ETV Bharat / sports

ಭಾರತದ ಬಿರುಗಾಳಿ ಬೌಲಿಂಗ್​ಗೆ ಪತರುಗುಟ್ಟಿದ ಸಿಂಹಳೀಯರು: ವಿಶ್ವಕಪ್​ನಲ್ಲಿ ರೋಹಿತ್​ ಪಡೆಗೆ ಸತತ 7ನೇ ಗೆಲುವು

author img

By ETV Bharat Karnataka Team

Published : Nov 2, 2023, 8:36 PM IST

Updated : Nov 2, 2023, 9:37 PM IST

Cricket World Cup 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್​ ಶರ್ಮಾ ಬಳಗ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಸತತ 7ನೇ ಜಯ ದಾಖಲಿಸಿದೆ.

Etv Bharat
Etv Bharat

ಮುಂಬೈ (ಮಹಾರಾಷ್ಟ್ರ): ಶ್ರೀಲಂಕಾದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್​ ಶರ್ಮಾ ಪಡೆಯ ಬಿರುಗಾಳಿ ಬೌಲಿಂಗ್​ ದಾಳಿಗೆ ಸಿಂಹಳೀಯರು ಪತರುಗುಟ್ಟಿದ್ದು, ಲಂಕಾ ಆಟಗಾರರು 19.4 ಓವರ್​ಗಳಲ್ಲಿ ಕೇವಲ 55 ರನ್​ಗಳಿಗೆ ಸರ್ವಪತನ ಕಂಡಿದ್ದಾರೆ. ಇದರಿಂದ ಭಾರತ ತಂಡ ದಾಖಲೆಯ 302 ರನ್​ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ವಿಶ್ವಕಪ್​ ಟೂರ್ನಿಯಲ್ಲಿ ಸತತ 7ನೇ ಗೆಲುವಿನ ಕೇಕೆ ಹಾಕಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್​ ಮಾಡಿ ಎಂಟು ವಿಕೆಟ್​ ನಷ್ಟಕ್ಕೆ 357 ರನ್​ಗಳ ಬೃಹತ್​ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಲಂಕಾ ಆಟಗಾರರ ಮೇಲೆ ಆರಂಭದಲ್ಲೇ ಟೀಂ ಇಂಡಿಯಾದ ಬೌಲರ್​ಗಳು ಸವಾರಿ ಮಾಡಿದರು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್​ಗೆ ಪಟಪಟನೆ ವಿಕೆಟ್​ಗಳು ಉರುಳಿದವು.

ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದ ಲಂಕಾ ನಾಯಕ ಕುಸಾಲ್ ಮೆಂಡಿಸ್​ ಮೊದಲು ಟೀಂ ಇಂಡಿಯಾವನ್ನು ಬ್ಯಾಟಿಂಗ್​ ಇಳಿಸುವ ಮೂಲಕ ಎಡವಿದರು. ನಾಯಕ ರೋಹಿತ್​ ಶರ್ಮಾ (4) ಬೇಗ ಔಟಾಗಿದ್ದು ಹೊರತು ಪಡಿಸಿದರೆ, ಭಾರತ ಭರ್ಜರಿ ಬ್ಯಾಟಿಂಗ್​ ಪ್ರರ್ದಶಿಸಿತು. ಶುಭ್‌ಮನ್ ಗಿಲ್ (92), ವಿರಾಟ್ ಕೊಹ್ಲಿ (88) ಹಾಗೂ ಶ್ರೇಯಸ್ ಅಯ್ಯರ್ (82) ಅವರ ಅದ್ಭತ ಆಟದಿಂದ ಭಾರತ 357 ರನ್​ಗಳನ್ನು ಕಲೆ ಹಾಕಿತ್ತು. ಮತ್ತೊಂದೆಡೆ, ಬೌಲರ್​ಗಳು ಬೆಂಕಿ ಚೆಂಡಿನಂತೆ ಪ್ರದರ್ಶನ ನೀಡಿದರು.

ಶೂನ್ಯ ಸುತ್ತಿದ ಐವರು ಬ್ಯಾಟರ್​ಗಳು: ಶಮಿ, ಸಿರಾಜ್ ಮತ್ತು ಬುಮ್ರಾ ಎಸೆತಗಳಿಗೆ ಎದುರಿಸಲು ಸಾಧ್ಯವಾಗದೇ ಬಂದ ದಾರಿಗೆ ಸಂಕವಿಲ್ಲ ಎಂಬಂತೆ ಸಿಂಹಳೀಯರು ಪೆವಿಲಿಯನ್​ ಸೇರಿಕೊಂಡರು. ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಾಂಕ ಅವರನ್ನು ಬುಮ್ರಾ ಎಲ್​ಬಿ ಬಲೆಗೆ ಕೆಡವಿದರು. ನಂತರದಲ್ಲಿ ಸಿರಾಜ್ ತಮ್ಮ ರೋಷಾವೇಷ ಪ್ರದರ್ಶಿಸಿದರು. ದಿಮುತ್ ಕರುಣಾರತ್ನೆ ಹಾಗೂ ಸದೀರ ಸಮರವಿಕ್ರಮ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ ದಾರಿ ತೋರಿಸಿದರು. ಅಲ್ಲದೇ, ಕುಸಾಲ್ ಮೆಂಡಿಸ್ (1) ಅವರನ್ನೂ ಬೋಲ್ಡ್​ ಮಾಡಿದರು.

ಇದರಿಂದ ತಂಡದ ಮೊತ್ತ 3 ರನ್​ಗಳು ಆಗುಷ್ಟರಲ್ಲಿ ಲಂಕಾ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡು ದಿಢೀರ್​ ಕುಸಿಯಿತು. ಬಳಿಕಯೂ ಎದುರಾಳಿ ತಂಡವನ್ನು ಸುಧಾರಿಸಿಕೊಳ್ಳಲು ಭಾರತೀಯ ಬೌಲರ್​ಗಳು ಬಿಡಲಿಲ್ಲ. ನಂತರ ಕ್ರೀಸ್​ಗೆ ಬಂದ ಚರಿತ್ ಅಸಲಂಕಾ (1) ಹಾಗೂ ದುಶನ್ ಹೇಮಂತ (0), ದುಷ್ಮಂತ ಚಮೀರ (0) ಕೂಡ ಬೇಗ ವಿಕೆಟ್​ ಒಪ್ಪಿಸಿದರು. ಇದರೊಂದಿಗೆ ಐವರು ಬ್ಯಾಟರ್​ಗಳು ಶೂನ್ಯ ಸುತ್ತಿದರು. ಈ ವೇಳೆಗೆ 22 ರನ್​ಗಳಿಗೆ 7 ವಿಕೆಟ್​ ಸಹ ಲಂಕಾ ಕಳೆದುಕೊಂಡಿತು.

ಶ್ರೀಲಂಕಾ ಪರ ಮಧ್ಯಕ್ರಮಾಂಕದಲ್ಲಿ ಏಂಜೆಲೊ ಮ್ಯಾಥ್ಯೂಸ್ 12 ರನ್​ ಹಾಗೂ ಕೊನೆಯಲ್ಲಿ ಮಹೇಶ್ ತೀಕ್ಷಣ ಅಜೇಯ 12 ರನ್​ ಮತ್ತು ಕಸುನ್ ರಜಿತಾ 14 ರನ್​ ಗಳಿಸಲು ಶಕ್ತವಾದರು. ಇದರಿಂದಾಗಿ ಅಂತಿಮವಾಗಿ 55 ರನ್​​ಗೆ ಎಲ್ಲ ವಿಕೆಟ್​ಗಳನ್ನು ಸಿಂಹಳೀಯರು ಒಪ್ಪಿಸಿದರು. ಇದರೊಂದಿಗೆ ವಿಶ್ವಪಕ್​ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್​ಗೆ ಸರ್ವಪತನವಾಗುವ ಅಪಾಯದಿಂದ ಲಂಕಾ ಪಾರಾಯಿತು. ಈ ಹಿಂದೆ ಕೆನಡಾ ತಂಡ 36 ರನ್​ಗಳಿಗೆ ಆಲೌಟ್​ ಆಗಿತ್ತು.

ಮತ್ತೊಂದೆಡೆ, ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 5 ವಿಕೆಟ್​ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ ವಿಕೆಟ್​ ಪಡೆದರು. ಈ ಗೆಲುವಿನೊಂದಿಗೆ ಭಾರತ ಸೆಮಿಸ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಗಿಲ್, ಕೊಹ್ಲಿ, ಅಯ್ಯರ್ ಅಮೋಘ ಅರ್ಧ ಶತಕ; ಲಂಕಾ ಗೆಲುವಿಗೆ 358 ರನ್ ಗುರಿ ನೀಡಿದ ಭಾರತ

Last Updated :Nov 2, 2023, 9:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.