ETV Bharat / sports

ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಸೆಮೀಸ್‌, ರಿಷಭ್​​ ಪಂತ್ OR ದಿನೇಶ್ ಕಾರ್ತಿಕ್?

author img

By

Published : Nov 9, 2022, 10:05 AM IST

ದಿನೇಶ್​ ಕಾರ್ತಿಕ್ ಭಾರತ ತಂಡದ ಅಂತಿಮ ಓವರ್​ಗಳ ಸ್ಪೆಷಲಿಸ್ಟ್ ಬ್ಯಾಟರ್. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರ ಬ್ಯಾಟ್​ ನಿರೀಕ್ಷಿತ ಮಟ್ಟದಲ್ಲಿ ಝಳಪಿಸಲಿಲ್ಲ. ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಸಿದ ರಿಷಭ್​ ಪಂತ್​ ಕೂಡ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲರಾದರು. ಈಗ ಎಲ್ಲರ ಮುಂದಿರುವ ಪ್ರಶ್ನೆ ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತದ ವಿಕೆಟ್​ ಕೀಪರ್​​ ಬ್ಯಾಟರ್​ ಯಾರು ಎಂಬುದಾಗಿದೆ.

T20 World Cup: Dinesh Karthik or Rishabh Pant against England in semis?
ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಸೆಮೀಸ್‌.. ರಿಷಭ್​​ ಪಂತ್ OR ದಿನೇಶ್ ಕಾರ್ತಿಕ್?

ಅಡಿಲೇಡ್: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡದ ಚಿತ್ತ ಇಂಗ್ಲೆಂಡ್​ ವಿರುದ್ಧ ನಾಳೆ ನಡೆಯಲಿರುವ ಸೆಮಿಫೈನಲ್​ ಪಂದ್ಯದ ಮೇಲಿದೆ. ಈಗಾಗಲೇ ತಂಡದ ಆಟಗಾರರು ಆಡಿಲೇಡ್​ ತಲುಪಿದ್ದು, ಕಠಿಣ ತಾಲೀಮಿನಲ್ಲಿ ತೊಡಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಹಣಾಹಣಿ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳನ್ನೂ ಜಯಿಸಿ ನಾಕೌಟ್​ ಹಂತ ತಲುಪಿರುವ ಟೀಂ ಇಂಡಿಯಾಗೆ ತಂಡದ ವಿಕೆಟ್​ ಕೀಪರ್​​​ ಬ್ಯಾಟರ್​ಗಳ ಪ್ರದರ್ಶನ ತಲೆನೋವಾಗಿ ಪರಿಣಮಿಸಿದೆ. ಸೆಮೀಸ್​ನಲ್ಲಿ ಗ್ಲೌಸ್​ ತೊಟ್ಟು ಯಾರು ಮೈದಾನಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ವಿಶ್ವಕಪ್​ನಲ್ಲಿ ಭಾರತ ವಿಕೆಟ್​ ಕೀಪರ್​ಗಳ ಬ್ಯಾಟ್​ನಿಂದ ಯಾವುದೇ ಉತ್ತಮ ಇನ್ನಿಂಗ್ಸ್ ಮೂಡಿಬಂದಿಲ್ಲ. ನಾಲ್ಕು ಪಂದ್ಯಗಳಲ್ಲಿ ಆಡಿದ ಅನುಭವಿ ದಿನೇಶ್​ ಕಾರ್ತಿಕ್​ ಬ್ಯಾಟ್​ ಮಂಕಾಗಿತ್ತು. ಬಳಿಕ 5ನೇ ಪಂದ್ಯದಲ್ಲಿ ಅವಕಾಶ ಪಡೆದ ರಿಷಭ್​ ಪಂತ್​ ಕೂಡ ಕೇವಲ ಮೂರು ರನ್​ ಗಳಿಸಿ ನಿರಾಸೆ ಮೂಡಿಸಿದ್ದರು.

ಟೂರ್ನಿಗೂ ಮುನ್ನ ಕಾರ್ತಿಕ್​ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಕೀಪಿಂಗ್​ನಲ್ಲಿ ಪಂತ್​ಗಿಂತ ಕಾರ್ತಿಕ್​ ಬಹಳ ಅನುಭವಿ. ಬ್ಯಾಟಿಂಗ್​ನಲ್ಲಿ ಕೊನೆಯ 4-5 ಓವರ್​ಗಳಲ್ಲಿ ಕ್ರೀಸ್​ಗೆ ಬಂದರೆ ಅದ್ಭುತ ಹೊಡೆತಗಳ ಮೂಲಕ ರನ್​ ಬಾರಿಸಬಲ್ಲರು. ತಂಡದ ಫಿನಿಶರ್​ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು.

ಆದರೆ ವಿಶ್ವಕಪ್​ನಲ್ಲಿ ಆಗಿದ್ದೇ ಬೇರೆ. ಕಾರ್ತಿಕ್​ ಬ್ಯಾಟ್​ ನಿರೀಕ್ಷಿತ ಮಟ್ಟದಲ್ಲಿ ಸಿಡಿಯಲಿಲ್ಲ. ಪಾಕ್​ ವಿರುದ್ದ ಎಂಸಿಜಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 1 ರನ್​, ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ಮತ್ತು ಅಡಿಲೇಡ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 7 ರನ್​ಗಳೊಂದಿಗೆ ಕಾರ್ತಿಕ್​ ಪೆವಿಲಿಯನ್​ ಸೇರಿದ್ದರು. ಹೆಚ್ಚಿನ ಸ್ಟ್ರೈಕ್ ರೇಟ್‌ಗಳಲ್ಲಿ ಸ್ಕೋರ್ ಮಾಡಲೂ ಆಗದೆ, ಸ್ಥಿರತೆಯನ್ನೂ ಕಾಪಾಡಿಕೊಳ್ಳುವಲ್ಲಿ ಕಾರ್ತಿಕ್​ ಎಡವಿದರು.

ಈ ನಡುವೆ ಟೂರ್ನಿಯಲ್ಲಿ ಭಾರತವಾಡಿದ 5ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸ್ಥಾನ ಪಡೆದ ರಿಷಭ್​ ಪಂತ್​ ಕೂಡ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾದರು. ಚುಟುಕು ಕ್ರಿಕೆಟ್​​ನಲ್ಲಿ ಲೆಕ್ಕಾಚಾರಗಳು ಕೆಲ ನಿಮಿಷಗಳಲ್ಲೇ ತಲೆಕೆಳಗಾಗುವುದು ಸಾಮಾನ್ಯ. ಕೆಲವೊಮ್ಮೆ ಅದ್ಭುತ ಕ್ಯಾಚ್​, ರನೌಟ್​ಗಳೂ ಕೂಡ ಬ್ಯಾಟರ್​ಗಳ ಪ್ರದರ್ಶನಕ್ಕೆ ಎರವಾಗುತ್ತವೆ. ಜಿಂಬಾಬ್ವೆ ವಿರುದ್ಧ ಬಲವಾದ ಹೊಡೆತಕ್ಕೆ ಮುಂದಾಗಿದ್ದ ಪಂತ್,​ ರಿಯಾನ್ ಬರ್ಲ್ ಡೈವಿಂಗ್ ಕ್ಯಾಚ್​ಗೆ ಬಲಿಯಾಗಿದ್ದರು. ಕಾರ್ತಿಕ್​ ಕೂಡ ಒಮ್ಮೆ ರನೌಟ್​ ಬಲೆಗೆ ಬಿದ್ದಿದ್ದರು.

ಇನ್ನೊಂದೆಡೆ ಆಡಿಲೇಡ್​ನಲ್ಲಿ ಹೆಚ್ಚು ವಿಸ್ತಾರವಿಲ್ಲದ ಬೌಂಡರಿ ಗೆರೆಗಳನ್ನು ಪರಿಗಣಿಸಿದರೆ ಪಂತ್​ಗೆ​ ಮಣೆಹಾಕುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಎಡಗೈ ಬ್ಯಾಟರ್​ ಆಗಿರುವುದರಿಂದ ಬ್ಯಾಟಿಂಗ್​ ಕ್ರಮಾಂಕದಲ್ಲಿ ಸಮತೋಲನ ಸಿಗಲಿದೆ. ಆಂಗ್ಲರ ಪ್ರಮುಖ ಲೆಗ್​ ಸ್ಪಿನ್ನರ್​ ಆದಿಲ್​ ರಶೀದ್​ ವಿರುದ್ಧ ಪಂತ್​ ಉತ್ತಮ ಆಯ್ಕೆಯಾಗಬಹುದು.

ಜಿಂಬಾಬ್ವೆ ವಿರುದ್ಧದ ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೋಚ್ ರಾಹುಲ್ ದ್ರಾವಿಡ್, "ನಾನು ಪಂತ್​ ಔಟ್​ ಆದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅವರ ಹೊಡೆತದ ಆಯ್ಕೆ ಸರಿಯಾಗಿತ್ತು. ಎಡಗೈ ಸ್ಪಿನ್ನರ್ ಎದುರಿಸುವುದೇ ಅಲ್ಲಿನ ಉದ್ದೇಶವಾಗಿತ್ತು. ಆದರೆ ಕೆಲವೊಮ್ಮೆ ಫಲಿತಾಂಶ ಬೇರೆಯೇ ಆಗಿರುತ್ತದೆ. ಯಾವುದೇ ಆಟಗಾರನ ಪ್ರದರ್ಶನವನ್ನು ಕೇವಲ ಒಂದು ಇನ್ನಿಂಗ್ಸ್​ನಿಂದ ನಿರ್ಧರಿಸಲಾಗದು" ಎಂದಿದ್ದರು.

"ಕೆಲವೊಮ್ಮೆ ಅಂದಿನ ಅಗತ್ಯಕ್ಕೆ ತಕ್ಕಂತೆ ತಂಡದಲ್ಲಿ ಬದಲಾವಣೆ ಮಾಡಲಾಗುತ್ತದೆ. ತಂಡದಿಂದ ಕೈಬಿಟ್ಟ ತಕ್ಷಣ ನಾವು ರಿಷಭ್​ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇವೆ ಎಂದರ್ಥವಲ್ಲ. ನಮ್ಮ ಎಲ್ಲ 15 ಮಂದಿ ಆಟಗಾರರ ಮೇಲೆ ವಿಶ್ವಾಸವಿದೆ. ಯಾರಿಗೆ ಯಾವಾಗ ಬೇಕಾದರೂ ಅವಕಾಶ ಸಿಗಬಹುದು" ಎಂದು ದ್ರಾವಿಡ್​ ಪ್ರತಿಕ್ರಿಯಿಸಿದ್ದರು.

ಒಟ್ಟಿನಲ್ಲಿ ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಯಾರೆಲ್ಲ 11ರ ಬಳಗದಲ್ಲಿ ಏನೆಲ್ಲ ಬದಲಾವಣೆ ಆಗಲಿದೆಯಾ? ಅನುಭವಿ ದಿನೇಶ್​​ ಕಾರ್ತಿಕ್​ ಹಾಗೂ ರಿಷಭ್​ ಪಂತ್​ ಅವರಲ್ಲಿ ಯಾರು ಗ್ಲೌಸ್​ ತೊಡಲಿದ್ದಾರೆ ಎಂಬುದು ಪಂದ್ಯಕ್ಕೂ ಕೆಲಹೊತ್ತಿನ ಮುನ್ನವೇ ಬಹಿರಂಗವಾಗಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಎಬಿಡಿ ಪ್ರಕಾರ, ಫೈನಲ್‌ಗೆ ಈ ಎರಡು ಟೀಂ, ಗೆಲ್ಲೋದು ಮಾತ್ರ ಇವರೇ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.