ETV Bharat / city

ಮದುವೆ ರದ್ದಾದ ನಂತರ ಸ್ತ್ರೀಧನ ಹಿಂದಿರುಗಿಸದ ಪ್ರಕರಣ; ವಿಚಾರಣೆಗೆ ಅರ್ಹ ಎಂದ ಹೈಕೋರ್ಟ್

author img

By

Published : Jun 17, 2022, 6:45 AM IST

divorce
divorce

ವಿವಾಹ ರದ್ದಾದ ನಂತರ ಪತಿಯ ಮನೆಗೆ ಪತ್ನಿ ತಂದಿದ್ದ ವಸ್ತುಗಳನ್ನು ಗಂಡನ ಮನೆಯವರು ಇರಿಸಿಕೊಂಡಿದ್ದರೆ ಅದು ವಿಚಾರಣೆಗೆ ಅರ್ಹ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಬೆಂಗಳೂರು : ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಹಾಗೂ ಮದುವೆ ರದ್ದಾದ ಬಳಿಕ ಪತ್ನಿಯ ತವರು ಮನೆಯವರು ಪತಿಗೆ ನೀಡಿದ ಸ್ತ್ರೀಧನವನ್ನು ಮಹಿಳೆಗೆ ಹಿಂದಿರಿಗಿಸದಿದ್ದರೆ ಅಂತಹ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಅರ್ಹವಾಗಿರುತ್ತವೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ವಿವಾಹ ರದ್ದಾದ ನಂತರ ಪತಿಯ ಮನೆಗೆ ಪತ್ನಿ ತಂದಿದ್ದ ವಸ್ತುಗಳನ್ನು ಗಂಡನ ಮನೆಯವರು ಇರಿಸಿಕೊಂಡಿದ್ದನ್ನು ಪ್ರಶ್ನಿಸಿದ್ದರೆ ಐಪಿಸಿ ಸೆಕ್ಷನ್‌ 406 ಅಡಿ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಕೋರ್ಟ್ ಆದೇಶದಂತೆ ಶಾಶ್ವತ ಜೀವನಾಂಶ ನೀಡಿ ವಿವಾಹ ರದ್ದುಗೊಂಡ ನಂತರ ಸ್ತ್ರೀಧನವನ್ನು ಮರಳಿಸಲು ಕೋರಿ ಮಾಜಿ ಪತ್ನಿಯು ವಿಚಾರಣಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದನ್ನು ರದ್ದುಪಡಿಸಬೇಕೆಂದು ಕೋರಿ ಗಣೇಶ್‌ ಪ್ರಸಾದ್‌ ಹೆಗ್ಡೆ, ವಿಶ್ವನಾಥ್‌ ಹೆಗ್ಡೆ ಮತ್ತು ಅಮಿತಾ ಹೆಗ್ಡೆ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಐಪಿಸಿ ಸೆಕ್ಷನ್‌ 406ರ (ನಂಬಿಕೆ ದ್ರೋಹ) ಅಡಿ ಕ್ರಿಮಿನಲ್‌ ಪ್ರಕ್ರಿಯೆ ರದ್ದುಪಡಿಸಲು ನಿರಾಕರಿಸಿದೆ.

ಈ ಪ್ರಕರಣದಲ್ಲಿ ಅರ್ಜಿದಾರರು ಮತ್ತವರ ಕುಟುಂಬದವರಿಗೆ ಮಾಜಿ ಪತ್ನಿ ಮನೆಯವರಿಂದ ಸ್ತ್ರೀಧನದ ರೂಪದಲ್ಲಿ 9 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಹೇಳಲಾಗಿದೆ. ಅವರು ಇಟ್ಟುಕೊಂಡಿರುವ ಹಣದ ಕುರಿತಂತೆ ಅಗತ್ಯವಾಗಿ ಅರ್ಜಿದಾರರನ್ನು ಐಪಿಸಿ ಸೆಕ್ಷನ್‌ 406 ಅಡಿ ವಿಚಾರಣೆಗೆ ಒಳಪಡಿಸಬೇಕಿದೆ. ವಿಚಾರಣೆಯಲ್ಲಿ ಆರೋಪಮುಕ್ತವಾಗಿ ಅರ್ಜಿದಾರರು ಹೊರಬರಬೇಕಿದೆ ಎಂದು ಕೋರ್ಟ್ ತಿಳಿಸಿದೆ.

ಅರ್ಜಿದಾರರ ಪರ ವಕೀಲ ಎಸ್‌ ಬಾಲಕೃಷ್ಣನ್‌ ಅವರು ವಾದ ಮಂಡಿಸಿ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಮದುವೆಯನ್ನು ರದ್ದುಪಡಿಸಿ ಪತ್ನಿಗೆ ಶಾಶ್ವತ ಜೀವನಾಂಶವಾಗಿ ₹4 ಲಕ್ಷ ನೀಡುವಂತೆ ಆದೇಶಿಸಿದೆ. ಆ ಪ್ರಕಾರ, ಹಣವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ. ಆದ್ದರಿಂದ ಕೆಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ದೂರುದಾರ ಮಹಿಳೆಗೆ ಪಾವತಿಸಲು ಏನೂ ಉಳಿದಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ವಿಚ್ಛೇದಿತ ಮಹಿಳೆ ಪರ ವಕೀಲ ಪ್ರದೀಪ್‌ ನಾಯಕ್‌ ಅವರು ಪ್ರತಿ ವಾದ ಮಂಡಿಸಿ ಶಾಶ್ವತ ಜೀವನಾಂಶವಾಗಿ ನೀಡಿರುವ ₹4 ಲಕ್ಷದಲ್ಲಿ ಮದುವೆಗೂ ಮುನ್ನ ನೀಡಿರುವ ಹಣ ಸೇರಿಲ್ಲ. ಮದುವೆ ವೇಳೆ ಸ್ತ್ರೀಧನದ ರೂಪದಲ್ಲಿ ಒಮ್ಮೆ 4 ಲಕ್ಷ ರೂಪಾಯಿ ಮತ್ತು ಇನ್ನೊಮ್ಮೆ ನೀಡಿರುವ ₹5 ಲಕ್ಷವನ್ನು ಪತಿ ಮತ್ತವರ ಕುಟುಂಬದವರು ಇಟ್ಟುಕೊಳ್ಳುವಂತಿಲ್ಲ. ನೋಟಿಸ್‌ ನೀಡಿದರೂ ಅದನ್ನು ಮರಳಿಸದಿರುವುದು ನಂಬಿಕೆ ದ್ರೋಹವಾಗಿದೆ ಎಂದು ಪ್ರತಿಪಾದಿಸಿದರು.

ಏನಿದು ಪ್ರಕರಣ?: ಮುಂಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದವರಾದ ಗಣೇಶ್‌ ಪ್ರಸಾದ್‌ ಹೆಗ್ಡೆ ಮತ್ತು ಬೆಂಗಳೂರಿನ ಮಹಿಳೆ 1998ರಲ್ಲಿ ಮದುವೆಯಾಗಿದ್ದರು. ವಧುವಿನ ಮನೆಯವರು 9 ಲಕ್ಷ ರೂ. ಸ್ತ್ರೀಧನ ನೀಡಿದ್ದರು. 2001ರಲ್ಲಿ ಗಂಡ - ಹೆಂಡತಿ ನಡುವೆ ಭಿನ್ನಾಭಿಪ್ರಾಯ ಮೂಡಿ, ಪತ್ನಿ ಗಂಡನ ಮನೆ ತೊರೆದಿದ್ದರು. ಮದುವೆ ರದ್ಧತಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ನಡುವೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 2009ರಲ್ಲಿ ಖಾಸಗಿ ದೂರು ದಾಖಲಿಸಿದ್ದ ಮಹಿಳೆಯು, ಮದುವೆ ಸಂದರ್ಭದಲ್ಲಿ ನೀಡಿದ್ದ 9 ಲಕ್ಷವನ್ನು ಪತಿ ಹಿಂದಿರುಗಿಸಿಲ್ಲ ಎಂದು ಆರೋಪಿಸಿ, ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪತಿಯ ಕುಟುಂಬದ ಸದಸ್ಯರನ್ನ ಆರೋಪಿಗಳನ್ನಾಗಿ ಮಾಡಲಾಗಿತ್ತು.

ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಬಾಂಬೆ ಹೈಕೋರ್ಟ್ 2014ರಲ್ಲಿ ದಂಪತಿಯ ವಿವಾಹ ರದ್ದುಗೊಳಿಸಿ ಪತ್ನಿಗೆ 4 ಲಕ್ಷ ಕಾಯಂ ಜೀವನಾಂಶ ನೀಡುವಂತೆ ಆದೇಶ ನೀಡಿತು. ವಿಚ್ಛೇದನ ತೀರ್ಪಿನಂತೆ ಶಾಶ್ವತ ಜೀವನಾಂಶ ನೀಡಿದ ನಂತರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪತ್ನಿ ದಾಖಲಿಸಿದ್ದ ನಂಬಿಕೆ ದ್ರೋಹದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ವಜಾ ಮಾಡಲು ನ್ಯಾಯಾಲಯ ನಿರಾಕರಿಸಿದೆ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಮಮತಾ ಸಭೆಯಿಂದ ದೂರ ಉಳಿದ ಪ್ರತಿಪಕ್ಷಗಳ ಮೇಲೆ ಬಿಜೆಪಿ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.