ನವದೆಹಲಿ: 2020-21ರ ಭಾರತೀಯ ದೇಶೀಯ ಕ್ರಿಕೆಟ್ ಋತುವನ್ನು ಸಂಪೂರ್ಣವಾಗಿ ಕೈ ಬಿಡುವಂತಿಲ್ಲ, ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೆಲವು ತಿಂಗಳು ವಿಳಂಬವಾಗಲಿದ್ದು, ಹೊಸ ವರ್ಷದಿಂದ ಪ್ರಾರಂಭವಾಗಲಿದೆ.
ಭಾರತೀಯ ಕ್ರಿಕೆಟ್ ಮಂಡಳಿಯ ಅಪೆಕ್ಸ್ ಕೌನ್ಸಿಲ್ನಲ್ಲಿ ಭಾರತ ತಂಡದ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರು ಶನಿವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಈ ವಿಷಯ ಚರ್ಚಿಸಿದರು ಎನ್ನಲಾಗಿದೆ. ಸಾಮಾನ್ಯವಾಗಿ, ದೇಶೀಯ ಋತುಮಾನವು ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಇರುತ್ತದೆ. ಬಿಸಿಸಿಐ ಕೌನ್ಸಿಲ್ ಸಭೆಯಲ್ಲಿ, ಸದಸ್ಯರು ದೇಶೀಯ ಋತುವಿಗೆ "ಹಲವಾರು ಆಯ್ಕೆಗಳನ್ನು" ಚರ್ಚಿಸಿದರು. ಆದರೆ, ಅಂತಿಮ ತೀರ್ಮಾನವು ಆ ಸಮಯದಲ್ಲಿ ಸಾಂಕ್ರಾಮಿಕ ಸೋಂಕು ಯಾವ ಹಂತ ತಲುಪಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ ಮುಂದಿನ ವರ್ಷದ ಆರಂಭದಲ್ಲಿ ಪಂದ್ಯಾವಳಿಗಳು ದೇಶದ ವಿವಿಧ ರಾಜ್ಯಗಳಲ್ಲಿ ನಿಗದಿಯಾದರೆ, ಅಲ್ಲಿನ ಕೋವಿಡ್ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ದೇಶೀಯ ಋತುವಿನ ಪ್ರಾರಂಭವು ಕೋವಿಡ್ ನಿಯಮ ಮತ್ತು ವಿವಿಧ ರಾಜ್ಯ ಸರ್ಕಾರಗಳಿಂದ ಅನುಮತಿ ಮುಂತಾದ ಅಂಶಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಈ ವಿಚಾರವಾಗಿ ಬಿಸಿಸಿಐ ವಿಭಾಗವು ದೇಶೀಯ ಪಂದ್ಯಾವಳಿಗಳಿಗೆ ಲಭ್ಯವಿರುವ ಹಲವಾರು ಆಯ್ಕೆಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು ಪದಾಧಿಕಾರಿಗಳಿಗೆ ನೀಡಲಾಗಿದೆ. ಯಾವುದೇ ಸಮಯದ ಅವಧಿಯಲ್ಲಿ ದೇಶೀಯ ಪಂದ್ಯಾವಳಿಗಳು ನಡೆದರೆ, ರಣಜಿ ಟ್ರೋಫಿಯ ಪ್ರಧಾನ ರಾಷ್ಟ್ರೀಯ ಚಾಂಪಿಯನ್ಶಿಪ್ ಅನ್ನು ಗ್ರೂಪ್ ಎ, ಬಿ ಮತ್ತು ಸಿ ಗಳಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ. ಆದರೆ, ರಣಜಿ ಟ್ರೋಫಿಯಲ್ಲಿ ಮತ್ತು ಇತರ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುವ 38 ತಂಡಗಳಲ್ಲಿ ಪ್ರತಿಯೊಬ್ಬರಿಗೂ ಬಯೋ ಬಬ್ಬಲ್ (ಜೈವಿಕ ಗುಳ್ಳೆ) ರಚಿಸುವುದು ಅಸಾಧ್ಯ ಎಂದು ಮೂಲಗಳು ತಿಳಿಸಿವೆ.
ಶಾಂತ ರಂಗಸ್ವಾಮಿ ಅವರು ಫೆಬ್ರವರಿಯಿಂದ ಸೆಪ್ಟೆಂಬರ್ ಅಥವಾ ಫೆಬ್ರವರಿಯಿಂದ ಡಿಸೆಂಬರ್ ವರೆಗೆ ದೇಶೀಯ ಋತುವಿನ ಪಂದ್ಯ ಆಯೋಜಿಸಲು ಸಭೆಯಲ್ಲಿ ಸೂಚಿಸಿದ್ದಾರೆ. ವಯೋಮಾನದ ಕ್ರಿಕೆಟಿಗರು ಅಥವಾ ಮಹಿಳಾ ಕ್ರಿಕೆಟಿಗರು ಆಟವಾಡಲು ಬಾರದಿದ್ದರೆ, ಆಸಕ್ತಿ ಮತ್ತು ಉತ್ಸಾಹವನ್ನು ಕಳೆದುಕೊಳ್ಳಬಹುದು ಎಂಬ ವಿಷಯವನ್ನು ತಿಳಿಸಿದ್ದಾರೆ. ಬಯೋ ಬಬ್ಬಲ್ ರಚಿಸುವ ನಾವು ಒಂದೆರಡು ವರ್ಷಗಳ ಕಾಲ ಸೀಮಿತ ಸ್ಥಳಗಳಲ್ಲಿ ಪಂದ್ಯಾವಳಿಗಳನ್ನು ನಡೆಸಬಹುದು ಎಂದು ಮಹಿಳಾ ಆಟಗಾರರ ಪ್ರತಿನಿಧಿ ರಂಗಸ್ವಾಮಿ ಹೇಳಿದರು.