ETV Bharat / state

ಪರಿಷತ್‌ ಚುನಾವಣೆ: ತಡರಾತ್ರಿಯಾದರೂ ಪ್ರಕಟವಾಗದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

author img

By

Published : May 24, 2022, 7:07 AM IST

bjp
ಬಿಜೆಪಿ

ಅಚ್ಚರಿಯ ಅಭ್ಯರ್ಥಿ ಆಯ್ಕೆಮಾಡಿ ಪ್ರತಿಪಕ್ಷಗಳಿಗೆ ಶಾಕ್ ನೀಡಬೇಕೆನ್ನುವ ಉದ್ದೇಶವನ್ನು ಬಿಜೆಪಿ ಹೈಕಮಾಂಡ್ ಹೊಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ರಹಸ್ಯವಾಗಿಡಲಾಗುತ್ತಿದೆ ಎನ್ನಲಾಗಿದೆ.

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ(ಇಂದು) ಕಡೆಯ ದಿನವಾಗಿದ್ದು, ಸೋಮವಾರ ತಡರಾತ್ರಿಯಾದರೂ ಬಿಜೆಪಿ ಪಟ್ಟಿ ಬಹಿರಂಗವಾಗಲೇ ಇಲ್ಲ. ಹೆಚ್ಚಿನ ಪೈಪೋಟಿ ಇರುವುದರಿಂದ ಭಾರತೀಯ ಜನತಾ ಪಕ್ಷ ರಹಸ್ಯ ಕಾಪಾಡಿಕೊಳ್ಳುತ್ತಿದೆ ಎಂದು ಹೇಳಲಾಗಿದೆ‌. ಅಭ್ಯರ್ಥಿಗಳಾಗಿ ಆಯ್ಕೆಗೊಂಡವರಿಗೆ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸುವಂತೆ ಫೋನ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ನಾಮಪತ್ರ ಸಲ್ಲಿಸಲು ಯಾರಿಗೆ ಮಾಹಿತಿ ನೀಡಲಾಗಿದೆ ಎನ್ನುವ ಮಾಹಿತಿಯನ್ನೂ ಸಹ ಬಿಜೆಪಿ ಗೌಪ್ಯವಾಗಿಟ್ಟುಕೊಂಡಿದೆ. ಜೂನ್ 3ರಂದು ನಡೆಯುವ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ನಾಲ್ಕು ಸ್ಥಾನಗಳಿಗೆ ಹೆಚ್ಚಿನ ಪೈಪೋಟಿ ಕಂಡು ಬಂದಿದೆ. ಅಚ್ಚರಿಯ ಅಭ್ಯರ್ಥಿ ಆಯ್ಕೆಮಾಡಿ ಪ್ರತಿ ಪಕ್ಷಗಳಿಗೆ ಶಾಕ್ ನೀಡಬೇಕೆನ್ನುವ ಉದ್ದೇಶವನ್ನು ಹೈಕಮಾಂಡ್ ಹೊಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ರಹಸ್ಯವಾಗಿಡಲಾಗುತ್ತಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಬಿಜೆಪಿ ಇತರ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಾ ಬಂದಿರುವ ರಾಜಕೀಯ ಪಕ್ಷ. ಸೋಮಾವಾರ ರಾತ್ರಿ ಯಾವುದೇ ಕ್ಷಣದಲ್ಲಾದರೂ ಮಾಧ್ಯಮಗಳಿಗೆ ಪಟ್ಟಿಯ ಬಗ್ಗೆ ಮಾಹಿತಿ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸೋಮವಾರ ತಡರಾತ್ರಿಯಾದರೂ ಅಧಿಕೃತ ಪಟ್ಟಿ ಬಗ್ಗೆ ಯಾವುದೇ ಮಾಧ್ಯಮ ಪ್ರಕಟಣೆ ಹೊರಬಿದ್ದಿಲ್ಲ.

ಕಾಂಗ್ರೆಸ್ ಪಟ್ಟಿ ಬಿಡುಗಡೆ: ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಸೋಮವಾರ ಪಟ್ಟಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಪಕ್ಷವು ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮತ್ತು ನಾಗರಾಜ್ ಯಾದವ್ ಅವರಿಗೆ ಟಿಕೆಟ್ ನೀಡಿದ್ದು ಇಬ್ಬರೂ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ಬಿ ಫಾರಂ ಸಹ ವಿತರಣೆ ಮಾಡಿದರು.

ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್?: ಕಾಂಗ್ರೆಸ್ ಪಕ್ಷ ಯಾವುದೇ ಪ್ರಮುಖ ನಾಯಕರಿಗೆ ಟಿಕೆಟ್ ನೀಡದೆ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರಿಂದ ಆಡಳಿತ ಪಕ್ಷ ಬಿಜೆಪಿ ಸಹ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಒತ್ತಡಕ್ಕೆ ಸಿಲುಕಿದೆ ಎಂದು ಹೇಳಲಾಗಿದೆ. ಈ ಹಿಂದೆ ಬಿಜೆಪಿಯು ರಾಜ್ಯಸಭೆಗೆ ಅಶೋಕ್ ಗಸ್ತಿ, ವಿಧಾನಸಭೆಗೆ ಶಾಂತಾರಾಮ ಸಿದ್ದಿ ಎನ್ನುವ ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿತ್ತು. ಈ ಬಾರಿಯೂ ನಾಲ್ಕರಲ್ಲಿ ಒಂದೆರಡು ಅಭ್ಯರ್ಥಿಗಳನ್ನಾದರೂ ಸಾಮಾನ್ಯ ಕಾರ್ಯಕರ್ತರಿಗೆ ನೀಡಬಹುದೆಂದು ನಿರೀಕ್ಷಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಮೇಲ್ಮನೆ ಚುನಾವಣೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಹೈಕಮಾಂಡ್​​​ಗೆ ಶಿಫಾರಸ್ಸು ಮಾಡಿದೆ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ಸಮಾಲೋಚನೆ ನಡೆಸಿದ್ದರಿಂದ ಪಟ್ಟಿಬಿಡುಗಡೆ ವಿಳಂಬವಾಗಿದೆ ಎನ್ನಲಾಗುತ್ತಿದೆ. ಅಂತಿಮವಾಗಿ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡದೆ ಇರುವ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ ಎಂದು ಹೇಳಲಾಗುತ್ತಿದೆ.

ಮೇಲ್ಮನೆ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ವಿಜಯೇಂದ್ರ ಅವರು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಒತ್ತಡ ಹೆಚ್ಚಾದರೆ ವಿಜಯೇಂದ್ರ ಅವರಿಗೆ ತನ್ನ ತೀರ್ಮಾನ ಬದಲಿಸಿ ಹೈಕಮಾಂಡ್ ಟಿಕೆಟ್ ಕೊಟ್ಟರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸದ್ಯದ ಬೆಳವಣಿಗೆಗಳ ಪ್ರಕಾರ ವಿಜಯೇಂದ್ರ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುವುದು ಅನುಮಾನ.

ಇದನ್ನೂ ಓದಿ: ಬಿಎಸ್​ವೈ ಪುತ್ರ ವಿಜಯೇಂದ್ರ ಮೇಲ್ಮನೆ ಪ್ರವೇಶಕ್ಕೆ ಬಿಜೆಪಿ ಹೈಕಮಾಂಡ್​​ನಿಂದ ಅಡ್ಡಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.