ETV Bharat / state

ಆಡಬಾರದ್ದು ಆಡಿದ್ದಕ್ಕೆ ಆಗಬಾರದ್ದು ಆಗಿದೆ: ರಾಹುಲ್ ಗಾಂಧಿ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ

author img

By

Published : Mar 24, 2023, 6:11 PM IST

Home Minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ

ರಾಹುಲ್​ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದರ ಕುರಿತು ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಆಡಬಾರದ್ದು ಆಡಿದ್ದಕ್ಕೆ ಆಗಬಾರದು ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೋರ್ಟ್ ಆದೇಶದ ಪ್ರಕಾರ ಸ್ಪೀಕರ್ ಅನರ್ಹಗೊಳಿಸಿದ್ದಾರೆ‌. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ರಾಹುಲ್ ಗಾಂಧಿಗೂ ಒಂದೇ ಜ್ಞಾನೇಂದ್ರಗೂ ಒಂದೇ. ಕಾನೂನು ಕಾಯ್ದೆ ಪ್ರಕಾರ ಅನರ್ಹಗೊಳ್ಳಿಸಿದ್ದಾರೆ ಎಂದು ಹೇಳಿದ್ದಾರೆ.

ನೆಲದ ಕಾನೂನಿನ ಪ್ರಕಾರ ಎಲ್ಲರೂ ಸಮಾನರು ಮತ್ತು ಕಾನೂನಿಗಿಂತ ಯಾರೂ ಮೇಲಿಲ್ಲ ಎಂಬ ಸಂದೇಶವೂ ಇದರಿಂದ ಸ್ಪಷ್ಟವಾಗಿದೆ. ಸಿದ್ದರಾಮಯ್ಯಗೆ ಯಾವುದೇ ಪಾಠ ಹೇಳುವ ನೈತಿಕ ಹಕ್ಕಿಲ್ಲ. ಅವರು ತುರ್ತು ಪರಿಸ್ಥಿತಿ ಹೇರುವ ಮೂಲಕ ಮಾಡಬಾರದ ಅಚಾತುರ್ಯವನ್ನು ಪ್ರಜಾಪ್ರಭುತ್ವದ ಮೇಲೆ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಆರ್​ ಅಶೋಕ್​, ರಾಹುಲ್ ಗಾಂಧಿಯನ್ನು ಸ್ಪೀಕರ್ ಅನರ್ಹಗೊಳಿಸಿದ್ದನ್ನು ನಾನು ಸ್ವಾಗತ ಮಾಡುತ್ತೇನೆ. ಈ ರೀತಿ ರಾಜಕಾರಣಿಯೊಬ್ಬರು ಮಾತನಾಡೋದು ಸಮಾಜಕ್ಕೆ ಒಳ್ಳೆಯದಲ್ಲ. ನಾಲಗೆ ಹರಿಬಿಟ್ಟು ಮಾತನಾಡೋರಿಗೆ ಕೋರ್ಟ್ ಎಚ್ಚರಿಕೆ ಗಂಟೆ ಕೊಟ್ಟಿದೆ. ಹಿಂದೆ ಇದಕ್ಕೆ ಸಂಬಂಧಿಸಿದ ಬಿಲ್ ತಂದಾಗ ರಾಹುಲ್ ಗಾಂಧಿ ವಿರೋಧಿಸಿದ್ದರು. ಬಹುಶಃ ಅವರಿಗೆ ಈ ರೀತಿ ಆಗಲಿದೆ ಎನ್ನುವ ದುರಾದೃಷ್ಟಿ ಇತ್ತೇನೋ ಎಂದು ಲೇವಡಿ ಮಾಡಿದರು.

ಇನ್ಮೇಲಾದ್ರು ಲಂಡನ್​ನಲ್ಲಿ ಅಲ್ಲಿ ಇಲ್ಲಿ ಸುತ್ತಾಡೋದು ಬಿಟ್ಟು, ಎಲ್ಲಾ ಕಡೆ ಪ್ರಚಾರ ಮಾಡ್ಲಿ. ನಾವು ಅವರಿಗೆ ದೊಡ್ಡ ಹಾರ ಹಾಕಿ ಸನ್ಮಾನಿಸುತ್ತೇವೆ. ಎರಡು ವರ್ಷ ಶಿಕ್ಷೆ ಆದರೆ ಅನರ್ಹಗೊಳಿಸುವುದನ್ನು ತಡೆಯಲು ಸಂಸತ್ತಿನಲ್ಲಿ ಒಂದು ಮಸೂದೆ ಬಂದಿತ್ತು. ಆದರೆ ಅದಕ್ಕೆ ಸ್ವತಃ ರಾಹುಲ್ ಗಾಂಧಿ ವಿರೋಧ ಮಾಡಿದ್ದರು. ಬಹುಶಃ ಅವರಿಗೆ ದುರಾದೃಷ್ಟಿ ಇರಬೇಕು. ಮುಂದೆ ನನಗೆ ಹೀಗೆ ಆಗುತ್ತೆ, ಅದಕ್ಕೆ ಕಾಯ್ದೆ ಬೇಡ ಎಂದು ಹೇಳಿರಬಹುದು ಎಂದು ವ್ಯಂಗ್ಯವಾಗಿ ಹೇಳಿದರು.

ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಎಲ್ಲಾ ಕಡೆ ರಾಹುಲ್ ‌ಗಾಂಧಿ ಬರಲಿ ಎಂದು ಹೇಳುತ್ತಿದ್ದೇವೆ. ಅವರು ಬಂದೆ ಕಡೆ ದೇಶ, ಸಮಾಜದ ವಿರುದ್ಧ ಮಾತನಾಡುತ್ತಾರೆ, ಅವಘಡ ಮಾಡುತ್ತಾರೆ. ಇದರಿಂದ ನಮಗೆ ಬಹಳ ಉಪಯೋಗ. ರಾಹುಲ್ ಕಂಡರೆ ನಮಗೆ ಭಯವಿಲ್ಲ. ಅವರು ಆಗಾಗ ಲಂಡನ್ ಅಥವಾ ಬೇರೆ ದೇಶಕ್ಕೆ ಹೋಗುವ ಬದಲಾಗಿ ನಮ್ಮ ದೇಶದಲ್ಲೇ ಪ್ರಚಾರ ಮಾಡಿದರೆ ಹಾರ ಹಾಕಿ ಸನ್ಮಾನ ಮಾಡುತ್ತೇವೆ ಎಂದರು.

ನಾಲಿಗೆ ಹರಿ ಬಿಟ್ಟು ಮಾತನಾಡಿದರೆ ನ್ಯಾಯಾಲಯ ಇದೆ - ಬೈರತಿ ಬಸವರಾಜ್: ನಾಲಿಗೆ ಹರಿ ಬಿಟ್ಟು ಮಾತನಾಡಿದರೆ ನ್ಯಾಯಾಲಯದ ಇದೆ, ಯೋಚನೆ ಮಾಡಿ ಮಾತನಾಡಬೇಕು ಎಂದು ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾರಾದರೂ ಆಗಲಿ ಬಹಳಷ್ಟು ಯೋಚನೆ ಮಾಡಿ ಮಾತನಾಡಬೇಕು. ನ್ಯಾಯಾಲಯ ಎಲ್ಲವನ್ನೂ ಗಮನಿಸುತ್ತಿದೆ. ನ್ಯಾಯಾಲಯ ಗಮನಿಸಿ ತೀರ್ಪು ನೀಡಿದೆ ಎಂದರು.

ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ಪ್ರಧಾನಿ ಮೋದಿ ದೇಶವನ್ನು ರಕ್ಷಣೆ ಮಾಡ್ತಿದ್ದಾರೆ. ಹೀಗಾಗಿ ಇವತ್ತು ಬೇಡ ಅಂದ್ರು ಮೋದಿಗೆ ಮತ ಹಾಕ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗಳಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಮೋದಿ ಸರ್ಕಾರ ಹೇಡಿತನ ಪ್ರದರ್ಶಿಸಿದೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.