ETV Bharat / state

ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ

author img

By ETV Bharat Karnataka Team

Published : Sep 30, 2023, 4:13 PM IST

ಬೆಂಗಳೂರಿನ ಹೆಚ್​ಬಿಆರ್​ ಲೇಔಟ್​ನಲ್ಲಿ ನೂತನವಾಗಿ ನಿರ್ಮಿಸಿದ ಬ್ಯಾರೀಸ್​ ಸೌಹಾರ್ದ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ ಶಿವಕುಮಾರ್​ ಭಾಗವಹಿಸಿದ್ದರು.

cm-siddaramaih-and-dcm-dk-shivakumar-inaugrated Bearys souharda bhavan
ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ

ಬೆಂಗಳೂರು : ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಖಚಿತ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಹೆಚ್​ಬಿಆರ್ ಲೇಔಟ್​ನಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾರೀಸ್ ಸೌಹಾರ್ದ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಆಡಳಿತದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಎಲ್ಲ ಜಾತಿ, ಧರ್ಮದವರಿಗೂ ಅವರ ಸಂವಿಧಾನಬದ್ದ ಹಕ್ಕುಗಳನ್ನು ಆಚರಿಸಲು ಅವಕಾಶವಿದೆ. ಇದಕ್ಕೆ ಯಾರೇ ತೊಂದರೆ ಕೊಟ್ಟರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಭಾರತದ ವೈವಿಧ್ಯತೆ ಮತ್ತು ಏಕತೆಯನ್ನು ಇತರ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಭಿನ್ನ ಸಂಸ್ಕೃತಿಗಳ ನಡುವೆ ಸಮನ್ವಯ, ಸೌಹಾರ್ದ ಇಲ್ಲದೇ ಹೋದರೆ ಆ ದೇಶದಲ್ಲಿ, ಆ ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ. ನೆಮ್ಮದಿ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.

ಮೊಯ್ದೀನ್ ಅವರು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪರಸ್ಪರ ಅಪನಂಬಿಕೆ ಮತ್ತು ದ್ವೇಷವನ್ನು ಬಿತ್ತುವವರು ಈ ದೇಶದ ಅವನತಿಗೆ ಕಾರಣ ಆಗುತ್ತಾರೆ. ನಮ್ಮ ಸಂವಿಧಾನ ಜಾತ್ಯತೀತತೆ, ಸೌಹಾರ್ದತೆ ಎತ್ತಿ ಹಿಡಿದಿದೆ. ಭಾರತದಲ್ಲಿ ಜಾತ್ಯತೀತ ಮೌಲ್ಯವನ್ನು ಮತ್ತು ಸಂವಿಧಾನದ ಮೌಲ್ಯವನ್ನು ತನ್ನ ಮೌಲ್ಯವಾಗಿ ಆಚರಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಎಂದು ವಿವರಿಸಿದರು.

ಈಗ ಎಲ್ಲಿ ಹೋಯ್ತು ಜಾತ್ಯತೀತ ಮೌಲ್ಯ : ಜಾತ್ಯತೀತ ಜನತಾದಳದ ಸಂಸ್ಥಾಪಕ ಸದಸ್ಯರಲ್ಲಿ ನಾನು ಒಬ್ಬ. ಬದುಕಿರುವವರೆಗೂ ಬಿಜೆಪಿ ಜತೆ ಸೇರುವುದಿಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಅದೇ ದೇವೇಗೌಡರು ಬಿಜೆಪಿ ಜತೆ ಕೈಜೋಡಿಸುತ್ತಿದ್ದಾರೆ. ಈಗ ಎಲ್ಲಿ ಹೋಯಿತು ಅವರ ಜಾತ್ಯತೀತ ಮೌಲ್ಯ ಎಂದು ಪ್ರಶ್ನಿಸಿದರು.

ಎಲ್ಲಾ ಧರ್ಮ, ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ..ಡಿಕೆಶಿ : ಎಲ್ಲ ಧರ್ಮ, ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ ನಮ್ಮದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಧರ್ಮದವರನ್ನು ಕಾಂಗ್ರೆಸ್ ಸರ್ಕಾರ ಕಾಪಾಡುತ್ತದೆ. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭೆ ಚುನಾವಣೆ ವೇಳೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು. ಎಲ್ಲ ಧರ್ಮದವರ ಜೊತೆ ಸ್ನೇಹಭಾವದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣ ಈ ಸಮುದಾಯಕ್ಕೆ ಇದೆ ಎಂದರು.

ಬ್ಯಾರಿ ಸಮುದಾಯದ ಭವನಕ್ಕೆ ಸಹಾಯ ಮಾಡಲು ಅಥವಾ ನಿಮಗೆ ಆಶ್ವಾಸನೆಗಳನ್ನು ನೀಡಲು ಇಲ್ಲಿಗೆ ಬಂದಿಲ್ಲ, ಬದಲಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ಕಾರಣ ನಿಮ್ಮ ಋಣ ತೀರಿಸಲು ಬಂದಿದ್ದೇನೆ. ದೇಶದಲ್ಲಿ ಬದಲಾವಣೆಯ ಗಾಳಿ ಎಬ್ಬಿಸಿ, ಸಮರ್ಥವಾದ ಉತ್ತರ ನೀಡಲು ಕಾರಣರಾಗಿದ್ದೀರಿ ಎಂದು ತಿಳಿಸಿದರು.

ಹುಟ್ಟಿದ ಊರಿನಲ್ಲೇ ಉದ್ಯೋಗ ಸೃಷ್ಟಿ ಮಾಡಿ : ಬಿಜೆಪಿ ಸರ್ಕಾರ ಇದ್ದ ವೇಳೆ ಹೂಡಿಕೆದಾರರ ಸಮಾವೇಶದ ಮೂಲಕ 10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿತು ಎಂದು ಹೇಳಿದ್ದರು. ಆದರೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಬ್ಬರೂ ಬಂದಿರಲಿಲ್ಲ. ಗಲ್ಫ್ ಸೇರಿದಂತೆ ಹೊರದೇಶಗಳಿಗೆ ಹೋಗದೆ, ಹುಟ್ಟಿದ ಊರಿನಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪ್ರತಿಭಾ ಪಲಾಯನ ರಾಜ್ಯದ ಅಭಿವೃದ್ಧಿಗೆ ಮಾರಕ ಎಂದು ತಿಳಿಸಿದರು.

ರಾಜ್ಯಸಭೆಗೆ ಕಳಿಸುತ್ತೇವೆ ಎಂದರೂ ಫಾರೂಕ್ ಬರಲಿಲ್ಲ: ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಅವರಿಗೆ ನಾನು ಮತ್ತು ಸಿದ್ದರಾಮಯ್ಯ ಅವರು ಅನೇಕ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿ, ರಾಜ್ಯಸಭೆ ಸದಸ್ಯನನ್ನಾಗಿ ಮಾಡುತ್ತೇವೆ ಎಂದು ಹೇಳಿದೆವು. ಆದರೆ ಕುಮಾರಸ್ವಾಮಿ ಅವರೇ ಮುಖ್ಯ ಎಂದು ಅವರ ಜೊತೆ ಹೋದರು. ಮುಂದಕ್ಕೆ ಈ ತಪ್ಪು ಮಾಡಲು ಹೋಗಬೇಡಿ, ಇಡೀ ಸಮುದಾಯ ಬಳಲುತ್ತಾ ಇದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ಡಿಸಿಎಂ ಡಿ.ಕೆ ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಬ್ಯಾರೀಸ್ ಸೌಹಾರ್ದ ಭವನ ಸಮಿತಿಯ ಅಧ್ಯಕ್ಷ ಸಯ್ಯದ್ ಮಹಮದ್ ಬ್ಯಾರಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅಕ್ಟೋಬರ್​ನಿಂದ ಹಣದ ಬದಲು 10 ಕೆಜಿ ಅಕ್ಕಿ ನೀಡಲು ಕ್ರಮ: ಸಚಿವ ಕೆ ಎಚ್ ಮುನಿಯಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.