ಮಳೆ ಹಾನಿ: ಕಲಬುರಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ

author img

By

Published : Sep 9, 2022, 8:41 AM IST

Updated : Sep 9, 2022, 9:16 AM IST

Central team visits

ಮಳೆ ಹಾನಿ ಪರಿಶೀಲನೆಗೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ‌ ನೇತೃತ್ವದ ಆಂತರಿಕ‌ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿದೆ.

ಕಲಬುರಗಿ: ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್​ ನೇತೃತ್ವದ ಆಂತರಿಕ‌ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಜಿಲ್ಲೆಗೆ ಭೇಟಿ ನೀಡಿದೆ. ಹೊನ್ನಕಿರಣಗಿ, ಜೇವರ್ಗಿ ಪಟ್ಟಣದಲ್ಲಿ ಬೆಳೆ ಹಾನಿ ಪರಿಶೀಲನೆ ಹಾಗೂ ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿದರು.

ಕಳೆದ‌ ಜುಲೈ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ‌ ಮಳೆಯಿಂದ ನಾಶವಾದ ಬೆಳೆ‌ಗಳ ವೀಕ್ಷಣೆಗೆ ತಂಡ ಆಗಮಿಸಿತ್ತು. ಈ ತಂಡದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಎಸ್.ಜಗದೀಶ ಇದ್ದರು.

ಕಲಬುರಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದ ತಂಡ: ಆರಂಭದಲ್ಲಿ ಕಲಬುರಗಿ ತಾಲೂಕಿನ ಹೊನ್ನ‌ಕಿರಣಗಿಗೆ ಭೇಟಿ ನೀಡಿದ ತಂಡ ಗ್ರಾಮದ ರೈತ ಮಹಿಳೆ ರಸೂಲ್ ಬಿ. ಅವರ 1.30 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆ ವೀಕ್ಷಿಸಿದರು. ಸ್ಥಳದಲ್ಲಿದ ಕೃಷಿ ಅಧಿಕಾರಿಗಳಿಂದ ಗ್ರಾಮದಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಹಾನಿಯ ಪ್ರಮಾಣದ‌ ಬಗ್ಗೆ ಮಾಹಿತಿ ಪಡೆದರು.

ಗ್ರಾಮದಲ್ಲಿ 3,291 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಹತ್ತಿ, ಕಡಲೆ ಬೆಳೆಯಲಾಗಿತ್ತು. ಇದರಲ್ಲಿ 680 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. 350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿಯಲ್ಲಿ 50 ಹೆಕ್ಟೇರ್ ಹಾನಿಯಾಗಿದೆ. 1,481 ರೈತರ‌ ಹೊಲಕ್ಕೆ ನೀರು ನುಗ್ಗಿ ಬೆಳೆ‌ ನಾಶವಾಗಿದೆ. ಇಲ್ಲಿ ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಪ್ರತಿ ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 4-5 ಸಾವಿರ ರೂ. ವ್ಯಯ ಮಾಡಿದ್ದಾರೆ ಎಂದು ಅಧಿಕಾರಿಗಳಿಗೆ ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಸಮದ‌ ಪಟೇಲ್, ಸಹಾಯಕ ಕೃಷಿ‌ ನಿರ್ದೇಶಕ ಚಂದ್ರಕಾಂತ ಜೀವಣಗಿ ಮಾಹಿತಿ ನೀಡಿದರು.

ನಂತರ ಇದೇ ಗ್ರಾಮದ ವಿನೋದ ಬಸನಾಳಕರ್ ಎಂಬುವವರ 10 ಎಕರೆ‌ ಪ್ರದೇಶದಲ್ಲಿ ಹಾನಿಯಾದ ತೊಗರಿ ಬೆಳೆ ವೀಕ್ಷಿಸಲಾಯಿತು. ನಂತರ ಜೇವರ್ಗಿ ಪಟ್ಟಣದಲ್ಲಿ ಮಳೆಯಿಂದ ಭಾಗಶಃ ಹಾನಿಯಾದ ಮಲ್ಲಿಕಾರ್ಜುನ ಡೂಗನಕರ್, ಧರ್ಮಣ್ಣಾ, ಮರೆಮ್ಮ ಅವರ ಮನೆಯನ್ನು ತಂಡ ವೀಕ್ಷಿಸಿತು.

30.79 ಕೋಟಿ ರೂ. ಪರಿಹಾರ: ಕಳೆದ ಆಗಸ್ಟ್ ತಿಂಗಳ ಮೊದಲ 10 ದಿನದಲ್ಲಿ ಹೆಚ್ಚಿನ‌ ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ 1,11,400 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. 805 ಮನೆಗಳು ಮಳೆಗೆ ತುತ್ತಾಗಿದ್ದು, 6 ಪ್ರಾಣಹಾನಿ ಪ್ರಕರಣ ವರದಿಯಾಗಿದೆ.

ಪ್ರಸ್ತುತ ಬೆಳೆ ಹಾನಿ ಪರಿಹಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಬುಧವಾರ 33,487 ರೈತರಿಗೆ 30.79 ಕೋಟಿ ರೂ. ಮೊದಲನೇ ಕಂತಿನಲ್ಲಿ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮೆ‌ ಮಾಡಲಾಗಿದೆ ಎಂದು ಡಿ.ಸಿ ಯಶವಂತ ವಿ.ಗುರುಕರ್ ತಿಳಿಸಿದರು.

ಜಿಲ್ಲೆಯ ಬೆಳೆ ಹಾನಿ ಪರಿಶೀಲನೆ ನಂತರ ತಂಡ ವಿಜಯಪುರ ಜಿಲ್ಲೆಗೆ ಪ್ರಯಾಣಿಸಿತು. ಇದಕ್ಕೂ ಮುನ್ನ ಕಲಬುರಗಿ ಐವಾನ-ಎ-ಶಾಹಿ ಅತಿಥಿಗೃಹದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರದ ತಂಡ, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಮನೆ, ಬೆಳೆ ಹಾನಿ, ಮಾನವ-ಪ್ರಾಣಿ ಹಾನಿ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ.

ಇದನ್ನೂ ಓದಿ: ಕೇಂದ್ರ ತಂಡದ ಅಧ್ಯಯನ ಪ್ರವಾಸದ ನಂತರ ಮತ್ತೊಮ್ಮೆ ಸಭೆ, ಪರಿಹಾರಕ್ಕೆ ಬೇಡಿಕೆ ಸಲ್ಲಿಕೆ: ಸಿಎಂ

Last Updated :Sep 9, 2022, 9:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.