ETV Bharat / state

ಎಲ್ಲವೂ ಉಚಿತವೆಂದ್ರೆ ಖಜಾನೆ ಖಾಲಿ, ನಮ್ಮದು ಜನರನ್ನು ಸಬಲೀಕರಣಗೊಳಿಸುವ ಪ್ರಣಾಳಿಕೆ: ಸಚಿವ ಸುಧಾಕರ್

author img

By

Published : May 1, 2023, 9:10 PM IST

ಕಾಂಗ್ರೆಸ್‌ನ ಗ್ಯಾರಂಟಿ ಎನ್ನುವ ಬದಲು ಗೋರಂಟಿ ಎನ್ನುವುದು ಸೂಕ್ತ ಎಂದು ಪ್ರಣಾಳಿಕೆ ಸಮಿತಿ ಸಂಚಾಲಕ ಸಚಿವ ಡಾ. ಕೆ ಸುಧಾಕರ್​​ ಹೇಳಿದ್ದಾರೆ.

bjp-not-ready-to-empty-exchequer-as-everything-is-free-sudhakar
ಎಲ್ಲವೂ ಉಚಿತವೆಂದು ಖಜಾನೆ ಖಾಲಿ ಮಾಡಲು ಬಿಜೆಪಿ ತಯಾರಿಲ್ಲ: ಡಾ.ಕೆ.ಸುಧಾಕರ್

ಬೆಂಗಳೂರು: ಜನರಿಗೆ ಬದುಕು ಕಟ್ಟಿಕೊಡುವ ಪ್ರಜಾ ಪ್ರಣಾಳಿಕೆಯನ್ನು ಬಿಜೆಪಿ ನೀಡಿದೆ. ಉಚಿತ ಯೋಜನೆಗಳಿಗೆ ಬಿಜೆಪಿ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ, ಅದರಲ್ಲಿ ನಂಬಿಕೆಯೂ ಇಲ್ಲ. ಆದರೆ ಕೆಲ ವರ್ಗಗಳ ಸಬಲೀಕರಣಕ್ಕಾಗಿ ಮಾತ್ರ ನಿರ್ದಿಷ್ಟ ಯೋಜನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ವಿದ್ಯುತ್‌, ಉಚಿತ ನೀರಿನ ಬಿಲ್‌, ಉಚಿತ ಬಸ್‌ ಶುಲ್ಕದಂತಹ ಯೋಜನೆಗಳು ಸಂಪೂರ್ಣ ಉಚಿತ ಯೋಜನೆಗಳಾಗಿವೆ. ನೀವು ಕೆಲಸ ಮಾಡದಿದ್ದರೂ ಪರವಾಗಿಲ್ಲ, ನಾವು ಎಲ್ಲವನ್ನೂ ಉಚಿತ ನೀಡುತ್ತೇವೆ ಎಂದು ಹೇಳಿಕೊಂಡು ಖಜಾನೆ ಖಾಲಿ ಮಾಡಲು ನಾವು ತಯಾರಿಲ್ಲ ಎಂದರು.

ಆದರೆ ಗ್ಯಾಸ್‌ ಸಿಲಿಂಡರ್‌ ಉಚಿತವಾಗಿ ನೀಡಿದರೆ ಅದರಿಂದ ಮಹಿಳೆಯರ ಆರೋಗ್ಯ ರಕ್ಷಣೆಯಾಗುತ್ತದೆ. ಈ ರೀತಿ ಸಾಮಾಜಿಕ ಲಾಭವನ್ನು ನೋಡಿ ಯೋಜನೆಗಳನ್ನು ನೀಡಬೇಕು. ಪ್ರಧಾನಿ ಮೋದಿಯವರು ತಂದ ಉಜ್ವಲ ಯೋಜನೆಯಿಂದ ಅನೇಕ ಮಹಿಳೆಯರ ಆರೋಗ್ಯ ಸುಧಾರಿಸಿದೆ. ಮಹಿಳಾ ಸಬಲೀಕರಣಕ್ಕಾಗಿ ಮಾತ್ರ 3 ಸಿಲಿಂಡರ್‌ ನೀಡಲಾಗುವುದು ಎಂದು ಸಚಿವರು ಹೇಳಿದ್ರು.

ಆಹಾರದ ಕಿಟ್‌: ಕೃಷಿ, ಆಹಾರ ಸಂಸ್ಕರಣೆ, ಸೇವಾ ವಲಯ, ಉತ್ಪಾದನಾ ವಲಯ, ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ. 5 ಕೆಜಿ ಅಕ್ಕಿ ಜೊತೆಗೆ, 5 ಕೆಜಿ ಸಿರಿಧಾನ್ಯ ಸೇರಿಸಲಾಗಿದೆ. ನಂದಿನಿ ಹಾಲು ಕೂಡ ನೀಡಿ ಸಂಪೂರ್ಣ ಆಹಾರದ ಕಿಟ್‌ಗಳನ್ನು ಪ್ರತಿ ತಿಂಗಳು ಬಡವರಿಗೆ ನೀಡಲಾಗುವುದು. ಇದರಿಂದ ಆರೋಗ್ಯಯುಕ್ತ ಕರ್ನಾಟಕ ನಿರ್ಮಾಣವಾಗಲಿದೆ ಎಂದರು.

ರಾಜ್ಯದ ಆರ್ಥಿಕ ವ್ಯವಸ್ಥೆ ಅಧ್ಯಯನ ಮಾಡಿ ಭರವಸೆ ರೂಪಿಸಲಾಗಿದೆ. ಇತರೆ ಪಕ್ಷಗಳು ಸುಳ್ಳು ಭರವಸೆ ನೀಡಿ ಚುನಾವಣೆ ಗೆಲ್ಲಲು ನೋಡುತ್ತಿವೆ. ಅಂತಹ ಕೆಲಸವನ್ನು ಬಿಜೆಪಿ ಮಾಡಿಲ್ಲ ಎಂದರು. ಕಾಂಗ್ರೆಸ್‌ನ ಗ್ಯಾರಂಟಿ ಎನ್ನುವ ಬದಲು ಗೋರಂಟಿ ಎನ್ನುವುದು ಸೂಕ್ತ. ಇದು ಮೂರ್ನಾಲ್ಕು ದಿನಗಳಿದ್ದು, ನಂತರ ಹೊರಟುಹೋಗುತ್ತದೆ. ಕೃಷಿ ಸಮ್ಮಾನ್‌ ಯೋಜನೆಯಡಿ ರೈತರಿಗೆ ನೀಡುತ್ತಿರುವ 10 ಸಾವಿರ ರೂ. ವಿದ್ಯಾನಿಧಿ ಯೋಜನೆಯಡಿ ನೀಡುವ ವಿದ್ಯಾರ್ಥಿವೇತನ. ಆಯುಷ್ಮಾನ್‌ ಭಾರತ್‌ನಡಿ ನೀಡುವ 5 ಲಕ್ಷ ರೂ. ವಿಮೆ. ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ಗ್ಯಾರಂಟಿ ಎಂದರು.

ಆರೋಗ್ಯಕ್ಕೆ ಒತ್ತು: ಬಿಪಿಎಲ್‌ಗೆ 5 ಲಕ್ಷ ರೂ. ಇದ್ದ ಆಯುಷ್ಮಾನ್‌ ಭಾರತ್‌ ವಿಮೆಯನ್ನು 10 ಲಕ್ಷ ರೂ. ಏರಿಸಲಾಗುವುದು. ಎಪಿಎಲ್‌ಗೆ ವರ್ಷಕ್ಕೆ 5 ಲಕ್ಷ ರೂ. ವಿಮೆ ನೀಡಲಾಗುವುದು. ಈ ಮೂಲಕ ಎಲ್ಲರಿಗೂ ಆರೋಗ್ಯ ಎಂಬ ಸಂದೇಶ ನೀಡಲಾಗಿದೆ. ನಮ್ಮ ಕ್ಲಿನಿಕ್‌ಗಳನ್ನು ನಗರಗಳ ಎಲ್ಲಾ ಕೊಳಗೇರಿಗಳಲ್ಲಿ ಮಾಡಲಾಗುವುದು. ಈ ರೀತಿ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ಬೇಜವಾಬ್ದಾರಿಯುತ ರಾಜಕಾರಣಿ: ಪ್ರಿಯಾಂಕ್‌ ಖರ್ಗೆಯವರು ಬೇಜವಾಬ್ದಾರಿಯುತ ರಾಜಕಾರಣಿಯಾಗಿದ್ದು, ತಮ್ಮ ತಂದೆಯ ರಾಜಕೀಯ ಹಿನ್ನೆಲೆಯ ಬಲದಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರ ಬಗ್ಗೆ ಕೀಳಾಗಿ ಮಾತಾಡುವುದನ್ನು ಖಂಡಿಸುತ್ತೇನೆ. ಅವರ ತಂದೆ ಕೂಡ ಪ್ರಧಾನಿಯ ಬಗ್ಗೆ ಕೀಳಾಗಿ ಮಾತಾಡಿದ್ದಾರೆ. ಕಾಂಗ್ರೆಸ್‌ನವರು ಸೋಲುವ ಸಾಧ್ಯತೆ ಗೋಚರಿಸಿದಾಗೆಲ್ಲ ಪ್ರಧಾನಿಯನ್ನು ನಿಂದಿಸಿದ್ದಾರೆ. ಅವರು ಹೀಗೆ ನಿಂದಿಸಿದಾಗಲೆಲ್ಲಾ ಭಾರತೀಯರು ಪ್ರಧಾನಿ ಮೋದಿಯನ್ನು ಪ್ರೀತಿಸಿ ಬೆಂಬಲಿಸಿದ್ದಾರೆ ಹಾಗೂ ಕಾಂಗ್ರೆಸ್‌ನವರನ್ನು ಸೋಲಿಸಿದ್ದಾರೆ ಎಂದು ಸಚಿವ ಸುಧಾಕರ್​ ಹೇಳಿದ್ರು.

ಎಸ್.ಎಂ ಕೃಷ್ಣ ಭೇಟಿ ಮಾಡಿದ ಸುಧಾಕರ್: ಹಿರಿಯ ನಾಯಕ ಎಸ್​​ಎಂ ಕೃಷ್ಣ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಚಿವ ಡಾ. ಕೆ.ಸುಧಾಕರ್ ಅವರು ಕೃಷ್ಣ ಅವರ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದರು. ಪ್ರಣಾಳಿಕೆ ಪ್ರತಿಯನ್ನು ನೀಡಿದ್ರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವು.. ಕಾಂಗ್ರೆಸ್​ಗೆ ಸೂಪರ್​ ಬೂಸ್ಟರ್​ ಡೋಸ್​​: ಜೈರಾಮ್​ ರಮೇಶ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.