ETV Bharat / state

ಸಚಿವ ಸತೀಶ್​ ಜಾರಕಿಹೊಳಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ: ಪ್ರಸನ್ನಾನಂದ ಸ್ವಾಮೀಜಿ

author img

By ETV Bharat Karnataka Team

Published : Nov 5, 2023, 10:55 PM IST

Updated : Nov 6, 2023, 6:17 AM IST

ದಲಿತರು ವೋಟ್​ ಬ್ಯಾಂಕ್​ ಅಷ್ಟೇ ಆಗಬೇಕಾ. ಅವಕಾಶಗಳು ಸಿಕ್ಕರೆ ಯಾಕೆ ದಲಿತರು ಮುಖ್ಯಮಂತ್ರಿಯಾಗಬಾರದು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.

Etv Bharatprasannananda-swamiji-reaction-on-satish-jarakiholi
Etv Bharatಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ನಾಡಿನ ದೂರೆಯಾಗುವ ಶಕ್ತಿ ಇದೆ: ಪ್ರಸನ್ನಾನಂದ ಸ್ವಾಮೀಜಿ

ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ

ಬಾಗಲಕೋಟೆ: "ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ. ಬರುವ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ" ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಬಾಗಲಕೋಟೆ ನವನಗರದ ಕಲಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದ ಸಾನಿಧ್ಯವಹಿಸಿ ಮಾತನಾಡಿದ ಅವರು, "ರಾಜ್ಯ ರಾಜಕೀಯದಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸೋಣ" ಎಂದು ಕರೆ ನೀಡಿದರು.

"ದಲಿತರು ವೋಟ್​ ಬ್ಯಾಂಕ್​ ಅಷ್ಟೇ ಆಗಬೇಕಾ?. ಚುನಾವಣೆ ಬಂದಾಗ ಈ ಸಮುದಾಯದ ಮತಗಳು ಬೇಕು, ಅಧಿಕಾರಕ್ಕೆ ಬಂದ ಮೇಲೆ ಈ ಸಮುದಾಯದ ಹಿತ ಬೇಡವೇ ನಿಮಗೆ. ಅವಕಾಶಗಳು ಸಿಕ್ಕರೆ ಯಾಕೆ ದಲಿತರು ಮುಖ್ಯಮಂತ್ರಿಯಾಗಬಾರದು. ಅದೇನು ಒಂದು ಜಾತಿಯ ಸ್ವತ್ತಾ?, ಅದನ್ನು ಗುತ್ತಿಗೆ ಹಿಡಿದುಕೊಂಡಿದ್ದಾರಾ?. ದಲಿತರು ಮುಖ್ಯಮಂತ್ರಿಯಾಗಲಿ ಎಂಬ ಔದರ್ಯ ಇಲ್ಲದಿದ್ದರೆ ಹೇಗೆ" ಎಂದು ಪ್ರಶ್ನಿಸಿದರು.

ಸಮಾವೇಶದ ಬಳಿಕ ಸಚಿವ ಸತೀಶ್​ ಜಾರಕಿಹೊಳಿ, "ನಿಮಗೆ ನಾಡಿನ ದೊರೆಯಾಗುವ ಶಕ್ತಿ ಇದೆ ಎಂದು ಸ್ವಾಮೀಜಿ ಹೇಳಿಕೆ ನೀಡಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ ಮತ್ತು ಸಮಯಕ್ಕಾಗಿ ಕಾಯಬೇಕು ಎಂದೂ ಸಹ ಹೇಳಿದ್ದಾರೆ. ನಮ್ಮ ಸಮುದಾಯಕ್ಕೆ ಮತ್ತು ನಮಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರಬಹುದು. ಆದರೆ ಪಕ್ಷ ದೊಡ್ಡದು, ಪಕ್ಷದ ತೀರ್ಮಾನ ಅಂತಿಮ" ಎಂದು ತಿಳಿಸಿದರು.

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಈಗಾಗಲೇ ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ನಾನೇ ಇರ್ತೀನಿ ಅಂತ ಹೇಳಿದ್ದಾರಲ್ಲ, ಮ್ಯಾಟರ್ ಕ್ಲೋಸ್​ ಆಗಿದೆ. ಆ ಸಂದರ್ಭ ಉದ್ಭವ ಆದಾಗ ನೋಡೋಣ, ಅವರು ಹೇಳಿದ್ದಾರೆ ಅಂದರೆ ಅದು ಕ್ಲೋಸ್​ ಆಗಿದೆ ಅಂತ ನನ್ನ ಭಾವನೆ. ನಾವು ಕಾದು ನೋಡಬೇಕು ಅಷ್ಟೇ ಈಗ" ಎಂದು ಹೇಳಿದರು. ದುಬೈ ಟೂರ್ ವಿಚಾರವಾಗಿ ಮಾತನಾಡಿ, "ಟೂರ್ ಯಾವುದು ಇಲ್ಲ. ಮಾಜಿ ಶಾಸಕರ ಜೊತೆ ಟೂರ್ ನೋಡೋಣ, ಅವರು ಯಾವಾಗ ಹೇಳ್ತಾರೆ ನೋಡೋಣ" ಎಂದರು.

ಮಹಾರಾಷ್ಟ್ರ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವವಾಗೋದಿಲ್ಲ: ಮಹಾರಾಷ್ಟ್ರ ಮಾದರಿಯಲ್ಲಿಯೇ ಮಹತ್ವದ ಬದಲಾವಣೆಯಾಗುತ್ತದೆ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ನಮ್ಮ ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ. ಮಹಾರಾಷ್ಟ್ರ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವವಾಗೋದಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮೂರು ಗುಂಪುಗಳಾಗಿವೆ, ಒಬ್ಬೊಬ್ಬರದು ಒಂದೊಂದು ಗುಂಪು : ಗೋವಿಂದ ಕಾರಜೋಳ

Last Updated : Nov 6, 2023, 6:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.