ETV Bharat / state

ಪುಲಕೇಶಿನಗರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಅಖಾಡಕ್ಕೆ..!

author img

By

Published : Apr 19, 2023, 12:45 PM IST

ಪುಲಕೇಶಿನಗರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಸ್ಪರ್ಧೆ
ಪುಲಕೇಶಿನಗರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಸ್ಪರ್ಧೆ

ರಾಜಧಾನಿ ಬೆಂಗಳೂರು ಸಮೀಪದ ಪುಲಕೇಶಿನಗರ ಕ್ಷೇತ್ರ ಈ ಬಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ್ ಅವರಿ​ಗೆ ಟಿಕೆಟ್​ ತಪ್ಪಿಸಲಾಗಿದೆ. ಇದೇ ವೇಳೆ ತಮಿಳು ಪಕ್ಷವಾದ ಎಐಎಡಿಎಂಕೆ ತನ್ನ ಅಭ್ಯರ್ಥಿಯನ್ನು ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಘೋಷಿಸಿದೆ.

ಬೆಂಗಳೂರು/ಚೆನ್ನೈ: ರಾಜ್ಯ ವಿಧಾನಸಭೆ ಚುನಾವಣೆ ರಂಗೇರಿದೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್​ಗೆ ನೆರೆರಾಜ್ಯ ತೆಲಂಗಾಣದ ಸಿಎಂ ಕೆ ಚಂದ್ರಶೇಖರ್​ರಾವ್​ ನೇತೃತ್ವದ ಬಿಆರ್​ಎಸ್​ ಪಕ್ಷ ಬೆಂಬಲ ಘೋಷಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗುತ್ತಿವೆ ಎಂಬುದರ ನಡುವೆ ಶಾಕಿಂಗ್​ ಸುದ್ದಿ ಬಂದಿದೆ.

ರಾಜಧಾನಿಯ ಮತ್ತೊಂದು ಕ್ಷೇತ್ರವಾದ ಪುಲಕೇಶಿನಗರದಲ್ಲಿ ಎಐಎಡಿಎಂಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದೆ. ಇದು ಬಿಜೆಪಿಗೆ ಅಚ್ಚರಿಯ ಸಂಗತಿಯಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸಾಮಿ ಅವರು ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಡಿ.ಅನ್ಬರಸನ್ ಅವರನ್ನು ಪುಲಕೇಶಿನಗರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಇಳಿಸುವುದಾಗಿ ತಿಳಿಸಿದ್ದಾರೆ.

ತಮಿಳಗರೇ ಹೆಚ್ಚಿರುವ ಕ್ಷೇತ್ರ: ಪುಲಿಕೇಶಿ ನಗರ ಕ್ಷೇತ್ರ ಬೆಂಗಳೂರಿಗೆ ಸಮೀಪದಲ್ಲಿದೆ. ಈ ಹಿಂದೆ ಇದು ಯಲಹಂಕ ಕ್ಷೇತ್ರದ ಭಾಗವಾಗಿತ್ತು. 2008 ರಲ್ಲಿ ಕ್ಷೇತ್ರ ಪುನರ್​ ವಿಂಗಡಣೆಯಾಗಿ ಪ್ರತ್ಯೇಕ ಕ್ಷೇತ್ರವಾಯಿತು. ಕ್ಷೇತ್ರದಲ್ಲಿ ತಮಿಳು ಭಾಷಿಕ ಮತಗಳೇ ಹೆಚ್ಚಿವೆ ಎಂಬುದು ಗಮನಾರ್ಹ ಸಂಗತಿ. ಅಂದಾಜಿನ ಪ್ರಕಾರ ಇಲ್ಲಿ 68,000 ಕನ್ನಡೇತರ ಮತದಾರರು ಇದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಹಣೆಬರಹ ಪರೀಕ್ಷೆಗೆ ಇಳಿದಿರುವ ಎಐಎಡಿಎಂಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದರೂ ಕ್ಷೇತ್ರದಲ್ಲಿ ಮುಸ್ಲಿಂ ಮತಗಳೇ ಇಲ್ಲಿ ನಿರ್ಣಾಯಕವಾಗಿವೆ.

ಇನ್ನೂ, ಆಡಳಿತಾರೂಢ ಬಿಜೆಪಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಮುರಳಿ ಎಂಬುವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷ ಇನ್ನೂ ಅಭ್ಯರ್ಥಿಯನ್ನು ಅಖೈರು ಮಾಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ಎಐಎಡಿಎಂಕೆ ಮಾತ್ರ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

"ಅಖಂಡ" ಕೋಪ: ಪುಲಕೇಶಿನಗರ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಕಾಂಗ್ರೆಸ್​ನ ಅಖಂಡ ಶ್ರೀನಿವಾಸ್​ ಮೂರ್ತಿ ಅವರು ಕ್ಷೇತ್ರದ ಶಾಸಕರಾಗಿದ್ದರು. ಆದರೆ, ಪಕ್ಷ ಬಿಡುಗಡೆ ಮಾಡಿರುವ ನಾಲ್ಕು ಪಟ್ಟಿಗಳಲ್ಲಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ದಲಿತ ನಾಯಕ ಅಖಂಡ ಶ್ರೀನಿವಾಸ್​ ಮೂರ್ತಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್​ ನಿರಾಕರಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿಯೇ ಹಾಲಿ ಶಾಸಕರಾಗಿರುವ ಅಖಂಡ ಶ್ರೀನಿವಾಸ್​ ಅವರಿಗೆ ಟಿಕೆಟ್ ನೀಡಿಲ್ಲ. ಇದು ಪಕ್ಷದಲ್ಲಿ ಬೇಗುದಿಯನ್ನು ಹೆಚ್ಚಿಸಿದೆ.

2020 ರಲ್ಲಿ ಅವಹೇನಕಾರಿ ಪೋಸ್ಟ್​ ಹಾಕಲಾಗಿದೆ ಎಂದು ಆರೋಪಿಸಿ ನೂರಾರು ಜನರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ದೊಂಬಿ ನಡೆಸಿ ವಾಹನಗಳಿಗೆ ಬೆಂಕಿಹಚ್ಚಿ, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಪೊಲೀಸರ ಗುಂಡೇಟಿಗೆ ಮೂವರು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದರು. ಇದೇ ವೇಳೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೂ ದಾಳಿ ನಡೆದಿತ್ತು.

ರಾಜ್ಯ ವಿಧಾನಸಭಾ ಚುನಾವಣೆ ಮುಂದಿನ ತಿಂಗಳು ಮೇ 10 ರಂದು ನಡೆಯಲಿದೆ. ಒಟ್ಟು 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಘೋಷಣೆಯಾಗಲಿದೆ.

ಓದಿ: ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೇರಲು ಬಿಜೆಪಿ ರಣತಂತ್ರ.. ವಿಪಕ್ಷಗಳನ್ನು ಕಟ್ಟಿಹಾಕಲು ಪ್ಲಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.