ETV Bharat / state

ಅಕ್ರಮ ಜಾಹೀರಾತು ತಡೆಯುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮ: ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ

author img

By ETV Bharat Karnataka Team

Published : Oct 11, 2023, 4:04 PM IST

Updated : Oct 12, 2023, 8:18 AM IST

ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್,​ ಹೋರ್ಡಿಂಗ್‌ ಒಳಗೊಂಡ ಅಕ್ರಮ ಜಾಹೀರಾತುಗಳ ಹಾವಳಿ ತಡೆಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆ ನಡೆಸಿತು.

high court
ಹೈಕೋರ್ಟ್​

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಅನಧಿಕೃತ ಜಾಹೀರಾತುಗಳ ಅಳವಡಿಕೆಯ ವಿರುದ್ಧ ಕ್ರಮ ಕೈಗೊಳ್ಳದ ಹಾಗೂ ಜಾಹೀರಾತು ಅಕ್ರಮ ಅಳವಡಿಕೆ ತಡೆಗೆ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದು ಹೈಕೋರ್ಟ್‌ಗೆ ತಿಳಿಸಿದೆ.

ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತ ಹೋರ್ಡಿಂಗ್‌ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದರೆ ಸಾಲದು. ಆ ಪ್ರಕ್ರಿಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು. ಅಲ್ಲದೇ, ಮುಂದಿನ ವಿಚಾರಣೆ ವೇಳೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಿದ ನಂತರ ನಡೆದಿರುವ ಬೆಳವಣಿಗೆಗಳ ಮಾಹಿತಿ ನೀಡಬೇಕು.

ಬೆಂಗಳೂರು ನಗರದಾದ್ಯಂತ ಅಳವಡಿಕೆ ಆಗಿರುವ ಜಾಹೀರಾತು ಸಮೀಕ್ಷೆ ನಡೆಸಬೇಕು. ಅವುಗಳಲ್ಲಿ ಎಷ್ಟಕ್ಕೆ ಅಳವಡಿಸಲು ಅನುಮತಿ ನೀಡಲಾಗಿದೆ. ಅವುಗಳು ಬಿಬಿಎಂಪಿಗೆ ಅಗತ್ಯ ಶುಲ್ಕ ಕಟ್ಟಿವೆಯೇ, ಅಕ್ರಮ ಅಳವಡಿಕೆಯಾಗಿದ್ದರೆ ಅವುಗಳ ವಿರುದ್ದ ಯಾವ ಕ್ರಮ ಜರುಗಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ಎಷ್ಟು ಜಾಹೀರಾತು ಅಳವಡಿಕೆಗೆ ಅನುಮತಿ ನೀಡಲಾಗಿದೆ. ಜಾಹೀರಾತುದಾರರು ಎಷ್ಟು ಹಣ ಶುಲ್ಕ ಪಾವತಿ ಮಾಡಿದ್ದಾರೆ ಎಂಬ ಬಗ್ಗೆ ವರದಿ ಸಲ್ಲಿಸುಂತೆ ಬಿಬಿಎಂಪಿಗೆ ನಿರ್ದೇಶನ ವಿಚಾರಣೆ ಮುಂದೂಡಿತು.

ಅಲ್ಲದೆ, ಅನಧಿಕೃತ ಜಾಹೀರಾತು ಫಲಕಗಳಿಗೆ ಅವಕಾಶ ಮಾಡಿಕೊಡುವುದು ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಆದಾಯ ಖೋತಾ ಆಗುವುದರ ಜೊತೆಗೆ ನಗರದ ಸೌಂದರ್ಯ ವಿಕಾರಗೊಳ್ಳುವುದಕ್ಕೂ ದಾರಿ ಮಾಡಿಕೊಡುತ್ತಿದೆ. ಅಕ್ರಮ ಜಾಹೀರಾತು ಫಲಕಗಳಿಂದ ಪಾಲಿಕೆಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಶುಲ್ಕ ಪಡೆದುಕೊಳ್ಳಲು ಅವಕಾಶವಿದ್ದರೂ ಅದನ್ನು ಪಾಲಿಕೆ ಕೈಚೆಲ್ಲಿದಂತಿದೆ. ಒಂದು ಕಡೆ ಆದಾಯ ಬರುವುದನ್ನು ತಪ್ಪಿಸಿಕೊಳ್ಳುವ ಪಾಲಿಕೆ, ಮತ್ತೊಂದು ಕಡೆ ನಗರದ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರ ಬಂದಾಗ ಹಣ ಇಲ್ಲವೆಂದು ಬೆನ್ನು ತಿರುಗಿಸುತ್ತದೆ, ಕೈ ಎತ್ತುತ್ತದೆ. ತೆರಿಗೆ ಸಂಗ್ರಹಿಸಲು ವಿಫಲವಾಗಿರುವ ಪಾಲಿಕೆ, ಅದರ ಹೊರೆಯನ್ನು ನಾಗರಿಕರ ಮೇಲೆ ಹೊರಿಸುತ್ತಿದೆ. ಈ ರೀತಿ ಬಿಬಿಎಂಪಿ ನಗರಕ್ಕೆ ಮೊದಲ ಶತ್ರುವಾಗಿ ಪರಿಣಮಿಸಿದೆ ಎಂದು ನ್ಯಾಯಪೀಠ ಖಾರವಾಗಿ ಹೇಳಿತು.

ಈ ಹಿಂದೆ ವಿಚಾರಣೆ ನಡೆಸಿದ ನ್ಯಾಯಪೀಠ, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಗರದಲ್ಲಿ ಅನಧಿಕೃತವಾಗಿ ಸುಮಾರು 60 ಸಾವಿರ ಜಾಹೀರಾತು ಫಲಕಗಳು ಅಳವಡಿಕೆಯಾಗಿವೆ. ಅದರಲ್ಲಿ ಕೇವಲ 134 ದೂರುಗಳನ್ನು ಪರಿಗಣಿಸಿ 40 ಎಫ್‌ಐಆರ್ ದಾಖಲಿಸಲಾಗಿದೆ. ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ತಡೆಯಲು ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಜಾಹೀರಾತು ಫಲಕ ಅಡವಳಿಕೆದಾರರ ವಿರುದ್ಧ ದಂಡ ಸಹ ವಿಧಿಸಿಲ್ಲ. ಈ ಹಾವಳಿ ತಡೆಯಲು ವಿಫಲವಾಗಿರುವ ಅಧೀನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಪ್ರಕರಣಗಳ ಸಂಬಂಧ ದಾಖಲಿಸಿರುವ ದೂರು ಹಾಗೂ ಎಫ್‌ಐಆರ್‌ಗಳ ಕುರಿತು ಮಾಹಿತಿ ಸಲ್ಲಿಸಬೇಕು. ಅಕ್ರಮ ಜಾಹೀರಾತು ಫಲಕಗಳನ್ನು ಅಳವಡಿಕೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಸಹ ಏಕೆ ದಂಡ ವಿಧಿಸಿಲ್ಲ. 59 413 ಅಕ್ರಮ ಜಾಹೀರಾತುಗಳ ಅಳವಡಿಕೆ ಪ್ರಕರಣಗಳಲ್ಲಿ ಕೇವಲ 134 ದೂರುಗಳನ್ನು ಪರಿಗಣಿಸಿ 40 ಎಫ್‌ಐಆರ್ ಏಕೆ ದಾಖಲಿಸಲಾಗಿದೆ. ಅನಧಿಕೃತ ಜಾಹೀರಾತು ತಡೆಯುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಯಾವೆಲ್ಲಾ ಕ್ರಮ ಜರುಗಿಸಲಾಗುತ್ತದೆ ಎಂಬ ವಿವರಣೆ ನೀಡುವಂತೆ ಸೂಚನೆ ನೀಡಿತು.

ಇದನ್ನೂಓದಿ: ಸರ್ಕಾರಿ ನೌಕರನ ವಿರುದ್ಧ ಅನುಮಾನವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣವಾಗಲಿದೆ: ಹೈಕೋರ್ಟ್

Last Updated :Oct 12, 2023, 8:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.