ETV Bharat / state

ಕೇಂದ್ರದಿಂದ ರಾಜ್ಯ ಹೈಕೋರ್ಟ್​ಗೆ ಐದು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

author img

By

Published : Aug 13, 2022, 7:55 AM IST

ಸುಪ್ರೀಂಕೋರ್ಟ್​ ಕೊಲಿಜಿಯಂ ಸಲ್ಲಿಸಿದ್ದ ಶಿಫಾರಸಿನಂತೆ ಕೇಂದ್ರ ಸರಕಾರವು ರಾಜ್ಯ ಹೈಕೋರ್ಟ್​ಗೆ ಐದು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ.

appointment-of-five-additional-judges-to-the-state-high-court-by-the-centre
ಕೇಂದ್ರದಿಂದ ರಾಜ್ಯ ಹೈಕೋರ್ಟ್​ಗೆ ಐದು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ

ಬೆಂಗಳೂರು: ಕೇಂದ್ರ ಸರಕಾರವು ರಾಜ್ಯ ಹೈಕೋರ್ಟ್​ಗೆ ಐದು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಸುಪ್ರೀಂಕೋರ್ಟ್ ಕೊಲಿಜಿಯಂ ಕಳೆದ ಜುಲೈ ತಿಂಗಳಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಶಿಫಾರಸಿನಂತೆ ಈ ನೇಮಕ ಮಾಡಲಾಗಿದೆ.

ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ, ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಮೃತ್ಯುಂಜಯ ಜೋಶಿ, ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅನಿಲ್‌ ಭೀಮಸೇನ ಕಟ್ಟಿ, ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಗುರುಸಿದ್ದಯ್ಯ ಬಸವರಾಜ ಮತ್ತು ರಾಜ್ಯ ಕೈಗಾರಿಕಾ ನ್ಯಾಯ ಮಂಡಳಿಯ ಮೇಲುಸ್ತುವಾರಿ ಅಧಿಕಾರಿ ಉಮೇಶ್‌ ಮಂಜುನಾಥ್‌ ಭಟ್‌ ಅಡಿಗ ಅವರನ್ನು ಹೈಕೋರ್ಟ್​​​ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ.

ನ್ಯಾಯಾಧೀಶರುಗಳಾದ ಜಿ ಬಸವರಾಜ, ಚಂದ್ರಶೇಖರ ಮೃತ್ಯುಂಜಯ ಜೋಶಿ, ಉಮೇಶ್‌ ಮಂಜುನಾಥ್‌ಭಟ್‌ ಅಡಿಗ ಮತ್ತು ಟಿ ಜಿ ಶಿವಶಂಕರೇಗೌಡ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷಗಳವರೆಗೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿರಲಿದ್ದಾರೆ. ನ್ಯಾ. ಅನಿಲ್‌ ಕಟ್ಟಿ ಅವರು ಅಧಿಕಾರ ವಹಿಸಿಕೊಳ್ಳುವ ದಿನದಿಂದ 2024ರ ಏಪ್ರಿಲ್‌ 16ರವರೆಗೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ಹೈಕೋರ್ಟ್‌ ನಲ್ಲಿ ಒಟ್ಟು 44 ನ್ಯಾಯಮೂರ್ತಿಗಳಿದ್ದು 5 ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕದಿಂದ ಹೈಕೋರ್ಟ್ ನಲ್ಲಿನ ನ್ಯಾಯಮೂರ್ತಿಗಳ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಒಟ್ಟು ಮಂಜೂರಾದ ನ್ಯಾಯಮೂರ್ತಿಗಳ ಸಂಖ್ಯೆ 62 ಆಗಿದ್ದು ಇನ್ನೂ 13 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ.

ಇದನ್ನೂ ಓದಿ : ವಿನೂತನ ನಿಯಮ ಹೊರಡಿಸಿದ ಅಜ್ಜಾವರ ಗ್ರಾಮ ಪಂಚಾಯತ್: ಅನಧಿಕೃತ ವ್ಯಕ್ತಿಗಳಿಗೆ ಈ ಗ್ರಾಮಕ್ಕೆ ಪ್ರವೇಶ ಇಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.