ETV Bharat / city

ಶಾಸಕರ ಕ್ಷೇತ್ರದಲ್ಲಿನ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ: ಸಚಿವ ಬಿ.ಶ್ರೀರಾಮುಲು

author img

By

Published : Mar 25, 2021, 2:06 PM IST

ಹಣಕಾಸು ಇಲಾಖೆ ಜೊತೆ ಮಾತುಕತೆ ನಡೆಸಿ, ಶಾಸಕರ ಕ್ಷೇತ್ರಗಳಲ್ಲಿನ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

Social Welfare Minister B. Sriramulu
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು

ಬೆಂಗಳೂರು: ಶಾಸಕರ ಕ್ಷೇತ್ರಗಳಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ. ಆದಷ್ಟು ಬೇಗ ಹಣಕಾಸು ಇಲಾಖೆ ಜೊತೆ ಮಾತುಕತೆ ನಡೆಸಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಶಾಸಕರ ಕ್ಷೇತ್ರದಲ್ಲಿನ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ: ಸಚಿವ ಬಿ.ಶ್ರೀರಾಮುಲು

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕರ ಸಭೆ ನಂತರ ಮಾತನಾಡಿದ ಅವರು, ಇಂದು ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು. ಒಂದು ಕಡೆ ಆಡಳಿತ, ಮತ್ತೊಂದು ಕಡೆ ಅಭಿವೃದ್ಧಿ ಎರಡು ಮಂತ್ರಗಳನ್ನು ಇಟ್ಟುಕೊಂಡು ಯಾವ ರೀತಿ ಆಡಳಿತ ನಡೆಸಬೇಕು. ಆಡಳಿತ ನಡೆಸುವ ಸಂದರ್ಭದಲ್ಲಿ ಸಚಿವರು, ಮುಖ್ಯಮಂತ್ರಿಗಳು ಯಾವ ರೀತಿ ಶಾಸಕರ ಜೊತೆ ಕಾರ್ಯನಿರ್ವಹಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ ಎಂದರು.

ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ನೀರಾವರಿ ಇಲಾಖೆಯಲ್ಲಿ ಶಾಸಕರು ಕೆಲವೊಂದು ಕೆಲಸಗಳು ತ್ವರಿತಗತಿಯಲ್ಲಿ ನಡೆಯಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ನಮ್ಮ-ನಮ್ಮ ಇಲಾಖೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳ ಪ್ರಗತಿ ಸಾಧಿಸಲು ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ನಮ್ಮ-ನಮ್ಮ ಕ್ಷೇತ್ರಗಳ ಅನುದಾನ ಬಿಡುಗಡೆ ಕುರಿತು ಚರ್ಚೆ ನಡೆದಿದೆ. ಯಾವ ಕಾಮಗಾರಿಗಳೂ ವಿಳಂಬ ಆಗಬಾರದು ಎಂದು ಸಿಎಂ ಆದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಥಿಕ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ, ಆದಷ್ಟು ಬೇಗ ಶಾಸಕರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕೊರೊನಾ ಕಾರಣದಿಂದಾಗಿ ಕಾಮಗಾರಿಗಳು ವಿಳಂಬವಾಗಿರುವುದು ಸತ್ಯ. ಹಣಕಾಸು ಇಲಾಖೆಯಿಂದ ಕೆಲವೊಮ್ಮೆ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿದೆ. ಕೆಲವೊಂದು ಕಾಮಗಾರಿಗಳು ಅರ್ಧಕ್ಕೆ ಸ್ಥಗಿತವಾಗಿವೆ. ಬಹಳಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಧ ಕಾಮಗಾರಿಗಳು ಮಾತ್ರ ಆಗಿವೆ. ಮುಂದೆ ಆ ರೀತಿ ಆಗಬಾರದು ಎಂದು ಆರ್ಥಿಕ ಇಲಾಖೆಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ನಿಂತಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಹಾಗಾಗಿ ಅನುದಾನ ಬಿಡುಗಡೆ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದರು.

ಕೊರೊನಾ ಹಿನ್ನೆಲೆ, ಹಣಕಾಸು ಕೊರತೆ ಎದುರಾಗಿತ್ತು. ಇನ್ಮುಂದೆ ತಡಮಾಡದೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಪ್ರತೀ ವಿಧಾನಸಭೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕಡತ ನೀಡಿದ ಸಂದರ್ಭದಲ್ಲಿ ಎಂ.ಎಲ್.ಎ ಅವರ ಕೆಲಸ ಮಾಡಿಕೊಡಬೇಕು. ಶಾಸಕರ ಕೆಲಸ ಮಾಡಿಕೊಡಬೇಕು ಅಂತ ಸಭೆಯಲ್ಲಿ ಸೂಚಿಸಿದ್ದಾರೆ. ಮುಂದೆ ಶಾಸಕರಿಂದ ಯಾವುದೇ ದೂರು ಬರದಂತೆ ನೋಡಿಕೊಳ್ಳಿ ಎಂದೂ ಕೂಡ ಸಿಎಂ ಸೂಚಿಸಿದ್ದಾರೆ. ಅದರಂತೆ ನಾವು ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಿಎಂ ಒಪ್ಪಿದರೂ ಸಚಿವರು ಅನುದಾನ ಬಿಡುಗಡೆ ಮಾಡದೆ, ಇರುವ ಬಗ್ಗೆಯೂ ಚರ್ಚೆಯಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಬಾರಿ ಸಾವಿರ ಕೋಟಿ ಕಡಿತವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿವುದು ಸಹಜ. ಅಂತಹ ಅಸಮಾಧಾನಿತ ಶಾಸಕರ ಜೊತೆ ಮಾತುಕತೆ ನಡೆಸಿ, ಇಲಾಖೆಯ ಜೊತೆ ಚರ್ಚೆ ನಡೆಸಿ ಶಾಸಕರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಹಾಗೂ ಅವರ ಕ್ಷೇತ್ರದ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿಎಂ‌ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.

ಶಾಸಕರು ಬಂದರೆ ಅನುದಾನ ಬಿಡುಗಡೆಯಾಗಲ್ಲ. ಆದರೆ, ದಲ್ಲಾಳಿಗಳು ಬಂದರೆ ಅನುದಾನ ಬಿಡುಗಡೆಯಾಗಲಿದೆ ಎನ್ನುವ ಆರೋಪಗಳು ಮೊದಲಿಂದಲೂ ಕೇಳಿಬರುತ್ತವೆ. ಆದರೆ, ಅಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎನ್ನುವುದು ಮುಖ್ಯಮಂತ್ರಿಗಳ ಆಜ್ಞೆ ಆಗಿದೆ ಎಂದು ಸಮಾಜ ಕಲ್ಯಾಣ ಸಚಿವರು ಹೇಳಿದರು.

ಸಿಡಿ ಬಗ್ಗೆ ಪ್ರತಿಕ್ರಿಯೆ ಇಲ್ಲ:

ಇಂದು ಯುವತಿ ಎರಡನೇ ಸಿಡಿ ಬಿಡುಗಡೆ ಮಾಡಿ, ಪೋಷಕರಿಗೆ ರಕ್ಷಣೆ ಕೋರಿರುವ ಕುರಿತು ಪ್ರತಿಕ್ರಿಯೆ ನೀಡಲು ಸಚಿವ ಶ್ರೀರಾಮುಲು ನಿರಾಕರಿಸಿದರು. ಆದರೆ, ಸದನದ ಹೊರಗೆ ಸುಧಾಕರ್ ನೀಡಿದ್ದ ಹೇಳಿಕೆ ಬಗ್ಗೆ ಸದನದಲ್ಲಿ ಗದ್ದಲ ಮಾಡಿದ ಕಾಂಗ್ರೆಸ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.