ETV Bharat / city

ಹಲಾಲ್ - ಜಟ್ಕಾ ಕಟ್ ವಿವಾದದ ಮಧ್ಯೆ ಪಶುಪಾಲನೆ ಇಲಾಖೆ 'ಸ್ಟನ್ನಿಂಗ್' ಆದೇಶ: ಏನಿದು ಸುತ್ತೋಲೆ?

author img

By

Published : Apr 2, 2022, 6:50 PM IST

ಪ್ರಾಣಿಗಳನ್ನು ವಧೆ ಮಾಡುವ ಮೊದಲು ಅವುಗಳ ಪ್ರಜ್ಞೆ ತಪ್ಪಿಸುವಂತೆ ಆದೇಶ ಹೊರಡಿಸಲಾಗಿದೆ.

stunning order
ಸ್ಟನ್ನಿಂಗ್' ಆದೇಶ

ಬೆಂಗಳೂರು: ಹಲಾಲ್ ವಿವಾದದ ಮಧ್ಯೆ ಇದೀಗ ಪಶುಸಂಗೋಪನೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರಾಣಿ ವಧಾಗಾರಗಳಲ್ಲಿ ಪ್ರಾಣಿಗಳನ್ನು ವಧೆ ಮಾಡುವ ಮುನ್ನ ಕಡ್ಡಾಯವಾಗಿ ಅವುಗಳ ಪ್ರಜ್ಞೆ ತಪ್ಪಿಸುವಂತೆ ಸುತ್ತೋಲೆ ಹೊರಡಿಸಿದೆ.

ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಪಶು ಪಾಲನೆ ಇಲಾಖೆ ಸುತ್ತೋಲೆ ಹೊರಡಿಸಿ, ಬೆಂಗಳೂರಿನ‌ ವಧಾಗಾರಗಳಲ್ಲಿ ಕಡ್ಡಾಯವಾಗಿ 'ಸ್ಟನ್ನಿಂಗ್' ಮಾಡುವಂತೆ ಸುತ್ತೋಲೆ ಹೊರಡಿಸಿದೆ. ಸ್ಟನ್ನಿಂಗ್ ಅಂದರೆ ಪ್ರಜ್ಞೆ ತಪ್ಪಿಸಿ ಬಳಿಕ ಪ್ರಾಣಿಗಳ ವಧೆ‌ ಮಾಡುವುದು.‌ ಅಂದರೆ ಪ್ರಾಣಿಗಳನ್ನು ಹಿಂಸಿಸಿ ವಧೆ ಮಾಡದಂತೆ ಸೂಚನೆ ನೀಡಲಾಗಿದೆ.

stunning order
ಸ್ಟನ್ನಿಂಗ್ ಆದೇಶ

ಬೆಂಗಳೂರು ನಗರ ಜಿಲ್ಲೆಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಹೊರಡಿಸಿದ ಈ ಆದೇಶದಲ್ಲಿ ಬೆಂಗಳೂರು ನಗರದ ಎಲ್ಲಾ ಅಧಿಕೃತ ಪ್ರಾಣಿ ವಧಾಗಾರಗಳಲ್ಲಿ/ಕೋಳಿ ಅಂಗಡಿಗಳಲ್ಲಿ PCA (Slaughter House) Rules 2001 ಸೆಕ್ಷನ್ 6ರ ಸಬ್ ಸೆಕ್ಷನ್ 4ರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದೆ.

ಪ್ರಾಣಿಗಳನ್ನು ವಧೆ ಮಾಡುವ ಮುನ್ನ ಕಡ್ಡಾಯವಾಗಿ STUNNING ಮಾಡಿ ಪ್ರಜ್ಞೆ ತಪ್ಪಿಸಿ, ವಧೆ ಮಾಡಲು ಕ್ರಮವಹಿಸುವಂತೆ ಎಲ್ಲರಿಗೂ ಸೂಚಿಸಬೇಕಾಗಿ ಕೋರುತ್ತೇನೆ. ಕೋಳಿ ಅಂಗಡಿಗಳ ಪರವಾನಗಿ ನೀಡುವಾಗ ಸ್ಟನ್ನಿಂಗ್ ವ್ಯವಸ್ಥೆ ಪರಿಶೀಲಿಸಿ ಪರವಾನಗಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಆಕ್ಷೇಪ: ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ತಾರಕಕ್ಕೇರಿರುವ ಮಧ್ಯೆ ಪಶುಪಾಲನೆ ಇಲಾಖೆ ಈ ಆದೇಶ ಹೊರಡಿಸಿರುವುದು ಕುತೂಹಲ ಕೆರಳಿಸಿದೆ. ವಧಾಗಾರಗಳಲ್ಲಿ ಹಲಾಲ್ ಮಾಡುವಾಗ ಪ್ರಾಣಿಗಳನ್ನು ಹಿಂಸಿಸಿ ವಧಿಸಲಾಗುತ್ತದೆ ಎಂಬುದು ಹಿಂದೂ ಸಂಘಟನೆಗಳ ಆರೋಪವಾಗಿತ್ತು. ಕುರಿಗಳನ್ನು ಹಿಂಸಿಸದೆ ವಧಿಸುವುದನ್ನು ಜಟ್ಕಾ ಕಟ್ ಎನ್ನಲಾಗುತ್ತದೆ.

ಅಲ್ಪಸಂಖ್ಯಾತರು ಧಾರ್ಮಿಕ ಆಚರಣೆಯ ಅಂಗವಾಗಿ ಹಲಾಲ್ ಕಟ್ ಮಾಡಿ ಪ್ರಾಣಿಗಳನ್ನು ಹಿಂಸಿಸಿ ವಧಿಸುತ್ತಾರೆ. ಹೀಗಾಗಿ ಹಲಾಲ್ ಮಾಂಸ ಖರೀದಿಸದಂತೆ ಹಿಂದೂ‌ಪರ ಸಂಘಟನೆಗಳು ಅಭಿಯಾನ‌ ನಡೆಸುತ್ತಿವೆ. ಈ ವಿವಾದದ ಮಧ್ಯೆ ವಧಾಗಾರಗಳಲ್ಲಿ ಸ್ಟನ್ನಿಂಗ್ ಮಾಡಿ ಪ್ರಾಣಿಗಳ ಪ್ರಜ್ಞೆ ತಪ್ಪಿಸಿ ವಧಿಸುವಂತೆ ಪಶುಪಾಲನೆ ಇಲಾಖೆ ಆದೇಶ ಹೊರಡಿಸಿರುವುದು ಅಲ್ಪಸಂಖ್ಯಾತ ಮಾಂಸ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ವಿಧಿ ವಿಜ್ಞಾನ ವಿವಿ ನೀಡುವಂತೆ ಅಮಿತ್ ಶಾಗೆ ಮನವಿ: ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.