ETV Bharat / state

Council Session: ಜೈನ ಮುನಿಗಳ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಪಟ್ಟು

author img

By

Published : Jul 10, 2023, 4:07 PM IST

Updated : Jul 10, 2023, 5:51 PM IST

Council Session
ಜೈನ ಮುನಿಗಳ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಬಿಜೆಪಿ ಪಟ್ಟು

ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ಯಾವ ಕಾರಣಕ್ಕೆ ಕೊಡಬೇಕು? ಗೃಹ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರಾ? ಯಾರಾದರೂ ಹಸ್ತಕ್ಷೇಪ ಮಾಡುತ್ತಿದ್ದಾರಾ? ನಿಮ್ಮ ಕಾಲದಲ್ಲಿದ್ದ ಅಧಿಕಾರಿಗಳೇ ಈಗಲೂ ಇರುವುದು, ಅವರೇ ತನಿಖೆ ನಡೆಸುತ್ತಿದ್ದಾರೆ, ಇದರಲ್ಲಿ ರಾಜಕೀಯ ಬೇಡ ಎಂದು ಸಚಿವ ಹೆಚ್ ಕೆ ಪಾಟೀಲ್ ವಿಧಾನಪರಿಷತ್​ನಲ್ಲಿ ಹೇಳಿದರು.

ಬೆಂಗಳೂರು: ಜೈನ ಮುನಿಗಳ ಹತ್ಯೆ ಕೃತ್ಯವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಉತ್ತಮ ಅಧಿಕಾರಿಗಳ ತಂಡವನ್ನು ತನಿಖೆಗೆ ಒದಗಿಸಲಿದ್ದೇವೆ. ಘಟನೆಯಲ್ಲಿ ಭಾಗಿಯಾದ ಯಾರೂ ನಮ್ಮ ಸರ್ಕಾರದಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟು ಸಹಕಾರ ನೀಡಿ, ನಿಮ್ಮ ಅವಧಿಯ ಪೊಲೀಸರೇ ಈಗಲೂ ಇದ್ದಾರೆ. ನಂಬಿಕೆ ಇಡಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

ಜೈನ ಮುನಿಗಳ ಹತ್ಯೆ ವಿಷಯದ ಚರ್ಚೆಗೆ ಅವಕಾಶ ಕಲ್ಪಿಸಿ ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಲುವಳಿ ಸೂಚನೆ ಮಂಡಿಸಿ ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕೋರಿದರು. ಇದನ್ನು ನಿಯಮ 68ಕ್ಕೆ ಮಾರ್ಪಾಡು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಚರ್ಚೆಗೆ ಅವಕಾಶ ನೀಡಿದರು. ಜೈನ ಮುನಿಗಳ ಹತ್ಯೆ ಘಟನೆ ಕುರಿತು ಸಮಗ್ರ ವಿವರ ನೀಡಿದ ಕೋಟ ಶ್ರೀನಿವಾಸ ಪೂಜಾರಿ ಪ್ರಕರಣವನ್ನು ತಕ್ಷಣ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ಹುಕ್ಕೇರಿ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಎಲ್ಲ ರೀತಿಯ ಕ್ರಮ ವಹಿಸಿದೆ. ಹಾಗಾಗಿ ಸಿಬಿಐಗೆ ಕೊಡುವ ಅಗತ್ಯವಿಲ್ಲ, ನಮ್ಮ ಪೊಲೀಸರು ಸಮರ್ಥರಿದ್ದಾರೆ, ಈಗಾಗಲೇ ಆರೋಪಿಗಳ ಬಂಧಿಸಿದ್ದಾರೆ ಎಂದು ಪ್ರಕರಣವನ್ನು ಸಿಬಿಐಗೆ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಸಿಬಿಐ ತನಿಖೆಗೆ ಆಗ್ರಹ: ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸರಳ ಶ್ರೀಗಳು, ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ಸೇವನೆ ಮಾಡುತ್ತಾರೆ. ಯಾವುದೇ ಆರ್ಥಿಕ ಚಟುವಟಿಕೆ ನಡೆಸಲ್ಲ, ಅಹಿಂಸೆಯನ್ನೇ ಮೈಗೂಡಿಸಿಕೊಂಡವರು. ಅವರ ಬರ್ಬರ ಹತ್ಯೆಯಿಂದ ಸಮಾಜ ತಲೆ ತಗ್ಗಿಸುವಂತಾಗಿದೆ. ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾರೆ. ಸಾಲ ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ತನಿಖೆ ಮುಗಿಯುವ ಮೊದಲೇ ಏಕೆ ಹೇಳಬೇಕು? ತನಿಖೆ ಆಗಬೇಕಲ್ಲವೇ? ಪೂರ್ತಿ ಸತ್ಯ ಹೊರಬರಬೇಕಿದೆ. ಸತ್ಯ ಹೊರಬರಲು ಸಿಬಿಐ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದರು.

ಸದಸ್ಯ ವೈ ಎ ನಾರಾಯಣಸ್ವಾಮಿ ಮಾತನಾಡಿ, ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಗಳು ಯಾಕೆ ಹೋಗಲಿಲ್ಲ, ಇದನ್ನು ನೋಡಿದರೆ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸ್ಪಷ್ಟವಾಗಲಿದೆ. ಬುಧವಾರ ಕಾಣೆಯಾಗಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ. ಗೃಹ ಸಚಿವರು ಹೋಗಬೇಕಿತ್ತಲ್ಲವೇ? ಇವತ್ತು ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದರು, ಇದು ಸಣ್ಣ ಪ್ರಕರಣ ಅಲ್ಲ, 6 ಲಕ್ಷಕ್ಕೆ ಕೊಲೆಯಾಗಿದ್ದರೆ ದೇಹವನ್ನು 9 ತುಂಡು ಮಾಡುತ್ತಿರಲಿಲ್ಲ. ಇಡೀ ದೇಶ ಕರ್ನಾಟಕದತ್ತ ನೋಡುತ್ತಿದೆ, ರಾಜ್ಯ ತಲೆ ತಗ್ಗಿಸುವಂತಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್​ ಸದಸ್ಯರ ತಿರುಗೇಟು: ಆಗ ಕಾಂಗ್ರೆಸ್​ ಸದಸ್ಯ ಜಬ್ಬಾರ್ ಮಾತನಾಡಿ, ಮೊದಲು ಮಣಿಪುರಕ್ಕೆ ಪ್ರಧಾನಿ ಮೋದಿ ಅವರನ್ನು ಹೋಗಲು ಹೇಳಿ ಎಂದು ತಿವಿದರು. ಇದಕ್ಕೆ ತಿರುಗೇಟು ನೀಡಿದ ರವಿಕುಮಾರ್, ನಮ್ಮ ಗೃಹ ಸಚಿವರು ಹೋಗಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಉಪ ಸಭಾಪತಿ ಪ್ರಾಣೇಶ್, ಉತ್ತಮ ಚರ್ಚೆ ನಡೆಯುತ್ತಿದೆ. ವಿಷಯಾಂತರ ಬೇಡ ಎಂದು ತಿಳಿಸಿ ವಿಷಯಾಂತರಕ್ಕೆ ತೆರೆ ಎಳೆದರು. ಕಾಗ್ರೆಸ್ ಸದಸ್ಯ ಅಬ್ದುಲ್ ನಜೀರ್ ಮಾತನಾಡಿ, ಇದರಲ್ಲಿ ರಾಜಕೀಯ ಮಾಡುವುದು ಬೇಡ. ಸಲಹೆ, ಮಾಹಿತಿಗಳಿದ್ದರೆ ಕೊಡಿ. ಎಲ್ಲ ಸೇರಿ ನಿರ್ಧರಿಸಿ ಕ್ರಮ ವಹಿಸೋಣ ಎಂದು ಸಿಬಿಐ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ವೈಯಕ್ತಿಕ ದ್ವೇಷಕ್ಕಾಗಿ ಸಮಾಜದಲ್ಲಿ ಕೊಲೆ, ಸುಲಿಗೆ ನೋಡಿದ್ದೇವೆ. ಆದರೆ ಜೈನ ಮುನಿಗಳ ಹತ್ಯೆ ಬಹಳ ಘೋರವಾಗಿದೆ. ಯಾವ ಕಾರಣಕ್ಕಾಗಿ ಆಗಿದೆ ಎನ್ನುವುದು ತನಿಖೆಯಾಗಬೇಕು. ಹಣಕಾಸು ವಿಚಾರ ಇದೆ ಎಂದರೂ ಪೂರ್ಣ ತನಿಖೆ ಆಗಬೇಕು. ಇದು ವ್ಯಕ್ತಿ, ಆಸ್ತಿಗಾಗಿ ಆದ ಕೊಲೆ ಅಲ್ಲ. ಮತ್ತೆ ಕೆಲವರು ಇದರಲ್ಲಿ ಭಾಗಿಯಾದ ಅನುಮಾನ ಇದ್ದಲ್ಲಿ, ಮಾಹಿತಿ ಇದ್ದಲ್ಲಿ ಕೊಡಲಿ. ಅವರನ್ನೂ ವಶಕ್ಕೆ ಪಡೆದು ತನಿಖೆ ನಡೆಸಲಿದೆ, ಉನ್ನತ ಮಟ್ಟದ ತನಿಖೆಯಾಗಿ ಸತ್ಯ ಹೊರಬರಲಿ ಎಂದು ಆಗ್ರಹಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ, ಜೈನ ಮುನಿಗಳ ಹತ್ಯೆ ಕೃತ್ಯದ ಬಗ್ಗೆ ಒಂದು ಗಂಟೆ ಚರ್ಚೆ ನಡೆದಿದೆ, ಈ ಪ್ರಕರಣವನ್ನು ಇತರ ಪ್ರಕರಣದಂತೆ ನೋಡಲಾಗಲ್ಲ, ರಾಜಕಾರಣ ಬದಿಗಿಟ್ಟು ಏನು ನಡೆದಿದೆ ಎಂದು ನೋಡಿ ದೃಢವಾದ ಹೆಜ್ಜೆ ಇಡಬೇಕು. ವಿಶೇಷ ಪ್ರಕರಣ ಎನ್ನುವ ಕಾರಣಕ್ಕೆ ಡಿವೈಎಸ್ಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದೇವೆ. ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ ನಂತರ ನಾಳೆ ವಿವರವಾದ ಉತ್ತರವನ್ನು ಗೃಹ ಸಚಿವರು ನೀಡಲಿದ್ದಾರೆ. ಸರ್ಕಾರ ಸ್ಪಷ್ಟವಾದ ನ್ಯಾಯ ಒದಗಿಸಲಿದೆ ಎಂದು ಭರವಸೆ ನೀಡಿದರು.

ವಿಧಾನಸಭೆಯಲ್ಲೂ ಬಿಜೆಪಿ ಆಗ್ರಹ: ಜೈನಮುನಿಗಳ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿಯೂ ಒತ್ತಾಯಿಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಜೈನ ಮುನಿ ಹತ್ಯೆ ಅತ್ಯಂತ ಖೇದಕರ ಘಟನೆಯಾಗಿದೆ. ಮುನಿಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಎರಡನೇ ಆರೋಪಿಯ ಹೆಸರನ್ನು ಬಹಿರಂಗಪಡಿಸಿಲ್ಲ. ತನಿಖೆ ಪೂರ್ಣ ಪ್ರಮಾಣದಲ್ಲಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಲು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಲಕ್ಷ್ಮಣ ಸವದಿ, ಮುನಿ ಅವರನ್ನು ಹತ್ಯೆ ಮಾಡಿದವರಿಗೆ ಮರಣದಂಡನೆಯಂತಹ ಶಿಕ್ಷೆಯಾಗಬೇಕು. ಮುನಿ ಅವರ ಹತ್ಯೆ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹದ್ದು, ಇದರ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಜೈನ ಮುನಿಗಳ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದಾಗಿದೆ. ಕೊಲೆ ಮಾಡಿದವರಿಗೆ ಮರಣ ದಂಡನೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜೈನ ಮುನಿಗಳು ಇರುವೆಗೂ ಸಹ ಕಷ್ಟ ಕೊಡಲ್ಲ. 2010ರಲ್ಲಿ ಶಾಂತಿ ನಿವಾಸ ಕಟ್ಟಿದ್ದರು. ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದರು. ಪೊಲೀಸರು ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಿಷ್ಪಕ್ಷಪಾತ ತನಿಖೆ ಆಗಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Last Updated :Jul 10, 2023, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.