ಐದು ತಿಂಗಳ ಕೊರೊನಾ ಲಾಕ್ಡೌನ್ ಬಳಿಕ ಚಿತ್ರೀಕರಣ ಆರಂಭಿಸಿದ ಮೊದಲ ಚಿತ್ರ 'ಚಡ್ಡಿದೋಸ್ತ್' ಚಿತ್ರೀಕರಣ ಮುಗಿಸಿದೆ. ಈ ಮೂಲಕ ಲಾಕ್ಡೌನ್ ನಂತರ ಚಿತ್ರೀಕರಣ ಮುಗಿಸಿದ ಮೊದಲ ಸಿನಿಮಾ ಕೂಡಾ ಇದಾಗಿದೆ. ಈ ಚಿತ್ರವನ್ನು ಆಸ್ಕರ್ ಕೃಷ್ಣ ನಿರ್ದೇಶನ ಮಾಡಿ ಚಿತ್ರದಲ್ಲಿ ಅವರೇ ನಾಯಕರಾಗಿ ನಟಿಸಿದ್ದಾರೆ.
ಬೆಂಗಳೂರು, ತುಮಕೂರು, ಕುಣಿಗಲ್ ಹಾಗೂ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ ಚಿತ್ರತಂಡ ಇತ್ತೀಚೆಗೆ ಕೊನೆಯ ದಿನದ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ. ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಸಿನಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಈ ಚಿತ್ರದ ಮೂಲಕ ಕೆಲಸ ದೊರೆತು ಜೀವನಕ್ಕೆ ಆಸರೆಯಾಗಿತ್ತು. ಅಲ್ಲದೆ ಇತರೆ ಸಿನಿಮಾಗಳು ಚಿತ್ರೀಕರಣ ಪ್ರಾರಂಭಿಸಲು ಪ್ರೇರೇಪಣೆಯಾಯಿತು. ಸದ್ಯದಲ್ಲೇ ಚಿತ್ರಮಂದಿರಗಳು ಓಪನ್ ಆಗಲಿದ್ದು, ಥಿಯೇಟರ್ ತೆರೆದ ಕೂಡಲೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ.
ಇದೊಂದು ಕಾಮಿಡಿ, ಕ್ರೈಂ ಕಥಾಹಂದರವುಳ್ಳ ಚಿತ್ರವಾಗಿದ್ದು, ಸ್ನೇಹ, ಪ್ರೀತಿ, ದ್ವೇಷ, ರಾಜಕೀಯ, ಸಾಮಾಜಿಕ ಜೀವನ, ಕಾನೂನು ವ್ಯವಸ್ಥೆ ಇದೆಲ್ಲವನ್ನೂ ಚಿತ್ರದ ಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. 5-6 ತಿಂಗಳಿಂದ ಚಿತ್ರಮಂದಿರ ತೆರೆಯದೆ ಸಿನಿಮಾ ನೋಡದಂತೆ ಆಗಿರುವ ಸಿನಿಪ್ರಿಯರಿಗೆ ಈ ಸಿನಿಮಾ ಫುಲ್ ಮೀಲ್ಸ್ ಆಗಲಿದೆ ಎಂಬುದು ನಿರ್ದೇಶಕರ ಮಾತು. ಸೆವೆನ್ ರಾಜ್ ಈ ಚಿತ್ರವನ್ನು ನಿರ್ಮಿಸಿ ಚಿತ್ರದಲ್ಲಿ ಪಾತ್ರವೊಂದರನ್ನು ನಿರ್ವಹಿಸಿದ್ದಾರೆ.
ಲೋಕೇಂದ್ರ ಸೂರ್ಯ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಅವರೂ ಸಹ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಮಲಯಾಳಿ ಚೆಲುವೆ ಗೌರಿ ನಾಯರ್ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಅನಂತ್ ಆರ್ಯನ್ ಸಂಗೀತ, ಗಗನ್ ಕುಮಾರ್ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ಅಕುಲ್ ನೃತ್ಯ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಸಹನಿರ್ದೇಶನ ಈ ಚಿತ್ರಕ್ಕಿದೆ.