ETV Bharat / sports

ಸಂಕ್ರಾಂತಿಯಂದು ಮಹಾಕಾಳೇಶ್ವರನ 'ಭಸ್ಮ ಆರತಿ'ಯಲ್ಲಿ ಭಾಗವಹಿಸಿದ ಕ್ರಿಕೆಟಿಗರು: ವಿಡಿಯೋ

author img

By ETV Bharat Karnataka Team

Published : Jan 15, 2024, 4:04 PM IST

ಕ್ರಿಕೆಟರ್​ಗಳಾದ ರವಿ ಬಿಷ್ಣೋಯ್, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್ ಮತ್ತು ಜಿತೇಶ್ ಶರ್ಮಾ ಉಜ್ಜಯಿನಿ ಮಹಾಕಾಲೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Four Indian cricketers visit Mahakaleshwar temple in Ujjain, offers prayers to Baba Mahakal
ಸಂಕ್ರಾಂತಿಯಂದು ಮಹಾಕಾಲೇಶ್ವರ ದೇಗುಲದ 'ಭಸ್ಮ ಆರತಿ'ಯಲ್ಲಿ ಭಾಗವಹಿಸಿದ ಕ್ರಿಕೆಟಿಗರು

ಮಹಾಕಾಲೇಶ್ವರ ದೇಗುಲದ 'ಭಸ್ಮ ಆರತಿ'ಯಲ್ಲಿ ಭಾಗವಹಿಸಿದ ಕ್ರಿಕೆಟಿಗರು

ಉಜ್ಜಯಿನಿ (ಮಧ್ಯಪ್ರದೇಶ): ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದ ಗೆಲುವಿನ ಬಳಿಕ ಯುವ ಕ್ರಿಕೆಟಿಗರಾದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ಎಡಗೈ ಬ್ಯಾಟರ್ ತಿಲಕ್ ವರ್ಮಾ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರು ಸೋಮವಾರ ಉಜ್ಜಯಿನಿ ಮಹಾಕಾಳೇಶ್ವರ ದೇವರ ದರ್ಶನ ಪಡೆದಿದ್ದಾರೆ. ಮಕರ ಸಂಕ್ರಾಂತಿಯ ವಿಶೇಷ ದಿನದಂದು ಬಾಬಾ ಮಹಾಕಾಲನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ.

ಮಹಾಕಾಳೇಶ್ವರ ದೇವಾಲಯವು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಯುವ ಆಟಗಾರರು ದೇವಸ್ಥಾನದ ನಂದಿ ಹಾಲ್‌ನಲ್ಲಿ ಕುಳಿತು ಬಾಬಾ ಮಹಾಕಾಲನಿಗೆ ಪೂಜೆ ಸಲ್ಲಿಸಿದರು. ಮುಂಜಾನೆಯ 'ಭಸ್ಮ ಆರತಿ'ಯಲ್ಲಿ ಭಾಗವಹಿಸಿ, ಶಿವನ ಆಶೀರ್ವಾದ ಪಡೆದುಕೊಂಡರು.

ಭಸ್ಮ ಆರತಿಯ ಮಹತ್ವ: ಈ ಆರತಿಯು 10 ನಾಗಾ ಸಾಧುಗಳ ನೇತೃತ್ವದಲ್ಲಿ ನಡೆಯುತ್ತದೆ. ವೈದಿಕ ಪಠಣಗಳು, ಸ್ತೋತ್ರಗಳು, ತಾಳ, ಶಂಖ ಮತ್ತು ಡಮರುಗಳ ಶಬ್ದದ ನಡುವೆ ಭಸ್ಮದಿಂದ ಮಹಾಕಾಳೇಶ್ವರನಿಗೆ ಅಲಂಕಾರ ಮಾಡಲಾಗುತ್ತದೆ. ಭಸ್ಮ ಆರತಿಯನ್ನು ಪ್ರತಿದಿನ ಬೆಳಗ್ಗೆ (ಮಹಾಶಿವರಾತ್ರಿಯ ಎರಡನೇ ದಿನ ಹೊರತುಪಡಿಸಿ) 4:00 ರಿಂದ 6:00 ರವರೆಗೆ ಮಾಡಲಾಗುತ್ತದೆ. ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಈ ಆಚರಣೆ ಕಣ್ತುಂಬಿಕೊಳ್ಳುವುದು ಪ್ರತಿಯೊಬ್ಬ ಭಕ್ತನ ಬಯಕೆಯಾಗಿರುತ್ತದೆ. ಭಸ್ಮ ಆರತಿಯನ್ನು ನೋಡುವವರು ಎಂದಿಗೂ ಅಕಾಲಿಕ ಮರಣ ಹೊಂದುವುದಿಲ್ಲ ಎಂಬ ನಂಬಿಕೆ ಜನರದ್ದಾಗಿದೆ.

ದೇಗುಲದ ಅರ್ಚಕ ಸಂಜಯ್ ಶರ್ಮಾ ಮಾತನಾಡಿ, ''ಇಂದು ಮಕರ ಸಂಕ್ರಾಂತಿ ನಿಮಿತ್ತ ಬ್ರಹ್ಮ ಮುಹೂರ್ತದಲ್ಲಿ ಬಾಬಾ ಮಹಾಕಾಳ ದೇವಾಲಯದ ಬಾಗಿಲು ತೆರೆದು, ಹಾಲು, ಮೊಸರು, ತುಪ್ಪ ಸೇರಿದಂತೆ ದೇವರಿಗೆ ಪಂಚಾಮೃತದಿಂದ ಪುಣ್ಯಸ್ನಾನ ನೆರವೇರಿಸಲಾಯಿತು. ಸಕ್ಕರೆ, ಜೇನುತುಪ್ಪ ಮತ್ತು ಎಳ್ಳು ಬೀಜದೊಂದಿಗೆ ಅಲಂಕಾರ ಮಾಡಿದ ಬಳಿಕ, ಭಸ್ಮ ಆರತಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ದೇವರಿಗೆ ಎಳ್ಳು ಅರ್ಪಿಸಲಾಯಿತು'' ಎಂದು ತಿಳಿಸಿದರು.

ಭಸ್ಮ ಆರತಿಯಲ್ಲಿ ಭಾಗವಹಿಸಿದ ಬಳಿಕ ಸುದ್ದಿ ಸಂಸ್ಥೆ ಎಎನ್​ಐ ಜೊತೆ ಮಾತನಾಡಿದ ಕ್ರಿಕೆಟಿಗರು, "ಇಲ್ಲಿಗೆ ಬಂದಿರುವುದು ಬಹಳ ಸಂತಸ ತಂದಿದೆ. ಶಿವನ ಆಶೀರ್ವಾದ ಪಡೆದಿದ್ದೇವೆ" ಎಂದು ಹೇಳಿದರು. ಭಾನುವಾರ ಸಂಜೆ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಜಯದ ಬೆನ್ನಲ್ಲೇ ಕ್ರಿಕೆಟಿಗರು ಉಜ್ಜಯಿನಿಗೆ ಆಗಮಿಸಿದ್ದರು. ಈ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಭಾರತ ತಂಡ ಮೂರು ಪಂದ್ಯಗಳ ಸರಣಿ ವಶಪಡಿಸಿಕೊಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 17 ರಂದು ನಡೆಯಲಿದೆ.

ಇದನ್ನೂ ಓದಿ: ಜೈಸ್ವಾಲ್, ದುಬೆ ಅಬ್ಬರ; ಅಫ್ಘಾನಿಸ್ತಾನ​ ವಿರುದ್ಧ ಭಾರತಕ್ಕೆ 6 ವಿಕೆಟ್​ ಜಯ, 2 0 ಸರಣಿ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.