ETV Bharat / city

ರಾಜ್ಯದಲ್ಲಿ ಪ್ರವಾಸೋದ್ಯಮ‌ ಉತ್ತೇಜಿಸಲು ಖಾಸಗಿ ಕಂಪನಿಗಳಿಂದ 'ದಿ ಡೆಕ್ಕನ್ ಸರ್ಕ್ಯೂಟ್' ವಿಮಾನಯಾನ

author img

By

Published : Jul 21, 2021, 6:58 AM IST

ರಾಜ್ಯದ ಕಲಬುರಗಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಕ್ಕನ್ ವಿಮಾನಯಾನ ಸಂಸ್ಥೆ ಚಿಕ್ಕ ವಿಮಾನಗಳ ಹಾಗೂ ಹೆಲಿಕಾಪ್ಟರ್​ಗಳ ವಾಯುಯಾನ ಸೇವೆ ಒದಗಿಸುವ ಸಂಬಂಧ ಒಂದು ಪ್ರಾತ್ಯಕ್ಷಿಕೆ ತೋರಿಸಿದ್ದು, ಅದನ್ನು ಸಚಿವ ಯೋಗೇಶ್ವರ್ ವೀಕ್ಷಿಸಿದರು.

Bangalore
ಬೆಂಗಳೂರು

ಬೆಂಗಳೂರು: ಮಾಗಡಿಯ ಮಂಚನಬೆಲೆ ಜಲಾಶಯದ ಸಮೀಪ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸಲು ಅರಣ್ಯ, ವಸತಿ ಮತ್ತು ವಿಹಾರಧಾಮದಿಂದ ಸುಸಜ್ಜಿತ ರೆಸಾರ್ಟ್​ಗಳ ನಿರ್ಮಾಣ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪ್ರವಾಸೋದ್ಯಮ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಗಳ ಜೊತೆ ಸಭೆ ನಡೆಸಿದರು.

ಈ ಸಭೆಯಲ್ಲಿ ರಾಜ್ಯದ ಕಲಬುರಗಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಕ್ಕನ್ ವಿಮಾನಯಾನ ಸಂಸ್ಥೆ, ಚಿಕ್ಕ ವಿಮಾನಗಳ ಹಾಗೂ ಹೆಲಿಕಾಪ್ಟರ್​ಗಳ ವಾಯುಯಾನ ಸೇವೆಯನ್ನು ಒದಗಿಸುವ ಸಂಬಂಧ ಒಂದು ಪ್ರಾತ್ಯಕ್ಷಿಕೆಯನ್ನ ತೋರಿಸಿದ್ದು, ಅದನ್ನು ಸಚಿವ ಯೋಗೇಶ್ವರ್ ವೀಕ್ಷಿಸಿದರು.

ಸಚಿವರೆದುರು ಪ್ರಾತ್ಯಕ್ಷಿಕೆ ಪ್ರದರ್ಶಿಸಿದ ಸಂಸ್ಥೆ

ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಟ್ರೇಡ್ ಇಂಡಿಯಾ ಪ್ರೈ.ಲಿ ಸಂಸ್ಥೆಯವರು The Deccan Circuit ಪ್ರಾತ್ಯಕ್ಷಿಕೆಯನ್ನು ಸಚಿವರಿಗೆ ಪ್ರದರ್ಶಿಸಿದರು. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ 3,000 ಕಿ.ಮೀ. ವಾಯುಯಾನ ಸೇವೆಯನ್ನು ಡೆಕ್ಕನ್ ಸಂಸ್ಥೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರವಾಸಿ ಸ್ಥಳಗಳಿಗೆ ಡೆಕ್ಕನ್ ಸಂಸ್ಥೆ ತನ್ನ ಸೇವೆ ವಿಸ್ತರಿಸಲಿದ್ದು, ಪ್ರವಾಸಿ ಸ್ಥಳಗಳನ್ನು ಸಹ ಅಭಿವೃದ್ಧಿಪಡಿಸಲು ಉತ್ಸುಕವಾಗಿರುವುದಾಗಿ ಅನಿಲ್ ಕಾಮಿನೇನ ತಿಳಿಸಿದರು.

ಅತ್ಯುತ್ತಮ ಪ್ರವಾಸಿ ತಾಣವಾಗಿಸಲು ಸಚಿವರ ಸೂಚನೆ

ಸಭೆಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಮಂಚನಬೆಲೆ ಜಲಾಶಯ ಪ್ರದೇಶವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿಗೆ ಅತ್ಯಂತ ಹತ್ತಿರವಾಗಿರುವ ಈ ಪ್ರವಾಸಿ ತಾಣದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ಸ್ನೇಹಿಯಾಗಿ ಮಾಡಿದರೆ ಜನ ಸಾಮಾನ್ಯರು ಬರುತ್ತಾರೆ.

ಮಂಚನಬೆಲೆ ಜಲಾಶಯದಲ್ಲಿ ನಿರ್ಮಾಣ ಮಾಡುವ ಜಂಗಲ್ ಲಾಡ್ಜ್ ರೆಸಾರ್ಟ್ ಪರಿಸರ ಸ್ನೇಹಿಯಾಗಿರಬೇಕು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಹಾಗೂ ಜಲಾಶಯಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ10 ಎಕರೆ ಕಂದಾಯ ಜಮೀನನ್ನು ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗೆ ಸೂಚಿಸಿದರು.

ದ್ವೀಪಗಳ ವೀಕ್ಷಿಸಿದ ಸಚಿವ

ಕಳೆದ ವಾರ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಚಿವರಾದ ನಾರಾಯಣಗೌಡರ ಜೊತೆ ಕೆಆರ್​ಎಸ್​ಗೆ ತೆರಳಿದ್ದಾಗ 40 ಕಿ.ಮೀ ಹಿನ್ನೀರಿನಲ್ಲಿ ಸ್ಪೀಡ್ ಬೋಟ್​ನಲ್ಲಿ ತೆರಳಿದ್ದಾಗಿ ತಿಳಿಸಿದ ಸಚಿವ ಯೋಗೇಶ್ವರ್, ಸುಮಾರು 3 ದ್ವೀಪಗಳನ್ನು ವೀಕ್ಷಿಸಿದ್ದಾಗಿ ಹೇಳಿದರು. ಅಲ್ಲಿ ಜಲ ಕ್ರೀಡೆಗಳನ್ನು ಆರಂಭಿಸಬೇಕು.

ಕೆಆರ್​ಎಸ್​ ಹಿನ್ನೀರಿನಲ್ಲಿ 330 ಎಕರೆ ಜಮೀನಿದೆ ಹಾಗೂ ಅತ್ಯಂತ ಪುರಾತನವಾದ ವೇಣುಗೋಪಾಲ ದೇವಾಲಯವಿದೆ. 1,450 ರೂ. ಕೋಟಿ ವೆಚ್ಚದಲ್ಲಿ ಕೆ.ಆರ್.ಎಸ್ ಜಲಾಶಯದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ. ಪ್ರವಾಸೋದ್ಯಮ ಇಲಾಖೆಯಿಂದ ಜಲಕ್ರೀಡೆಗಳನ್ನು ಆರಂಭಿಸಲು ಸಹ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್‌ಗೆ ಸೂಚಿಸಿದರು.

ಇದನ್ನೂ ಓದಿ: ಮಗ ಕೇಂದ್ರ ಸಚಿವ... ಇಳಿವಯಸ್ಸಿನ ತಂದೆ-ತಾಯಿಯದ್ದು ಗದ್ದೆಯಲ್ಲಿ ಕೆಲಸ, ಗುಡಿಸಿಲಲ್ಲೇ ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.