ETV Bharat / sports

ಒಲಂಪಿಕ್​ ಪದಕಗಳನ್ನು ಗಂಗೆಗೆ ಎಸೆಯುತ್ತೇವೆ.. ಇಂಡಿಯಾ ಗೇಟ್​ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ: ಕುಸ್ತಿಪಟುಗಳ ಎಚ್ಚರಿಕೆ

author img

By

Published : May 30, 2023, 3:55 PM IST

ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿ ಪ್ರತಿಭಟನೆ ಮಾಡುತ್ತಿರುವ ಕುಸ್ತಿಪಟುಗಳು ಒಲಿಂಪಿಕ್​ನಲ್ಲಿ ಗೆದ್ದ ಪದಕವನ್ನು ಗಂಗೆಯಲ್ಲಿ ಎಸೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

Protesting wrestlers to throw medals in Ganga: Punia
ಗಂಗೆ ಒಲಂಪಿಕ್​ ಪದಕ ಎಸೆಯುತ್ತೇವೆ, ಇಂಡಿಯಾ ಗೇಟ್​ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ: ಕುಸ್ತಿಪಟುಗಳ ಎಚ್ಚರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಹೊಸ ತಿರುವು ಪಡೆದುಕೊಂಡಿದ್ದು, ಭಾರತದ ಸ್ಟಾರ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಮಂಗಳವಾರ ಸಂಜೆ ಹರಿದ್ವಾರದ ಗಂಗಾ ನದಿಯಲ್ಲಿ ಪದಕಗಳನ್ನು ಎಸೆಯುವುದಾಗಿ ಘೋಷಿಸಿದ್ದಾರೆ. ಟ್ವಿಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, 28 ರಂದು ಪೊಲೀಸರು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಂಜೆ 6 ಗಂಟೆಗೆ ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾನದಿಯಲ್ಲಿ ಪದಕಗಳನ್ನು ಬಿಡುವುದಾಗಿ ಪ್ರತಿಭಟನಾನಿರತ ಕುಸ್ತಿಪಟುಗಳು ತಿಳಿಸಿದ್ದಾರೆ. ಪದಕಗಳನ್ನು ಎಸೆದ ಬಳಿಕ ಇಂಡಿಯಾ ಗೇಟ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಕುಸ್ತಿಪಟುಗಳು ತಮ್ಮ ಪೋಸ್ಟ್‌ನಲ್ಲಿ,"ಮೇ 28 ರಂದು ನಡೆದ ಎಲ್ಲವನ್ನೂ ನೀವು ನೋಡಿದ್ದೀರಿ, ಪೊಲೀಸರು ನಮ್ಮನ್ನು ಹೇಗೆ ನಡೆಸಿಕೊಂಡರು ಮತ್ತು ಅವರು ನಮ್ಮನ್ನು ಬಂಧಿಸಿದ ರೀತಿಯನ್ನು ನೀವು ನೋಡಿದ್ದೀರಿ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು, ನಮ್ಮ ಸ್ಥಳವನ್ನು ಕಿತ್ತುಕೊಳ್ಳಲಾಗಿದೆ ಮತ್ತು ಮರುದಿನ ನಮ್ಮ ಮೇಲೆ ಗಂಭೀರ ಪ್ರಕರಣಗಳ ಎಫ್‌ಐಆರ್ ದಾಖಲಿಸಲಾಗಿದೆ.

ತಮಗಾದ ಲೈಂಗಿಕ ಕಿರುಕುಳಕ್ಕೆ ನ್ಯಾಯ ಕೇಳುವ ಮೂಲಕ ಕುಸ್ತಿಪಟುಗಳು ಏನಾದರೂ ಅಪರಾಧ ಮಾಡಿದ್ದಾರೆಯೇ? ಪೊಲೀಸರು ಮತ್ತು ವ್ಯವಸ್ಥೆಯು ನಮ್ಮನ್ನು ಅಪರಾಧಿಗಳಂತೆ ನಡೆಸುತ್ತಿದೆ"ಎಂದು ಬರೆದುಕೊಂಡಿದ್ದಾರೆ.

ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವಾರು ಕುಸ್ತಿಪಟುಗಳು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮತ್ತು ಅವರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

"ಪದಕಗಳನ್ನು ಹಿಂದಿರುಗಿಸಬೇಕೆಂದು ಯೋಚಿಸುತ್ತಿರುವ ನಮ್ಮ ಸಾವಿಗೆ ಸಮಾನವಾದದ್ದು, ಆದರೆ, ನಮ್ಮ ಆತ್ಮಗೌರವಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇನ್ನು ಮುಂದೆ ನಮಗೆ ಈ ಪದಕಗಳು ಅಗತ್ಯವಿಲ್ಲ, ಶೋಷಣೆಯ ವಿರುದ್ಧ ಮಾತನಾಡಿದರೆ ನಮ್ಮನ್ನು ಜೈಲಿಗೆ ಹಾಕಲು ಅವರು ಸಿದ್ಧರಾಗಿದ್ದಾರೆ. ಇದಕ್ಕಾಗಿ ನಾವು ಈ ಪದಕಗಳನ್ನು ಗಂಗೆಯಲ್ಲಿ ಬಿಡುತ್ತೇವೆ. ನಾವು ಕಠಿಣ ಪರಿಶ್ರಮದಿಂದ ಗಳಿಸಿದ ನಮ್ಮ ಪದಕಗಳು ಗಂಗಾ ನದಿಯಷ್ಟೇ ಪವಿತ್ರವಾಗಿವೆ. ಈ ಪದಕಗಳು ಇಡೀ ದೇಶಕ್ಕೆ ಪವಿತ್ರವಾಗಿವೆ ಮತ್ತು ಪವಿತ್ರ ಪದಕವನ್ನು ಇಡಲು ಸರಿಯಾದ ಸ್ಥಳವು ಪವಿತ್ರ ಗಂಗೆ. ಪದಕವು ನಮ್ಮ ಜೀವನ, ನಮ್ಮ ಆತ್ಮ. ಹೀಗಾಗಿ ಪದಕವನ್ನು ಬಿಟ್ಟ ನಂತರ ನಾವು ಸಾಯುವವರೆಗೂ ಇಂಡಿಯಾ ಗೇಟ್‌ನಲ್ಲಿ ಉಪವಾಸ ಕುಳಿತುಕೊಳ್ಳುತ್ತೇವೆ" ಎಂದು ಕುಸ್ತಿಪಟುಗಳು ಬರೆದುಕೊಂಡಿದ್ದಾರೆ.

ಭಾನುವಾರದ ಪ್ರತಿಭಟನೆ: ಭಾರತದ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಮತ್ತು ಅವರ ಬೆಂಬಲಿಗರು ನೂತನ ಸಂಸತ್​ ಭವನದ ಕಡೆ ಮೆರವಣಿಗೆ ಮಾಡಲು ಹೊರಟಾಗ ಭದ್ರತೆಯ ಉಲ್ಲಂಘನೆ ಎಂದು ಎಲ್ಲರನ್ನೂ ಬಂಧಿಸಿದ್ದರು. ಅಲ್ಲದೇ ಜಂತರ್​ ಮಂತರ್​ನಲ್ಲಿನ ಪ್ರತಿಭಟನಾ ಸ್ಥಳವನ್ನೂ ಪೊಲೀಸರು ತೆರವುಗೊಳಿಸಿದರು. ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147, 149, 186, 188, 332, 353, ಪಿಡಿಪಿಪಿ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್​ ಸ್ಪಷ್ಟನೆ: "ಕಳೆದ 38 ದಿನಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಿಗೆ ನಾವು ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆ. ಆದರೆ, ನಿನ್ನೆ ಅವರು ಎಲ್ಲಾ ವಿನಂತಿಗಳನ್ನು ಮಾಡಿದರೂ ಕಾನೂನು ಉಲ್ಲಂಘಿಸಿದ್ದಾರೆ. ಅವರನ್ನು ಸಂಜೆಯೊಳಗೆ ಬಂಧಿಸಿ ಬಿಡುಗಡೆ ಮಾಡಲಾಗಿದೆ. ಭಾನುವಾರ ಪ್ರತಿಭಟನಾಕಾರರಿಗೆ ಎಲ್ಲಾ ಮನವಿಗಳನ್ನು ಮಾಡಿದರೂ ಕಾನೂನು ಉಲ್ಲಂಘಿಸಿದ್ದಾರೆ. ಆದ್ದರಿಂದ, ನಡೆಯುತ್ತಿರುವ ಧರಣಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಗಿದೆ. ಕುಸ್ತಿಪಟುಗಳು ಮುಂದೆ ಧರಣಿ ಪ್ರತಿಭಟನೆಗೆ ಅರ್ಜಿ ಸಲ್ಲಿಸಿದರೆ, ಅವರಿಗೆ ಅನುಮತಿ ನೀಡಲಾಗುವುದು. ಆದರೆ ಜಂತರ್ ಮಂತರ್ ಹೊರತುಪಡಿಸಿ " ಎಂದು ಉಪ ಪೊಲೀಸ್ ಆಯುಕ್ತ ಸುಮನ್ ನಲ್ವಾ ತಿಳಿಸಿದ್ದಾರೆ.

ಇದನ್ನೂ ಓದಿ: ಕುಸ್ತಿಪಟುಗಳ ಬಂಧನ ದೃಶ್ಯ ಕಂಡ ನನಗೆ ನಿನ್ನೆ ರಾತ್ರಿ ನಿದ್ರೆ ಬಂದಿಲ್ಲ: ಅಭಿನವ್ ಬಿಂದ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.