ETV Bharat / state

ಖಾಸಗಿ ಕಂಪನಿಯೊಂದರಲ್ಲಿ ಬೆಳಗ್ಗೆ ನೀಡಿದ ತಿಂಡಿ ತಿಂದು 100ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ

author img

By

Published : Jun 2, 2023, 10:10 PM IST

ಸೋಂಪುರ ಕೈಗಾರಿಕಾ ಪ್ರದೇಶದ ನಿಡವಂದ ಗ್ರಾಮದ ಬಳಿ ಇರುವ ಖಾಸಗಿ ಕಂಪನಿಯಲ್ಲಿ ಅಸ್ವಸ್ಥಗೊಂಡ ಘಟನೆ ನಡೆದಿದೆ.

ಕಾರ್ಮಿಕರು ಅಸ್ವಸ್ಥ
ಕಾರ್ಮಿಕರು ಅಸ್ವಸ್ಥ

ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಬೆಳಗ್ಗೆ ತಿಂಡಿ ಸೇವಿಸಿ ನೂರಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಸೋಂಪುರ ಕೈಗಾರಿಕಾ ಪ್ರದೇಶದ ನಿಡವಂದ ಗ್ರಾಮದ ಬಳಿ ಇರುವ ಕೇಪಿ ಎಲೆಕ್ಟ್ರಾನಿಕ್ಸ್ ಮತ್ತು ಅಸೋಸಿಯೇಟ್ಸ್ ಕಂಪನಿಯಲ್ಲಿ ಎಂದಿನಂತೆ ನೀಡುವ ತಿಂಡಿ ತಿಂದ ಬಳಿಕ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ನಂತರ ಅಸ್ವಸ್ಥಗೊಂಡವರನ್ನು ತುಮಕೂರು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದೆ.

ಕೇಪಿ ಎಲೆಕ್ಟ್ರಾನಿಕ್ಸ್ ಮತ್ತು ಅಸೋಸಿಯೇಟ್ಸ್ ಕಂಪನಿಯಲ್ಲಿ ಕಾರ್ಮಿಕರು ಬೆಳಗ್ಗೆ 7:30 ಕ್ಕೆ ತಿಂಡಿಗೆ ಪುಳಿಯೋಗರೆ ಚಟ್ನಿ ತಿಂದು ಕೆಲಸಕ್ಕೆ ಹಾಜರಾಗಿದ್ದು, 8:30 ರ ನಂತರ ಒಬ್ಬೊಬ್ಬರೇ ವಾಂತಿ ಮಾಡಿಕೊಳ್ಳುವುದು ಹಾಗೂ ತಲೆಸುತ್ತು ಕಂಡು ಬಂದಿದೆ. ತಕ್ಷಣವೇ ಎಚ್ಚೆತ್ತ ಕಂಪನಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಅಸ್ವಸ್ಥಗೊಂಡವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆ, ಡಾಬಸ್ ಪೇಟೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸಾವಿರಕ್ಕೂ ಅಧಿಕ ಕಾರ್ಮಿಕರು ವಿವಿಧ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ಕೇಪಿ ಎಲೆಕ್ಟ್ರಾನಿಕ್ಸ್ ಮತ್ತು ಅಸೋಸಿಯೇಟ್ಸ್ ಕಂಪನಿಯಲ್ಲಿ ಮಧ್ಯಾಹ್ನದವರೆಗೂ ನೂರಕ್ಕೂ ಅಧಿಕ ಕಾರ್ಮಿಕರು ನಿತ್ರಾಣಗೊಂಡು ಆಸ್ಪತ್ರೆ ಸೇರಿದ್ದು, ಇನ್ನು ಹಲವು ಅಸ್ವಸ್ಥಗೊಂಡ ಕಾರ್ಮಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ಈ ಘಟನೆ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಡಾಬಸ್ ಪೇಟೆ ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ಡಾ.ಎಂ.ಬಿ ನವೀನ್ ಕುಮಾರ್, ಸೋಂಪುರ ಗ್ರಾ.ಪಂ ಪಿಡಿಒ ರವಿಶಂಕರ್ ಕಂಪನಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದರು.

ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಪ್ರತಿಕ್ರಿಯೆ : ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಶರಣ್ ರಾಜ್ ಕಾರ್ಮಿಕರು ಅಸ್ವಸ್ಥಗೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಸೂಕ್ತ ಚಿಕಿತ್ಸೆ ಕೊಡಿಸುತ್ತಿದ್ದು, ಮೇಲ್ನೋಟಕ್ಕೆ ಫುಡ್ ಪಾಯ್ಸನ್‌ನಿಂದ ಈ ರೀತಿ ಆಗಿರಬಹುದೆಂದು ವೈದ್ಯರು ತಿಳಿಸಿದ್ದಾರೆ. ಊಟ ಹಾಗೂ ನೀರಿನ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ಕಳುಹಿಸಿದ್ದು, ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಸದ್ಯ ಕಾರ್ಮಿಕರ ಕುಟುಂಬಸ್ಥರು ಯಾರೊಬ್ಬರು ಕೂಡ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಕಾರ್ಮಿಕರೊಂದಿಗೆ ಕಂಪನಿ ಸದಾ ಇರುತ್ತದೆ ಎಂದು ತಿಳಿಸಿದರು.

ಕಲುಷಿತ ಆಹಾರ ಸೇವನೆ‌ ಮಾಡಿ ಅಸ್ವಸ್ಥ : ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಡೋಣಿ ಗ್ರಾಮದಿಂದ ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತಿರಿಸಲು ಬಂದಿದ್ದ ಭಕ್ತರು ಕಲುಷಿತ ಆಹಾರ ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಆಳಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಧ್ಯಹ್ನಾ ಸಮಯದಲ್ಲಿ ಊಟ ಸೇವಿಸಿದ ಬಳಿಕ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಊರಿನಿಂದ ಬರುವಾಗ ಕಟ್ಟಿಕೊಂಡು ಬಂದಿದ್ದ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಎಲ್ಲ ಅಸ್ವಸ್ಥರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : ಕಲುಷಿತ ಆಹಾರ ಸೇವನೆ 20 ಜನ ಅಸ್ವಸ್ಥ: ಪ್ರಾಣಾಪಾಯದಿಂದ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.