ETV Bharat / city

ಶೇ.40 ಕಮಿಷನ್ ಆರೋಪ ಮೇಲೆ ಚರ್ಚೆಗೆ ಅವಕಾಶ ನಿರಾಕರಣೆ : ಸಿಎಂ ಬೊಮ್ಮಾಯಿ-ಸಿದ್ದರಾಮಯ್ಯ ಜಟಾಪಟಿ

author img

By

Published : Mar 23, 2022, 4:56 PM IST

ನಾನು ಜನರ ಪರವಾಗಿ ಮಾತನಾಡುತ್ತಿದ್ದೇನೆ. ಇದರ ಬಗ್ಗೆ ಸಮಗ್ರ ಚರ್ಚೆ ಮಾಡಬೇಕು. ಇದನ್ನೆಲ್ಲಾ ನಾವು ನೋಡಿಕೊಂಡು ಇರಬೇಕಾ?. ಅದು ಜನರ‌ ಬೆವರ ಹಣವಾಗಿದೆ. ಅದರ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು..

basavaraj-bommai and siddaramaiah
basavaraj-bommai and siddaramaiah

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧದ ಶೇ.40ರಷ್ಟು ಕಮಿಷನ್ ಆರೋಪ ಕುರಿತ ನಿಲುವಳಿ ಸೂಚನೆ ನೋಟಿಸ್ ತಿರಸ್ಕಾರವಾದ ವಿಷಯವು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷದ ನಡುವೆ ಜಟಾಪಟಿಗೆ ಕಾರಣವಾಯಿತು. ನಿಲುವಳಿ ನೋಟಿಸ್ ತಿರಸ್ಕಾರ ಮಾಡಿದ್ದ ಸ್ಪೀಕರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಈಗ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.

ಕಮಿಷನ್​ ಆರೋಪದ ಬಗ್ಗೆ ಚರ್ಚೆ ನಡೆಸಲು ನಾನು ಬೆಳಗಾವಿ ಅಧಿವೇಶನದ ವೇಳೆ ನಿಲುವಳಿ ಸೂಚನೆ ಕೊಟ್ಟಿದ್ದೇನೆ. ಅದು ಆಗಲಿಲ್ಲ. ಗುತ್ತಿಗೆದಾರರು ಯಾವ ಕಾಲದಲ್ಲೂ ಶೇ.40ರಷ್ಟು ಕಮಿಷನ್ ಬಗ್ಗೆ ಪತ್ರ ಬರೆದಿರಲಿಲ್ಲ. ಇದು ದಿನಾ ನಡೆಯುವ ಅವ್ಯವಹಾರವಾಗಿದೆ. ಆದರೆ, ಇದನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿ ಕೊಡುತ್ತಿಲ್ಲ ಎಂದು ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ನಾನು ಜನರ ಪರವಾಗಿ ಮಾತನಾಡುತ್ತಿದ್ದೇನೆ. ಇದರ ಬಗ್ಗೆ ಸಮಗ್ರ ಚರ್ಚೆ ಮಾಡಬೇಕು. ಇದನ್ನೆಲ್ಲಾ ನಾವು ನೋಡಿಕೊಂಡು ಇರಬೇಕಾ?. ಅದು ಜನರ‌ ಬೆವರ ಹಣವಾಗಿದೆ. ಅದರ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ, ನಾವು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆನೇ ಇಲ್ಲ.

ರಾಜ್ಯದಲ್ಲಿ ಏನಾಗಿದೆ?, ಏನಾಗುತ್ತದೆ ಎಂಬುದರ ಬಗ್ಗೆ ತನಿಖೆ ಆಗಬೇಕು. ಗುತ್ತಿಗೆದಾರರು ಪತ್ರ ಏಕೆ ಬರೆದರು, ಯಾರ ಚಿತಾವಣೆಯಲ್ಲಿ ಬರೆದರು ಎಂಬ ಬಗ್ಗೆ ತನಿಖೆ ನಡೆಯಬೇಕು. ಅದು ಆಧಾರರಹಿತ ಪತ್ರವಾಗಿದೆ. ಅದರಲ್ಲಿ ಯಾವುದೇ ಆಧಾರ ಇಲ್ಲ ಎಂದರು. ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಚರ್ಚೆ ಮಾಡಲು ಯಾವುದೇ ತಕರಾರಿಲ್ಲ.

ಅದರ ಬಗ್ಗೆ ಮುಕ್ತ ಚರ್ಚೆ ಮಾಡೋಣ. ಯಾರ ಕಾಲದಲ್ಲಿ ಏನೇನು ಆಗಿದೆ ಎಂಬ ಬಗ್ಗೆ ಚರ್ಚೆ ಮಾಡೋಣ. ಆದರೆ, ನಿಯಮ 60ರಡಿ ಇದು ಬರಲ್ಲ. ಬೇರೆ ನಿಯಮದಲ್ಲಿ ತನ್ನಿ ಈ ಬಗ್ಗೆ ವ್ಯಾಪಕ ಚರ್ಚೆ ಮಾಡೋಣ. ವಿಷಯ ಮಂಡನೆ ಮಾಡುವ ಬಗ್ಗೆ ಗಾಂಭೀರ್ಯತೆ ಇದ್ದರೆ, ಚರ್ಚೆ ಮಾಡೋಣ. ಆದರೆ, ಈ ನಿಯಮಾವಳಿಯಲ್ಲಿ ಬೇಡ ಎಂದು ಸಿಎಂ ಮನವಿ ಮಾಡಿದರು.

ನಿಮಗೆ ಶೋಭೆ ತರಲ್ಲ : ಇದೇ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಮಗೂ ಅನುಭವ ಇದೆ. ಸ್ಪೀಕರ್ ಈ ನಿಯಮಾವಳಿಯಲ್ಲಿ ಬರುವುದಿಲ್ಲ ಎಂದ ಬಳಿಕ ಅದನ್ನು ಅದೇ ನಿಯಮಾವಳಿಯಲ್ಲೇ ಕೊಡಿ ಎಂದು ಹೇಳುವುದು ಅಕ್ಷಮ್ಯ ಅಪರಾಧ. ಇದು ನಿಮಗೆ ಶೋಭೆ ತರಲ್ಲ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು.

ಅಲ್ಲದೇ, ಬೇರೆ ನಿಯಮಾವಳಿಯಲ್ಲಿ ಚರ್ಚೆಗೆ ಅವಕಾಶ ನೀಡೋಣ. ಅಲ್ಲಿ ಚರ್ಚೆ ಮಾಡೋಣ. ಯಾರ ಕಾಲದಲ್ಲಿ ಏನು ಆಗಿದೆ ಎಂಬ ಬಗ್ಗೆ ಚರ್ಚೆ ಮಾಡೋಣ ಎಂದು ಬಿಎಸ್‌ವೈ​ ಮನವಿ ‌ಮಾಡಿದರು. ಇದೇ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಈ ಸಂಬಂಧ ಸಿಎಜಿ ವರದಿ ಇದೆ. ಅದರ ಬಗ್ಗೆ ಚರ್ಚೆ ಆಗಲ್ಲ. ಯಾರೋ ಒಬ್ಬ ಮಾಜಿ ಶಾಸಕರ ಆರೋಪದ ಮೇಲೆ ಪತ್ರಿಕೆಯಲ್ಲಿ ಬಂದಿರೋ ಬಗ್ಗೆ ಚರ್ಚೆ ಮಾಡಬೇಕಾ?. ಇದೊಂದು ಷಡ್ಯಂತ್ರ.‌ ನಾನು ಈ ಬಗ್ಗೆ ಮಾನಹಾನಿ ಹಾಕುತ್ತಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರ : ಕಾಂಗ್ರೆಸ್ ಸದಸ್ಯರಿಂದ ಧರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.