ETV Bharat / sports

ಸರಣಿ ಸಮಬಲಕ್ಕೆ ಸೂರ್ಯ ಚಿಂತನೆ: ಬೌಲಿಂಗ್​​ ಸುಧಾರಣೆಯೇ ಗೆಲುವಿನ ತಂತ್ರ..!

author img

By ETV Bharat Karnataka Team

Published : Dec 13, 2023, 9:59 PM IST

South Africa vs India, 3rd T20I Preview
South Africa vs India, 3rd T20I Preview

RSA vs IND 3rd T20I: ಜೋಹಾನ್ಸ್‌ಬರ್ಗ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ನಡೆಯಲಿದ್ದು, ಸರಣಿ ಸಮಬಲ ಮಾಡಿಕೊಳ್ಳಲು ಸೂರ್ಯ ನಾಯಕತ್ವದ ಪಡೆ ಗೆಲ್ಲಲೇಬೇಕಿದೆ.

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಟಿ20 ವಿಶ್ವಕಪ್​ನಲ್ಲಿ ಭಾರತ ಗೆಲುವು ಸಾಧಿಸಬೇಕಾದಲ್ಲಿ ನಿಯಂತ್ರಿತ ಬೌಲಿಂಗ್​ ಪ್ರದರ್ಶನ ಅಗತ್ಯ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಬೌಲರ್​ಗಳು ದಾರಾಳವಾಗಿ ರನ್​ ಬಿಟ್ಟುಕೊಟ್ಟದ್ದು ತಂಡದ ಸೋಲಿನ ಪ್ರಮುಖ ಕಾರಣವಾಗಿದೆ. ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾ ಈ ತಪ್ಪನ್ನು ಸರಿ ಪಡಿಸಿಕೊಳ್ಳಲು ಹೊಸ ತಂತ್ರವನ್ನು ಹೆಣೆಯಬೇಕಿದೆ.

ಭರವಸೆಯ ಯುವ ಬೌಲರ್​ಗಳಾದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಮತ್ತು ಬಲಗೈ ವೇಗಿ ಮುಖೇಶ್ ಕುಮಾರ್ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಅವರಿಗೆ ಪ್ರತಿ ಓವರ್‌ಗೆ 15.50 ಮತ್ತು 11.33ರ ಸರಾಸರಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. ಒಂದು ದಿನದ ಅಂತರದಲ್ಲಿ ಈ ರನ್​ ಹರಿವಿನ ಕಡಿವಾಣದ ತಂತ್ರವನ್ನು ಮುಖ್ಯ ಕೋಚ್​ ದ್ರಾವಿಡ್​ ಮತ್ತು ನಾಯಕ ಸೂರ್ಯಕುಮಾರ್​ ಯಾದವ್​ ಕಂಡು ಹಿಡಿಯಬೇಕಿದೆ. ಮಳೆ ಮತ್ತು ಇಬ್ಬನಿಯ ಪರಿಣಾಮ ಭಾರತೀಯ ಬೌಲಿಂಗ್​ಗೆ ಮೈದಾನ ಸಹಕಾರಿ ಆಗಿರಲಿಲ್ಲ ಎಂಬುದು ಕಾರಣ ಆಗಿರಬಹುದು, ಆದರೆ ಬೌಲರ್​ಗಳು ಲಯ ಕಂಡುಕೊಳ್ಳುವಲ್ಲಿ ಎಡವಿದ್ದಾರೆ.

ಆಸ್ಟ್ರೇಲಿಯಾದ ವಿರುದ್ಧ ಭಾರತ ಸರಣಿಯನ್ನು 4-1 ರಿಂದ ಗೆದ್ದುಕೊಂಡಿತಾದರೂ, ತವರಿನ ಪಿಚ್​ನ ಸಹಾಯದ ನಡುವೆಯೂ ಬೌಲಿಂಗ್​ನಲ್ಲಿ ಹಲವಾರು ಎಡವಟ್ಟುಗಳನ್ನು ಮಾಡಿಕೊಂಡಿತ್ತು. ವಿಶ್ವಕಪ್​ಗೂ ಮುನ್ನ ಅನುಭವಿ ಜಸ್ಪ್ರೀತ್​ ಬುಮ್ರಾ ಅವರ ಪರ್ಯಾಯವಾಗಿ ಅರ್ಶದೀಪ್ ಮತ್ತು ಮುಖೇಶ್ ಅವರನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಆದರೆ ನಿರೀಕ್ಷಿತ ಯಶಸ್ಸು ಈ ಇಬ್ಬರು ಬೌಲರ್​ಗಳಿಂದ ಬರುತ್ತಿಲ್ಲ.

ಸ್ಪಿನ್​ ಬೌಲಿಂಗ್​​ ವಿಭಾಗವೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಒಂದು ವರ್ಷ ಮತ್ತು ನಾಲ್ಕು ತಿಂಗಳ ವಿರಾಮದ ನಂತರ ಟಿ20I ಆಡಿದ ರವೀಂದ್ರ ಜಡೇಜಾ ಕೂಡ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಪ್ರಭಾವಶಾಲಿ ಆಗಿರಲಿಲ್ಲ. ಭಾರತದ ಉಪನಾಯಕ ಜಡೇಜಾ ಅವರು ಮೂರನೇ ಪಂದ್ಯಕ್ಕೆ ಹೊರಗುಳಿಯುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ರವಿ ಬಿಷ್ಣೋಯ್​ಗೆ ಅವಕಾಶ ನಿರೀಕ್ಷೆ ಇದೆ.

ಬ್ಯಾಟಿಂಗ್​​ನಲ್ಲಿ ರಿಂಕು - ಸೂರ್ಯ ಶೈನ್​: ವಿಶ್ವಕಪ್​​ ವೇಳೆಗೆ ಭಾರತ ತಂಡಕ್ಕೆ ಒಬ್ಬ ಒಳ್ಳೆಯ ಫಿನಿಶರ್ ಆಗಿ ರಿಂಕು ಸಿಂಗ್​ ಸಿಕ್ಕಿದ್ದಾರೆ ಎಂದರೆ ತಪ್ಪಾಗದು. ಎರಡನೇ ಟಿ20 ಅವರ ಪ್ರದರ್ಶನದ ನಂತರ ವಿಶ್ವಕಪ್​ ತಂಡದಲ್ಲಿ ಅವರ ಸ್ಥಾನ ಪಕ್ಕಾ ಆಗಿದೆ ಎಂದೇ ಹೇಳಬಹುದು. 3 ವಿಕೆಟ್​ ಪತನವಾಗಿದ್ದಾಗ ನಾಯಕನ ಜೊತೆಗೂಡಿ 70 ರನ್​​ಗಳ ಪಾಲುದಾರಿಕೆ ಮತ್ತು ಅಜೇಯ 68 ರನ್​ ಎಲ್ಲರ ಗಮನ ಸೆಳೆದಿದೆ.

ನಾಯಕ ಸೂರ್ಯಕುಮಾರ್ ಯಾದವ್​ ತಂಡ ಆರಂಭಿಕ ಎರಡು ವಿಕೆಟ್​ ಪತನದ ನಂತರ ವಿಕೆಟ್​ ಕಾಯ್ದು ಬ್ಯಾಟಿಂಗ್​ ಮಾಡಿದರು. 3ನೇ ಸ್ಥಾನದಲ್ಲಿ ಆಡಿದ ತಿಲಕ್​ ವರ್ಮಾ ಸಹ ಕೊಡುಗೆ ನೀಡುವಲ್ಲಿ ವಿಫಲರಾಗಿಲ್ಲ. ಆದರೆ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್​ ಮತ್ತು ಶುಭಮನ್​ ಗಿಲ್​ ಶೂನ್ಯಕ್ಕೆ ಔಟ್​ ಆಗಿ ನಿರಾಸೆ ಮೂಡಿಸಿದರು. ಈ ಪಂದ್ಯದಲ್ಲಿ ಆರಂಭಿಕರಿಂದ ಬ್ಯಾಟಿಂಗ್​ ನಿರೀಕ್ಷೆ ಇದೆ.

ಭಾರತದ ಬೌಲಿಂಗ್​ ಸುಧಾರಿಸಿದಲ್ಲಿ ಮೂರನೇ ಪಂದ್ಯದಲ್ಲಿ ಹರಿಣಿಗಳನ್ನು ಮಣಿಸಿ ಸರಣಿ ಸಮಬಲ ಸಾಧಿಸಬಹುದು. ಈ ಟಿ20 ಸರಣಿ ಮುಗಿದ ನಂತರ ಭಾರತ ತವರಿನಲ್ಲಿ 3 ಟಿ20 ಪಂದ್ಯಗಳನ್ನು ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ. ಅದನ್ನು ಬಿಟ್ಟರೆ ಐಪಿಎಲ್​ನಲ್ಲೇ ಆಟಗಾರರು ವಿಶ್ವಕಪ್​​ಗೆ ತಯಾರಿ ನಡೆಸಿಕೊಳ್ಳಬೇಕಿದೆ.

ಇದನ್ನೂ ಓದಿ: ಟೆಸ್ಟ್​ ತಂಡದಲ್ಲಿ ಅವಕಾಶ ಕಳೆದುಕೊಂಡ ಪೂಜಾರ: 2024ರ ಕೌಂಟಿಯಲ್ಲಿ ಆಡಲು ಸಹಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.