ETV Bharat / city

ಅಣ್ಣಾವ್ರ ಹುಟ್ಟುಹಬ್ಬಕ್ಕೆ 'ಗ್ರಾಹಕರ ಸೇವೆಯಲ್ಲಿ ಕನ್ನಡ' ಅಭಿಯಾನ

author img

By

Published : Apr 24, 2022, 9:58 PM IST

Kannada Development AuthorityKannada Development Authority
ಅಣ್ಣಾವ್ರ ಹುಟ್ಟು ಹಬ್ಬಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ‌ 'ಗ್ರಾಹಕರ ಸೇವೆಯಲ್ಲಿ ಕನ್ನಡ' ಅಭಿಯಾನ

ಡಾ. ರಾಜ್​ಕುಮಾರ್​ ಅವರ ಜನ್ಮದಿನದ ಅಂಗವಾಗಿ ಗ್ರಾಹಕರ ಸೇವೆಯಲ್ಲಿ ಕನ್ನಡ ಎಂಬ ಅಭಿಯಾನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಡಿತು. ಬೆಂಗಳೂರಿನ ಪ್ರತಿಷ್ಠಿತ ಮಾಲ್​ಗಳಿಗೆ ಭೇಟಿ ನೀಡಿ ಕನ್ನಡ ಬಳಕೆ ಮಾಡುವಂತೆ ತಿಳಿಸಲಾಯಿತು.

ಬೆಂಗಳೂರು: ವರ ನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಗ್ರಾಹಕರ ಸೇವೆಯಲ್ಲಿ ಕನ್ನಡ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.‌ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನೇತೃತ್ವದಲ್ಲಿ ಮೆಜೆಸ್ಟಿಕ್​ನಲ್ಲಿರುವ ಲುಲು ಮಾಲ್​ಗೆ ಭೇಟಿ ನೀಡಿ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುತ್ತಿರುವ ಮಾಹಿತಿ ಪಡೆಯಲಾಯಿತು.

ಈ ವೇಳೆ ಲುಲು ಮಾಲ್​ನ ಅಧಿಕಾರಿಗಳು ಮಾಲ್ ಒಳಗೆ ಮತ್ತು ಹೊರಗೆ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಗ್ರಾಹಕರಿಗೆ ಕನ್ನಡದಲ್ಲಿ ಮಾಹಿತಿ ಒದಗಿಸಲು ಮತ್ತು ಸೇವೆ ನೀಡಲು ನಮ್ಮ ಸಿಬ್ಬಂದಿ ಮೊದಲ ಆದ್ಯತೆ ನೀಡುತ್ತಾರೆ ಎಂದರು.

ಲುಲು ಮಾಲ್​ನ ಎಲ್ಲೆಡೆ ವೀಕ್ಷಿಸಿದ ಟಿ.ಎಸ್.ನಾಗಾಭರಣ, ಕೆಲವು ಕಡೆಗಳಲ್ಲಿರುವ ನಾಮಫಲಕಗಳು ಆಂಗ್ಲ ಭಾಷೆಯಲ್ಲಿ ಇವೆ. ಇವುಗಳನ್ನು ಕೂಡ ಕನ್ನಡದಲ್ಲಿ ಬಳಸಬೇಕು. ರಾಜ್ಯದ ಆಡಳಿತ ಭಾಷೆ ಮತ್ತು ಸಾರ್ವಭಾಮ ಭಾಷೆ ಕನ್ನಡ. ನಾಮಫಲಕಗಳಲ್ಲಿ ಪ್ರಥಮ ಸ್ಥಾನದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಲೇಬೇಕು. ಈ ಬಗ್ಗೆ ಮಾಲ್ ನ ಅಧಿಕಾರಿಗಳು ವಿವಿಧ ಮಳಿಗೆಗಳ ಮಾಲೀಕರಿಗೆ ಮಾಹಿತಿ ಒದಗಿಸಿ ಕನ್ನಡ ಬಳಸುವಂತೆ ನಿರ್ದೇಶಿಸಬೇಕು ಎಂದರು.

ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ: ಸಾಮಾಜಿಕ ಜಾಲತಾಣಗಳಲ್ಲಿಯೂ #ಅಭಿಮಾನಿ_ದಿನ #ಗ್ರಾಹಕಸೇವೆಯಲ್ಲಿ_ಕನ್ನಡ ಅಭಿಯಾನ ನಡೆಯುತ್ತಿದೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವಂತೆ ಹಕ್ಕೋತ್ತಾಯ ಮಂಡಿಸಬೇಕು. ಇದು ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಗ್ರಾಹಕ ಸೇವೆ ನೀಡುವವರಲ್ಲಿ ಕನ್ನಡದ ಸೇವೆ ಒದಗಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಲಿದೆ ಎಂದರು.

ಕ.ಅ.ಪ್ರಾ.ಸಿಬ್ಬಂದಿ ಮತ್ತು ಕನ್ನಡ ಜಾಗೃತಿ ಸಮಿತಿ ಸದಸ್ಯರು ಹಾಗೂ ಕಾಯಕ ಪಡೆಯ ಸದಸ್ಯರು ಜಯನಗರದ ಡಿ ಮಾರ್ಟ್, ಒರಾಯನ್ ಮಾಲ್, ಎಸ್.ಪಿ ರಸ್ತೆ, ಅವೆನ್ಯೂ ರಸ್ತೆ, ಟೌನ್ ಹಾಲ್, ಮ್ಯಾಕ್ಸ್ ಫಾರ್ಮಾ, ರಾಜಾಜಿನಗರದ ಸುಜುಕಿ ಶೋರೂಂ, ಕೊಡಿಗೆಹಳ್ಳಿಯಲ್ಲಿರುವ ಮೋರ್ ಮೇಗಾ ಸ್ಟೋರ್ ಸೇರಿದಂತೆ ನಗರದ ವಿವಿಧ ಕಡೆಗಳಿಗೆ ತೆರಳಿ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವಂತೆ ಹಕ್ಕೋತ್ತಾಯ ಮಂಡಿಸಿದರು. ಲುಲು ಮಾಲ್​ನಲ್ಲಿ ನಡೆದ ಅಭಿಯಾನದಲ್ಲಿ ಕ.ಅ.ಪ್ರಾ.ದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ, ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಮಹೇಶ್.ಎನ್, ಲುಲು ಮಾಲ್​ನ ಅಧಿಕಾರಿಗಳು ಭಾಗವಹಿಸಿದರು.

ಇದನ್ನೂ ಓದಿ: ಡಾ.ರಾಜ್ ಕುಮಾರ್ ಹುಟ್ಟುಹಬ್ಬ: ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.