ETV Bharat / state

ಅದ್ಧೂರಿಯಾಗಿ ನಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

author img

By

Published : Mar 14, 2021, 11:22 AM IST

Beralingeshwara Temple Jatra Mahotsav
ಅದ್ಧೂರಿಯಾಗಿ ನಡೆದ ಬೀರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ

ಅದ್ಧೂರಿಯಾಗಿ ಬೀರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ನೆರವೇರಿತು. ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆ ದಿನದಂದು ನಡೆಯುವ ಈ ಜಾತ್ರೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಹಾಗೂ ಸುಡುವ ಪ್ರಸಾದದಲ್ಲಿ ಕೈ ಹಾಕಿ ಪೂಜಾರಿಗಳು ನೈವೇದ್ಯ ಮಾಡುವುದು ವಿಶೇಷ.

ಬಾಗಲಕೋಟೆ: ತಾಲೂಕಿನ ಗೋವಿಂದಕೊಪ್ಪ ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆ ದಿನದಂದು ನಡೆಯುವ ಈ ಜಾತ್ರೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಹಾಗೂ ಸುಡುವ ಪ್ರಸಾದದಲ್ಲಿ ಕೈ ಹಾಕಿ ಪೂಜಾರಿಗಳು ನೈವೇದ್ಯ ಮಾಡುವುದು ವಿಶೇಷವಾಗಿದೆ.

ಅದ್ಧೂರಿಯಾಗಿ ನಡೆದ ಬೀರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ

ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ, ಅಕ್ಕಪಕ್ಕದ ಗ್ರಾಮಗಳಿಗೆ ಎಲೆ ಅಡಕೆ ಮೂಲಕ ಆಹ್ವಾನ ನೀಡುತ್ತಾರೆ. ಈ ಹಿನ್ನೆಲೆ ಅಕ್ಕಪಕ್ಕದ ಗ್ರಾಮಸ್ಥರು, ತಮ್ಮ ಗ್ರಾಮದ ಪಲ್ಲಕ್ಕಿಯನ್ನು ತೆಗೆದುಕೊಂಡು ಬರುತ್ತಾರೆ. ಇಡೀ ಗ್ರಾಮದಲ್ಲಿ 20 ಪಲ್ಲಕ್ಕಿಗಳ ಮೂಲಕ ದೇವರುಗಳ ಮೆರವಣಿಗೆ ನಡೆಸುತ್ತಾರೆ. ಈ ಸಮಯದಲ್ಲಿ ಡೊಳ್ಳು ಬಾರಿಸುತ್ತಾ, ಭಂಡಾರ ಎಸೆಯುತ್ತಾ, ದೇವರ ನಾಮಸ್ಮರಣೆ ಮಾಡುತ್ತಾ ಮೆರವಣಿಗೆ ನಡೆಸುತ್ತಾರೆ.

ಗ್ರಾಮದಲ್ಲಿರುವ ಎಲ್ಲಾ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿ ಬಳಿಕ ಕೊನೆಗೆ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ಸಮಯದಲ್ಲಿ ಐದು ಕ್ವಿಂಟಲ್​ನಷ್ಟು, ಗೋಧಿಯ ಸಜ್ಜಕದ ಪ್ರಸಾದವನ್ನ ತಯಾರಿಸಿ ಇಟ್ಟಿರುತ್ತಾರೆ. ಬಿಸಿಬಿಸಿ ಇರುವ ಈ ಪ್ರಸಾದಕ್ಕೆ ಪಲ್ಲಕ್ಕಿ ಹೊತ್ತಿರುವ ಪೂಜಾರಿಗಳು ಕೈ ಹಾಕುತ್ತಾರೆ. ಸ್ವಲ್ಪ ಪ್ರಸಾದ ತೆಗೆದುಕೊಳ್ಳುತ್ತಾರೆ. ಅದನ್ನೇ ದೇವರಿಗೆ ನೈವೇದ್ಯ ಮಾಡುತ್ತಾರೆ. ನೈವೇದ್ಯ, ಪೂಜೆ, ಪುನಸ್ಕಾರ ಬಳಿಕ ಸಾಮೂಹಿಕವಾಗಿ ಪ್ರಸಾದ ಸೇವನೆ ಜರುಗುತ್ತದೆ.

ನೂರಾರು ವರ್ಷಗಳ ಕಾಲ ಈ ಸಂಪ್ರದಾಯಿಕ ಪದ್ದತಿಯನ್ನು ಆಚರಿಸಿಕೊಂಡು ಬರುವ ಮೂಲಕ ಹಾಲಮತ ಸಮಾಜದವರು ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.