ETV Bharat / state

ಬೆಂಗಳೂರಿನ 3 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು: 3ನೇ ಪಟ್ಟಿಯಲ್ಲಿ ಪ್ರಕಟವಾಗುತ್ತಾ ಹೆಸರು?

author img

By

Published : Apr 14, 2023, 6:34 PM IST

ಮೂರು ಕ್ಷೇತ್ರಗಳಿಗೆ ಬಿಜೆಪಿ ಅಳೆದು, ತೂಗಿ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂಬ ಮಾಹಿತಿ ಇದೆ.

BJP
ಬಿಜೆಪಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ 212 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, 12 ಕ್ಷೇತ್ರಗಳ ಹೆಸರು ಮಾತ್ರ ಬಾಕಿ ಉಳಿದಿದೆ. ಇದರಲ್ಲಿ ಬೆಂಗಳೂರಿನ ಮೂರು ಕ್ಷೇತ್ರಗಳೂ ಸೇರಿವೆ. ಈ ಕ್ಷೇತ್ರಗಳಿಗೆ ಅಳೆದು ತೂಗಿ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ. ಈ ಸಂಬಂಧ ಸಾಕಷ್ಟು ಚರ್ಚೆಗಳು ರಾಜ್ಯ ಮಟ್ಟದಲ್ಲಿಯೂ ನಡೆಯುತ್ತಿದ್ದು, ಅಸಮಾಧಾನ ಸ್ಟೋಟದಂತಹ ಚಟುವಟಿಕೆ ಹಿನ್ನೆಲೆಯಲ್ಲಿ ಬಾಕಿ ಕ್ಷೇತ್ರಗಳಿಗೆ ಎಚ್ಚರಿಕೆಯಿಂದ ಹೆಸರು ಪ್ರಕಟಿಸಬೇಕಾಗಿದೆ.

ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳಬೇಕಿದೆ. ವಸತಿ ಸಚಿವ ವಿ. ಸೋಮಣ್ಣ ಪ್ರತಿನಿಧಿಸಿರುವ ಗೋವಿಂದರಾಜನಗರ ಕ್ಷೇತ್ರ, ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರತಿನಿಧಿಸಿರುವ ಮಹದೇವಪುರ ಕ್ಷೇತ್ರ ಹಾಗು ಕಾಂಗ್ರೆಸ್ ತೆಕ್ಕೆಯಲ್ಲಿರುವ ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳಬೇಕಿದೆ. ಈ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸರಳವಾಗಿಲ್ಲ. ಆಯ್ಕೆ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಹೆಸರು ಪ್ರಕಟ ವಿಳಂಬವಾಗುತ್ತಿದೆ.

ಗೋವಿಂದರಾಜನಗರ ಕ್ಷೇತ್ರದ ಶಾಸಕರಾಗಿರುವ ಸೋಮಣ್ಣಗೆ ಚಾಮರಾಜನಗರ ಹಾಗು ವರುಣ ಎರಡು ಕ್ಷೇತ್ರದ ಟಿಕೆಟ್ ನೀಡಿದೆ. ಹಾಗಾಗಿ ಈ ಕ್ಷೇತ್ರಕ್ಕೆ ಹೊಸ ಹೆಸರು ಪರಿಗಣಿಸಬೇಕಿದೆ. ಈ ಸಂಬಂಧ ಮತ್ತೊಮ್ಮೆ ರಾಜ್ಯ ಘಟಕದಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಪ್ರಬಲ ಆಕಾಂಕ್ಷಿಯಾಗಿದ್ದು, ಕ್ಷೇತ್ರದ ಕಾರ್ಯಕರ್ತರು ಕೂಡ ಸೋಮಣ್ಣ ಸ್ಪರ್ಧೆ ಮಾಡಬೇಕು ಅಥವಾ ಅವರ ಪುತ್ರ ಸ್ಪರ್ಧೆ ಮಾಡಬೇಕು ಎಂದು ರಾಜ್ಯದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರ ಜೊತೆಗೆ ಮಾಜಿ ಕಾರ್ಪೊರೇಟರ್ ವಿಶ್ವನಾಥ ಶೆಟ್ಟಿ ಆಕಾಂಕ್ಷಿಯಾಗಿದ್ದು, ಕ್ಷೇತ್ರದ ಅಧ್ಯಕ್ಷರ ಹೆಸರೂ ಚಾಲ್ತಿಯಲ್ಲಿದೆ. ಆದರೆ ಪಕ್ಷಕ್ಕೆ ಸೋಮಣ್ಣ ಕುಟುಂಬಕ್ಕೆ ಟಿಕೆಟ್ ನೀಡಬೇಕೋ ಬೇಡವೋ ಎನ್ನುವ ವಿಚಾರದಲ್ಲಿ ಗೊಂದಲವಿದೆ. ಅದರಿಂದ ಈ ಬಗ್ಗೆ ಯಾವುದೇ ನಿರ್ಧಾರ ಇನ್ನು ಪ್ರಕಟಿಸಿಲ್ಲ. ಮೂರನೇ ಪಟ್ಟಿಯಲ್ಲಿ ರಾಜ್ಯ ಸಮಿತಿಯ ಎರಡನೇ ಅಭಿಪ್ರಾಯ ಸಂಗ್ರಹದ ನಂತರ ಅಚ್ಚರಿ ಆಯ್ಕೆ ಪ್ರಕಟಿಸುವ ಸಾಧ್ಯತೆ ಇದೆ.

ಮಹದೇವಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆಯೂ ವಿಳಂಬವಾಗುತ್ತಿದೆ. ಕಳೆದ ಮೂರು ಬಾರಿ ಕ್ಷೇತ್ರದಿಂದ ಸತತವಾಗಿ ಗೆದ್ದಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರ ವಿರುದ್ಧ ಸ್ಥಳೀಯರಲ್ಲಿ ಆಕ್ರೋಶವಿದೆ. ರಾಜಕಾಲುವೆ ತೆರವು ಕಾರ್ಯಾಚರಣೆ ವೇಳೆ ಮಹಿಳೆಯೊಬ್ಬರ ಕೈಯಿಂದ ದಾಖಲೆ ಕಿತ್ತುಕೊಂಡಿದ್ದು, ಲಿಂಬಾವಳಿ ಪುತ್ರಿ ಸಂಚಾರ ಪೊಲೀಸರಿಗೆ ಆವಾಜ್ ಹಾಕಿದ್ದು ಜನ ಮರೆತಿಲ್ಲ. ಇದರ ಜೊತೆ ಹಳೆಯ ಡಿಸಿ ಪ್ರಕರಣವೊಂದು ಪಕ್ಷದ ವರ್ಚಸ್ಸಿಗೂ ಧಕ್ಕೆ ತಂದಿತ್ತು. ಇದೆಲ್ಲದರ ಆಧಾರದಲ್ಲಿ ಈ ಬಾರಿ ಅಭ್ಯರ್ಥಿ ಬದಲಾವಣೆಗೆ ಚಿಂತನೆ ನಡೆಸಿದೆ ಹಾಗಾಗಿ ಹೊಸ ಮುಖ ಪರಿಚಯಕ್ಕಾಗಿ ಹೈಕಮಾಂಡ್ ಸರ್ಕಸ್ ಮಾಡುತ್ತಿದ್ದು ಅಭ್ಯರ್ಥಿ ಹೆಸರು ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಹೆಬ್ಬಾಳ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಶಾಸಕರಿದ್ದು ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ರೂಪಿಸುತ್ತಿದೆ. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗು ಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು, ಅಲ್ಲದೆ ಹಿಂದಿದ್ದ ವರ್ಚಸ್ಸು ಈಗ ಉಳಿದಿಲ್ಲ. ಇನ್ನು ಪರಿಷತ್ ಸದಸ್ಯ ವೈ.ಎ ನಾರಾಯಣಸ್ವಾಮಿ ಕಳೆದ ಬಾರಿ ಪರಾಜಿತಗೊಂಡಿದ್ದರು. ಹಾಗಾಗಿ ಈ ಇಬ್ಬರಲ್ಲಿ ಯಾರಿಗೆ ಕೊಟ್ಟರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಅಥವಾ ಅಚ್ಚರಿ ಆಯ್ಕೆ ಮೂಲಕ ಕಾಂಗ್ರೆಸ್ ಗೆ ತಕ್ಕ ಎದುರಾಳಿ ನಿಲ್ಲಿಸಬೇಕು ಎನ್ನುವ ಚಿಂತನೆ ನಡೆದಿದ್ದು, ಈ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಆದರೂ ಮೂರನೇ ಪಟ್ಟಿಯಲ್ಲಿ ಈ ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳುವುದು ಬಹುತೇಕ ಖಚಿತವಾಗಿದೆ. ಈಗಾಗಲೇ 212 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದ್ದು, 12 ಕ್ಷೇತ್ರಗಳು ಮಾತ್ರ ಬಾಕಿ ಇದ್ದು, ಆ ಎಲ್ಲಾ 12 ಕ್ಷೇತ್ರಕ್ಕೂ ಶೀಘ್ರದಲ್ಲೇ ಹೆಸರು ಪ್ರಕಟಿಸಲಾಗುತ್ತದೆ, ಶೀಘ್ರದಲ್ಲೇ ಪಟ್ಟಿ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ : ಸಮಾಧಾನಿತರ ಮನವೊಲಿಕೆ ಯತ್ನ: ನೆಹರೂ ಓಲೇಕಾರ್ ಜೊತೆ ಬಿಎಸ್​ವೈ ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.