ETV Bharat / state

ದೀಪಾವಳಿ ಎಫೆಕ್ಟ್: ಬೆಂಗಳೂರಿನಲ್ಲಿ ವಾಯುಗುಣಮಟ್ಟ ಸೂಚ್ಯಂಕದಲ್ಲಿ ಹೆಚ್ಚಳ

author img

By ETV Bharat Karnataka Team

Published : Nov 14, 2023, 11:06 PM IST

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ವಾಯುಗುಣ ಸೂಚ್ಯಂಕದಲ್ಲಿ ಹೆಚ್ಚಳ ಕಂಡು ಬಂದಿದೆ.

ಬೆಂಗಳೂರು
ಬೆಂಗಳೂರು

ಬೆಂಗಳೂರು : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಗುಣಮಟ್ಟ ಮಿತಿ ಮೀರಿದ್ದರೆ, ಸೇಫ್ ಸಿಟಿಯಾಗಿದ್ದ ರಾಜ್ಯ ರಾಜಧಾನಿ ಬೆಂಗಳೂರು ದೀಪಾವಳಿ ಪರಿಣಾಮವಾಗಿ ವಾಯು ಮಾಲಿನ್ಯ ವಿಚಾರದಲ್ಲಿ ತುಸು ಕೈ ಜಾರಿದೆ. ನಗರದ ಎಲ್ಲ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಳಗೊಂಡು ಗುಣಮಟ್ಟ ಕುಸಿದಿದೆ. ಉಸಿರಾಡಲು ಯೋಗ್ಯವಾದ ಗುಣಮಟ್ಟವನ್ನು ಕೆಲವೆಡೆ ಕಳೆದುಕೊಂಡಿದ್ದರೆ ಮತ್ತೆ ಕೆಲವೆಡೆ ಮಧ್ಯಮ ಗುಣಮಟ್ಟ ಕಾಯ್ದುಕೊಂಡಿದೆ. 108 ರಿಂದ 274 ರವರೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಎಕ್ಯೂಐ ದಾಖಲಾಗಿದೆ.

ನೆರೆಹೊರೆ ರಾಜ್ಯಗಳ ರಾಜಧಾನಿಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನವೆಂಬರ್ ಆರಂಭದಲ್ಲಿ ಕಡಿಮೆ ಇದ್ದ ವಾಯು ಮಾಲಿನ್ಯದ ಪ್ರಮಾಣ ದೀಪಾವಳಿ ಹಬ್ಬದ ಹಿನ್ನಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕೃತ ವೆಬ್​ತಾಣದಲ್ಲಿ ಸೂಚ್ಯಂಕದ ವಿವರಗಳನ್ನು ನಮೂದಿಸಿದ್ದು, ಇದರಲ್ಲಿ ಈ ಬಾರಿಯ ನವೆಂಬರ್​ನಲ್ಲಿ ವಾಯುಗುಣಮಟ್ಟ ಸೂಚ್ಯಂಕ ಯೋಗ್ಯ ಪ್ರಮಾಣದ ಗೆರೆಯನ್ನು ಕಾಯ್ದುಕೊಂಡಿತ್ತಾದರೂ, ಈಗ ಯೋಗ್ಯ ಪ್ರಮಾಣವನ್ನು ದಾಟಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ನವೆಂಬರ್​ನಲ್ಲಿ ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಬಾಪೂಜಿನಗರ, ಜಿಗಣಿ, ಬಿಟಿಎಂ ಲೇಔಟ್ ಮಾತ್ರ ಮಧ್ಯಮ ಪ್ರಮಾಣದ ವಾಯುಗುಣಮಟ್ಟ ಸೂಚ್ಯಂಕ ದಾಖಲಿಸಿದ್ದವು. ಆದರೂ ಉಸಿರಾಡಲು ಯೋಗ್ಯವಾದ ಗುಣಮಟ್ಟವನ್ನು ಹೊಂದಿವೆ ಎಂದು ಪರಿಗಣಿಸಬಹುದಾಗಿತ್ತು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿತ್ತು. ಇದನ್ನು ಹೊರತುಪಡಿಸಿ ಹೆಬ್ಬಾಳ, ವಿಲ್ಸನ್ ಗಾರ್ಡನ್, ಜಯನಗರ, ಪೀಣ್ಯ ಸೇರಿ ಇತರ ಕಡೆ ಇರುವ ಮಾಲಿನ್ಯ ನಿರ್ವಹಣಾ ಘಟಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹಸಿರು ಬಣ್ಣದ ವ್ಯಾಪ್ತಿ ಕಾಯ್ದುಕೊಂಡಿತ್ತು.

ಆದರೆ,ದೀಪಾವಳಿ ಹಿನ್ನೆಲೆ ಈಗ ಹಸಿರು ಬಣ್ಣದ ವ್ಯಾಪ್ತಿಯಲ್ಲಿ ಬೆಂಗಳೂರಿನ ಯಾವುದೇ ಪ್ರದೇಶವೂ ಇಲ್ಲ. ಕೇವಲ ಬಿಟಿಎಂ ಲೇಔಟ್ ಮಾತ್ರ 100 ಎಕ್ಯೂಐ ಒಳಗಡೆ ಇದೆ. ಇದು 95 ಎಕ್ಯೂಐ ಸೂಚ್ಯಂಕ ಪಡೆದುಕೊಂಡಿದೆ. ಇದನ್ನು ಬಿಟ್ಟರೆ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಹೆಬ್ಬಾಳ, ಹೊಂಬೇಗೌಡ ನಗರ, ಜಿಗಣಿ, ಕಸ್ತೂರಿ ನಗರ, ಪೀಣ್ಯ, ಮೈಲಸಂದ್ರ, ಸಾಣೆಗುರವಹಳ್ಳಿ, ಶಿವಪುರ-ಪೀಣ್ಯದಲ್ಲಿರುವ ಮಾಲಿನ್ಯ ನಿರ್ವಹಣಾ ಘಟಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 101-200ರ ಒಳಗಡೆ ದಾಖಲಾಗಿದೆ. ಇನ್ನುಳಿದಂತೆ ಜಯನಗರ, ಸಿಲ್ಕ್ ಬೋರ್ಡ್, ಬಾಪೂಜಿ ನಗರದ ಮಾಲಿನ್ಯ ನಿರ್ವಹಣಾ ಘಟಕಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 201 ದಾಟಿದೆ.

2023 ರ ನವೆಂಬರ್ 14 ರಂದು ಮಾಲಿನ್ಯ ನಿಯಂತ್ರಣ ನಿರ್ವಹಣಾ ಘಟಕಗಳಲ್ಲಿ ದಾಖಲಾಗಿರುವ ವಿವರಗಳು:

ಬಿಟಿಎಂ ಲೇಔಟ್​ನಲ್ಲಿ 121 (ಎಕ್ಯೂಐ)
ಬಾಪೂಜಿನಗರ 252 (ಎಕ್ಯೂಐ)
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮಜೆಸ್ಟಿಕ್) 115 (ಎಕ್ಯೂಐ)
ಹೆಬ್ಬಾಳ 177 (ಎಕ್ಯೂಐ)
ಹೊಂಬೆಗೌಡ ನಗರ(ವಿಲ್ಸನ್ ಗಾರ್ಡನ್) 190 (ಎಕ್ಯೂಐ)
ಜಯನಗರ 5ನೇ ಹಂತ 257 (ಎಕ್ಯೂಐ)
ಜಿಗಣಿ 147 (ಎಕ್ಯೂಐ)
ಕಸ್ತೂರಿ ನಗರ 138 (ಎಕ್ಯೂಐ)
ಪೀಣ್ಯ 129 (ಎಕ್ಯೂಐ)
ಮೈಲಸಂದ್ರ 163 (ಎಕ್ಯೂಐ)
ಸಾಣೆಗುರವಹಳ್ಳಿ 108 (ಎಕ್ಯೂಐ)
ಶಿವಪುರ-ಪೀಣ್ಯ 126 (ಎಕ್ಯೂಐ)
ಸಿಲ್ಕ್ ಬೋರ್ಡ್ 274 (ಎಕ್ಯೂಐ)

2023 ರ ನವೆಂಬರ್ 7 ರಂದು ಮಾಲಿನ್ಯ ನಿಯಂತ್ರಣ ನಿರ್ವಹಣಾ ಘಟಕಗಳಲ್ಲಿ ದಾಖಲಾಗಿದ್ದ ವಿವರಗಳು:

ಬಿಟಿಎಂ ಲೇಔಟ್​ನಲ್ಲಿ 50 (ಎಕ್ಯೂಐ)
ಬಾಪೂಜಿನಗರ 67 (ಎಕ್ಯೂಐ)
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮಜೆಸ್ಟಿಕ್) 78 (ಎಕ್ಯೂಐ)
ಹೆಬ್ಬಾಳ 28 (ಎಕ್ಯೂಐ)
ಹೊಂಬೆಗೌಡ ನಗರ(ವಿಲ್ಸನ್ ಗಾರ್ಡನ್) 31 (ಎಕ್ಯೂಐ)
ಜಯನಗರ 5ನೇ ಹಂತ 44 (ಎಕ್ಯೂಐ)
ಜಿಗಣಿ 53 (ಎಕ್ಯೂಐ)
ಕಸ್ತೂರಿ ನಗರ 32 (ಎಕ್ಯೂಐ)
ಪೀಣ್ಯ 39 (ಎಕ್ಯೂಐ)
ಮೈಲಸಂದ್ರ 46 (ಎಕ್ಯೂಐ)
ಸಾಣೆಗುರವಹಳ್ಳಿ 42 (ಎಕ್ಯೂಐ)
ಶಿವಪುರ-ಪೀಣ್ಯ 32 (ಎಕ್ಯೂಐ)
ಸಿಲ್ಕ್ ಬೋರ್ಡ್ 67 (ಎಕ್ಯೂಐ)

ಕಳೆದ ಬಾರಿ ಅಕ್ಟೋಬರ್ ತಿಂಗಳಿನಲ್ಲಿ ದೀಪಾವಳಿ ಬಂದ ಕಾರಣದಿಂದಾಗಿ ನವೆಂಬರ್ ಆರಂಭದವರೆಗೂ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿತ್ತು. ಈ ಬಾರಿ ದೀಪಾವಳಿ ಇನ್ನು ಆಗಮಿಸದ ಹಿನ್ನೆಲೆಯಲ್ಲಿ ನವೆಂಬರ್ ಮೊದಲ ವಾರದಲ್ಲಿ ಮಾಲಿನ್ಯದ ಪ್ರಮಾಣ ನಿಯಂತ್ರಣದಲ್ಲಿಯೇ ಇತ್ತು. ಹಸಿರು ಬಣ್ಣದ ಸೂಚ್ಯಂಕ ಈಗ ಮಧ್ಯಮ ಪ್ರಮಾಣದ ಸೂಚ್ಯಂಕವಾಗಿ ಹಾಗೂ ಕೆಲವು ಕಡೆ ಕಡಿಮೆ ಗುಣಮಟ್ಟದ ಸೂಚ್ಯಂಕ ದಾಖಲಾಗಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಹೆಚ್ಚಳ ಕಂಡಿದ್ದು, ಮಾಲಿನ್ಯದ ಪ್ರಮಾಣ ಹೆಚ್ಚಾಗಿರುವುದು ದಾಖಲಾಗಿದೆ.

ಈ ಬಾರಿ ವಾಯು ಮಾಲಿನ್ಯ ಕಡಿಮೆಗೊಳಿಸುವ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಮದ್ದಿನ ಪಟಾಕಿ ಬದಲು ಕಡಿಮೆ ಮಾಲಿನ್ಯಕಾರಕ ಅಂಶಗಳುಳ್ಳ ಹಸಿರು ಪಟಾಕಿ ಮಾರಾಟ ಮತ್ತು ಸಿಡಿಸಲು ಸೂಚನೆ ನೀಡಿತ್ತಾದರೂ ವಾಯು ಮಾಲಿನ್ಯ ನಿಯಂತ್ರಣ ಮಾತ್ರ ಸಾಧ್ಯವಾಗಿಲ್ಲ ಎನ್ನುವುದು ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ದಾವಣಗೆರೆ ಮಂದಿಗೆ ಬೇಕು ಎರಡು ಕೋಟಿ ಮೌಲ್ಯದ ಪಟಾಕಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.