ETV Bharat / sports

ವಿಶ್ವಕಪ್​ಗೆ ಅಯ್ಯರ್​, ಅಕ್ಷರ್​ ಲಭ್ಯವಿರುತ್ತಾರೆಯೇ?: ನಾಯಕ ರೋಹಿತ್​ ಶರ್ಮಾ ಉತ್ತರ ಹೀಗಿದೆ..

author img

By ETV Bharat Karnataka Team

Published : Sep 18, 2023, 7:27 PM IST

Rohit Sharma
Rohit Sharma

ಏಷ್ಯಾಕಪ್​ನಲ್ಲಿ ದಿಗ್ವಿಜಯ ಸಾಧಿಸಿದ ಭಾರತ ತಂಡ ವಿಶ್ವಕಪ್​ಗೆ ಹುಮ್ಮಸ್ಸಿನಿಂದ ಇಳಿಯಲಿದೆ. ವಿಶ್ವಕಪ್​ಗೆ ಆಯ್ಕೆ ಆಗಿರುವ ಇಬ್ಬರು ಗಾಯಕ್ಕೆ ತುತ್ತಾಗಿರುವುದು ಈ ವೇಳೆ ತಂಡದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೊಲಂಬೊ (ಶ್ರೀಲಂಕಾ): ವಿಶ್ವಕಪ್​ಗೂ ಮುನ್ನ ಭಾರತ ತಂಡ ಏಷ್ಯಾಕಪ್​ನಲ್ಲಿ ಗೆದ್ದು ವಿಶ್ವಾಸವನ್ನು ವೃದ್ಧಿಸಿಕೊಂಡಿದೆ. ಆದರೆ ಇಬ್ಬರು ಆಟಗಾರರು ಗಾಯಕ್ಕೆ ತುತ್ತಾಗಿರುವುದು ವಿಶ್ವಕಪ್​ ಹಿನ್ನೆಲೆಯಲ್ಲಿ ತಂಡಕ್ಕೆ ಹಿನ್ನಡೆಯಾಗಿದೆ. ಏಷ್ಯಾಕಪ್​ ವಿಜಯದ ನಂತರ ಮಾತನಾಡಿದ ರೋಹಿತ್​ ಶರ್ಮಾ ಇಬ್ಬರು ಆಟಗಾರರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಅಯ್ಯರ್​ 99 ಪ್ರತಿಶತ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಭಾರತ ತಂಡ ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾದ ಜೊತೆಗೆ ತವರು ಮೈದಾನಗಳಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ. ದಕ್ಷಿಣ ಆಫ್ರಿಕಾದಲ್ಲಿ ಸಾಧಾರಣ ಪ್ರದರ್ಶನ ನೀಡಿರವ ಆಸ್ಟ್ರೇಲಿಯಾ, ವಿಶ್ವಕಪ್​ಗೂ ಮುನ್ನ ಭಾರತದಲ್ಲಿ ಆಡಿ ವಾತಾವರಣಕ್ಕೆ ಹೊಂದಿಕೊಳ್ಳುವುದರ ಜೊತೆಗೆ, ಟೀಮ್​ ಇಂಡಿಯಾವನ್ನು ಮಣಿಸುವ ಲೆಕ್ಕಾಚಾರದಲ್ಲಿದೆ. ಅಲ್ಲದೇ ವಿಶ್ವಕಪ್​ಗೆ ಅದೇ ಏಕದಿನ ತಂಡ ಮುಂದುವರೆಯಲಿದೆ.

ಶ್ರೇಯಸ್​ ಅಯ್ಯರ್​ ಗಾಯದಿಂದ ಚೇತರಿಸಿಕೊಂಡ ನಂತರ ಏಷ್ಯಾಕಪ್​ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡರು. ಲೀಗ್​ ಹಂತದಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಅವರು ಮತ್ತೆ ಬೆನ್ನು ನೋವಿಗೆ ತುತ್ತಾದರು. ಏಷ್ಯಾಕಪ್​ನ ಸೂಪರ್​ ಫೋರ್​ ಹಂತದಲ್ಲಿ ಕೆಎಲ್ ರಾಹುಲ್ ಅವರ ಸ್ಥಾನದಲ್ಲಿ ಕಮ್​ಬ್ಯಾಕ್​ ಮಾಡಿದರು. ಕೊನೆಯ ಪಂದ್ಯದ ವೇಳೆಗೆ ಅಯ್ಯರ್​ ಫಿಟ್​ ಆಗಿದ್ದರೂ ಆಡಿಸಲು ತಂಡದಲ್ಲಿ ಸ್ಥಾನ ಇರಲಿಲ್ಲ.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಾಯಕ ರೋಹಿತ್​ ಶರ್ಮಾ, "ಶ್ರೇಯಸ್ ಅಯ್ಯರ್​ ಫೈನಲ್​ಗೆ ಲಭ್ಯವಿರಲಿಲ್ಲ, ಏಕೆಂದರೆ ಅವರು ಫಿಟ್​ನೆಸ್​ನಲ್ಲಿ ಶೇಕಡಾ 99 ರಷ್ಟು ಪಾಸ್​ ಮಾಡಿದ್ದರು. ಅವರು ಇನ್ನೂ ಚೇತರಿಸಿಕೊಳ್ಳಲಿದ್ದಾರೆ. ಬ್ಯಾಟಿಂಗ್​ನಲ್ಲಿ ಅವರು ಉತ್ತಮವಾಗಿ ಕಾಣುತ್ತಾರೆ. ಅವರು ಬಹಳ ಗಂಟೆಗಳ ಕಾಲ ಫೀಲ್ಡಿಂಗ್ ಮಾಡಿದ್ದಾರೆ, ಫಿಟ್​ಆಗಿಯೂ ಕಾಣಿಸಿಕೊಂಡಿದ್ದಾರೆ. ವಿಶ್ವಕಪ್​ಗೆ ಅವರ ಬಗ್ಗೆ ಚಿಂತೆ ಇಲ್ಲ" ಎಂದಿದ್ದಾರೆ.

ಶುಕ್ರವಾರ ಬಾಂಗ್ಲಾದೇಶದ ವಿರುದ್ಧ ಭಾರತದ ಅಂತಿಮ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ಅಕ್ಷರ್ ತನ್ನ ಎಡಭಾಗದ ಚತುರ್ಭುಜದ ಗಾಯಕ್ಕೆ ತುತ್ತಾದ ನಂತರ ಫೈನಲ್​ ಪಂದ್ಯದಿಂದ ಹೊರಗುಳಿದರು. ಅವರ ಬದಲಾಗಿ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಯಿತು. "ಅಕ್ಷರ್ ಪಟೇಲ್​ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಇದು ಬಹುಶಃ ಒಂದು ವಾರ ಅಥವಾ ಹತ್ತು ದಿನ ಲಭ್ಯವಿಲ್ಲ ಎಂದು ತೋರುತ್ತಿದೆ. ಗಾಯವು ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಕೆಲವರು ಬೇಗನೆ ಚೇತರಿಸಿಕೊಳ್ಳುತ್ತಾರೆ. ಅಕ್ಷರ್‌ ಸಹ ಚೇತರಿಸಿಕೊಳ್ಳಲಿ ಎಂದು ಭಾವಿಸುತ್ತೇನೆ. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಮೊದಲ ಎರಡು ಪಂದ್ಯಗಳನ್ನು ಆಡಲು ಲಭ್ಯವಾಗುತ್ತಾರೆಯೇ ಎಂದು ನನಗೆ ತುಂಬಾ ಖಚಿತವಿಲ್ಲ, ನಾವು ಕಾದು ನೋಡುತ್ತೇವೆ" ಎಂದು ಹೇಳಿದ್ದಾರೆ.

ವಿಶ್ವಕಪ್​ ಹಿನ್ನೆಲೆಯಲ್ಲಿ ಸುಂದರ್​ ಬದಲಾಗಿ ತಂಡದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ತಂಡದಲ್ಲಿ ಅನುಭವಿ ಅಥವಾ ಯುವ ಆಟಗಾರರಲ್ಲಿ ಯಾರಿಗೆ ಮಣೆ ಹಾಕಲಾಗುತ್ತೆ ಎಂಬ ಪ್ರಶ್ನೆ ಇದೆ. ಏಷ್ಯಾಕಪ್​ ಫೈನಲ್​ಗೆ ವಾಷಿಂಗ್ಟನ್ ಸುಂದರ್ ಅವರನ್ನು ಕರೆಸಲಾಗಿತ್ತು. "ಸ್ಪಿನ್ನಿಂಗ್ ಆಲ್‌ರೌಂಡರ್‌ ಸ್ಥಾನಕ್ಕೆ ಆರ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ. ಅಶ್ವಿನ್​ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೇನೆ. ಅಕ್ಷರ್​ಗೆ ರಾತ್ರಿ ವೇಳೆ ಗಾಯ ಉಲ್ಬಣವಾದಾಗ ಬೆಂಗಳೂರಿನಲ್ಲಿ ಏಷ್ಯನ್​ ಗೇಮ್ಸ್​ಗೆ ತಯಾರಿಯಲ್ಲಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಕರೆತರಲಾಯಿತು. ಅವರು ಸದ್ಯಕ್ಕೆ ಫಿಟ್​ ಇದ್ದ ಆಟಗಾರ" ಎಂದು ರೋಹಿತ್ ಹೇಳಿದರು. (ಎಎನ್​ಐ)

ಇದನ್ನೂ ಓದಿ: Asia Cup 2023: 5 ವರ್ಷದ ಟ್ರೋಫಿ ಬರ ನೀಗಿಸಿಕೊಂಡ ಭಾರತ.. ಏಷ್ಯಾಕಪ್​ಗೆ ಭಾರತವೇ ಬಾಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.