ಒಂದೇ ಸೂರಿನಡಿ ಬಿಎಂಟಿಸಿ, ಬಿಬಿಎಂಪಿ, ಬಿಡಿಎ, ಬೆಂಗಳೂರು ಮೆಟ್ರೋ, ಬೆಂಗಳೂರು ಟ್ರಾಫಿಕ್ ಪೊಲೀಸ್: ವಿಧೇಯಕ ಮಂಡನೆ

author img

By

Published : Sep 23, 2022, 5:20 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಮಂಡನೆ. ಕಾಂಗ್ರೆಸ್ ಜೆಡಿಎಸ್ ಸದಸ್ಯರ ಗದ್ದಲದ ನಡುವೆಯೇ ವಿಧೇಯಕ ಮಂಡಿಸಿದ ಸಿಎಂ.

ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಎಂಟಿಸಿಯ ಸಂಚಾರಾಭಿವೃದ್ಧಿ, ಕಾರ್ಯಾಚರಣೆ ನಿರ್ವಹಣೆ ಮೇಲ್ವಿಚಾರಣೆಗಾಗಿ 2022ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.

ಕಾಂಗ್ರೆಸ್-ಜೆಡಿಎಸ್ ಸದಸ್ಯರ ಗದ್ದಲದ ನಡುವೆಯೇ ಬಿಎಂಟಿಸಿಯ ಮೇಲುಸ್ತುವಾರಿಯಾಗಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಮಂಡಿಸಲಾಗಿದೆ. ಬಿಡಿಎ, ಬೆಂಗಳೂರು ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಂಚಾರ ಪೊಲೀಸ್, ಬಿಎಂಟಿಸಿ, ಬಿಬಿಎಂಪಿ, ಬೆಂಗಳೂರು ಮೆಟ್ರೋ ರೈಲು ಇನ್ನು ಮುಂದೆ ಒಂದೇ ಸೂರಿನಡಿ ನಿರ್ವಹಣಾ ಚಟುವಟಿಕೆಗಳನ್ನು ನಡೆಸಲಿವೆ.

ನಗರ ಸಂಚಾರವನ್ನು ಸುಗಮಗೊಳಿಸುವ ಮತ್ತು ಉತ್ತಮಪಡಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲು ಹಿಂದಿನ ಪದ್ಧತಿಯಿಂದ ಅಡ್ಡಿಯುಂಟಾಗುತ್ತಿತ್ತು. ರಾಷ್ಟ್ರೀಯ ನಗರ ಸಾರಿಗೆ ನೀತಿಯನ್ನು ಸಶಕ್ತಗೊಳಿಸಲು ಸಂಸ್ಥೆಗಳು ಹಾಗೂ ವಿವಿಧ ಇಲಾಖೆಯನ್ನು ಒಂದೇ ಸೂರಿನಡಿ ತರಬೇಕೆಂಬ ಗುರಿಯೊಂದಿಗೆ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಮಂಡನೆ ಮಾಡಲಾಗಿದೆ.

ಆರ್ಥಿಕತೆ, ಮೂಲ ಸೌಕರ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಾರುಕಟ್ಟೆ ಸ್ಥಾಪನೆ ನಿರ್ವಹಣೆ, ಪರಿಸರ ಸಂರಕ್ಷಣೆ ಉತ್ತೇಜನ ನೀಡುವಲ್ಲಿ ಪ್ರಭಾವ ಬೀರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು ಪರಿಣಾಮ ಬೀರುತ್ತಿರುವುದರಿಂದ ಈ ವಿಧೇಯಕವನ್ನು ಜಾರಿಗೆ ತರಲಾಗಿದೆ.

(ಓದಿ: ಕಾಂಗ್ರೆಸ್, ಜೆಡಿಎಸ್ ಧರಣಿ ನಡುವೆ ನಾಲ್ಕು ವಿಧೇಯಕಗಳ ಅಂಗೀಕಾರ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ)

ಕೇವಲ ಮಂಡನೆಗೆ ಸೀಮಿತವಾದ ಕಲಾಪ: ವಿಧಾನಸಭೆಯಲ್ಲಿ ಇಂದು ಗದ್ದಲ ಮತ್ತು ಕೋಲಾಹಲ ಉಂಟಾಗಿದ್ದರಿಂದ ಪ್ರಶ್ನೋತ್ತರ ಕಲಾಪ ನಡೆಯದೇ ಕೇವಲ ವಿಧೇಯಕ ಮಂಡನೆಗೆ ಸೀಮಿತವಾಯಿತು. ಬೆಳಗ್ಗೆಯಿಂದಲೇ ಜೆಡಿಎಸ್ ಸದಸ್ಯರು ಬಿಎಂಎಸ್ ಟ್ರಸ್ಟ್ ಅಕ್ರಮ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಸದನವನ್ನು ಒಂದು ಬಾರಿ ಮುಂದೂಡಿದರೆ ನಂತರ ಸದನ ಸೇರಿದಾಗ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಪೀಕರ್ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಕಡೆಗೆ ಸ್ಪೀಕರ್ ಕಾಗೇರಿ ಅವರು ಪ್ರಶ್ನೋತ್ತರವನ್ನು ಗದ್ದಲದ ನಡುವೆಯೇ ಆರಂಭಿಸಲು ಮುಂದಾದರು.

ಶಾಸಕ ಸುಬ್ಬಾರೆಡ್ಡಿ ಅವರಿಗೆ ಪ್ರಶ್ನೆ ಕೇಳಲು ಸೂಚನೆ ಕೊಟ್ಟರು. ಗಣಿ ಸಚಿವ ಹಾಲಪ್ಪ ಆಚಾರ್ ಉತ್ತರಿಸಲು ಮುಂದಾಗುತ್ತಿದ್ದಂತೆ ಜೆಡಿಎಸ್ ಶಾಸಕರು ಧಿಕ್ಕಾರ ಕೂಗಿದರು. ಕಾಂಗ್ರೆಸ್ ಸದಸ್ಯರು ಬಾವಿ ಮುಂದೆ ಬಂದು ನಿಂತು 40 ಪರ್ಸೆಂಟ್ ಸರ್ಕಾರ ಹಾಗೂ ನಮ್ಮ ನಮ್ಮ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಒತ್ತಾಯ ಮಾಡಿದರು.

ಹೀಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಪ್ರಶ್ನೋತ್ತರವನ್ನು ಮಂಡನೆ ಮಾಡಲಾಗಿದೆ ಎಂದಷ್ಟೇ ಸಭಾಧ್ಯಕ್ಷರು ಪ್ರಕಟಿಸಿದರು. ಸಚಿವ ಮಾಧುಸ್ವಾಮಿ ಅವರು ಲಿಖಿತ ಉತ್ತರ ಮಂಡಿಸಿದರು.

ಪರಿಷತ್​ನಲ್ಲೂ ಕಾಂಗ್ರೆಸ್, ಜೆಡಿಎಸ್ ಧರಣಿ ಮಧ್ಯೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ನಾಲ್ಕು ವಿಧೇಯಕಗಳನ್ನು ಅಂಗೀಕಾರ ಮಾಡಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತಮ್ಮ ಬೇಡಿಕೆಗಳ ಚರ್ಚೆಗೆ ಅವಕಾಶ ನೀಡದೇ ಶಾಸನರಚನೆ ಕಲಾಪ ಕೈಗೆತ್ತಿಕೊಂಡಿದ್ದನ್ನು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಭಿತ್ತಿ ಪತ್ರ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ವಿಧೇಯಕಗಳು ಅಂಗೀಕಾರದ ವೇಳೆ ಸಭಾಪತಿಪೀಠದ ಮುಂದೆ ಸದಸ್ಯರು ಜಮಾವಣೆಗೊಂಡು ಹಗರಣಗಳ ಆರೋಪದ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರೂ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಈ ವೇಳೆ, ಪ್ರತಿಭಟನಾ ನಿರತ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಘೋಷಣೆ ಪೈಪೋಟಿ ನಡೆಯಿತು.

(ಇದನ್ನೂ ಓದಿ: ವಿಧಾನಸಭೆ ಅಧಿವೇಶನದ ಕೊನೆ ದಿನ: ಕಾಂಗ್ರೆಸ್-ಬಿಜೆಪಿ 40% ಕಮಿಷನ್ ವಾರ್?​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.