ETV Bharat / state

ಬಾಗಲಕೋಟೆಯಲ್ಲಿ 17ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ

author img

By

Published : Aug 17, 2023, 10:29 AM IST

ಶಿವಾಜಿ ಮೂರ್ತಿ ತೆರವು
ಶಿವಾಜಿ ಮೂರ್ತಿ ತೆರವು

ಬಾಗಲಕೋಟೆಯಲ್ಲಿ ಎರಡು ದಿನಗಳ‌ ಹಿಂದೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಶಿವಾಜಿ ಮೂರ್ತಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಬಾಗಲಕೋಟೆ: ನಗರದ ಸೋನಾರ ಬಡಾವಣೆಯಲ್ಲಿ ಕಳೆದ ಎರಡು ದಿನಗಳ‌ ಹಿಂದೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಶಿವಾಜಿ ಮೂರ್ತಿಯನ್ನು ಪೊಲೀಸರು ಸೂಕ್ತ ಭದ್ರತೆ ನಡುವೆ ತೆರವುಗೊಳಿಸಿದ್ದಾರೆ. ಈ ಮೂರ್ತಿಯನ್ನು ಪ್ರತಿಷ್ಠಾಪನೆ ಕಾರಣ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರ್ತಿ ತೆರವುಗೊಳಿಸುವ ಮಾಹಿತಿ ಹರಡುತ್ತಿದ್ದಂತೆ ಕೆಲ ಸಂಘಟನೆ ಹಾಗೂ ಕೆಲವು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಈ ವೇಳೆ, ಸ್ಥಳಕ್ಕಾಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಪ್ರತಿಭಟನಾನಿರತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ ಪೊಲೀಸರ ಪ್ರಯತ್ನಕ್ಕೆ ಜಗ್ಗದ ಕೆಲ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಸ್ಥಳದಲ್ಲಿ ಯಾರೂ ಇರದಂತೆ‌‌ ನೋಡಿಕೊಂಡರು. ಬಳಿಕ ಪೊಲೀಸ್ ಸಿಬ್ಬಂದಿ ಜೆಸಿಬಿ ಸಹಾಯದಿಂದ ಮೂರ್ತಿ ತೆರವುಗೊಳಿಸಿದರು. ಆದರೆ, ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಆ ಸಂಘಟನೆಯ ಪ್ರಮುಖ ಮುಖಂಡರು ಬಾಗಲಕೋಟೆ ನಗರ ಪೊಲೀಸ್ ಠಾಣೆ ಎದುರು ಜಮಾವಣೆಯಾದರು.

ಸೋನಾರ ಬಡಾವಣೆಯಲ್ಲಿ ಮೂರ್ತಿ ಅನಧಿಕೃತವಾಗಿದ್ದು, ಅದನ್ನು ತೆರವುಗೊಳಿಸಲಾಗುವುದು. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂಬ ಉದ್ದೇಶದಿಂದ ನಗರದಲ್ಲಿ ಆಗಸ್ಟ್​ 16 ರಿಂದ 17ರ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಆದೇಶ ಹೊರಡಿಸಿದ್ದರು.

ಇನ್ನು ಸ್ಥಳದಲ್ಲಿ ಸದ್ಯಕ್ಕೆ ಶಾಂತಿಯುತ ವಾತಾವರಣ ನಿರ್ಮಾಣವಾಗಿದ್ದು, ಇಂದು(ಗುರುವಾರ) 10 ಗಂಟೆಗೆ, ಕೆಲ ಸಂಘಟನೆಗಳು ಈ ವಿಚಾರದ ಕುರಿತಾಗಿ ಸಭೆ ಕರೆದಿವೆ. ಶಿವಾನಂದ‌ ಜಿನ್​ನಲ್ಲಿ ಸಂಘಟನೆ ಕಾರ್ಯಕರ್ತರು ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪಕ್ಷದ ಮುಖಂಡರಾದ ನಾರಾಯಣಸಾ ಭಾಂಡೆ, ರಾಜು ನಾಯ್ಕರ್, ಬಸವರಾಜ ಯಂಕಂಚಿ ಸೇರಿದಂತೆ ಇತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಬಿಜೆಪಿ ಪಕ್ಷದ ಅಧಿಕಾರ ಇದ್ದಾಗ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಈ ಪ್ರದೇಶದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿತ್ತು. ಆದರೆ, ಇದು ಮರಾಠಾ ಸಮುದಾಯದ ಪ್ರಮುಖರಲ್ಲಿ ಭಿನ್ನಮತ ಮೂಡಿಸುವ ಜೊತೆಗೆ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಈಗ ಕಾಂಗ್ರೆಸ್ ಪಕ್ಷದ ಅಧಿಕಾರ ಹಾಗೂ ಶಾಸಕರು ಇರುವುದರಿಂದ ಪರಸ್ಪರ ಆರೋಪ, ಪತ್ರ್ಯಾರೋಪ ಜಿಲ್ಲೆಯಲ್ಲಿ ಮೂಡಿದೆ. ಇದರಿಂದ ಕಳೆದ ಎರಡು ದಿನ ಹಿಂದೆ ಶಿವಾಜಿ ಮೂರ್ತಿಯನ್ನು ರಾತ್ರಿ ಸಮಯದಲ್ಲಿ ಪ್ರತಿಷ್ಠಾನ ಮಾಡಲಾಗಿತ್ತು. ಇದನ್ನು ಪೊಲೀಸರು ತೆರವುಗೊಳಿಸಿದ ಹಿನ್ನೆಲೆ ಪ್ರತಿಭಟನೆ, ಮಾತಿನ ಚಕಮಕಿ ನಡೆದಿದೆ. ಸದ್ಯ ಪೊಲೀಸರ ಸಮ್ಮುಖದಲ್ಲಿ ಮೂರ್ತಿ ತೆರೆವುಗೊಳಿಸಿ, ಮುಖಂಡರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: ಮುಧೋಳ ಸರ್ಕಾರಿ ಆಸ್ಪತ್ರೆಗೆ ಸಚಿವ ತಿಮ್ಮಾಪೂರ ದಿಢೀರ್​ ಭೇಟಿ, ಅವ್ಯವಸ್ಥೆ ಕಂಡು ವೈದ್ಯರು, ಸಿಬ್ಬಂದಿಗೆ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.