ETV Bharat / sports

ಇಂದು ದ.ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯ​​: ಉತ್ತಮ ಆರಂಭದ ನಿರೀಕ್ಷೆಯಲ್ಲಿ ಭಾರತ

author img

By ETV Bharat Karnataka Team

Published : Dec 20, 2023, 9:21 PM IST

Updated : Dec 21, 2023, 8:32 AM IST

South Africa vs India, 3rd ODI Preview
South Africa vs India, 3rd ODI Preview

RSA vs IND 3rd ODI: 2018ರ ನಂತರ ಸರಣಿ ಗೆಲ್ಲಲು ಮತ್ತು 2022ರ ಕ್ಲೀನ್​ ಸ್ವೀಪ್​ನ ಸೇಡು ತೀರಿಸಿಕೊಳ್ಳಲು ದಕ್ಷಿಣ ಆಫ್ರಿಕಾದ ವಿರುದ್ಧದ ಮೂರನೇ ಪಂದ್ಯವನ್ನು ಟೀಮ್​ ಇಂಡಿಯಾ ಜಯಿಸಬೇಕಿದೆ.

ಪರ್ಲ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ವಿರುದ್ಧದ ಏಕದಿನ ಸರಣಿ ಸಮಬಲವಾಗಿದೆ. ಗುರುವಾರ ನಡೆಯಲಿರುವ ಮೂರನೇ ಪಂದ್ಯವು ಪ್ರಶಸ್ತಿ ಗೆಲುವಿಗೆ ಪ್ರಮುಖ​ ಹಣಾಹಣಿಯಾಗಿದೆ. 2018ರ ನಂತರ ಹರಿಣಗಳ ನಾಡಿನಲ್ಲಿ ಸರಣಿ ಗೆಲ್ಲಲು ಮತ್ತು 2022ರ ಕ್ಲೀನ್​ ಸ್ವೀಪ್​ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ ರಾಹುಲ್​ ಪಡೆ.

ಮೂರನೇ ಪಂದ್ಯದಲ್ಲಿ ಯಶಸ್ಸು ಸಾಧಿಸಲು ಟೀಮ್​ ಇಂಡಿಯಾ ಉತ್ತಮ ಆರಂಭ ಪಡೆಯುವುದು ಅಗತ್ಯ. ಮೊದಲ ಪಂದ್ಯದಲ್ಲಿ ಭಾರತ ಜಯ ದಾಖಲಿಸಿತಾದರೂ ಉತ್ತಮ ಆರಂಭ ಬರಲಿಲ್ಲ. ಎರಡನೇ ಪಂದ್ಯದಲ್ಲೂ ಅದೇ ಮರುಕಳಿಸಿತು. ಮೊದಲ ವಿಕೆಟ್​​ಗೆ ದೊಡ್ಡ ಜೊತೆಯಾಟ ಮೂಡಿಬರದ ಕಾರಣ ಬೃಹತ್​ ಮೊತ್ತ ಕಲೆಹಾಕುವಲ್ಲಿ ತಂಡ ಎಡವುತ್ತಿದೆ.

ಗಾಯಕ್ವಾಡ್​ ವೈಫಲ್ಯ: ಆರಂಭಿಕ ಆಟಗಾರ ರುತುರಾಜ್​ ಗಾಯಕ್ವಾಡ್​ ರನ್​ ಗಳಿಸಲು ಪರದಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 5 ರನ್​ಗೆ​ ವಿಕೆಟ್​ ಕೊಟ್ಟರೆ, ಎರಡನೇ ಪಂದ್ಯದಲ್ಲಿ 4 ರನ್​ಗೆ ಔಟ್​ ಆದರು. ಮೊದಲ ಪಂದ್ಯದಲ್ಲಿ ಭಾರತ 23 ರನ್​ನ ಮೊದಲ ವಿಕೆಟ್​ ಜೊತೆಯಾಟ ಪಡೆದರೆ, ಎರಡನೇ ಪಂದ್ಯದಲ್ಲಿ 4 ರನ್​ ಜೊತೆಯಾಟ ಮಾತ್ರ ಕಂಡಿತು. ಗಾಯಕ್ವಾಡ್​ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಕಾಡುತ್ತಿದೆ.

ಪಾಟಿದಾರ್ ಪಾದಾರ್ಪಣೆ?: ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಪಾದಾರ್ಪಣೆ ಮಾಡಿದ ತಿಲಕ್​ ವರ್ಮಾ ದಕ್ಷಿಣ ಆಫ್ರಿಕಾದಲ್ಲಿ ಸಹ ಕ್ಲಿಕ್​ ಆಗಿಲ್ಲ. ಹೀಗಾಗಿ ಗಾಯಕ್ವಾಡ್ ಮತ್ತು ತಿಲಕ್​ ವರ್ಮಾಗೆ ನಾಳಿನ ಪಂದ್ಯಕ್ಕೆ ಕೊಕ್​ ಸಿಗಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ತಂಡಕ್ಕೆ ಈ ಹಿಂದೆ ಆಯ್ಕೆಯಾದರೂ ಪಾದಾರ್ಪಣೆ ಅವಕಾಶದಿಂದ ವಂಚಿತರಾಗಿದ್ದ ರಜತ್​ ಪಾಟಿದಾರ್​ ನಾಳಿನ ಪಂದ್ಯದಲ್ಲಿ ಚೊಚ್ಚಲ ಕರೆ ಪಡೆಯುವ ಸಾಧ್ಯತೆ ಇದೆ. ಆದರೆ ಪಾಟಿದಾರ್ ದೇಶೀಯ ಕ್ರಿಕೆಟ್​ನಲ್ಲಿ 4ನೇ ಸ್ಥಾನದಲ್ಲಿ ಆಡುತ್ತಾರೆ. ಹೀಗಾಗಿ ಅವರ ಅವಕಾಶ ಗೊಂದಲಕ್ಕೆ ಕಾರಣವಾಗಿದೆ. ಶ್ರೇಯಸ್​ ಅಯ್ಯರ್​ ಮೊದಲ ಏಕದಿನದ ನಂತರ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲು ಅಭ್ಯಾಸದಲ್ಲಿ ತೊಡಗಿದ್ದಾರೆ. ತಂಡದಲ್ಲಿ ಬೇರೆ ಆಯ್ಕೆಗಳಿಲ್ಲದಿರುವುದರಿಂದ ನಾಯಕ ರಾಹುಲ್​ ಪಾಟಿದಾರ್​ಗೆ ಒಂದು ಅವಕಾಶ ನೀಡುವ ಸಾಧ್ಯತೆ ಇದೆ.

ಸಂಜು ಸ್ಥಾನ ಅಸ್ತಿರ: ಸಂಜು ಸ್ಯಾಮ್ಸನ್​ಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಸಿಗಲೇ ಇಲ್ಲ. ಎರಡನೇ ಪಂದ್ಯದಲ್ಲಿ ತಂಡಕ್ಕೆ ಅಗತ್ಯ ಇದ್ದಾಗ 23 ಬಾಲ್ ಆಡಿ ಕೇವಲ 12 ರನ್​ ಗಳಿಸಿ ವಿಕೆಟ್​ ಕೊಟ್ಟರು. ಈಗ ಮೂರನೇ ಪಂದ್ಯದಲ್ಲಿ ಅವರ ಸ್ಥಾನ ಅಸ್ಥಿರವಾಗಿದೆ. ಎರಡನೇ ಏಕದಿನದಲ್ಲಿ ಅವರಿಗೆ ರಾಹುಲ್​ ಕೀಪರ್​ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಮೂರನೇ ಏಕದಿನದಲ್ಲೂ ಸಂಜು ಕೀಪರ್​ ಆಗಿ ಮುಂದುವರೆದರೆ ಅವಕಾಶ ಇರಲಿದೆ.

ಬೌಲಿಂಗ್​ ವಿಭಾಗದಲ್ಲಿ ಬದಲಾವಣೆ: ಮೊದಲ ಏಕದಿನ ಪಂದ್ಯದಲ್ಲಿ ಅರ್ಶದೀಪ್​ ಸಿಂಗ್​ ಮತ್ತು ಅವೇಶ್​ ಖಾನ್​ ಬೌಲಿಂಗ್​ನಲ್ಲಿ ಮಿಂಚಿದರು. ಎರಡನೇ ಪಂದ್ಯದಲ್ಲಿ ಸಿಂಗ್​ ಒಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಮುಖೇಶ್​ ಕುಮಾರ್​ ತಮ್ಮ ಮೇಲಿನ ಭರವಸೆಯಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ಎರಡೂ ಪಂದ್ಯದಲ್ಲಿ ವಿಕೆಟ್​ ಕಬಳಿಸಲಿಲ್ಲ. ಹೀಗಾಗಿ ಅವರಿಗೆ ಕೊಕ್​ ನೀಡಿ ಆಕಾಶ್​ ದೀಪ್​ ಆಡಿಸುವ ಸಾಧ್ಯತೆ ಇದೆ.

ಚಹಾಲ್​ಗೆ ಇದೆಯಾ ಸ್ಥಾನ?: ವೆಸ್ಟ್​ ಇಂಡೀಸ್​ ಪ್ರವಾಸದ ನಂತರ ತಂಡದಿಂದ ದೂರ ಉಳಿದಿರುವ ಯುಜ್ವೇಂದ್ರ ಚಹಾಲ್‌ ತಂಡದಲ್ಲಿ ಆಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಎರಡೂ ಪಂದ್ಯದಲ್ಲಿ ಸ್ಪಿನ್​ ಬೌಲರ್​ಗಳು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಕುಲ್ದೀಪ್ ಯಾದವ್​ ಅವರನ್ನು ಕೈಬಿಟ್ಟು ಚಹಾಲ್​ಗೆ ಜಾಗಮಾಡಿಕೊಡುವ ನಿರೀಕ್ಷೆಯೂ ಇದೆ. ಅಕ್ಷರ್​ ಬ್ಯಾಟಿಂಗ್​ನಿಂದ ತಂಡಕ್ಕೆ ನೆರವಾಗುತ್ತಾರೆ ಎಂಬ ನಿರೀಕ್ಷೆ ಇನ್ನೊಂದು ಅವಕಾಶಕ್ಕೆ ಕಾರಣ ಆಗಬಹುದು.

ಪುಟಿದೆದ್ದ ಹರಿಣಗಳು: ಮೊದಲ ಏಕದಿನದಲ್ಲಿ ಕಳಪೆ ಬ್ಯಾಟಿಂಗ್​ನಿಂದ ಅವಮಾನಕ್ಕೆ ಒಳಗಾದ ದಕ್ಷಿಣ ಆಫ್ರಿಕಾ ತಂಡ ಎರಡನೇ ಪಂದ್ಯದಲ್ಲಿ ಸುದಾರಿಸಿಕೊಂಡಿತು. ಕ್ವಿಂಟನ್​ ಡಿ ಕಾಕ್ ನಿವೃತ್ತಿಯ ನಂತರ ಟೋನಿ ಡಿ ಜೊರ್ಜಿ ಅವರ ಶತಕ ತಂಡಕ್ಕೆ ಭರವಸೆ ತಂದಿದೆ. ರೀಜಾ ಹೆಂಡ್ರಿಕ್ಸ್ ಅರ್ಧಶತಕವೂ ತಂಡಕ್ಕೆ ಇನ್ನೊಂದು ಗೆಲುವಿನ ಪುಷ್ಟಿ ನೀಡಿದೆ. ಮೂರನೇ ಪಂದ್ಯದಲ್ಲಿ ಉಭಯ ತಂಡಗಳು ಸರಣಿ ಗೆಲುವಿಗಾಗಿ ಕಠಿಣ ಪೈಪೋಟಿ ನಡೆಸಲಿದೆ.

ತಂಡಗಳು- ಭಾರತ: ರುತುರಾಜ್ ಗಾಯಕ್ವಾಡ್/ ರಜತ್ ಪಾಟಿದಾರ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಕೆ.ಎಲ್.ರಾಹುಲ್​ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್/ ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್/ ಆಕಾಶ್ ದೀಪ್, ಅವೇಶ್ ಖಾನ್, ಅರ್ಶದೀಪ್ ಸಿಂಗ್,

ದಕ್ಷಿಣ ಆಫ್ರಿಕಾ: ಟೋನಿ ಡಿ ಝೋರ್ಜಿ, ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್​), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್

ಇದನ್ನೂ ಓದಿ: ಕೆಕೆಆರ್ ತಂಡಕ್ಕೆ ಸ್ಟಾರ್ಕ್ ಬೌಲಿಂಗ್‌ ಬಲ: ಮೆಂಟರ್ ಗಂಭೀರ್ ಹೇಳಿದ್ದೇನು?

Last Updated :Dec 21, 2023, 8:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.