ETV Bharat / state

ಅಪೌಷ್ಟಿಕತೆ ನಿವಾರಣೆಗಾಗಿ ಮಕ್ಕಳಿಗೆ ಮಿಲ್ಲೆಟ್ ಆಹಾರ ಪೂರೈಕೆಗೆ ಕ್ರಮ : ಅರ್ಜುನ್ ಮುಂಡಾ

author img

By ETV Bharat Karnataka Team

Published : Jan 7, 2024, 8:50 PM IST

ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮವಹಿಸಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್​ ಮುಂಡಾ ತಿಳಿಸಿದ್ದಾರೆ. ಜಾಗತಿಕವಾಗಿ ಆಹಾರ ಭದ್ರತೆ ವಿಚಾರದಲ್ಲಿ ಸಿರಿಧಾನ್ಯ ಮುಖ್ಯಪಾತ್ರ ವಹಿಸಲಿದೆ. ಭಾರತ ಆತ್ಮನಿರ್ಭರವಾಗಲಿದೆ ಎಂದರು.

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ
ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ

ಬೆಂಗಳೂರು : ಪಿಎಂ ಪೋಷಣ್ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಮಿಲ್ಲೆಟ್ ಉತ್ಪಾದಿಸಿ ಮಕ್ಕಳಿಗೆ ಸಿರಿಧಾನ್ಯದ ಪೌಷ್ಟಿಕ ಆಹಾರ ಕೊಡಲಾಗುತ್ತದೆ. ಆ ಮೂಲಕ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ ವಹಿಸಲಾಗುತ್ತದೆ ಹಾಗು ಸಾವಯವ ಕೃಷಿ, ಸಿರಿಧಾನ್ಯ ಕೃಷಿಯ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಅಗತ್ಯ ಸಹಕಾರವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಭರವಸೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಮೇಳದಲ್ಲಿ ಭಾಗಿಯಾಗಿದ್ದು ಬಹಳ ಗೌರವದ ಸಂದರ್ಭವಾಗಿದೆ. ಮೇಳ ನೋಡುವ ಅವಕಾಶವೂ ಸಿಕ್ಕಿತು. ಕರ್ನಾಟಕ ಗ್ಯಾಲರಿ ನೋಡಿ ಖುಷಿಯಾಯಿತು. ದೇಶ, ವಿದೇಶಕ್ಕೆ ಎಲ್ಲಾ ಸಿರಿಧಾನ್ಯ ಉತ್ಪನ್ನ ಅನಾವರಣ ಮಾಡಲು ಸಹಕಾರಿಯಾಯಿತು. ದೇಶದ ಹಲವು ರಾಜ್ಯಗಳಲ್ಲಿ ಸಿರಿಧಾನ್ಯ ನಮ್ಮ ಪೂರ್ವಜರ ಜೀವನದ ಬಹುದೊಡ್ಡ ಆಧಾರವಾಗಿದೆ. ನಮ್ಮ ಗ್ರಾಮೀಣ ಪ್ರದೇಶಗಳು ಸಿರಿಧಾನ್ಯದ ಮೂಲಕ ಅನಾದಿಕಾಲದಿಂದಲೇ ಆತ್ಮನಿರ್ಭರವಾಗಿದ್ದವು ಎಂದರು.

ಮೋದಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ಮಾನ್ಯತೆ ಪಡೆಯಲಾಯಿತು. ಅಭಿಯಾನ ನಡೆಸಲಾಯಿತು. ಅದರ ಪರಿಣಾಮವಾಗಿ ದೇಶ, ವಿದೇಶ ಸೇರಿ ಜಾಗತಿಕವಾಗಿ ಸಿರಿಧಾನ್ಯವನ್ನು ಸ್ವೀಕರಿಸುವಂತಾಯಿತು. ಜಾಗತಿಕವಾಗಿ ಆಹಾರ ಭದ್ರತೆ ವಿಚಾರದಲ್ಲಿ ಸಿರಿಧಾನ್ಯ ಮುಖ್ಯಪಾತ್ರ ವಹಿಸಲಿದೆ. ಭಾರತೀಯ ಕೃಷಿಕರು ಇದನ್ನು ಪೂರ್ಣಗೊಳಿಸಲಿದ್ದಾರೆ. ಸಿರಿಧಾನ್ಯದಲ್ಲಿ, ಆಹಾರ ಭದ್ರತೆಯಲ್ಲಿ ಆತ್ಮನಿರ್ಭರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಪೂರ್ವಜರು ನಮಗೆ ಸಾವಯವ ಕೃಷಿಯನ್ನು ಕೊಟ್ಟಿದ್ದಾರೆ. ಆದರೆ ನಾವು ರಾಸಾಯನಿಕ ಬಳಸಿ ಮಣ್ಣಿನ ಫಲವತ್ತತೆ ಕಡಿಮೆ ಮಾಡುತ್ತಿದ್ದೇವೆ. ಜನರ ಆರೋಗ್ಯವನ್ನು ಹಾಳಾಗುವಂತೆ ಮಾಡುತ್ತಿದ್ದೇವೆ. ಹಾಗಾಗಿ ಪುರಾತನ ಪದ್ದತಿಯಾದ ಸಾವಯವ ಕೃಷಿಯನ್ನೆ ಮಾಡಬೇಕಿದೆ. ಈಗ ನಾವು ಸಾವಯವ ರಾಜ್ಯ, ಸಾವಯವ ದೇಶವನ್ನಾಗಿ ಮಾಡಬೇಕಿದೆ. ಈ ತಾಕತ್ತು ನಮ್ಮ ರೈತ ಸಮೂಹಕ್ಕೆ ಇದೆ. ಕೃಷಿ ಸಂಶೋಧನಾ ಕೇಂದ್ರಗಳಿವೆ. ಸ್ಟಾರ್ಟ್ ಅಪ್​ಗಳಿವೆ. ಅವುಗಳನ್ನು ಬಳಸಿಕೊಂಡು ಸಾವಯವ ಕೃಷಿಯತ್ತ ತೊಡಗುವಂತೆ ಮನವಿ ಮಾಡಿದರು.

ಪಿಎಂ ಪೋಷಣ್ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಮಿಲ್ಲೆಟ್ ಉತ್ಪಾದಿಸಿ ಮಕ್ಕಳಿಗೆ ಸಿರಿಧಾನ್ಯದ ಪೌಷ್ಟಿಕ ಆಹಾರ ಕೊಡಲಾಗುತ್ತದೆ. ಆ ಮೂಲಕ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ ವಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಸಾಯನಿಕ ಬಳಸದ ಕೃಷಿ ಪ್ರದೇಶವನ್ನು ರಾಸಾಯನಿಕ ಮುಕ್ತ ಕೃಷಿ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ. ಅಂಡಮಾನ್, ನಿಕೋಬಾರ್, ಲಕ್ಷದ್ವೀಪ, ಸಿಕ್ಕಿಂ ನಲ್ಲಿ ನಿಗದಿತ ವ್ಯಾಪ್ತಿಯನ್ನು ಈಗಾಗಲೇ ರಾಸಾಯನಿಕ ಮುಕ್ತ ಸಾವಯವ ಕೃಷಿ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ ಎಂದರು.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಹಿಂದೆ ಎಲ್ಲಿದ್ದವು ವಿಟಮಿನ್ ಮಾತ್ರೆ?: ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ನಮ್ಮ ಪೂರ್ವಿಕರು ಮೂಲ ಕೃಷಿ ಮೂಲಕ ನಮ್ಮ ದೇಹದ ಆರೋಗ್ಯ ಕಾಪಾಡಲು ಏನು ಮಾಡುತ್ತಿದ್ದರೋ ಅದೇ ಕೃಷಿ ಮಾಡಲು ನಮ್ಮ ಹೊಸ ಪೀಳಿಗೆ ಹೊರಟಿದೆ. ಹೊಸ ತಳಿ ಆರಂಭ, ಜನರ ಆಸಕ್ತಿ ನೋಡಿದರೆ ಸಿರಿಧಾನ್ಯ ಕೃಷಿಗೆ ಪರಿವರ್ತನೆಯಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ವಿಟಮಿನ್​ಗಳ ಕೊರತೆಗೆ ಮಾತ್ರೆಗಳಿವೆ. ಹಿಂದೆ ಈ ಮಾತ್ರೆಗಳೆಲ್ಲಾ ಎಲ್ಲಿದ್ದವು? ಈ ಸಿರಿಧಾನ್ಯವೇ ಮಾತ್ರೆ, ಹಿತ್ತಲಗಿಡ ಮದ್ದಲ್ಲ ಎನ್ನಲಾಗುತ್ತಿದೆ. ಆದರೆ ಹಿಂದೆ ಹಿತ್ತಲಲ್ಲೇ ಎಲ್ಲಾ ಬೆಳೆದು ಬಳಸುತ್ತಿದ್ದರು. ನಾವು ಈಗ ಅದನ್ನೇ ಮಾಡಬೇಕಿದೆ ಎಂದರು.

ಬಂಗಾರಪ್ಪ ಸಂಪುಟದಲ್ಲಿ ಸಚಿವನಾಗಿದ್ದೆ. ಆಗ ನಾವೆಲ್ಲಾ ಊಟಕ್ಕೆ ಸೇರಿದ್ದೆವು. ಹುರುಳಿಕಾಳನ್ನು ಶ್ರೀಕಂಠೇಗೌಡ ಮನೆಯಲ್ಲಿ ಚನ್ನಾಗಿ ಮಾಡಿ ತಂದಿದ್ದರು. ಆಗ ಉತ್ತರ ಕರ್ನಾಟಕದ ಸಚಿವರೊಬ್ಬರು ಕುದುರೆ ತಿನ್ನುವುದನ್ನೆಲ್ಲಾ ತಂದು ಕೊಟ್ಟಿದ್ದೀರಿ ಎಂದಿದ್ದರು. ನಂತರ ಅವರಿಗೆ ಬೇರೆ ಕೊಡಲಾಯಿತು. ನಂತರ ಸುತ್ತೂರು ಮಠಕ್ಕೆ ಹೋದೆವು. ಹುರುಳಿಕಾಳಿನಲ್ಲಿ ಸಾರು ಮಾಡಿದ್ದರು. ಅದೇ ಮಂತ್ರಿ ಸಾರು ಬಹಳ ಚನ್ನಾಗಿದೆ ಎಂದಿದ್ದರು. ಹಾಗೆ ಹುರುಳಿಯಲ್ಲಿ ಬಹಳ ಶಕ್ತಿ ಇದೆ ಎಂದು ಹಳೆಯ ಘಟನೆ ಮೆಲುಕುಹಾಕಿದರು. ಆಯುಷ್ಯ ಹೆಚ್ಚಿಸುವ ಪ್ರಯತ್ನ ವಿಜ್ಞಾನಿಗಳಿಂದ ನಡೆಯುತ್ತಿದೆ. ಆದರೆ ನಮಗೆ ಆಹಾರದಲ್ಲೇ ಅದು ಇದೆ. ಹಳೆಯ ಕಾಲದ ಕೃಷಿ ಪದ್ಧತಿ ಮರಳಿ ಅನುಸರಿಸಬೇಕು. ಸಾವಯವ ಮತ್ತು ಸಿರಿಧಾನ್ಯಕ್ಕೆ ಉತ್ತೇಜನ ನೀಡಬೇಕಿದೆ ಎಂದು ಅವರು ಹೇಳಿದರು.

150 ಕೋಟಿ ದಾಟಿದ ವಹಿವಾಟು: ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಸಿರಿಧಾನ್ಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಕೀರ್ತಿ ಕರ್ನಾಟಕ ಮತ್ತು ಬೆಂಗಳೂರು ಹಾಗು ರಾಜ್ಯದ ರೈತರಿಗೆ ಸಿಗಬೇಕಿದೆ. ಮೊದಲು ರಾಜಸ್ತಾನ, ನಂತರ ಮಹಾರಾಷ್ಟ್ರ ಹಾಗು ಮೂರನೇ ಸ್ಥಾನದಲ್ಲಿ ಕರ್ನಾಟಕ ಇದೆ. ಮಳೆಯಿಂದ ತೊಂದರೆಯಾದರೂ ಹತ್ತು ವರ್ಷದಲ್ಲಿ ಆರು ವರ್ಷ ಸಮಸ್ಯೆ ಎದುರಿಸಿದರೂ ಬೆಳೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಿದ್ದಾರೆ. 310 ಮಳಿಗೆ ತೆರೆಯಲಾಗಿತ್ತು. ಕರ್ನಾಟಕ ಪೆವಿಲಿಯನ್ ಮೂಲಕ 100 ಮಳಿಗೆಗಳಲ್ಲಿ ರೈತರ ಉತ್ಪನ್ನ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. 16 ರಾಜ್ಯಗಳು ಭಾಗಿಯಾಗಿದ್ದು ಹೆಮ್ಮೆಯ ವಿಚಾರ. ಕೇರಳ, ಯುಪಿ ಸಚಿವರು, ಕೇಂದ್ರದ ಸಚಿವರು ಬಂದಿದ್ದಾರೆ. ಹೊರದೇಶಗಳು ಕೂಡ ಭಾಗಿಯಾಗಿದ್ದವು. 147 ರಫ್ತುದಾರರು ಆಗಮಿಸಿದ್ದು, ಮೂರು ದಿನದಲ್ಲಿ 150 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ ಎಂದು ಹೇಳಿದರು.

ಸಿರಿಧಾನ್ಯ ಬೆಳೆಗಾರರಿಗೆ ಹೆಕ್ಟೇರ್​ಗೆ 10 ಸಾವಿರ ಸಹಾಯಧನ ಕೊಟ್ಟು ಪ್ರೋತ್ಸಾಹ ನೀಡುತ್ತಿದ್ದೇವೆ. ಕೃಷಿ ಹೊಂಡಕ್ಕೆ ಸಹಕಾರ ಕೊಟ್ಟಿದ್ದು ರೈತರ ಪರ ಎಲ್ಲ ಸಹಕಾರ ಕೊಟ್ಟಿದ್ದೇವೆ. ಐದು ಯೋಜನೆಗಳ ಮೂಲಕ ಐದರಿಂದ ಏಳು ಸಾವಿರ ಹಣವನ್ನು ರೈತರಿಗೆ ತಲುಪಿಸಿದ್ದೇವೆ. ಯಾವುದೇ ಆರ್ಥಿಕ ಸಮಸ್ಯೆಯಾದರೂ ನಾವು ರೈತರ ಜೊತೆ ನಿಲ್ಲಲಿದ್ದೇವೆ. ಕೇಂದ್ರದಿಂದ ಅನುದಾನ ತಡೆ ಹಿಡಿದಿದ್ದರೂ ರಾಜ್ಯ ಸರ್ಕಾರವೇ ಅನುದಾನ ಕೊಡುತ್ತಾ ಬರುತ್ತಿದೆ ಎಂದು ಹೇಳಿದರು.

ಸಿರಿಧಾನ್ಯಗಳ ಮಾರಾಟಕ್ಕಾಗಿ ಸ್ಟಾರ್ಟ್ ಅಪ್ ಸೇರಿ ಕಂಪನಿಗಳು ಬೆಂಗಳೂರಿನಲ್ಲಿ 400 ಔಟ್​ಲೆಟ್ ಆರಂಭಿಸಿವೆ. ಇಡೀ ರಾಜ್ಯದಲ್ಲಿ ಸಿರಿಧಾನ್ಯ ಮಾರಾಟ ಮಾಡುವ ಸಾವಿರಕ್ಕೂ ಹೆಚ್ಚಿನ ಔಟ್ ಲೆಟ್ ಇವೆ. ರಾಜ್ಯದಲ್ಲಿ ಸಾವಯವ ಕೃಷಿ ಮತ್ತು ಸಿರಿಧಾನ್ಯ ಕೃಷಿಗೆ ಸರ್ಕಾರ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಭರವಸೆ ನೀಡಿದರು.

ಕನ್ನಡ ನೆಲದಿಂದ ವಿಶ್ವಕ್ಕೆ ಸಿರಿಧಾನ್ಯ ಚಳವಳಿ: ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಸಾವಯವ ಮತ್ತು ಸಿರಿಧಾನ್ಯದ ರಾಜಧಾನಿ ಬೆಂಗಳೂರು ಎನ್ನಬಹುದಾಗಿದೆ. ರಾಜ್ಯದಲ್ಲಿ ಆರಂಭಗೊಂಡ ಸಾವಯವ ಚಳವಳಿ ದೇಶದಾದ್ಯಂತ ಹರಡಿದೆ. ಬೆಂಗಳೂರಿನಿಂದ ಆರಂಭಗೊಂಡ ಸಿರಿಧಾನ್ಯದ ಚಳವಳಿ ದೇಶ ಮಾತ್ರವಲ್ಲದೆ, ವಿದೇಶಗಳಿಗೂ ಹರಡಿದೆ. ಹಾಗಾಗಿ ಬೆಂಗಳೂರು ಕೇವಲ ಐಟಿಬಿಟಿ, ಸ್ಟಾರ್ಟ್ ಅಪ್ ಕ್ಯಾಪಿಟೆಲ್ ಮಾತ್ರವಲ್ಲ ಮಿಲ್ಲೆಟ್ ಕ್ಯಾಪಿಟೆಲ್ ಆಗಿದೆ. ಈ ಮೇಳದಿಂದ ಸಿರಿಧಾನ್ಯದ ಉತ್ಪನ್ನಗಳಿಗೆ ಮಾರುಕಟ್ಟೆ ಸಿಕ್ಕಿದೆ. ಇದರಿಂದ ಬೆಳಗಾರರಿಗೆ ಅನುಕೂಲವಾಗಿದೆ ಎಂದರು.

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಆಚರಣೆ ಹಿಂದೆ ಕರ್ನಾಟಕದ್ದು ಪ್ರಮುಖ ಪಾತ್ರವಾಗಿದೆ. ಇಂದು ಮೋದಿ, ಕೇಂದ್ರ ಸರ್ಕಾರ ಸಿರಿಧಾನ್ಯವನ್ನು ಪ್ರಮೋಟ್ ಮಾಡುತ್ತಿದೆ. ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಸಿರಿಧಾನ್ಯಕ್ಕೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಪೂರೈಕೆ ವ್ಯವಸ್ಥೆ ಕಲ್ಪಿಸಲು ಕೇಂದ್ರ ಮುಂದಾಗಬೇಕು. ಎರಡು ಸಾವಿರ ವರ್ಷದ ಇತಿಹಾಸ ರಾಜ್ಯದ ಸಿರಿಧಾನ್ಯ ಕೃಷಿಗಿದೆ. ಹಾಗಾಗಿ ಅಂತಾರಾಷ್ಟ್ರೀಯ ಮೇಳ ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿರಿಧಾನ್ಯ, ಸಾವಯವ ಮೇಳ-2024ಕ್ಕೆ ತೆರೆ: ಸಿರಿಧಾನ್ಯ ಬಿಸ್ಕೆಟ್, ಮಾಲ್ಟ್ ವೆಂಡಿಂಗ್ ಯಂತ್ರ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.