ETV Bharat / state

ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ.. ರಾಮನಗರದಿಂದ 150 ಜನರ ತಂಡದೊಂದಿಗೆ ಸಚಿವ ಅಶ್ವತ್ಥನಾರಾಯಣ ಅಯೋಧ್ಯೆಗೆ

author img

By

Published : Dec 14, 2022, 6:31 AM IST

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ರಾಮನಗರ ಜಿಲ್ಲೆಯ 150 ಮಂದಿಯ ತಂಡದೊಂದಿಗೆ ಇಂದು ತೆರಳಿ ಒಂದು ಬೆಳ್ಳಿ ಇಟ್ಟಿಗೆ, ಸ್ಥಳೀಯ ರೇಷ್ಮೆ ಸೀರೆ ಮತ್ತು ಶಲ್ಯವನ್ನು ಕಾಣಿಕೆಯಾಗಿ ನೀಡಲಾಗುತ್ತಿದೆ ಎಂದು ಡಾ ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದರು.

Ayodhya Yatra by Ashwattha Narayana and team
ಸಚಿವ ಅಶ್ವತ್ಥ ನಾರಾಯಣ ಮತ್ತು ತಂಡದಿಂದ ಅಯೋಧ್ಯೆ ಯಾತ್ರೆ

ಬೆಂಗಳೂರು: ಕರ್ನಾಟಕದಲ್ಲಿ ರಾಮಮಂತ್ರವನ್ನು ಮೊಳಗಿಸಲು ಬಿಜೆಪಿ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಪ್ರಮುಖ ಸಚಿವರು ಅಯೋಧ್ಯೆ ಯಾತ್ರೆಗೆ ಸಜ್ಜಾಗಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಪ್ರಸಿದ್ಧವಾಗಿರುವ ರಾಮನಗರದ ರಾಮದೇವರ ಬೆಟ್ಟವನ್ನು ಹಿಂದುಗಳ ಶ್ರದ್ಧಾ ಕೇಂದ್ರವನ್ನಾಗಿ ರೂಪಿಸಲು ಬಿಜೆಪಿ ಮುಂದಾಗಿದ್ದು, ಇದಕ್ಕೆ ಚಾಲನೆ ನೀಡಲು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಅಯೋಧ್ಯೆ ಯಾತ್ರೆ ಆರಂಭಿಸಲಿದ್ದಾರೆ.

ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು 150 ಮಂದಿಯ ಜತೆಗೂಡಿ ಅಯೋಧ್ಯೆಗೆ ತೆರಳಲಿದ್ದು, ಗುರುವಾರ ಅಯೋಧ್ಯೆಯಲ್ಲಿ ರಾಮನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟಕ್ಕೆ ಪೌರಾಣಿಕ ಹಿನ್ನೆಲೆ ಇದ್ದು, ವನವಾಸದ ಕಾಲದಲ್ಲಿ ಶ್ರೀರಾಮಚಂದ್ರ ಇಲ್ಲಿಗೆ ಭೇಟಿ ನೀಡಿದ್ದ ಎಂಬ ನಂಬಿಕೆಯಿದೆ.

ಈ ನಂಬಿಕೆಯ ಕಾರಣಕ್ಕಾಗಿ ರಾಮದೇವರ ಬೆಟ್ಟದ ಪುರಾತನ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿ ರಾಮನಿಗಾಗಿ ದೊಡ್ಡ ದೇವಸ್ಥಾನವನ್ನು ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದಾಗಲೇ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರ ಭಾಗವಾಗಿಯೇ ಸಚಿವ ಡಾ ಅಶ್ವತ್ಥನಾರಾಯಣ ಅವರು ಇಂದು ಅಯೋಧ್ಯೆಗೆ ತೆರಳಲಿದ್ದಾರೆ.

ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿಸಿದ್ದು, ಹಳೆ ಮೈಸೂರು ಭಾಗದಲ್ಲಿ ರಾಮಮಂತ್ರವನ್ನು ದೊಡ್ಡ ಮಟ್ಟದಲ್ಲಿ ಮೊಳಗಿಸುವ ಬಿಜೆಪಿಯ ಪ್ರಯತ್ನಕ್ಕೆ ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತದೆ ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಲು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಡಾ.ಅಶ್ವತ್ಥ ನಾರಾಯಣ ಅವರು ಸಜ್ಜಾಗಿದ್ದು, ಅಯೋಧ್ಯೆ ಯಾತ್ರೆ ಇದರ ಭಾಗ ಎಂದು ಮೂಲಗಳು ಹೇಳಿವೆ.

ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕನಿಷ್ಠ 8 ವಿಧಾನಸಭಾ ಸ್ಥಾನಗಳನ್ನು ಗೆಲ್ಲಿಸಿಕೊಡಲು ಸಚಿವ ಡಾ. ಅಶ್ವತ್ಥನಾರಾಯಣ ಅವರು ಈ ಭಾಗದ ಸಚಿವರ ಜೊತೆ ಸೇರಿ ಪ್ರಯತ್ನಿಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕನಿಷ್ಠ 8 ಸೀಟುಗಳನ್ನು ಗೆಲ್ಲಬೇಕೆಂದರೆ ಬಿಜೆಪಿಯನ್ನು ಗಟ್ಟಿಯಾಗಿ ತಳವೂರಿಸುವ ಕೆಲಸ ನಡೆಯಬೇಕಿದ್ದು, ರಾಮಮಂತ್ರದ ಜಪದಿಂದ ಈ ಕೆಲಸ ಸುಗಮವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಈ ಮೂರೂ ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗೆದ್ದರೆ ರಾಜಧಾನಿ ಬೆಂಗಳೂರು ಮತ್ತು ಹಳೆ ಮೈಸೂರು ಭಾಗದ ಇನ್ನಿತರ ಜಿಲ್ಲೆಗಳಲ್ಲಿ ಬಿಜೆಪಿ ಮತ್ತಷ್ಟು ಸಾಧನೆ ಮಾಡಬಹುದು ಎಂಬುದು ಬಿಜೆಪಿಯ ಯೋಜನೆಯಾಗಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ರಾಮನಗರ ಜಿಲ್ಲೆಯ 150 ಮಂದಿಯ ತಂಡದೊಂದಿಗೆ ತೆರಳಿ ಒಂದು ಬೆಳ್ಳಿ ಇಟ್ಟಿಗೆ, ಸ್ಥಳೀಯ ರೇಷ್ಮೆ ಸೀರೆ ಮತ್ತು ಶಲ್ಯವನ್ನು ಕಾಣಿಕೆಯಾಗಿ ನೀಡಲಾಗುತ್ತಿದೆ" ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ರಾಮನಗರವು ರೇಷ್ಮೆಗೆ ಹೆಸರಾಗಿದೆ. ಹೀಗಾಗಿ ಸೀತಾದೇವಿಗೆ ಇಲ್ಲಿನ ರೇಷ್ಮೆ ಸೀರೆ, ರಾಮ & ಲಕ್ಷ್ಮಣರಿಗೆ ಶಲ್ಯ ಕೊಡಲಾಗುವುದು. ರಾಮನಗರದ ರಾಮಭಕ್ತರ ದೇಣಿಗೆಯಿಂದ ಖರೀದಿಸಿರುವ ಬೆಳ್ಳಿ ಇಟ್ಟಿಗೆಗೆ ರಾಮನಗರದ ರಾಮದೇವರ ಬೆಟ್ಟ ಮತ್ತು ಕೆಂಗಲ್ ಹನುಮಂತರಾಯನ ದೇಗುಲದಲ್ಲಿ ವಿಧಿಬದ್ಧವಾಗಿ ಪೂಜೆ ಸಲ್ಲಿಸಲಾಗಿದೆ. ಸ್ಥಳೀಯರ ತಂಡದೊಂದಿಗೆ ತಾವೂ ತೆರಳುತ್ತಿದ್ದು, ಗುರುವಾರ ಅಯೋಧ್ಯೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಶಂಸಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿಗೆ ದೇವೇಗೌಡ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.