ETV Bharat / state

ಜೆಡಿಎಸ್​ ಮಾತ್ರವಲ್ಲ, ಬಿಜೆಪಿಯ ಹಾಲಿ ಶಾಸಕರೂ ಕಾಂಗ್ರೆಸ್‌ ಸೇರಲಿದ್ದಾರೆ: ಡಿ.ಕೆ.ಶಿವಕುಮಾರ್​

author img

By

Published : Jan 20, 2023, 1:09 PM IST

Updated : Jan 20, 2023, 1:18 PM IST

ಇತ್ತೀಚೆಗೆ ಬಿಜೆಪಿಯ ಕೆಲವು ಮುಖಂಡರು ತಮ್ಮ ಪಕ್ಷ ತೊರೆದು ಶಾಸಕ ಬಂಡೆಪ್ಪ ಕಾಶೆಂಪೂರ ಅವರ ಸಮ್ಮುಖದಲ್ಲಿ ಜೆಡಿಎಸ್​ ಪಕ್ಷ ಸೇರಿಕೊಂಡಿದ್ದರು. ಇದೀಗ ಬಿಜೆಪಿಯ ಶಾಸಕರು ಕಾಂಗ್ರೆಸ್​ ಸೇರುವ ಬಗ್ಗೆ ಡಿಕೆಶಿ ಮಾತನಾಡಿದ್ದಾರೆ.

KPCC President D K Shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವಕ್ಕೂ ಸಿಕ್ತು ಚಾಲನೆ!

ಬೆಂಗಳೂರು: ಬಿಜೆಪಿಯ ಹಾಲಿ ಶಾಸಕರು ಕಾಂಗ್ರೆಸ್​ಗೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಯ ಹಾಲಿ ಶಾಸಕರು ಬಿಜೆಪಿಗೆ ಬರಲಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಹೌದು ಬರುತ್ತಾರೆ. ಪ್ರಸ್ತುತ ಬಿಜೆಪಿಯಲ್ಲಿರುವ ಶಾಸಕರು ನಮ್ಮ ಪಕ್ಷ ಕಾಂಗ್ರೆಸ್​ಗೆ ಬರಲಿದ್ದಾರೆ ಎಂದರು. ನಮ್ಮ ಪಕ್ಷಕ್ಕೆ ಬರುತ್ತೇವೆ ಎಂದು ಹೇಳಿರುವ ಶಾಸಕರು ಯಾರು, ಅವರ ಹೆಸರು ಇತ್ಯಾದಿ ಯಾವುದನ್ನೂ ಈಗ ಬಹಿರಂಗ ಮಾಡಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ವಿಧಾನ ಪರಿಷತ್​ ಸದಸ್ಯ, ಹಳೆ ಮೈಸೂರಿನ ಹೆಚ್.ವಿಶ್ವನಾಥ್ ಅವರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೆ ದಿನಾಂಕ ಕೂಡ ನಿಗದಿ ಆಗಿದೆ. ಬಿಜೆಪಿಯವರು ಯಾರೆಲ್ಲ ನಮ್ಮ ಪಕ್ಷ ಸೇರುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು. ಆ ಮೂಲಕ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದ್ದಾರೆ ಎಂಬ ಸುದ್ದಿಗೆ ಮತ್ತೆ ಪುಷ್ಠಿ ಸಿಕ್ಕಿದೆ. ಬಿಜೆಪಿ ನಾಯಕರ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದ ಹೆಚ್. ವಿಶ್ವನಾಥ್​ ಅವರು ಈಗಾಗಲೇ ನನ್ನ ರಕ್ತನೇ ಕಾಂಗ್ರೆಸ್​, ನಾನು ಕಾಂಗ್ರೆಸ್​ ಪಕ್ಷ ಸೇರುತ್ತಿರುವುದು ನಿಜ ಎಂದು ಹೇಳಿಕೆ ನೀಡಿದ್ದರು.

ನಾನು, ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿ ಆಗಿದ್ದೆವು. ಇವತ್ತು ನೆಲಮಂಗಲದ ಮುಖಂಡರು ಪಕ್ಷಕ್ಕೆ ಸೇರ್ಪಡೆ ಆಗ್ತಿದ್ದಾರೆ. ಬೆಮೆಲ್ ಕಾಂತರಾಜು ಅವರ ಬಹಳ ದೊಡ್ಡ ಬಳಗ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನೆಲಮಂಗಲದಲ್ಲೂ ದೊಡ್ಡ ಸಭೆ ಇದೆ. ಪ್ರಮುಖರನ್ನೆಲ್ಲ ಜೆಡಿಎಸ್​ನಿಂದ ಕಾಂಗ್ರೆಸ್ ಬಳಗಕ್ಕೆ ಸೇರಿಸಿಕೊಂಡಿದ್ದೇವೆ. ನೆಲಮಂಗಲ ಹಾಲಿ ಶಾಸಕರಿಂದ ಮುನಿಸಿಪಾಲಿಟಿ ಅಸ್ತಿತ್ವವನ್ನೇ ತೆಗೆದುಹಾಕಲು ಹೊರಟಿದ್ದರು. ರಾಜ್ಯದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಜೆಡಿಎಸ್​ನಿಂದ ಮಾತ್ರವಲ್ಲ, ಬಿಜೆಪಿಯಿಂದಲೂ ಅನೇಕರು ನಮ್ಮ ಪಕ್ಷ ಸೇರ್ತಾ ಇದ್ದಾರೆ. ಹಳಬರು ಹೊಸಬರು ಅನ್ನೋ ಹಾಗಿಲ್ಲ, ಎಲ್ಲರೂ ಒಟ್ಟಿಗೆ ಕೆಲಸ ಮಾಡ್ತಾರೆ ಎಂದರು.

ಕಾಂಗ್ರೆಸ್ ಸೇರ್ಪಡೆ: ಹಲವು ವರ್ಷಗಳಿಂದ ನೆಲಮಂಗಲ ತಾಲೂಕಿನಲ್ಲಿ ಜೆಡಿಎಸ್​ ಅಲೆ ಎಬ್ಬಿಸಿದ್ದ ಜೆಡಿಎಸ್​ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್​ ಕಾಂತರಾಜು ಅವರು ಕಾಂಗ್ರೆಸ್​ ಪಕ್ಷವನ್ನು ಸೇರಿಕೊಂಡಿದ್ದಾರೆ. ಅವರ ಜೊತೆಗೆ ಅವರ ಬಳಗವೂ ಕಾಂಗ್ರೆಸ್​ಗೆ ಸೇರ್ಪಡೆಯಾಗಿದೆ. ಕೆಪಿಸಿಸಿ ಸದಸ್ಯರು ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್. ಶ್ರೀನಿವಾಸ್ ಇವರ ನೇತೃತ್ವದಲ್ಲಿ ನೆಲಮಂಗಲ ನಗರಸಭೆಯ ಜೆಡಿಎಸ್​ನ ಹಾಲಿ ಅಧ್ಯಕ್ಷರು ಮತ್ತು 11 ಜನ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಪ್ರಮುಖ ಮುಖಂಡರು ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ನೆಲಮಂಗಲ ನಗರಸಭೆಯಲ್ಲಿ 14 ಮಂದಿ ಜೆಡಿಸ್ ಸದಸ್ಯರಿದ್ದು, ಅವರಲ್ಲಿ 11 ಮಂದಿ ಕಾಂಗ್ರೆಸ್​ಗೆ ಬೇಷರತ್ ಸೇರ್ಪಡೆಯಾಗಿದ್ದಾರೆ. ಇವರೆಲ್ಲ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ಗೃಹಕಚೇರಿ ಬಳಿ ಸೇರ್ಪಡೆಯಾದರು‌.

ಇದನ್ನೂ ಓದಿ: 'ಬಿಜೆಪಿಯವರದ್ದು ಲಂಚ, ಮಂಚದ ಸರ್ಕಾರ': ಪ್ರಜಾಧ್ವನಿ ಸಮಾವೇಶದಲ್ಲಿ ಕೈ​ ನಾಯಕರ ವಾಗ್ದಾಳಿ

Last Updated :Jan 20, 2023, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.