ETV Bharat / state

ರಾಜಧಾನಿಯಲ್ಲಿ ಮತ್ತೊಂದು ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ: ಟ್ರಾಫಿಕ್ ಸಮಸ್ಯೆ ಕೊನೆಯಾಗಲು ದಿನಗಣನೆ

author img

By

Published : Jul 27, 2023, 5:44 PM IST

Namma Metro: ಮಳೆಯಿಂದ ತಡವಾಗಿ ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ಮೊದಲ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ ಎಂದು ನಮ್ಮ ಮೆಟ್ರೋ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ
ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ

ಬೆಂಗಳೂರು : ನಿನ್ನೆ ಬುಧವಾರ ಸಂಜೆ ಕೆ.ಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದ ಮೊದಲ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ನಿರಂತರ ಮಳೆಯಿಂದ ತಡವಾಗಿ ಆರಂಭವಾದ ಪ್ರಾಯೋಗಿಕ ಸಂಚಾರ ಕೆ.ಆರ್ ಪುರ ಮೆಟ್ರೋ ನಿಲ್ದಾಣದಿಂದ ಸಂಜೆ 6.04 ಕ್ಕೆ ರೈಲು ಹೊರಟಿತು. ಬಳಿಕ ಬೈಯಪ್ಪನಹಳ್ಳಿ ಕಡೆಗೆ ನಿಧಾನವಾಗಿ ಮುಂದಕ್ಕೆ ಸಾಗಿ ತಪಾಸಣೆಗಾಗಿ ಕೆಲವು ಸ್ಥಳಗಳಲ್ಲಿ ನಿಲ್ಲಿಸಲಾಗಿತ್ತು. 2.5 ಕಿಲೋ ಮೀಟರ್ ದೂರವನ್ನು 47 ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು ಎಂದು ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾರ್ಗದ ಮೆಟ್ರೊ ವಾಣಿಜ್ಯ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ತಿಂಗಳಲ್ಲೇ ಚಾಲನೆ ನೀಡಿದ್ದರು. ಬೈಯಪ್ಪನಹಳ್ಳಿ- ಕೆ.ಆರ್ ಪುರದ ನಡುವೆ ಮೆಟ್ರೊ ಸಂಚರಿಸದ ಕಾರಣದಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಬೈಯಪ್ಪನಹಳ್ಳಿಗೆ ಬಂದವರು ವೈಟ್‌ ಫೀಲ್ಡ್‌ನತ್ತ ತೆರಳಲು ಆಟೋ, ಕ್ಯಾಬ್, ಬಿಎಂಟಿಸಿ ಬಸ್ ಅನ್ನು ಅವಲಂಬಿಸಬೇಕಿತ್ತು. ಇದೀಗ ವಾಣಿಜ್ಯ ಸಂಚಾರ ಆರಂಭಗೊಂಡರೆ ಈ ಸಮಸ್ಯೆ ಕೊನೆಗೊಳ್ಳಲಿದ್ದು, ವೈಟ್‌ ಫೀಲ್ಡ್ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.

ರೋಲಿಂಗ್ ಸ್ಟಾಕ್, ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಷನ್ಸ್ ಹಾಗು ಟ್ರ್ಯಾಕ್ ತಂಡದಿಂದ ಮೆಟ್ರೋ ಸಿಬ್ಬಂದಿಯನ್ನು ಒಳಗೊಂಡಿರುವ 12 ಅಧಿಕಾರಿಗಳೊಂದಿಗೆ ಲೊಕೊ ಪೈಲಟ್ ಪಿ ಜಗದೀಶನ್​ ರೈಲಿನ ಪ್ರಾಯೋಗಿಕ ಸಂಚಾರ ಕೈಗೊಂಡು ಪರಿಶೀಲಿಸಿದ್ದಾರೆ. ಜ್ಯೋತಿಪುರ ಮೆಟ್ರೋ ನಿಲ್ದಾಣದಲ್ಲಿ ಸಂಜೆ 4 ಗಂಟೆಗೆ ಮೊದಲ ಪ್ರಾಯೋಗಿಕ ಸಂಚಾರ ಪ್ರಾರಂಭಿಸಬೇಕಿತ್ತು. ಆದರೆ ಮಳೆಯಿಂದಾಗಿ ತಡವಾಗಿದೆ.

ನೇರಳೆ ಮಾರ್ಗದಲ್ಲಿನ ವಿಸ್ತರಿತ ಕಾಮಗಾರಿ ಇದಾಗಿದ್ದು, ಬೈಯಪ್ಪನಹಳ್ಳಿ-ಕೆ.ಆರ್ ಪುರ ನಡುವೆ 2.1 ಕಿಮೀ ಹಾಗೂ ಕೆಂಗೇರಿ- ಚೆಲ್ಲಗಟ್ಟದ ನಡುವೆ 1.8 ಕಿಮೀ ಕಾಮಗಾರಿ ಬಾಕಿ ಇತ್ತು. ಎರಡೂ ಕಡೆಗಳಲ್ಲಿ ಕಾಮಗಾರಿ ಮುಗಿದಿದ್ದು, ನೇರಳೆ ಮಾರ್ಗದ 43.5ಕಿಮೀ ಲೈನ್ ಪೂರ್ಣವಾದಂತಾಗಿದೆ. ಸದ್ಯ ಬೈಯಪ್ಪನಹಳ್ಳಿ - ಕೆ.ಆರ್. ಪುರ ನಡುವೆ ನಡುವೆ ಪ್ರಾಯೋಗಿಕ ಸಂಚಾರ ಮಾತ್ರ ನಡೆಯಲಿದ್ದು, ಕೆಲವು ದಿನಗಳ ಕಾಲ ಪ್ರಾಯೋಗಿಕ ಸಂಚಾರದ ಬಳಿಕ ಎಲ್ಲ ತಾಂತ್ರಿಕ ತೊಂದರೆಗಳು ಬಗೆಹರಿದಿವೆ ಎಂದು ಖಾತ್ರಿಯಾದ ಮೇಲೆ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದೆ.

ನೇರಳೆ ಮಾರ್ಗದ ಪೂರ್ವ-ಪಶ್ಚಿಮ ಪೂರ್ಣ ಮಾರ್ಗವನ್ನು ಏಕಕಾಲಕ್ಕೆ ಜನತೆಯ ಪ್ರಯಾಣಕ್ಕೆ ಮುಕ್ತಗೊಳಿಸಲಿದ್ದೇವೆ. ಆಗಸ್ಟ್ ಎರಡನೇ ವಾರದಲ್ಲಿ ಸಿಎಂಆರ್‌ಎಸ್‌ನಿಂದ ಕೊನೆಯ ಗುಣಮಟ್ಟ ಪರಿಶೀಲನೆ ನಡೆಯಲಿದೆ ಎಂದು ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಇದನ್ನೂ ಓದಿ : Metro crane collapsed: ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿಯ ವೇಳೆ ಕುಸಿದ ಕ್ರೇನ್.. ಜು. 10 ರಿಂದ ಆ. 9ರ ವರೆಗೆ ಸಂಚಾರ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.