ETV Bharat / state

ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ: ಕೈ ಆಹ್ವಾನ ತಳ್ಳಿಹಾಕಿದ ಸಚಿವ ಬೈರತಿ ಬಸವರಾಜ್

author img

By

Published : Mar 30, 2023, 9:46 PM IST

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಚಿವ ಭೈರತಿ ಬಸವರಾಜ್, ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾಣ ಸಮ್ಮುಖದಲ್ಲಿ ವಿವಿಧ ಪಕ್ಷದ ಮುಖಂಡರು ಬಿಜೆಪಿಗೆ ಸೇರ್ಪಡೆ. ಸಿಂಧನೂರಿನ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಕರಿಯಪ್ಪ, ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಕೋಲಾರ ಶ್ರೀನಿವಾಸಪುರದ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ರೆಡ್ಡಿ ಬಿಜೆಪಿಗೆ ಸೇರಿದರು.

Congress, BSP leaders join BJP
ಕಾಂಗ್ರೆಸ್​,ಬಿಎಸ್ಪಿ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು:ನಾನೀಗ ಬಿಜೆಪಿ ಕಾರ್ಯಕರ್ತ,ಪಕ್ಷದಲ್ಲೇ ಇದ್ದೇನೆ, ಪಕ್ಷದಲ್ಲೇ ಮುಂದುವರಿಯುತ್ತೇನೆ. ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಕೇವಲ ವದಂತಿ. ಈ ಬಾರಿಯೂ ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ಬೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ವಿವಿಧ ಪಕ್ಷಗಳ ಹಲವು ಮುಖಂಡರು ಬಿಜೆಪಿಗೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಆಹ್ವಾನ ಸುಳ್ಳು ,ಕಾಂಗ್ರೆಸ್‌ನವರಿಂದ ಆಹ್ವಾನ ಬಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನಗೆ ಯಾರೂ ಕೂಡ ಫೋನ್ ಆಗಲಿ, ನೇರವಾಗಿಯೇ ಆಗಲಿ ಅಹ್ವಾನ ಕೊಟ್ಟಿಲ್ಲ.

ನಾನು ಬಿಜೆಪಿ ಕಾರ್ಯಕರ್ತ ಆಗಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. ಈ ಬಾರಿಯೂ ನನಗೆ ಜನ ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ವಿವಿಧ ಪಕ್ಷದ ಮುಖಂಡರು ಬಿಜೆಪಿಗೆ ಸೇರ್ಪಡೆ: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ವಿವಿಧ ಪಕ್ಷಗಳ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು. ರಾಯಚೂರು ಜಿಲ್ಲೆಯ ಸಿಂಧನೂರಿನ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಕರಿಯಪ್ಪ, ಚಾಮರಾಜನಗರದ ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಕೋಲಾರ ಶ್ರೀನಿವಾಸಪುರ ನಿವಾಸಿ, ಕಾಂಗ್ರೆಸ್ ಮುಖಂಡ ಮತ್ತು ಸಮಾಜಸೇವಕ ಶ್ರೀನಿವಾಸ್ ರೆಡ್ಡಿ ಅವರು ತಮ್ಮ ಬೆಂಬಲಿಗರ ಜತೆ ಬಿಜೆಪಿ ಸೇರಿದರು.

ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನ, ಸಚಿವ ಭೈರತಿ ಬಸವರಾಜ್, ಡಾ ಸಿ ಎನ್ ಅಶ್ವತ್ಥನಾರಾಯಣ ಅವರು ಈ ಮುಖಂಡರು ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಕೋಲಾರದಲ್ಲಿ ನೆಲೆ ಗಟ್ಟಿಮಾಡಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಶ್ರೀನಿವಾಸಪುರ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಸಿದ್ದು, ಶ್ರೀನಿವಾಸ ರೆಡ್ಡಿಯನ್ನು ಕರೆತಂದು ಪೈಪೋಟಿ ನೀಡಲು ಮುಂದಾಗಿದೆ. ಬಹುತೇಕ ಶ್ರೀನಿವಾಸ ರೆಡ್ಡಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಪಕ್ಷದ ಮೂಲಗಳು ಹೇಳುತ್ತಿವೆ.

ಅಭ್ಯರ್ಥಿಗಳ ಆಯ್ಕೆಗೆ ಮತದಾನ ವ್ಯವಸ್ಥೆಯ ಪ್ರಯೋಗ:ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಬಿಜೆಪಿಯಲ್ಲಿ ವೋಟಿಂಗ್ ವ್ಯವಸ್ಥೆಯ ಪ್ರಾಯೋಗಿಕ ಪರಿಚಯ ಮಾಡಲಾಗಿದ್ದು, ಚುನಾವಣಾ ಟಿಕೆಟ್ ಸಮಿತಿ ರಚಿಸಿ ಮತಗಳ ಆಧಾರದಲ್ಲಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್​ಗೆ ಕಳುಹಿಸಿ ಕೊಡುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.

31ರ ಒಂದೇ ದಿನ ಪ್ರತಿಕ್ರಿಯೆ: ಶುಕ್ರವಾರ ಇಡೀ ದಿನ ಜಿಲ್ಲೆಗಳಲ್ಲಿ ಬಿಜೆಪಿಯಿಂದ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯಲಿದ್ದು, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ವೀಕ್ಷಕರ ತಂಡದಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಎಲ್ಲ ಜಿಲ್ಲೆಗಳಿಗೂ ಸಂಭಾವ್ಯರ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಭೇಟಿ ಕೊಡಲಿರುವ ತಂಡಗಳು, ಏಪ್ರಿಲ್ 1 ರಂದು ಈ ವರದಿಗಳನ್ನು ಅಮಿತ್ ಶಾ ಅವರಿಗೆ ಸಲ್ಲಿಕೆ ಮಾಡಲಿದೆ.

ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಖುದ್ದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು, ಏಪ್ರಿಲ್ 1 ರಿಂದ 4 ರವರೆಗೆ ಅಮಿತ್ ಶಾ ಮೆಗಾ ಮೀಟಿಂಗ್ ಮಾಡಲಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಮೆಗಾ ಸಭೆ ನಡೆಸಲಿದ್ದಾರೆ. ನಾಲ್ಕು ದಿನಗಳಲ್ಲಿ ಎಲ್ಲ ಜಿಲ್ಲೆಗಳ ಸಂಭಾವ್ಯರ ಪಟ್ಟಿ ಪರಿಶೀಲನೆ ನಡೆಸಲಿರುವ ಅಮಿತ್ ಶಾ, ಜಿಲ್ಲಾ ಘಟಕಗಳ ಪ್ರಮುಖರ ಜತೆ ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳನ್ನು ಫೈನಲ್ ಮಾಡಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:ಅಭಿವೃದ್ಧಿ ಕಾರ್ಯಸೂಚಿ ಆಧರಿಸಿ ಜನಾಶೀರ್ವಾದ ಬಯಸುತ್ತೇವೆ: ಕನ್ನಡದಲ್ಲಿ ಮೋದಿ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.