪ್ರತಿಬಿಂಬಿಸುವ ಉದ್ದೇಶವಾಗಿತ್ತು.

Cold War Between Siddaramaiah and DK Shivakumar
ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಇದು ಮನದಟ್ಟಾಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಣಾಯಕ ಆಟಕ್ಕೆ‌ ಮುಂದಾದರು. ಬೆಂಗಳೂರಿನಲ್ಲಿ ಆ. 15 ರಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ ವರೆಗೂ ಬೃಹತ್ ಜಾಥಾ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

Cold War Between Siddaramaiah and DK Shivakumar
ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಂತರ ಮತ್ತೊಮ್ಮೆ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ. ಹೀಗಾಗಿ ತಮಗೆ ಸಮುದಾಯದ ಬೆಂಬಲ ಇರಲಿ ಎಂದು ಸಮುದಾಯದ ಬೆಂಬಲವನ್ನು ಡಿಕೆ ಕೋರಿದ್ದರು. ಯಾವಾಗ ಅವರು ಈ ಮನವಿ ಮಾಡಿಕೊಂಡರೋ? ಇದಾದ ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖುಷಿಯಾಗಿದ್ದಾರೆ. ಕಾರಣ, ಡಿ.ಕೆ.ಶಿವಕುಮಾರ್ ಹಾಕಿದ ಕೂಗು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಪಾಸಿಟಿವ್ ಸಂದೇಶ ರವಾನಿಸುವ ಬದಲು ನೆಗೆಟಿವ್ ಸಂದೇಶ ರವಾನಿಸಿದೆ. ಅಂದರೆ, ಕಾಂಗ್ರೆಸ್​​ನಲ್ಲಿ ನಾಯಕತ್ವಕ್ಕಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವೆ ನಡೆಯುತ್ತಿರುವ ಸಂಘರ್ಷ ಒಕ್ಕಲಿಗ ಮತದಾರರಲ್ಲಿ ಸಂದೇಹ ಮೂಡಿಸಿದೆ.

ಡಿಕೆಶಿ ಅವರ ನೇರ ಮನವಿಗೆ ಕಾರಣ: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ದಿನದಿಂದ ದಿನಕ್ಕೆ ಪವರ್​​ಫುಲ್ ಆಗುತ್ತಿದ್ದಾರೆ. ಹೀಗೆ ಶಕ್ತಿ ಶಾಲಿಯಾಗುತ್ತಿರುವ ಅವರಿಗೆ ಸರಿಸಾಟಿ ಆಗಬೇಕೆಂದರೆ ಭವಿಷ್ಯದ ಶಾಸಕಾಂಗ ಪಕ್ಷದಲ್ಲಿ ತಮಗೂ ಬಲ ಇರಬೇಕು. ಶಾಸಕಾಂಗ ನಾಯಕನ ಆಯ್ಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ 60 ಬೆಂಬಲಿಗ ಶಾಸಕರನ್ನು ತೋರಿಸಿದರೆ, ತಾವು ಕೂಡಾ ಅಂತಹದೇ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿರಬೇಕು. ಆದರೆ, ಇವತ್ತಿನ ಸ್ಥಿತಿಯಲ್ಲಿ ಕೈ ಪಾಳೆಯದ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಜತೆಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ನಂತರವೂ ಈ ಪರಿಸ್ಥಿತಿ ಮುಂದುವರಿದರೆ ಸಿದ್ದರಾಮಯ್ಯ ಸಹಜವಾಗಿಯೇ ಶಾಸಕಾಂಗ ಪಕ್ಷದ ನಾಯಕರಾಗಬಹುದು.

Cold War Between Siddaramaiah and DK Shivakumar
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಕಾಂಗ್ರೆಸ್​ ಮುಖಂಡರು.

ಬಲಾಬಲ: ಕಾಂಗ್ರೆಸ್ ಹೈಕಮಾಂಡ್ ಬಲಾಬಲ ಲೆಕ್ಕ ಹಾಕದೆ ಶಾಸಕಾಂಗ ನಾಯಕರನ್ನು ನೇಮಕ ಮಾಡಿದ ಹಲವು ಉದಾಹರಣೆಗಳು ಸಹ ಇವೆ. 1990 ರಲ್ಲಿ ವೀರೇಂದ್ರ ಪಾಟೀಲರು ಸಿಎಂ ಹುದ್ದೆಯಿಂದ ಕೆಳಗಿಳಿದಾಗ ಪಕ್ಷದ ಶಾಸಕಾಂಗದಲ್ಲಿ ಹೆಚ್ಚು ಸಂಖ್ಯಾಬಲ ಇದ್ದದ್ದು ಕೆ.ಹೆಚ್. ಪಾಟೀಲರಿಗೆ. ಆದರೆ, ಪಾರ್ಟಿ ಫಂಡ್ ಸಂಗ್ರಹಿಸುವ ವಿಷಯದಲ್ಲಿ ಕೆ.ಹೆಚ್. ಪಾಟೀಲರಿಗಿಂತ ಬಂಗಾರಪ್ಪ ಅವರಿಗೆ ಶಕ್ತಿ ಜಾಸ್ತಿ ಅಂತ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತು. ಇದೇ ರೀತಿ 1992 ರಲ್ಲಿ ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಲು ಪ್ರಧಾನಿ ಪಿ.ವಿ. ನರಸಿಂಹರಾವ್ ನಿರ್ಧರಿಸಿದಾಗ ಭವಿಷ್ಯದ ನಾಯಕನ ರೇಸಿನಲ್ಲಿ ಎಸ್.ಎಂ.ಕೃಷ್ಣ ಮುಂದಿದ್ದರು. ಅಂದರೆ, ಶಾಸಕಾಂಗ ಪಕ್ಷದಲ್ಲಿ ಅವರಿಗೆ ಹೆಚ್ಚಿನ ಬೆಂಬಲವಿತ್ತು. ಆದರೆ, ಕೊನೆಯ ಕ್ಷಣದಲ್ಲಿ ದೆಹಲಿಯಿಂದ ಬಂದ ಲಕೋಟೆ ವೀರಪ್ಪ ಮೊಯ್ಲಿ ಅವರಿಗೆ ಅದೃಷ್ಟ ಖುಲಾಯಿಸಿತ್ತು.

Cold War Between Siddaramaiah and DK ShivakumarCold War Between Siddaramaiah and DK Shivakumar
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ಶಾಸಕಾಂಗ ಪಕ್ಷದಲ್ಲಿ ಯಾರಿಗೆ ಹೆಚ್ಚು ಬೆಂಬಲ ಇದೆಯೋ? ಅವರಿಗೆ‌ ಪಟ್ಟ ಕಟ್ಟಲೇಬೇಕು. ಆ ದೃಷ್ಟಿಯಿಂದ ಲೆಕ್ಕ ಹಾಕಿದರೆ ಸಿದ್ದರಾಮಯ್ಯ ಅವರ ಹಿಂದೆ ಹೆಚ್ಚು ಶಾಸಕರು ನಿಲ್ಲುವ ಸಾಧ್ಯತೆ ಹೆಚ್ಚು. ಹೀಗಿರುವಾಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಬದಲು ಡಿಕೆಶಿಗೆ ಪಟ್ಟ ಕಟ್ಟಲು ಮುಂದಾದರೆ ತಿರುಗಿ ಬೀಳಲು‌ ಸಿದ್ದರಾಮಯ್ಯ ಹಿಂಜರಿಯುವುದಿಲ್ಲ.

Cold War Between Siddaramaiah and DK Shivakumar
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಡಿಕೆಶಿ ಈ ಕೂಗು ಬೇರೆ ಪಕ್ಷಕ್ಕೆ‌ ಲಾಭ: ಇದು ಹೈಕಮಾಂಡ್​ಗೂ ಗೊತ್ತಿದೆ. ಹೀಗಾಗಿ ಶಾಸಕಾಂಗ ಪಕ್ಷದಲ್ಲಿ ನಿಮ್ಮ ಬಲ ಹೆಚ್ಚಿರುವಂತೆ ನೋಡಿಕೊಳ್ಳಿ ಅಂತ ಡಿಕೆಶಿಗೆ ಸೂಚನೆ ಕೊಡದೆ ಅವರಿಗೂ ಬೇರೆ ದಾರಿ ಇಲ್ಲ. ಇದು ಗೊತ್ತಿರುವುದರಿಂದಲೇ ಡಿಕೆಶಿ ಇದ್ದಕ್ಕಿದ್ದಂತೆ ಒಕ್ಕಲಿಗರ ಪಾಳೇಪಟ್ಟಿನ ಮುಂದೆ ನಿಂತು ಅಲವತ್ತುಕೊಂಡಿದ್ದಾರೆ. ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ. ಹೀಗಾಗಿ ನನಗೆ ನಿಮ್ಮ ಬೆಂಬಲವಿರಲಿ ಎಂಬುದು ಅವರ ಕೂಗಿಗೆ ಕಾರಣ. ಆದರೆ, ಡಿಕೆಶಿ ಈ ಕೂಗು ಕಾಂಗ್ರೆಸ್ ಪಕ್ಷಕ್ಕೆ‌ ಲಾಭವಾಗುವುದಕ್ಕಿಂತ ಹೆಚ್ಚಾಗಿ ಜೆಡಿಎಸ್​ಗೆ ಅನುಕೂಲ ಒದಗಿಸಿಕೊಡುವ ಲಕ್ಷಣ ಹೆಚ್ಚು.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಶಕ್ತಿ ಹೆಚ್ಚಿರುವುದರಿಂದ ಸಿಎಂ ಹುದ್ದೆಯ ರೇಸಿನಲ್ಲಿ ಅವರೇ ಮುಂದಿರುತ್ತಾರೆ. ಹೀಗಾಗಿ ಡಿಕೆಶಿ ಮಾತು ಕೇಳಿ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುವುದೆಂದರೆ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟಲು ನೆರವು ನೀಡುವುದೆಂದೇ ಅರ್ಥ. ಹಾಗೆ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟಲು ನೆರವು ನೀಡುವುದಕ್ಕಿಂತ ಜೆಡಿಎಸ್ ಪಕ್ಷದ ಜತೆ ನಿಂತು ತಮ್ಮ ಸಮುದಾಯದ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಹುದ್ದೆಗೇರುವಂತೆ ನೋಡಿಕೊಳ್ಳುವುದೇ ಉತ್ತಮ ಅಂತ ಬಹುಸಂಖ್ಯಾತ ಒಕ್ಕಲಿಗರು ಭಾವಿಸುತ್ತಾರೆ. ಸಮುದಾಯಗಳು ಹೀಗೆ ಯೋಚಿಸುವುದು ಹೊಸತೇನಲ್ಲ.

Cold War Between Siddaramaiah and DK Shivakumar
ಕಾರ್ಯಕ್ರಮವೊಂದರಲ್ಲಿ ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್​

2008 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ರಾಜ್ಯಕ್ಕೆ ಮೊದಲ ದಲಿತ ಸಿಎಂ ಬರುತ್ತಾರೆ ಅಂತ ಆ ಸಮುದಾಯ ನಿರ್ಧರಿಸಿತ್ತು. ಇದೇ ಕಾರಣಕ್ಕಾಗಿ ದಲಿತ ವರ್ಗದ ಎಡಗೈ-ಬಲಗೈ ಸಮುದಾಯಗಳು ಒಗ್ಗೂಡುವ ಪ್ರಕ್ರಿಯೆ ಆರಂಭವಾಯಿತು. ಆದರೆ, ಇದು ಜಾರಿಯಲ್ಲಿರುವಾಗಲೇ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪ್ರಚಾರದ ಕಣಕ್ಕಿಳಿದುಬಿಟ್ಟರು. ಅವರ ಪ್ರಚಾರದ ರಭಸ ಎಡಗೈ ಸಮುದಾಯದಲ್ಲಿ ಒಂದು ಶಂಕೆ ಮೂಡಿಸಿತು.

ದಲಿತ ಸಿಎಂ ಬರಲಿ: ದಲಿತ ಸಿಎಂ ಬರಲಿ ಎಂಬ ಕಾರಣಕ್ಕಾಗಿ ನಾವು ಕಾಂಗ್ರೆಸ್ಸಿಗೆ‌ ಮತ ಹಾಕುತ್ತೇವೆ. ಆದರೆ, ಮತ ಪಡೆಯುವವರೆಗೆ ಸುಮ್ಮನಿರುವ ಕಾಂಗ್ರೆಸ್‌ ಹೈಕಮಾಂಡ್ ನಂತರ ಬಣ್ಣ ಬದಲಿಸುತ್ತದೆ. ಎಷ್ಟೇ ಆದರೂ‌ ಹೈಕಮಾಂಡ್​ಗೆ ಎಸ್.ಎಂ.ಕೃಷ್ಣ ಎಂದರೆ ಇಷ್ಟ. ಹೀಗಾಗಿ ಕಾಂಗ್ರೆಸ್ಸಿಗೆ‌ ಮತ ಕೊಡುವುದು ಎಂದರೆ ನಷ್ಟ ಮಾಡಿಕೊಂಡಂತೆ ಎಂಬುದು ದಲಿತ ಮತಬ್ಯಾಂಕ್​ನ ಲೆಕ್ಕಾಚಾರವಾಗಿತ್ತು. ಅದರ ಪರಿಣಾಮ, 2008 ರ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮತದಾರರು ಒಂದುಗೂಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಕನಸು ಈಡೇರಲಿಲ್ಲ.

ಈಗ ಡಿಕೆಶಿ ಕೂಗಿನ ಎಫೆಕ್ಟ್ ಕೂಡಾ ಹೀಗೇ ಇರುತ್ತದೆ. ಅದು ಡಿಕೆಶಿಗೆ ವರವಾಗುವುದಕ್ಕಿಂತ ಹೆಚ್ಚಾಗಿ ಜೆಡಿಎಸ್ ಪಕ್ಷಕ್ಕೆ ಲಾಭವಾಗುತ್ತದೆ. ಇಂತಹ ಲಾಭ ಅದಕ್ಕೆ ಅಧಿಕಾರದ ಮಾರ್ಗವನ್ನು ಹತ್ತಿರಗೊಳಿಸಲಿದೆ. ಹಳೆ‌ ಮೈಸೂರು ಭಾಗದಲ್ಲಿ ಪಡೆಯುವ ಗಣನೀಯ ಸ್ಥಾನಗಳೊಂದಿಗೆ ಉತ್ತರ ಕರ್ನಾಟಕ, ಮಲೆನಾಡು ಭಾಗಗಳಲ್ಲಿ ಹೆಚ್ಚುವರಿ ಗಳಿಕೆ ಮಾಡಿಕೊಳ್ಳುವುದು ಜೆಡಿಎಸ್ ಲೆಕ್ಕಾಚಾರ. ಈ ಲೆಕ್ಕಾಚಾರಕ್ಕೆ ಡಿ.ಕೆ.ಶಿವಕುಮಾರ್ ಪುಷ್ಟಿ ನೀಡಿದ್ದಾರೆ. ಒಕ್ಕಲಿಗ ಪಾಳೇಪಟ್ಟು ವಿಸ್ಮೃತಿಗೆ ಒಳಗಾಗುವಂತೆ ಮಾಡಿದ್ದಾರೆ.

Cold War Between Siddaramaiah and DK Shivakumar
ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ

ಇದೇ ರೀತಿ ಎಸ್.ಎಂ. ಕೃಷ್ಣ ಅವರ ನಂತರ ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶ ಬಂದಿದೆ ಅಂತ ಡಿಕೆಶಿ ಹೇಳಿರುವುದೇನಿದೆ? ಅದು ವಾಸ್ತವದಿಂದ ದೂರವಿದೆ. ಯಾಕೆಂದರೆ 1999 ರಲ್ಲಿ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾದ ಕಾಲದಲ್ಲಿ ಬಲಿಷ್ಠ ಲಿಂಗಾಯತ ವರ್ಗ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ಜತೆ ನಿಂತಿತ್ತು. ಈ ಪರಿಸ್ಥಿತಿಯೇ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಕಡೆ ವಾಲಲು ಒಕ್ಕಲಿಗ‌ ಮತದಾರರಿಗೆ ಪ್ರೇರಣೆಯಾಗಿತ್ತು. ಒಕ್ಕಲಿಗ ನಾಯಕ ಎಸ್.ಎಂ. ಕೃಷ್ಣ ಅವರ ಬೆನ್ನಿಗೆ ಅಹಿಂದ ಸಮುದಾಯಗಳು ದೊಡ್ಡ ಮಟ್ಟದಲ್ಲಿ ನಿಂತಿದ್ದವು.

ವಾಸ್ತವವಾಗಿ ಆಗಿನ್ನೂ ದಲಿತ ಸಮುದಾಯದ ಎಡಗೈ-ಬಲಗೈ ಮತಗಳು ಬೇರೆ ಬೇರೆ ನೆಲೆಗಳಲ್ಲಿ ನಿಂತಿರಲಿಲ್ಲ. ಒಳಮೀಸಲಾತಿಯ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಎಡಗೈ ಮತದಾರರಿಗೆ ಕಾಂಗ್ರೆಸ್​​ಗೆ ಪರ್ಯಾಯವಾದ ಶಕ್ತಿ ಕಂಡಿರಲಿಲ್ಲ. ಬಿಜೆಪಿಯನ್ನು ಕಾಂಗ್ರೆಸ್​ಗೆ ಪರ್ಯಾಯವಾದ ಶಕ್ತಿ ಎಂದು ಅದು ಗುರುತಿಸುವ ಕಾಲಕ್ಕೆ 2004 ರ ವಿಧಾನಸಭಾ ಚುನಾವಣೆ ಎದುರಾಗಿತ್ತು.

ಬಹುಸಂಖ್ಯಾತ ಒಕ್ಕಲಿಗರಿಗೆ ಅಪ್ಯಾಯಮಾನ: ಒಕ್ಕಲಿಗ ನಾಯಕರಾದ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್ ಡಿ ದೇವೇಗೌಡರ ಬಲ‌ ಆ ಸಂದರ್ಭದಲ್ಲಿ ಕುಗ್ಗಿ ಹೋಗಿತ್ತು. ಅವತ್ತು ಇಬ್ಭಾಗವಾದ ಜನತಾದಳದ ಒಂದು ತಂಡ ಸಂಯುಕ್ತ ಜನತಾದಳದ ಹೆಸರಿನಲ್ಲಿ ಬಿಜೆಪಿಯ‌ ಜತೆ ಕೈಗೂಡಿಸಿದರೆ, ಮತ್ತೊಂದು ತಂಡ ಜಾತ್ಯತೀತ‌ ಜನತಾದಳದ ಹೆಸರಿನಲ್ಲಿ‌ ದೇವೇಗೌಡರ ಹಿಂದಿತ್ತು. ಹೀಗಾಗಿ ಅವತ್ತು ದೇವೇಗೌಡರ ನೇತೃತ್ವದ ಜೆಡಿಎಸ್ ಜತೆ ನಿಲ್ಲುವುದಕ್ಕಿಂತ‌ ಕೃಷ್ಣ ನೇತೃತ್ವದ ಕಾಂಗ್ರೆಸ್ ಜೊತೆ ನಿಲ್ಲುವುದು ಬಹುಸಂಖ್ಯಾತ ಒಕ್ಕಲಿಗರಿಗೆ ಅಪ್ಯಾಯಮಾನವಾಯಿತು. ಆದರೆ, ಈಗ ದೇವೇಗೌಡರ ನೇತೃತ್ವದ ಜೆಡಿಎಸ್ ಬಲಿಷ್ಠವಾಗಿಯೇ ಇದೆ.

ಇಂತಹ ಪರಿಸ್ಥಿತಿಯಲ್ಲಿ ಡಿಕೆಶಿ ಹಾಕಿದ ಕೂಗು ಒಕ್ಕಲಿಗರ ಮೇಲೆ ಪ್ರಭಾವ ಬೀರುವುದು ಕಷ್ಟ. ಬದಲಿಗೆ ಜೆಡಿಎಸ್ ಜೊತೆ ನಿಲ್ಲುವುದೇ ಉತ್ತಮ ಎಂಬ ಭಾವನೆಯನ್ನು ಅವರಲ್ಲಿ ಬಿತ್ತುವ ಲಕ್ಷಣಗಳು ಜಾಸ್ತಿ. ಅದೇ ರೀತಿ ಎಸ್.ಎಂ. ಕೃಷ್ಣ ಅವರ ಬೆನ್ನಿಗೆ ನಿಂತಿದ್ದ ಅಹಿಂದ ವರ್ಗಗಳು ಈಗ ಮುಂಚಿನ ಐಕ್ಯತೆಯಿಂದಿಲ್ಲ.

ಈಗ ಉಳಿದಿರುವ ಅಹಿಂದ ಮತ ಬ್ಯಾಂಕು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಹೀಗಾಗಿ ಎಸ್.ಎಂ. ಕೃಷ್ಣ ಸಿಎಂ ಆದ ಕಾಲಘಟ್ಟಕ್ಕೂ, ಈಗಿನ ಕಾಲ ಘಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಕ್ಕಲಿಗ ಕೋಟೆ ಮುಂದೆ ನಿಂತು ಡಿಕೆಶಿ ಹಾಕಿದ ಕೂಗು ಕುಮಾರಸ್ವಾಮಿ ಅವರಿಗೆ ಖುಷಿ ತಂದಿದ್ದಕ್ಕೆ ಇದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ, ಆರ್ಥಿಕತೆ ಸುಧಾರಿಸಲು ಎರಡು ವರ್ಷ ಬೇಕು: ಎಂ ಬಿ ಪಾಟೀಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.