ETV Bharat / state

"ಕಾನೂನು ವಿರೋಧಿ ಕೃತ್ಯ ಎಸಗುವವರನ್ನು ಸಹಿಸುವುದಿಲ್ಲ": ಸಿಎಂ ಸಿದ್ದರಾಮಯ್ಯ ವಾರ್ನಿಂಗ್​

author img

By ETV Bharat Karnataka Team

Published : Oct 2, 2023, 12:14 PM IST

Updated : Oct 2, 2023, 12:25 PM IST

ಶಿವಮೊಗ್ಗ ಘರ್ಷಣೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸರ್ಕಾರ ದೇವರು ಧರ್ಮದ ವಿಚಾರದಲ್ಲಿ ಕೃತ್ಯ ಎಸಗುವವರನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಶಿವಮೊಗ್ಗ ಲಾಠಿ ಚಾರ್ಜ್​ಗೆ ಪ್ರತಿಕ್ರಿಯೆ

ಬೆಂಗಳೂರು: ನಮ್ಮ ಸರ್ಕಾರ ದೇವರು ಧರ್ಮದ ವಿಚಾರದಲ್ಲಿ ಕೃತ್ಯ ಎಸಗುವವರನ್ನು ಸಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ, ರಾಗಿ ಗುಡ್ಡದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ಸಂಬಂಧ ನಡೆದ ಘಟನೆ ಭಾಗವಾಗಿ 40ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ.

ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಬೇರೆಯವರು ಅವರ ಕಾರ್ಯಕ್ಕೆ ದಕ್ಕೆ ತರುವಂತದ್ದು, ಕಲ್ಲು ತೂರಾಟ ನಡೆಸುವುದು ಕಾನೂನು ಬಾಹಿರ ಚಟುವಟಿಕೆ. ಇಂತಹ ಚಟುವಟಿಕೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ, ಹತ್ತಿಕ್ಕುತ್ತೇವೆ. ಪೊಲೀಸರು ಸೂಕ್ತ ಸಮಯದಲ್ಲಿ ತ್ವರಿತ ಕ್ರಮ ತೆಗೆದುಕೊಂಡಿದ್ದಾರೆ. ಶಾಂತಿ ನೆಲೆಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಲಾಠಿ ಚಾರ್ಜ್​ ಬಳಿಕ ಶಿವಮೊಗ್ಗ ನಗರದ ರಾಗಿಗುಡ್ಡ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಪೊಲೀಸರ ಕ್ರಮದಿಂದ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ತಿಳಿಸಿದರು.

ಮಹಾತ್ಮ ಗಾಂಧಿ, ಲಾಲ್ ಬಹದ್ದೂರು ಶಾಸ್ತ್ರಿಗೆ ಗೌರವ ನಮನ: ಸಿಎಂ ಸಿದ್ದರಾಮಯ್ಯ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದೂರ ಶಾಸ್ತ್ರಿ ಜನ್ಮ ದಿನದ ನಿಮಿತ್ತ ಮಹಾನ್ ನಾಯಕರಿಬ್ಬರಿಗೆ ಗೌರವ ನಮನ ಸಲ್ಲಿಸಿದರು. ಜಗತ್ತಿನ 148 ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆಗಳಿವೆ. ಸತ್ಯ, ಅಹಿಂಸಾ ತತ್ವ ಪ್ರತಿಪಾದಕರು. ಎಲ್ಲರೂ ಶಾಂತಿಯುತವಾಗಿ ಸಹಬಾಳ್ವೆ ನಡೆಸಬೇಕೆಂದು ಬಯಸಿದವರು. ಗಾಂಧೀಜಿ ವಿಶ್ವ ನಾಯಕರು ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಗಾಂಧೀಜಿ ಅವರು ಸದಾ ಸಮಾಜದ ಕಟ್ಟಕಡೆಯ ವ್ಯಕ್ತಿಯ ರೀತಿಯಲ್ಲಿ ಅತ್ಯಂತ ಸರಳ ಜೀವನ ನಡೆಸಿದರು. ಅಹಿಂಸಾ ಚಳವಳಿ ಮುಖೇನ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ದೇಶ ವಿಭಜನೆ ತಡೆಯಲು ಸಾಕಷ್ಟು ಪ್ರಯತ್ನಿಸಿದರು. ಅವರ ತತ್ವಾದರ್ಶಗಳು ನಮಗೆಲ್ಲ ಸ್ಫೂರ್ತಿದಾಯಕವಾಗಿವೆ ಎಂದು ಗುಣಗಾನ ಮಾಡಿದರು.

ಇದೇ ವೇಳೆ ಲಾಲ್ ಬಹದ್ದೂರ್​​​ ಶಾಸ್ತ್ರಿಯವರನ್ನು ಸಿಎಂ ಸ್ಮರಿಸಿದರು. ಶಾಸ್ತ್ರಿ ಅತ್ಯಂತ ಪ್ರಾಮಾಣಿಕ, ಸರಳ ಜೀವನ ನಡೆಸಿದವರು. ದೇಶದ ಪ್ರಧಾನಿಯಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ದೇಶದ ಭದ್ರತೆ, ಸಮಗ್ರತೆಗೆ ಒತ್ತು ನೀಡಿದವರು. ಅವರ ಪ್ರಾಮಾಣಿಕತೆ, ಸರಳತೆ, ಆದರ್ಶದ ಮೌಲ್ಯಗಳು ಮೇಲ್ಪಂಕ್ತಿಯಾಗಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಲ್ಲು ತೂರಾಟ: ಐಜಿಪಿ ತ್ಯಾಗರಾಜನ್​​ ಭೇಟಿ, ಪರಿಸ್ಥಿತಿ ಶಾಂತ

Last Updated :Oct 2, 2023, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.