ಪತ್ನಿ ಕೊಲೆಗೈದು ಕತ್ತರಿಸಿ ಹೊಲದಲ್ಲೆಸೆದ ಪಾಪಿ ಪತಿ!

author img

By

Published : Nov 23, 2022, 12:54 PM IST

ಪತ್ನಿ ಕೊಲೆಗೈದು ಕತ್ತರಿಸಿ ಹೊಲದಲ್ಲೆಸೆದ ಪಾಪಿ ಪತಿ!

ನವೆಂಬರ್ 8 ರಂದು ರಾಂಪುರ ಕಲಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಲ್ಹೇರಿಯಾ ಗ್ರಾಮದ ಹೊಲವೊಂದರಲ್ಲಿ ಮಹಿಳೆಯ ದೇಹದ ಭಾಗಗಳು ಸಿಕ್ಕಿದ್ದು, ಅವು ಜ್ಯೋತಿಯದು ಎಂದು ಗುರುತಿಸಲಾಗಿದೆ ಎಂದು ಸೀತಾಪುರ ಎಸ್ಪಿ ಜಿ. ಸುಶೀಲ್ ಚಂದ್ರಭಾನ್ ಹೇಳಿದ್ದಾರೆ.

ಸೀತಾಪುರ (ಉತ್ತರ ಪ್ರದೇಶ) : ತನ್ನ ಪತ್ನಿಯನ್ನು ಕೊಲೆಗೈದ ವ್ಯಕ್ತಿಯೊಬ್ಬ ಆಕೆಯ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಹೊಲದಲ್ಲಿ ಬಿಸಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಕೃತ್ಯಕ್ಕೆ ಆರೋಪಿಯ ಗೆಳೆಯನೊಬ್ಬ ಸಾಥ್ ನೀಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಕಜ್ ಮೌರ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನವೆಂಬರ್ 8 ರಂದು ಮಹಿಳೆಯ ಶವ ಪತ್ತೆಯಾಗಿದ್ದು, ಆರೋಪಿಗೆ ಸಹಾಯ ಮಾಡಿದ ಸ್ನೇಹಿತನನ್ನೂ ಪೊಲೀಸರು ಬಂಧಿಸಿದ್ದಾರೆ.

ಪಂಕಜ್ ಬಾರಾಬಂಕಿಯ ಜ್ಯೋತಿ (38) ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಪಂಕಜ್ ಜ್ಯೋತಿಯ ನಡತೆಯನ್ನು ಶಂಕಿಸಿ ಆಕೆಯನ್ನು ಕೊಲ್ಲಬೇಕೆಂದು ತೀರ್ಮಾನಿಸಿದ್ದನಂತೆ. ನವೆಂಬರ್ 8 ರಂದು ರಾಂಪುರ ಕಲಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಲ್ಹೇರಿಯಾ ಗ್ರಾಮದ ಹೊಲವೊಂದರಲ್ಲಿ ಮಹಿಳೆಯ ದೇಹದ ಭಾಗಗಳು ಸಿಕ್ಕಿದ್ದು, ಅವು ಜ್ಯೋತಿಯದು ಎಂದು ಗುರುತಿಸಲಾಗಿದೆ ಎಂದು ಸೀತಾಪುರ ಎಸ್ಪಿ ಜಿ. ಸುಶೀಲ್ ಚಂದ್ರಭಾನ್ ಹೇಳಿದ್ದಾರೆ.

ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸರ್ಕಲ್ ಆಫೀಸರ್ ಸಿಧೌಲಿ, ಪೊಲೀಸರು ಹೊಲದಿಂದ ಮಹಿಳೆಯ ಮುಂಡ, ಕತ್ತರಿಸಿದ ಬಲಗೈ ಮತ್ತು ಕಾಲುಗಳನ್ನು ವಶಪಡಿಸಿಕೊಂಡಿದ್ದರು. ಸಿಕ್ಕಿರುವ ಭಾಗಗಳು ಮಹಿಳೆಯ ದೇಹದ್ದು ಎಂದು ಫೋರೆನ್ಸಿಕ್ ತಜ್ಞರು ಹೇಳಿದ್ದರು. ಆದರೆ ನಾವು ಆಕೆಯ ಗುರುತನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಇದಾಗಿ ಕೆಲ ದಿನಗಳ ನಂತರ ವಿರೂಪಗೊಂಡ ರುಂಡ ಸಿಕ್ಕಿತ್ತು. ಸ್ಕೆಚ್ ಬಿಡಿಸುವ ತಜ್ಞರನ್ನು ಕರೆಸಿ ಮುಖದ ಸ್ಕೆಚ್ ಬರೆಸಲಾಯಿತು. ನಂತರ ಇದನ್ನು ಬಾರಾಬಂಕಿ, ಸೀತಾಪುರ್, ಹರ್ದೋಯಿ, ರಾಯ್ ಬರೇಲಿ, ಲಕ್ನೋ ಮತ್ತು ಸುಲ್ತಾನ್‌ಪುರ ಪ್ರದೇಶಗಳಲ್ಲಿ ಸ್ಕೆಚ್​ ಪ್ರತಿಯನ್ನು ಹಂಚಲಾಯಿತು.

ಕೆಲ ದಿನಗಳ ನಂತರ ಬಾರಾಬಂಕಿಯ ಮಾಲತಿ ಸಿಂಗ್ ಎಂಬುವರು ಬಂದು ತಾನು ಮೃತಳ ತಾಯಿ ಎಂದು ಹೇಳಿದರು. ಆಗ ಮೃತಳ ಮೈಮೇಲಿದ್ದ ಬಟ್ಟೆಗಳನ್ನು ಅವರಿಗೆ ತೋರಿಸಿದಾಗ ತಕ್ಷಣವೇ ಅವು ತಮ್ಮ ಮಗಳ ಬಟ್ಟೆಗಳೆಂದು ಗುರುತಿಸಿದರು. ನಂತರ ನವೆಂಬರ್ 15 ರಿಂದ ಪರಾರಿಯಾಗಿದ್ದ ಮೃತಳ ಪತಿ ಪಂಕಜ್​ನನ್ನು ನವೆಂಬರ್ 20 ರಂದು ಬಂಧಿಸಿದೆವು ಎಂದು ಸರ್ಕಲ್ ಆಫೀಸರ್ ಸಿಧೌಲಿ ಮಾಹಿತಿ ನೀಡಿದರು.

ಇದನ್ನೂ ಓದಿ : 26 ವರ್ಷದ ಪ್ರಿಯತಮನನ್ನು ಕೊಂದ ಆರು ಮಕ್ಕಳ 32 ವರ್ಷದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.