ETV Bharat / sports

Nitish Rana: ದೆಹಲಿ ತೊರೆದು ಉತ್ತರ ಪ್ರದೇಶ ಸೇರಿದ ನಿತೀಶ್​ ರಾಣಾ.. ಇದೇ 30 ರಿಂದ ಯುಪಿಟಿ -20 ಲೀಗ್​

author img

By

Published : Aug 21, 2023, 1:15 PM IST

Nitish Rana leaves Delhi for Uttar Pradesh: 2023 - 24ರ ದೇಶೀಯ ಕ್ರಿಕೆಟ್ ವರ್ಷದಲ್ಲಿ ರಾಣಾ ದೆಹಲಿ ತಂಡವನ್ನು ಬಿಟ್ಟು ಉತ್ತರ ಪ್ರದೇಶ ಸೇರುವ ನಿರ್ಧಾರ ಮಾಡಿದ್ದಾರೆ.

Nitish Rana
Nitish Rana

ನವದೆಹಲಿ: ಭಾರತದ ಯುವ ಸ್ಟಾರ್​ ಬ್ಯಾಟರ್​ ನಿತೀಶ್​ ರಾಣ ತಮ್ಮ ರಾಜ್ಯವನ್ನು ಬಿಟ್ಟು ಪಕ್ಕದ ಉತ್ತರ ಪ್ರದೇಶಕ್ಕಾಗಿ 2023 -24ರ ದೇಶೀಯ ಕ್ರಿಕೆಟ್​ ಆಡುವುದಾಗಿ ಘೋಷಿಸಿಕೊಂಡಿದ್ದಾರೆ. ಈ ವರ್ಷದ ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್​ ಅವರ ಅನುಪಸ್ಥಿತಿಯಲ್ಲಿ ನಿತೀಶ್​ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಮುನ್ನಡೆಸಿದ್ದರು. ಉತ್ತರ ಪ್ರದೇಶದ ತಂಡದಲ್ಲಿ ಕೆಕೆಆರ್​ನ ಸಹ ಆಟಗಾರ ಎಡಗೈ ಬ್ಯಾಟರ್​ ರಿಂಕು ಸಿಂಗ್​ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಈ ವರ್ಷದಿಂದ ಉತ್ತರ ಪ್ರದೇಶದಲ್ಲಿ ಆರಂಭವಾಗುತ್ತಿರುವ ಯುಪಿಟಿ20 ಲೀಗ್​ನಲ್ಲಿ ನೋಯ್ಡಾ ಸೂಪರ್ ಕಿಂಗ್ಸ್‌ ಪರ ರಾಣ ಮೈದಾನಕ್ಕಿಳಿಯಲಿದ್ದಾರೆ. ನಿತೀಶ್​ ರಾಣಾ ದೆಹಲಿ ಬಿಡುವ ಬಗ್ಗೆ ಈ ಹಿಂದೆ ಕೆಲ ಸುದ್ದಿಗಳು ಬಂದಿದ್ದವು. ಆದರೆ, ಈಗ ರಾಣಾ ಅವರೇ ಎಕ್ಸ್​ ಆ್ಯಪ್​ನಲ್ಲಿ ಪತ್ರವನ್ನು ಬಿಡುಗಡೆ ಮಾಡಿ, ದೆಹಲಿ ಬಿಡುತ್ತಿರುವ ಸುದ್ದಿಯ ಜೊತೆಗೆ ಏಕೆ ಎಂಬ ಸ್ಪಷ್ಟನೆ ನೀಡಿದ್ದಾರೆ.

ಪತ್ರದಲ್ಲಿ,"ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ನನಗೆ ಒದಗಿಸಿದ ಅವಕಾಶಗಳು, ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ದೆಹಲಿ ತಂಡದ ನಾಯಕನಾಗಿ ನನಗೆ ಸಿಕ್ಕ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ. ನಾನು ಈಗ ಹೊಸ ಅಧ್ಯಾಯ ಆರಂಭಿಸುವ ಇಚ್ಛೆಯಲ್ಲಿದ್ದೇನೆ. ನಾನು ಡಿಡಿಸಿಎ ಜೊತೆಗಿನ ಸಮಯದಲ್ಲಿ ರೋಹನ್ ಜೇಟ್ಲಿ ಅವರ ಬೆಂಬಲ ಮತ್ತು ಸಹಕಾರಕ್ಕಾಗಿ ನನ್ನ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇನೆ.

ಹೇಗಾದರೂ, ಪುಟವನ್ನು ತಿರುಗಿಸಲು ಮತ್ತು ನನ್ನ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಸಾಕಷ್ಟು ಆಲೋಚನೆಯೊಂದಿಗೆ ಈ ನಿರ್ಧಾರಕ್ಕೆ ಬಂದಿದ್ದೇನೆ ಮತ್ತು ಮುಂಬರುವ ದೇಶೀಯ ಋತುವಿನಿಂದ ನಾನು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಗೆ ಸೇರುತ್ತೇನೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾನು ಯುಪಿಸಿಎಗಾಗಿ ಆಡಲು ಉತ್ಸುಕನಾಗಿದ್ದೇನೆ ಮತ್ತು ಎಲ್ಲರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಯಿಂದ ಎನ್‌ಒಸಿಗಾಗಿ ರಾಣಾ ಆಗಸ್ಟ್ 12 ರಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದೆಹಲಿ ತಂಡ ಇನ್ನೊಬ್ಬ ಬಲಗೈ ಬ್ಯಾಟರ್ ಧ್ರುವ ಶೋರೆ ಅವರು ಎರಡು ಬಾರಿ ರಣಜಿ ಟ್ರೋಫಿ ವಿಜೇತ ತಂಡವಾದ ವಿದರ್ಭ ತಂಡಕ್ಕೆ ತೆರಳುತ್ತಿದ್ದಾರೆ.

ಯುಪಿಟಿ20 ಲೀಗ್​: ಯುಪಿ ಟಿ20 ಲೀಗ್ ಆಗಸ್ಟ್ 30 ರಿಂದ ಆರಂಭವಾಗಲಿದೆ. ಮೊದಲ ಆವೃತ್ತಿಯ ಲೀಗ್‌ನಲ್ಲಿ ಒಟ್ಟು 6 ತಂಡಗಳು ಆಡಲಿವೆ. ರಿಂಕು ಸಿಂಗ್ ಮೀರತ್, ನಿತೀಶ್ ರಾಣಾ ಮತ್ತು ಭುವನೇಶ್ವರ್ ಕುಮಾರ್ ನೋಯ್ಡಾ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಶಿವಂ ಮಾವಿ ಕಾಶಿ ರುದ್ರಾಸ್​​, ಪ್ರಿಯಂ ಗಾರ್ಗ್ ಲಖನೌದಲ್ಲಿ ಭಾಗಿಯಾಗಿದ್ದಾರೆ.

ತಂಡಗಳು ಇಂತಿವೆ: ಮೀರತ್ ಮೇವರಿಕ್ಸ್, ಗೋರಖ್‌ಪುರ ಲಯನ್ಸ್​, ನೋಯ್ಡಾ ಸೂಪರ್ ಕಿಂಗ್ಸ್, ಕಾಶಿ ರುದ್ರಾಸ್​, ಲಕ್ನೋ ಫಾಲ್ಕನ್ಸ್, ಕಾನ್ಪುರ್ ಸೂಪರ್ ಸ್ಟಾರ್ಸ್

ಇದನ್ನೂ ಓದಿ: ಐರ್ಲೆಂಡ್​ ವಿರುದ್ಧ ಮಿಂಚಿದ ರಿಂಕು.. 'ನನ್ನೆಲ್ಲ ಪ್ರಯತ್ನಕ್ಕೆ ಸಿಕ್ಕ ಫಲ' ಎಂದ ಯುವ ಬ್ಯಾಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.